AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಬಿಜೆಪಿ ಧ್ವಜದ ಮೇಲೆ ಗೋಹತ್ಯೆ ಮಾಡಿದ ಫೋಟೋ ಕರ್ನಾಟಕದ್ದು ಅಲ್ಲ, ಮಣಿಪುರದ ಫೋಟೊ ವೈರಲ್

ಈ ಘಟನೆಯ ಕುರಿತು ಹೆಚ್ಚಿನ ವಿವರಗಳಿಗಾಗಿ ಟ್ವಿಟರ್ ನಲ್ಲಿ ಸರ್ಚ್ ಮಾಡಿದಾಗ,ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖವಾಣಿ ಆರ್ಗನೈಸರ್‌ಗಾಗಿ ಕೆಲಸ ಮಾಡುವ ನಿಶಾಂತ್ ಆಜಾದ್ ಎಂಬ ವ್ಯಕ್ತಿ ಜನವರಿ 31, 2022 ರಂದು ಮಾಡಿದ ಟ್ವೀಟ್ ಸಿಕ್ಕಿದೆ.

Fact Check: ಬಿಜೆಪಿ ಧ್ವಜದ ಮೇಲೆ ಗೋಹತ್ಯೆ ಮಾಡಿದ ಫೋಟೋ ಕರ್ನಾಟಕದ್ದು ಅಲ್ಲ, ಮಣಿಪುರದ ಫೋಟೊ ವೈರಲ್
ವೈರಲ್ ಫೋಟೊ
ರಶ್ಮಿ ಕಲ್ಲಕಟ್ಟ
|

Updated on:May 18, 2023 | 8:54 PM

Share

ಕರ್ನಾಟಕ ಚುನಾವಣೆಯಲ್ಲಿ (Karnataka Election) ಕಾಂಗ್ರೆಸ್ (Congress) ಪಕ್ಷವು ಭರ್ಜರಿ ಗೆಲುವು ಸಾಧಿಸಿದ ನಂತರ, ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸುತ್ತಿರುವ ಕೆಲವು ಪೋಸ್ಟ್ ಗಳು ಹರಿದಾಡುತ್ತಿವೆ. ಇದೀಗ ಹತ್ಯೆಗೀಡಾದ ಹಸುವೊಂದನ್ನು ಬಿಜೆಪಿ (BJP) ಪಕ್ಷದ ಧ್ವಜದ ಮೇಲೆ ಮಲಗಿಸಿರುವ ಎರಡು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಫೋಟೋಗಳನ್ನು ಶೇರ್ ಮಾಡಿದವರು ಇದು ಕರ್ನಾಟಕದ್ದು ಎಂದು ಹೇಳಿದ್ದಾರೆ. ಮುಸ್ಲಿಂ ಬೆಂಬಲಿಗರು ಬಿಜೆಪಿ ಧ್ವಜದ ಮೇಲೆ ಗೋಹತ್ಯೆ ಮಾಡುವ ಮೂಲಕ ಕಾಂಗ್ರೆಸ್ ವಿಜಯೋತ್ಸವವನ್ನು ಆಚರಿಸಿದ್ದಾರೆ ಎಂದು ಇನ್ನು ಕೆಲವರು ಆರೋಪಿಸಿದ್ದಾರೆ. “ಅನಾಗರಿಕರು. ಇದು ಕರ್ನಾಟಕದಿಂದ ಬಂದಿದೆ ಎಂದು ಹೇಳುವ ವಿಡಿಯೊ ನನಗೆ ಸಿಕ್ಕಿತು. ಇಸ್ಲಾಮಿಕ್ ಮತಾಂಧರು ಕಾಂಗ್ರೆಸ್ ವಿಜಯವನ್ನು ಆಚರಿಸಲು ಬಿಜೆಪಿ ಧ್ವಜದ ಮೇಲೆ ಹಸುವನ್ನು ಕತ್ತರಿಸಿದರು. ಟ್ವಿಟರ್ ನನಗೆ ವಿಡಿಯೊವನ್ನು ಅಪ್‌ಲೋಡ್ ಮಾಡಲು ಅನುಮತಿಸುತ್ತಿಲ್ಲ ಆದ್ದರಿಂದ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದೇನೆ ಎಂದು ಟ್ವೀಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಅಂದ ಹಾಗೆ ಈ ವೈರಲ್ ಫೋಟೋಗಳು ಮಣಿಪುರದ್ದು, ಇದು ಒಂದು ವರ್ಷಕ್ಕಿಂತ ಹಳೆಯವು ಎಂದು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ವರದಿ ಮಾಡಿದೆ.

ಫ್ಯಾಕ್ಟ್ ಚೆಕ್

ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ, ಒಬ್ಬ ವ್ಯಕ್ತಿ ಈ ಚಿತ್ರ ಮಣಿಪುರದಲ್ಲಿ 2022 ರ ಘಟನೆಯದ್ದು ಎಂದಿದ್ದರು. ಈ ಘಟನೆಯ ಕುರಿತು ಹೆಚ್ಚಿನ ವಿವರಗಳಿಗಾಗಿ ಟ್ವಿಟರ್ ನಲ್ಲಿ ಸರ್ಚ್ ಮಾಡಿದಾಗ,ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖವಾಣಿ ಆರ್ಗನೈಸರ್‌ಗಾಗಿ ಕೆಲಸ ಮಾಡುವ ನಿಶಾಂತ್ ಆಜಾದ್ ಎಂಬ ವ್ಯಕ್ತಿ ಜನವರಿ 31, 2022 ರಂದು ಮಾಡಿದ ಟ್ವೀಟ್ ಸಿಕ್ಕಿದೆ. ಇದು ವಿಡಿಯೊವನ್ನು ಹೊಂದಿದ್ದು, ಅದರ ಸ್ಕ್ರೀನ್‌ಶಾಟ್‌ಗಳು ಈಗ ವೈರಲ್ ಆಗಿವೆ. ಕೆಲವು ಪುರುಷರು ಹೊಲದಲ್ಲಿ ಹಸುವಿನ ಮೃತದೇಹವನ್ನು ಪರೀಕ್ಷಿಸುತ್ತಿರುವುದನ್ನು ಕ್ಲಿಪ್ ತೋರಿಸಿದೆ. ಅದರ ಸೀಳಿದ ಗಂಟಲಿನಿಂದ ಸೋರಿಕೆಯಾದ ರಕ್ತವು ನೆಲದ ಮೇಲೆ ಬಿಜೆಪಿ ಧ್ವಜದ ಮೇಲೆ ಇರುವುದು ವಿಡಿಯೊದಲ್ಲಿದೆ.

ಟ್ವೀಟ್ ಹೀಗಿದೆ: ಮಣಿಪುರ: ಬಿಜೆಪಿ ಧ್ವಜವನ್ನು ಇಟ್ಟುಕೊಂಡು ಮುಸ್ಲಿಮರು ಹಸುವನ್ನು ಕೊಂದರು. ಗೂಂಡಾಗಳು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಬಿಜೆಪಿ ಮಣಿಪುರ ಅಧ್ಯಕ್ಷ ಎ ಸರ್ದಾ ದೇವಿ ಅವರನ್ನು ನಿಂದಿಸಿದ್ದಾರೆ ಎಂದಿದೆ.

ಫೆಬ್ರವರಿ 1, 2022 ರಂದು, ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಇಂಫಾಲ್ ಫ್ರೀ ಪ್ರೆಸ್ ಸುದ್ದಿ ವರದಿಯ ಸ್ಕ್ರೀನ್‌ಶಾಟ್‌ನೊಂದಿಗೆ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಆ ವರ್ಷದ ಮಣಿಪುರ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಲಿಲಾಂಗ್‌ನಲ್ಲಿ ಬಿಜೆಪಿ ಧ್ವಜದ ಮೇಲೆ ಹಸುವನ್ನು ಕಡಿಯಲಾಗಿದೆ ಎಂಬ ಸುದ್ದಿಯೂ ಪ್ರಕಟವಾಗಿದೆ. ನಜ್ಬುಲ್ ಹುಸೇನ್, ಅಬ್ದುರ್ ರಶೀದ್ ಮತ್ತು ಎಂಡಿ ಆರಿಫ್ ಖಾನ್ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯಿದೆ 1960 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸಿದ ಆರೋಪದಲ್ಲಿ ದಾಖಲಿಸಲಾಗಿದೆ ಎಂದು ವರದಿಯಲ್ಲಿದೆ.

ಇದನ್ನೂ ಓದಿ: Fact Check: ರಾಹುಲ್​​ ಗಾಂಧಿಯನ್ನು ಹೊಗಳಿರುವ ವಿರಾಟ್ ಕೊಹ್ಲಿಯ ವೈರಲ್​​​​​ ಇನ್‌ಸ್ಟಾಗ್ರಾಮ್​​ ಸ್ಟೋರಿ Fake

ದಿ ಹಿಂದೂ ಮತ್ತು ದಿ ನಾಗಾಲ್ಯಾಂಡ್ ಪೋಸ್ಟ್ ಮತ್ತು ಟೈಮ್ಸ್ ಆಫ್ ಇಂಡಿಯಾದಂತಹ ಇತರ ಮಾಧ್ಯಮಗಳಿಂದ ಈ ಘಟನೆಯ ಕುರಿತು ವರದಿ ಆಗಿದೆ.ಹೀಗಾಗಿ, ಈ ಘಟನೆಗೂ 2023 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:38 pm, Thu, 18 May 23