
ನವದೆಹಲಿ, ಮೇ 3: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ (Pahalgam Attack) ಬಳಿಕ ಭಾರತ ಮತ್ತು ಪಾಕಿಸ್ತಾನದ (Pakistan) ನಡುವೆ ಯುದ್ಧ ಭೀತಿ ಆವರಿಸಿದೆ. ಯಾವುದೇ ಕ್ಷಣದಲ್ಲಾದರೂ ಭಾರತೀಯ ಸೇನೆ ಪ್ರತೀಕಾರಕ್ಕೆ ಮುಂದಾಗಬಹುದು ಎಂಬ ಭೀತಿ ಪಾಕಿಸ್ತಾನವನ್ನು ಆವರಿಸಿದೆ. ಹೀಗಾಗಿ, ಸಂಭಾವ್ಯ ಯುದ್ಧ ಎದುರಿಸಲು ಪಾಕಿಸ್ತಾನ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ, ಇತ್ತ ಭಾರತ ಯುದ್ಧ ಮಾಡುವುದು ಬಿಡಿ; ಅದಕ್ಕೂ ಮೊದಲೇ ರಾಜತಾಂತ್ರಿಕ ನಿರ್ಧಾರಗಳು ಹಾಗೂ ಇತರ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದೆ.
ಭಾರತ ಈಗಾಗಲೇ ಕೈಗೊಂಡಿರುವ ಕೆಲವು ಕ್ರಮಗಳು ಪಾಕಿಸ್ತಾನವನ್ನು ಆರ್ಥಿಕವಾಗಿ ಮತ್ತು ಇತರ ಕೆಲವು ಆಯಾಮಗಳಲ್ಲಿ ಪ್ರಪಾತಕ್ಕೆ ತಳ್ಳಿದೆ. ಆ ಮೂಲಕ, ಉಗ್ರಗಾಮಿಗಳನ್ನು ಪೋಷಿಸುವ ಪಾಕಿಸ್ತಾನ ಸೇನೆ ಹಾಗೂ ಗುಪ್ತಚರ ಸಂಸ್ಥೆ ಐಎಸ್ಐಯ ಊಹೆಗೂ ನಿಲುಕದ ತಿರುಗೇಟನ್ನು ಭಾರತ ನೀಡುತ್ತಿದೆ.
ಒಂದೆಡೆ ಪಾಕಿಸ್ತಾನ ಯುದ್ಧ ಭೀತಿಯಲ್ಲಿದ್ದರೆ, ಭಾರತ ಸರ್ಕಾರ ಮಾತ್ರ ಯುದ್ಧ ಮಾಡದೆಯೇ ಶತ್ರು ದೇಶದ ನಾಶಕ್ಕೆ ದಿಟ್ಟ ಹೆಜ್ಜೆ ಇಡುತ್ತಿದೆ. ಪಾಕಿಸ್ತಾನಿ ಚಿಂತಕರು ಭಾರತದ ಈ ಕ್ರಮಗಳ ನಿರೀಕ್ಷಿಸಿಯೇ ಇರಲಿಲ್ಲ. ಈಗ ಪಾಕಿಸ್ತಾನದ ಮೇಲೆ ಹೆಚ್ಚುತ್ತಿರುವ ಹೊರೆ ಅವರನ್ನು ಜಾಗೃತಗೊಳಿಸಿದೆ. ಗಡಿಯನ್ನು ಮುಚ್ಚಿ ವೀಸಾಗಳನ್ನು ಸ್ಥಗಿತಗೊಳಿಸುವ ನಿರ್ಧಾರವು ಭಾರತದಲ್ಲಿರುವ ಪಾಕಿಸ್ತಾನಿ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಚಿಕಿತ್ಸೆಗಾಗಿ ಭಾರತಕ್ಕೆ ಬರಲು ಬಯಸುವವರಿಗೂ ಮಾರ್ಗಗಳನ್ನು ಬಂದ್ ಮಾಡಲಾಗಿದೆ.
ಇದನ್ನೂ ಓದಿ: ಭಾರತದಿಂದ ವೈಮಾನಿಕ ದಾಳಿ ಭೀತಿ; ಪಾಕಿಸ್ತಾನದಿಂದ ಗಡಿಯಲ್ಲಿ ತುರ್ತು ಸೈರನ್ ಅಳವಡಿಕೆ
ಭಾರತದ ವಾಯು ಪ್ರದೇಶದಲ್ಲಿ ಪಾಕಿಸ್ತಾನದ ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿದ್ದು ಮತ್ತು ಪಾಕಿಸ್ತಾನದ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳು ಹಾರಾಟ ನಡೆಸದೇ ಇರುವುದರಿಂದ ಆ ದೇಶಕ್ಕೆ ಭಾರಿ ನಷ್ಟವಾಗಲಿದೆ. ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸುವುದಕ್ಕಾಗಿ ಭಾರತವು ಪ್ರತಿದಿನ ಸುಮಾರು 1.15 ಕೋಟಿ ರೂ.ಗಳನ್ನು ಪಾವತಿಸುತ್ತಿತ್ತು. ಆದರೆ ಪಾಕಿಸ್ತಾನಕ್ಕೆ ಈಗ ಆ ಮೊತ್ತ ದೊರೆಯವುದಿಲ್ಲ. ಮತ್ತೊಂದೆಡೆ, ಭಾರತದ ವಾಯು ಪ್ರದೇಶದಲ್ಲಿ ಸಂಚಾರಕ್ಕೆ ಅವಕಾಶ ಇಲ್ಲದಿರುವುದರಿಂದ ಪಾಕಿಸ್ತಾನ ವಿಮಾನಗಳು ಸುತ್ತಿಬಳಸಿ ಸಂಚರಿಸಬೇಕಾಗಿದ್ದು, ಇಂಧನ ವೆಚ್ಚ ಹೆಚ್ಚಾಗಿ ನಷ್ಟವಾಗಲಿದೆ.
ಇದನ್ನೂ ಓದಿ: ಗಂಗಾ ಎಕ್ಸ್ಪ್ರೆಸ್ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 am, Sat, 3 May 25