ಕರ್ನಾಟಕದಲ್ಲಿ ನಡೆದ ಮತ ವಂಚನೆಗೆ ಸಂಪೂರ್ಣ ಸಾಕ್ಷಿ ಇದೆ ಎಂದ ರಾಹುಲ್ ಗಾಂಧಿ; ಚುನಾವಣಾ ಆಯೋಗ ತಿರುಗೇಟು

ಕರ್ನಾಟಕದಲ್ಲಿ ಚುನಾವಣಾ ಆಯೋಗ ಮತ ವಂಚನೆಗೆ ಅವಕಾಶ ನೀಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಭಾರತದಲ್ಲಿ ಚುನಾವಣೆಗಳಲ್ಲಿ "ಕಳ್ಳತನ" ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದರು. ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಮತ ಕಳ್ಳತನದ ಆರೋಪಗಳನ್ನು ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ "ಚುನಾವಣಾ ಅರ್ಜಿ ಸಲ್ಲಿಸಿದ್ದರೆ ಹೈಕೋರ್ಟ್‌ನ ತೀರ್ಪಿಗಾಗಿ ಕಾಯಿರಿ" ಎಂದು ಹೇಳಿದೆ.

ಕರ್ನಾಟಕದಲ್ಲಿ ನಡೆದ ಮತ ವಂಚನೆಗೆ ಸಂಪೂರ್ಣ ಸಾಕ್ಷಿ ಇದೆ ಎಂದ ರಾಹುಲ್ ಗಾಂಧಿ; ಚುನಾವಣಾ ಆಯೋಗ ತಿರುಗೇಟು
Rahul Gandhi

Updated on: Jul 24, 2025 | 7:15 PM

ನವದೆಹಲಿ, ಜುಲೈ 24: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರು ಭಾರತದ ಚುನಾವಣಾ ಆಯೋಗದ (ಇಸಿಐ) ವಿರುದ್ಧ ವಾಗ್ದಾಳಿ ನಡೆಸಿದ್ದು, “ಕರ್ನಾಟಕದ ಒಂದು ಸ್ಥಾನದಲ್ಲಿ ಚುನಾವಣಾ ಆಯೋಗ “ವಂಚನೆ” ಮಾಡಲು ಅವಕಾಶ ನೀಡಿದೆ ಎಂಬುದಕ್ಕೆ ಕಾಂಗ್ರೆಸ್ ಬಳಿ ಶೇ. 100ರಷ್ಟು ಪುರಾವೆ ಇದೆ” ಎಂದು ಹೇಳಿದ್ದಾರೆ. ದೆಹಲಿಯ ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ರಾಹುಲ್ ಗಾಂಧಿ ಚುನಾವಣಾ ಆಯೋಗ ತನ್ನ ಕೆಲಸವನ್ನು ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.

“ಶೇ. 90 ಅಲ್ಲ ನಮ್ಮ ಬಳಿ ಇರುವುದು ಶೇ. 100ರಷ್ಟು ಪುರಾವೆಯಾಗಿದೆ” ಎಂದು ರಾಹುಲ್ ಗಾಂಧಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. “ಒಂದುವೇಳೆ ನೀವು ಇದರಿಂದ ತಪ್ಪಿಸಿಕೊಳ್ಳುತ್ತೀರಿ ಎಂದು ಭಾವಿಸಿದರೆ ಅಥವಾ ನಿಮ್ಮ ಅಧಿಕಾರಿಗಳು ಇದರಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ಭಾವಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ. ನೀವು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನಾವು ನಿಮ್ಮ ಮೇಲೆ ಕಣ್ಣಿಟ್ಟಿದ್ದೇವೆ” ಎಂದು ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲೂ ನಡೆದಿದೆ ಚುನಾವಣಾ ಅಕ್ರಮ, ಶೀಘ್ರ ಸಾಕ್ಷ್ಯ ಕೊಡ್ತೇನೆ ಎಂದ ರಾಹುಲ್ ಗಾಂಧಿ


ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಧಾರರಹಿತ ಆರೋಪಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದೆ. “ಒಂದುವೇಳೆ ಚುನಾವಣಾ ಅರ್ಜಿ ಸಲ್ಲಿಸಿದ್ದರೆ ಎಲ್ಲರೂ ಹೈಕೋರ್ಟ್‌ನ ತೀರ್ಪಿಗಾಗಿ ಕಾಯಬೇಕು” ಎಂದು ಚುನಾವಣಾ ಆಯೋಗ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us