AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯೊತ್ಪಾದಕರ ಡ್ರೋನ್​ಗಳನ್ನು ಕೌಂಟರ್ ಮಾಡಲು ದೇಶೀಯ ತಂತ್ರಜ್ಞಾನ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ: ಅಮಿತ್ ಶಾ

ಭಯೋತ್ಪಾದಕರು ಮತ್ತು ವೈರಿಗಳು ಕೃತಕ ಬುದ್ಧಮತ್ತೆ ಮತ್ತು ರೊಬೊಟಿಕ್ಸ್ ಟೆಕ್ನಾಲಜಿ ಬಳಸಿ ದಾಳಿ ನಡೆಸುವ ಪ್ರಯತ್ನ ಹತ್ತಿಕ್ಕಲು ತಜ್ಞರ ನೆರವಿನಿಂದ ಹೊಸ ತಂತ್ರಜ್ಞಾನವನನ್ನು ಅವಿಷ್ಕಾರ ಮಾಡುವ ಜವಾಬ್ದಾರಿ ಉನ್ನತ ಭದ್ರತಾ ಅಧಿಕಾರಿಗಳ ಮೇಲಿದೆ ಎಂದು ಶಾ ಅವರು ಬಿಎಸ್​ಎಫ್ ಕಾರ್ಯಕ್ರಮದಲ್ಲಿ ಹೇಳಿದರು.

ಭಯೊತ್ಪಾದಕರ ಡ್ರೋನ್​ಗಳನ್ನು ಕೌಂಟರ್ ಮಾಡಲು ದೇಶೀಯ ತಂತ್ರಜ್ಞಾನ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ: ಅಮಿತ್ ಶಾ
ಅಮಿತ್ ಶಾ (ಸಂಗ್ರಹ ಚಿತ್ರ)
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 17, 2021 | 4:56 PM

Share

ನವದೆಹಲಿ:  ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಇತರ ಏಜೆನ್ಸಿಗಳು ಕೌಂಟರ್-ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದ್ದು ಆದಷ್ಟು ಬೇಗ ಅದು ಲಭ್ಯವಾಗಲಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2022 ರ ವೇಳಗೆ ಭಾರತದ ಗಡಿ ಪ್ರದೇಶದಲ್ಲಿರುವ ಎಲ್ಲ ಸಂದಿ-ಗೊಂದಿಗಳು ಮುಚ್ಚಿಕೊಳ್ಳಲಿವೆ ಎಂದರು. ಜೂನ್ 27 ರಂದು ಜಮ್ಮುವಿನ ವಾಯುನೆಲೆಯನ್ನು ಡ್ರೋನ್​​ನಲ್ಲಿ ಸ್ಪೋಟಕಗಳನ್ನು ಇಟ್ಟು ಟಾರ್ಗೆಟ್ ಮಾಡುವ ನಡೆದ ಪ್ರಯತ್ನದ ಎರಡು ವಾರಗಳ ನಂತರ ಗೃಹ ಸಚಿವರಿಂದ ಈ ಹೇಳಿಕೆ ಬಂದಿದೆ. ಅದರಲ್ಲಿನ ಸ್ಫೋಟಕಗಳಿಂದ ಇಬ್ಬರು ಗಾಯಗೊಂಡಿದ್ದರು. ಈ ಘಟನೆಯ ನಂತರ ಡ್ರೋನ್​​ಗಳು ಈ ಪ್ರಾಂತ್ಯದಲ್ಲಿರುವ ಭಾರತದ ಮಿಲಿಟರಿ ನೆಲೆಗಳ ಮೇಲೆ ಆಗಾಗ ಹಾರಾಡುತ್ತಿರುವುದು ಕಂಡು ಬಂದಿದೆ.

‘ಸುರಂಗ ಮಾರ್ಗ ಮತ್ತು ಡ್ರೋನ್​ಗಳ ಮೂಲಕ ಡ್ರಗ್, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಕಳ್ಳಸಾಗಣೆ ಅವ್ಯಾಹತವಾಗಿ ನಡೆದಿದ್ದು ಅದು ಭಾರತಕ್ಕೆ ಪ್ರಮುಖ ಸಾಲಾಗಿ ಪರಿಣಮಿಸಿದೆ. ಈ ಸವಾಲುಗಳನ್ನು ಎದುರಿಸಲು ನಾವು ಆದಷ್ಟು ಬೇಗ ಸನ್ನದ್ಧರಾಗಬೇಕಿದೆ. ಸ್ವದೇಶಿ ನಿರ್ಮಿತ ಆಂಟಿ-ಡ್ರೋನ್ ಟೆಕ್ನಾಲಜಿಯ ಮೂಲಕ ಗಡಿಭಾಗಗಳಲ್ಲಿ ನಮ್ಮ ಬಲವನ್ನು ಹೆಚ್ಚಿಸಿಕೊಳ್ಳುವ ಭರವಸೆ ನನಗಿದೆ,’ ಎಂದ ಶಾ ಶನಿವಾರದಂದು ಗಡಿ ಭದ್ರತಾ ದಳ (ಬಿಎಸ್​ಎಫ್) ಪದಸ್ಥಾಪನಾ ಕಾರ್ಯಕ್ರಮದಲ್ಲಿ ಮಾತಾಡುವಾಗ ಹೇಳಿದರು.

ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಉಗ್ರಗಾಮಿ ಸಂಘಟನೆಗಳು ಜೂನ್ 27 ರಂದು ಮೊದಲ ಬಾರಿಗೆ ಡ್ರೋನ್​​ಗಳನ್ನು ಉಪಯೋಗಿಸಿ ಭಾರತದ ವಾಯುದಳದ ಮೇಲೆ ದಾಳಿ ನಡೆಸುವ ಪ್ರಯತ್ನ ಮಾಡಿದರು. ಸದರಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಗಡಿ ಬಾಗಗಳಲ್ಲಿ ಉಗ್ರಗಾಮಿಗಳು ಡ್ರಗ್, ಶಸ್ತ್ರಾಸ್ತ್ರ, ಮತ್ತು ಹಣವನ್ನು ಡ್ರೋನ್​​ಗಳ ಮುಲ್ ಸರಬರಾಜು ಮಾಡಿ ಬಾರತದಲ್ಲಿ ಉಗ್ರಗಾಮಿ ಸಂಘಟನೆಗಳಿಗೆ ನೆರವು ನೀಡುವ ಹಲವಾರು ಘಟನೆಗಳು ನಡೆದಿವೆ. 2019ರಿಂದ ಇಲ್ಲಿಯವರಗೆ, ಪಾಕಿಸ್ತಾನ ಜೊತೆಗಿನ ಭಾರತದ ಗಡಿಭಾಗದಲ್ಲಿ ಸುಮಾರು 300 ಬಾರಿ ಡ್ರೋನ್​ಗಳು ಹಾರಾಡುವುದನ್ನು ಗಮನಿಸಲಾಗಿದೆ.

ಭಯೋತ್ಪಾದಕರು ಮತ್ತು ವೈರಿಗಳು ಕೃತಕ ಬುದ್ಧಮತ್ತೆ ಮತ್ತು ರೊಬೊಟಿಕ್ಸ್ ಟೆಕ್ನಾಲಜಿ ಬಳಸಿ ದಾಳಿ ನಡೆಸುವ ಪ್ರಯತ್ನ ಹತ್ತಿಕ್ಕಲು ತಜ್ಞರ ನೆರವಿನಿಂದ ಹೊಸ ತಂತ್ರಜ್ಞಾನವನನ್ನು ಅವಿಷ್ಕಾರ ಮಾಡುವ ಜವಾಬ್ದಾರಿ ಉನ್ನತ ಭದ್ರತಾ ಅಧಿಕಾರಿಗಳ ಮೇಲಿದೆ ಎಂದು ಶಾ ಅವರು ಬಿಎಸ್​ಎಫ್ ಕಾರ್ಯಕ್ರಮದಲ್ಲಿ ಹೇಳಿದರು.

ಗುಪ್ತಚರ ದಳದ ಮುಖ್ಯಸ್ಥ ಆರವಿಂದ ಕುಮಾರ್, ಸಂಶೋಧನೆ ಮತ್ತು ಅನಾಲಿಸಿಸ್ ವಿಂಗ್ ಮುಖ್ಯಸ್ಥ ಸಾಮಂತ್ ಗೋಯೆಲ್, ಬಿಎಸ್​ಎಫ್ ಮಹಾ ನಿರ್ದೇಶಕ ರಾಕೇಶ್ ಅಸ್ತಾನಾ ಮತ್ತು ಇತರ ಕೆಂದ್ರೀಯ ಪೋಲಿಸ್ ದಳಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.

2022 ರ ಹೊತ್ತಿಗೆ ಗಡಿ ಭಾಗದಲ್ಲಿರುವ ಎಲ್ಲ ಸಂದಿಗಳನ್ನು ಮುಚ್ಚಿ ನುಸುಳುವಿಕೆ ಮತ್ತು ಇತರ ದೇಶ-ವಿರೋಧಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಶಾ ಹೇಳಿದರು. ಭಾರತ ಸುಮಾರು 15,000 ಕಿಮೀ ಭೂಭಾಗವನ್ನು ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ, ಮ್ಯಾನ್ಮಾರ್, ನೇಪಾಳ ಮತ್ತು ಭೂತಾನನೊಂದಿಗೆ ಹಂಚಿಕೊಳ್ಳುತ್ತದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ 3,323 ಕಿಮೀ ಉದ್ದವಿರುವ ಗಡಿಭಾಗದಲ್ಲಿ 2,069 ಕಿಮೀ ಗಡಿಭಾಗಕ್ಕೆ ಬೇಲಿ ನಿರ್ಮಿಸಲು ಅನುಮತಿ ಸಿಕ್ಕಿದೆ. ಇದುವರೆಗೆ 2,021 ಕಿಮೀ ಉದ್ದ ಬೇಲಿಯನ್ನು ಹೆಣೆಯಲಾಗಿದೆ. ಹಾಗೆಯೇ ಭಾರತ ಮತ್ತು ಬಾಂಗ್ಲಾದೇಶ ನಡುವಿನ 4,096 ಕಿಮೀ ಉದ್ದದ ಗಡಿಯಲ್ಲಿ 3,063 ಕಿಮೀವರೆಗೆ ಬೇಲಿ ನಿರ್ಮಿಸಲಾಗಿದೆ

ಬೇಲಿ ನಿರ್ಮಿಸುವ ಕೆಲಸಕ್ಕೂ ಕೆಲ ಅಡೆತಡೆಗಳು ಎದುರಾಗುತ್ತಿವೆ ಎಂದು ಸಚಿವ ಶಾ ಹೇಳಿದರು. ಕೆಲವೆಡೆ ಜನ ವಾಸಿವಾಗಿದ್ದರೆ ಬೇರೆ ಕೆಲವು ಕಡೆ ಭೂಸ್ವಾಧೀನ ಕಾರ್ಯಕ್ಕೆ ಅಡಚಣೆಯಾಗುತ್ತಿದೆ ಎಂದು ಅವರು ಹೇಳಿದರು.

‘ಶೇಕಡಾ 97 ಭಾಗದಷ್ಟು ಬೇಲಿ ನಿರ್ಮಿಸುವ ಕೆಲಸವನ್ನು ನಾವು ಮುಗಿಸಿದರೂ ಉಳಿದ ಶೇಕಡಾ 3ರಷ್ಟು ಭಾಗ ಸಮಸ್ಯೆಗಳನ್ನು ತಂದೊಡ್ಡುತ್ತದೆ. ನುಸುಳುಕೋರರು ಆ ಜಾಗದ ಮೂಲಕ ನಮ್ಮ ಗಡಿಯೊಳಗೆ ಬಂದು ಬಿಡುತ್ತಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಗಡಿ ವಿವಾದಗಳನ್ನು ಬಗೆಗಹರಿಸುವೆಡೆ ಕಾರ್ಯನಿರತವಾಗಿದೆ. ಬೇಲಿಯಲ್ಲಿ ಸಂದಿಗಳು ಉಳಿದುಬಿಟ್ಟರೆ ಪ್ರಯೋಜನವಾಗದು. ಹಾಗಾಗಿ 2022ರವರೆಗೆ ಗಡಿಭಾಗದ ಎಲ್ಲ ಸಂದಿ-ಗೊಂದಿಗಳು ಮುಚ್ಚಲ್ಪಡುತ್ತವೆ ಅಂತ ಈ ಸಂದರ್ಭದಲ್ಲಿ ನಮಗೆ ಭರವಸೆ ನೀಡುತ್ತೇನೆ,’ ಎಂದು ಶಾ ಹೇಳಿದರು.

ಹಗಲಿರುಳು ಗಡಿ ಕಾಯುತ್ತಿರುವ ಮತ್ತು ನುಸುಳುಕೋರರು ಹಾಗೂ ಭಯೋತ್ಪಾದಕರಿ ನಿರ್ಮಿಸಿರುವ ಸುರಂಗ ಮಾರ್ಗಗಳನ್ನು ಪತ್ತೆ ಮಾಡಿರುವ ಬಿಎಸ್​ಎಫ್ ಸಿಬ್ಬಂದಿಯ ಕೆಲಸವನ್ನು ಗೃಹ ಸಚಿವರು ಕೊಂಡಾಡಿದರು. ಹಾಗೆಯೇ, ಸ್ಥಳೀಯ ಸಮುದಾಯಗಳು ವಲಸೆ ಹೋಗದಂತಿರುವುದನ್ನು ಖಾತರಿಪಡಿಸಿಕೊಳ್ಳುತ್ತಿರಬೇಕು ಎಂದು ಗಡಿ ಭಾಗದಲ್ಲಿ ನಿಯುಕ್ತಿಗೊಳಿಸಿರುವ ಅರೆ ಸೇನಾ ಸಿಬ್ಬಂದಿಗೆ ಅವರು ಕರೆ ನೀಡಿದರು.

ಇದನ್ನೂ ಓದಿ: ಜಮ್ಮುವಿನಲ್ಲಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆ; ಅಜಿತ್​ ದೋವಲ್​, ಅಮಿತ್​ ಶಾ ಜತೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ