ಮರ್ಯಾದಾ ಹತ್ಯೆ; ಅಂತರ್ಜಾತಿ ವಿವಾಹವಾದ ಮಗಳಿಗೆ ಬೆಂಕಿ ಹಚ್ಚಿ ಕೊಂದ ತಂದೆ

ಯುವತಿಯೊಬ್ಬಳು 1 ವರ್ಷದ ಹಿಂದೆ ಓಡಿಹೋಗಿ ಅನ್ಯ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಳು. ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ಆಕೆಯ ತಂದೆ ಮತ್ತು ಸಹೋದರ ಆಕೆಯೊಂದಿಗಿನ ಸಂಬಂಧವನ್ನೇ ಕಡಿದುಕೊಂಡಿದ್ದರು. ತಮಗೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಮರ್ಯಾದಾ ಹತ್ಯೆ ಮಾಡಿರುವ ಅವರನ್ನು ಬಂಧಿಸಲಾಗಿದೆ.

ಮರ್ಯಾದಾ ಹತ್ಯೆ; ಅಂತರ್ಜಾತಿ ವಿವಾಹವಾದ ಮಗಳಿಗೆ ಬೆಂಕಿ ಹಚ್ಚಿ ಕೊಂದ ತಂದೆ
ಸಾಂದರ್ಭಿಕ ಚಿತ್ರ

Updated on: Jul 05, 2024 | 9:08 PM

ಜೈಪುರ: ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆಯೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ 20 ವರ್ಷದ ಯುವತಿಯನ್ನು ಆಕೆಯ ತಂದೆ ಮತ್ತು ಸಹೋದರ ಅಪಹರಣ ಮಾಡಿ, ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಸುಟ್ಟ ದೇಹವನ್ನು ಚಿತಾಗಾರದಿಂದ ಹೊರತೆಗೆದು, ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಿಳೆಯ ಪತಿಯಿಂದ ಮಾಹಿತಿ ಪಡೆದ ನಂತರ ಪೊಲೀಸರು ಸೌರಿತ್ ಗ್ರಾಮವನ್ನು ತಲುಪುವ ವೇಳೆಗೆ ದೇಹದ ಸುಮಾರು ಶೇ. 80ರಷ್ಟು ಸುಟ್ಟುಹೋಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೇರೆ ಜಾತಿಗೆ ಸೇರಿದ ವ್ಯಕ್ತಿಯನ್ನು ಮದುವೆಯಾಗಲು ಆ ಮಹಿಳೆಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

“ಶಿಮ್ಲಾ ಕುಶ್ವಾಹ್ ಎಂಬ ಮಹಿಳೆಯ ಪೋಷಕರು ಆಕೆ ಬೇರೆ ಜಾತಿಗೆ ಸೇರಿದ ರವೀಂದ್ರ ಭೀಲ್ ಅವರನ್ನು ಮದುವೆಯಾಗಲು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ಮರ್ಯಾದಾ ಹತ್ಯೆ ಮಾಡಲಾಗಿದೆ” ಎಂದು ಹರ್ನವಾಡಶಾಹಾಜಿ ಡಿಎಸ್ಪಿ ಜೈ ಪ್ರಕಾಶ್ ಅಟಲ್ ಹೇಳಿದ್ದಾರೆ.

ಇದನ್ನೂ ಓದಿ: Crime News: ದೆಹಲಿಯಲ್ಲಿ 10 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬರ್ಬರ ಹತ್ಯೆ

ಶಿಮ್ಲಾ ಕುಶ್ವಾಹ್ ಮತ್ತು ಭೀಲ್ ಓಡಿಹೋಗಿ ಒಂದು ವರ್ಷದ ಹಿಂದೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದಿದ್ದು ಹೇಗೆ?:

ಗುರುವಾರ ಜಲಾವರ್‌ನ ಸೌರ್ತಿ ಗ್ರಾಮದಲ್ಲಿ ವಾಸಿಸುತ್ತಿದ್ದ ದಂಪತಿಗಳು ಬ್ಯಾಂಕ್‌ನಿಂದ ಹಣವನ್ನು ಹಿಂಪಡೆಯಲು ನೆರೆಯ ಬರಾನ್ ಜಿಲ್ಲೆಯ ಹರ್ನವದ್‌ಶಾಹಾಜಿಗೆ ಬಂದಿದ್ದರು. ಆಗ ಶಿಮ್ಲಾ ಕುಶ್ವಾಹ್ ಅವರ ತಂದೆ, ಸಹೋದರ ಮತ್ತು ಅವರ ಮೂವರು ಸಂಬಂಧಿಕರು ಅಲ್ಲಿಗೆ ಬಂದು ಅವಳನ್ನು ಅಪಹರಿಸಿದರು. ಭೀಲ್ ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಘಟನೆಯ ಬಗ್ಗೆ ಜಲಾವರ್‌ನಲ್ಲಿರುವ ಜಾವರ್ ಪೊಲೀಸ್ ಠಾಣೆಗೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಕಸದ ತೊಟ್ಟಿಯಲ್ಲಿತ್ತು ದೇಹದ ತುಂಡುಗಳು; ಕೊಲೆ ರಹಸ್ಯದ ಸುಳಿವು ನೀಡಿತ್ತು ಕಪ್ಪು ಮೀಸೆ!

ನಂತರ ಜಾವರ್ ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಆಕೆಯನ್ನು ಸುಟ್ಟು ಹಾಕಲಾಗಿತ್ತು. ಬಳಿಕ ಆಕೆಯ ದೇಹವನ್ನು ಸ್ಮಶಾನ ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಬಳಿಕ ತನಿಖೆಗಾಗಿ ಬರಾನ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಜಾವರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಜರ್ನೈಲ್ ಸಿಂಗ್ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪೋಷಕರು ಮತ್ತು ಸಹೋದರ ಸೇರಿದಂತೆ 10-12 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಮತ್ತು ಅವರನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಪತಿಯ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us