ರಾಷ್ಟ್ರದ ಘನತೆಯನ್ನು ಗೌರವಿಸುತ್ತೇವೆ, ನಮ್ಮ ಸ್ವಾಭಿಮಾನವನ್ನೂ ರಕ್ಷಿಸಿಕೊಳ್ಳುತ್ತೇವೆ: ನರೇಶ್ ಟಿಕಾಯತ್ ಹೇಳಿಕೆ

ಗೌರವಪೂರ್ಣ ಪರಿಹಾರವನ್ನು ನಾವು ಕಂಡುಕೊಳ್ಳಬೇಕು. ಯಾವುದೇ ಒತ್ತಡದ ಪರಿಸ್ಥಿತಿಗೆ ಮಣಿದು ನಾವು ಏನನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ನರೇಶ್ ಟಿಕಾಯತ್ ಹೇಳಿದ್ದಾರೆ.

ರಾಷ್ಟ್ರದ ಘನತೆಯನ್ನು ಗೌರವಿಸುತ್ತೇವೆ, ನಮ್ಮ ಸ್ವಾಭಿಮಾನವನ್ನೂ ರಕ್ಷಿಸಿಕೊಳ್ಳುತ್ತೇವೆ: ನರೇಶ್ ಟಿಕಾಯತ್ ಹೇಳಿಕೆ
ನರೇಶ್ ಟಿಕಾಯತ್ (ಸಂಗ್ರಹ ಚಿತ್ರ)
Edited By:

Updated on: Apr 06, 2022 | 8:27 PM

ದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರಧಾನ ಮಂತ್ರಿಯ ಘನತೆಯನ್ನು ಗೌರವಿಸುತ್ತೇವೆ. ಅದರ ಜೊತೆಗೆ, ನಮ್ಮ ಸ್ವಾಭಿಮಾನವನ್ನೂ ರಕ್ಷಿಸಲು ಬದ್ಧರಾಗಿದ್ದೇವೆ ಎಂದು ರೈತ ಮುಖಂಡ ನರೇಶ್ ಟಿಕಾಯತ್ ಹೇಳಿಕೆ ನೀಡಿದ್ದಾರೆ. ಜನವರಿ 26ರಂದು ನಡೆದ ದುರ್ಘಟನೆ ರೈತ ಚಳುವಳಿಯ ವಿರುದ್ಧ ಹೂಡಿರುವ ಪಿತೂರಿಯ ಒಂದು ಭಾಗ. ಭಾರತೀಯ ತ್ರಿವರ್ಣ ಧ್ವಜವು ಎಲ್ಲಕ್ಕಿಂತಲೂ ಎತ್ತರದಲ್ಲಿರಬೇಕು. ಅದಕ್ಕೆ ಅಗೌರವವಾಗುವುದನ್ನು ನಾವು ಸಹಿಸುವುದಿಲ್ಲ ಎಂದು ರಾಕೇಶ್ ಟಿಕಾಯತ್ ಸಹೋದರ ತಿಳಿಸಿದ್ದಾರೆ.

ನಿನ್ನೆ (ಜ.30) ನಡೆದ ಸರ್ವಪಕ್ಷ ಸಭೆಯಲ್ಲಿ, ಕೇಂದ್ರ ಸರ್ಕಾರ ರೈತರ ಜೊತೆಗೆ ಮಾತುಕತೆಗೆ ಸಿದ್ಧವಿದೆ. ರೈತರು ತಮ್ಮ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಕೇಂದ್ರ ಸರ್ಕಾರ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಒಂದು ದೂರವಾಣಿ ಕರೆಯ ಅಂತರದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನರೇಶ್ ಟಿಕಾಯತ್ ಇಂದು (ಜ.31) ಈ ಹೇಳಿಕೆ ನೀಡಿದ್ದಾರೆ. ಸರ್ಕಾರವು, ರೈತರ ಮಾತುಕತೆಯ ಹಾದಿ ಸುಗಮವಾಗಲು ಸೂಕ್ತ ವಾತಾವರಣ ನಿರ್ಮಿಸಿಕೊಡಬೇಕು ಎಂದು ಟಿಕಾಯತ್ ಹೇಳಿದ್ದಾರೆ.

ಇದನ್ನೂ ಓದಿ: ವ್ಯಕ್ತಿ-ವ್ಯಕ್ತಿತ್ವ | ರೈತ ಹೋರಾಟದ ಹಿಂದಿನ ಶಕ್ತಿ ರಾಕೇಶ್ ಟಿಕಾಯತ್

ಉತ್ತರ ಪ್ರದೇಶ ಹಾಗೂ ದೆಹಲಿ ಗಡಿಭಾಗವಾದ ಗಾಜಿಪುರ್​ನಲ್ಲಿ ಮಾತನಾಡಿದ ನರೇಶ್ ಟಿಕಾಯತ್, ಗೌರವಪೂರ್ಣ ಪರಿಹಾರವನ್ನು ನಾವು ಕಂಡುಕೊಳ್ಳಬೇಕು. ಬದಲಾಗಿ, ಯಾವುದೇ ಒತ್ತಡದ ಪರಿಸ್ಥಿತಿಗೆ ಮಣಿದು ನಾವು ಏನನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ನರೇಶ್ ಟಿಕಾಯತ್ ಚಳುವಳಿ ಮುಂದುವರಿಸುವ ಸೂಚನೆ ನೀಡಿದ್ದಾರೆ. ಎರಡೂ ಕಡೆಯ ಗೌರವ ಉಳಿಯಬೇಕು. ರೈತರ ಸ್ವಾಭಿಮಾನಕ್ಕೆ ಕೂಡ ಅಪಮಾನವಾಗಬಾರದು. ಅಂತಹ ಮಧ್ಯಮ ಮಾರ್ಗವನ್ನು ನಾವು ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾತ್ಮಕ ಕೃತ್ಯಗಳನ್ನು, ಅನುಚಿತ ಘಟನೆಗಳನ್ನು ಪ್ರಧಾನಿ ಮೋದಿ ಖಂಡಿಸಿದ್ದರು. ಇದರಿಂದ ರಾಷ್ಟ್ರಕ್ಕೆ ಹಾಗೂ ತ್ರಿವರ್ಣ ಧ್ವಜಕ್ಕೆ ಅಪಮಾನವಾಗಿದೆ ಎಂದೂ ಹೇಳಿದ್ದರು. ಇಂದು ನಡೆದ ಪ್ರಧಾನಿ ಮನ್ ಕೀ ಬಾತ್​ನಲ್ಲಿ ಕೂಡ ಈ ಬಗ್ಗೆ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ನರೇಶ್ ಟಿಕಾಯತ್, ನಾವು ಪ್ರಧಾನ ಮಂತ್ರಿಯ ಘನತೆಯನ್ನು ಗೌರವಿಸುತ್ತೇವೆ. ಸರ್ಕಾರ ಅಥವಾ ಸಂಸತ್ತು ತಲೆತಗ್ಗಿಸುವಂಥ ಕೃತ್ಯಗಳಾಗುವುದನ್ನು ರೈತರೂ ಇಚ್ಛಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅನುಚಿತ ಘಟನೆಗಳಿಗೆ ಸಂಬಂಧಿಸಿದಂತೆ ದಹೆಲಿ ಪೊಲೀಸರು ಸುಮಾರು 40ರಷ್ಟು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಸುಮಾರು 80ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಟಿಕಾಯತ್, ಸರ್ಕಾರವು ರೈತ ಹೋರಾಟಗಾರರನ್ನು ಬಂಧಮುಕ್ತಿಗೊಳಿಸಬೇಕು. ಮಾತುಕತೆಗೆ ದಾರಿಮಾಡಿಕೊಡಬೇಕು ಎಂದಿದ್ದಾರೆ. ಇದೇ ಹೇಳಿಕೆಯನ್ನು ರಾಕೇಶ್ ಟಿಕಾಯತ್ ಕೂಡ ನೀಡಿದ್ದಾರೆ.

ಕೇಂದ್ರದ ವಿರುದ್ಧ ನಡೆಯುತ್ತಿರುವ ರೈತ ಚಳುವಳಿಯು 60 ದಿನಗಳನ್ನು ದಾಟಿ ಮುಂದೆ ಸಾಗುತ್ತಿದೆ. ಮೊನ್ನೆ (ಜ.26) ನಡೆದ ಘಟನಾವಳಿಗಳ ಬಳಿಕ ಪ್ರತಿಭಟನಾ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ರೈತರು ಆಂದೋಲನ ನಡೆಸುತ್ತಿರುವ ಗಾಜಿಪುರ್ ಗಡಿಭಾಗದಲ್ಲಿ ಪೊಲೀಸ್ ಬಿಗಿಭದ್ರತೆ ನೀಡಲಾಗಿದೆ.

ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜಕ್ಕೆ ಅಪಮಾನವಾಗಿದೆ: ಮನ್ ಕೀ ಬಾತ್​ನಲ್ಲಿ ನರೇಂದ್ರ ಮೋದಿ ಬೇಸರ

Published On - 3:05 pm, Sun, 31 January 21