AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

42 ವರ್ಷದ ಬಳಿಕ ಸಿಕ್ಕಿತು ನ್ಯಾಯ! ಅಲಹಾಬಾದ್ ಹೈಕೋರ್ಟ್​​ನಿಂದ 100 ವರ್ಷದ ಕೊಲೆ ಆರೋಪಿ ಖುಲಾಸೆ

ಇದು ಭಾರತದಲ್ಲಿ ಹಿಂದೆಂದೂ ಕೇಳಿರದ ವಿಷಯ. ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 42 ವರ್ಷಗಳ ಬಳಿಕ ಕೊಲೆ ಪ್ರಕರಣವೊಂದರ ಅಪರಾಧಿಯನ್ನು ಆರೋಪಮುಕ್ತಗೊಳಿಸಿ ಹೈಕೋರ್ಟ್ ತೀರ್ಪು ನೀಡಿದೆ. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 100 ವರ್ಷ ವಯಸ್ಸಿನ ಆರೋಪಿ ಕೊಲೆ ಆರೋಪದಿಂದ ಖುಲಾಸೆಯಾಗಿದ್ದಾರೆ. ಈ ರೀತಿಯ ವಿಚಿತ್ರವಾದ ಘಟನೆಯೊಂದು ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

42 ವರ್ಷದ ಬಳಿಕ ಸಿಕ್ಕಿತು ನ್ಯಾಯ! ಅಲಹಾಬಾದ್ ಹೈಕೋರ್ಟ್​​ನಿಂದ 100 ವರ್ಷದ ಕೊಲೆ ಆರೋಪಿ ಖುಲಾಸೆ
Allahabad High Court
ಸುಷ್ಮಾ ಚಕ್ರೆ
|

Updated on: Feb 05, 2026 | 3:21 PM

Share

ಅಲಹಾಬಾದ್, ಫೆಬ್ರವರಿ 5: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವ ಪ್ರಕರಣವೂ ಬಹಳ ಬೇಗ ಇತ್ಯರ್ಥವಾಗುವುದಿಲ್ಲ ಎಂಬ ಕುರಿತು ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಈ ರೀತಿಯ ವಿಳಂಬದ ನ್ಯಾಯದಿಂದಾಗಿ ತಪ್ಪು ಮಾಡಿರದ ಆರೋಪಿಗಳು ತೀವ್ರ ತೊಂದರೆ ಅನುಭವಿಸಿದ ಉದಾಹರಣೆಗಳೂ ಇವೆ. ಈ ರೀತಿಯ ನ್ಯಾಯಾಂಗದ ವಿಳಂಬದ ದೀರ್ಘಾವಧಿಯ ಪರಿಣಾಮವನ್ನು ಒತ್ತಿಹೇಳುವ ಮಹತ್ವದ ತೀರ್ಪೊಂದು ಹೊರಬಿದ್ದಿದ್ದು, ಅಲಹಾಬಾದ್ ಹೈಕೋರ್ಟ್ (Allahabad High Court) 1982ರ ಹಿಂದಿನ ಕೊಲೆ ಪ್ರಕರಣದಲ್ಲಿ 100 ವರ್ಷದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ.

ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಚಂದ್ರಧಾರಿ ಸಿಂಗ್ ಮತ್ತು ಸಂಜೀವ್ ಕುಮಾರ್ ಅವರ ವಿಭಾಗೀಯ ಪೀಠವು 1984ರಲ್ಲಿ ಹಮೀರ್‌ಪುರದ ಸೆಷನ್ಸ್ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಧನಿರಾಮ್ ಅವರ ಶಿಕ್ಷೆಯನ್ನು ರದ್ದುಗೊಳಿಸಿತು. ಜೀವಾವಧಿ ಶಿಕ್ಷೆಯ ವಿರುದ್ಧ ಅವರ ಮೇಲ್ಮನವಿ 40 ವರ್ಷಗಳಿಗೂ ಹೆಚ್ಚು ಕಾಲ ಹೈಕೋರ್ಟ್‌ನಲ್ಲಿ ಬಾಕಿ ಇತ್ತು ಎಂಬುದು ವಿಚಿತ್ರ ಮತ್ತು ವಿಶೇಷ. ಆದರೆ, ಧನಿರಾಮ್ ಅವರ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದೆ.

ಇದನ್ನೂ ಓದಿ: 10 ವರ್ಷ ಹಿಂದೆ ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಪೊಲೀಸರಿಗೆ ಕರೆ

ಈ ಪ್ರಕರಣ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ 1982ರಲ್ಲಿ ಕೊಲೆ ನಡೆದಿದ್ದು, ಮೈಕು, ಸತ್ತಿ ದೀನ್ ಮತ್ತು ಧನಿ ರಾಮ್ ಎಂಬ ಮೂವರು ಆರೋಪಿಗಳಾಗಿದ್ದರು. ಕೊಲೆಯ ನಂತರ ಮೈಕು ತಲೆಮರೆಸಿಕೊಂಡಿದ್ದರೆ, ಹಮೀರ್‌ಪುರ ಸೆಷನ್ಸ್ ನ್ಯಾಯಾಲಯವು 2 ವರ್ಷಗಳ ನಂತರ 1984ರಲ್ಲಿ ಸತ್ತಿ ದೀನ್ ಮತ್ತು ಧನಿ ರಾಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದೇ ವರ್ಷ ಧನಿ ರಾಮ್ ಜಾಮೀನಿನ ಮೇಲೆ ಬಿಡುಗಡೆಯಾದರು. ಅವರ ಮೇಲ್ಮನವಿ ವಿಚಾರಣೆಯಲ್ಲಿರುವಾಗಲೇ ಸತ್ತಿ ದಿನ್ ನಿಧನರಾದರು, ಇದರಿಂದಾಗಿ ಈ ಪ್ರಕರಣದಲ್ಲಿ ಧನಿ ರಾಮ್ ಮಾತ್ರ ಬದುಕುಳಿದ ಮೇಲ್ಮನವಿದಾರರಾದರು.

ಅಂದಿನಿಂದ ಧನಿ ರಾಮ್ ಜಾಮೀನಿನ ಮೇಲೆ ಹೊರಗಿರುವುದನ್ನು ಗಮನಿಸಿದ ಅಲಹಾಬಾದ್ ಹೈಕೋರ್ಟ್, ಅವರ ಜಾಮೀನು ಬಾಂಡ್ ಅನ್ನು ರದ್ದುಗೊಳಿಸುವಂತೆ ನಿರ್ದೇಶಿಸಿತು ಮತ್ತು ಆರೋಪಿಯನ್ನು ಖುಲಾಸೆಗೊಳಿಸುವ ನಿರ್ಧಾರವು ಪ್ರಕರಣದ ಅರ್ಹತೆಯನ್ನು ಆಧರಿಸಿದೆ ಎಂದು ಹೇಳಿತು.

ಇದನ್ನೂ ಓದಿ: ಹಣಕ್ಕಾಗಿ ತ್ರಿವಳಿ ಕೊಲೆ ಶಂಕೆ: ತಂಗಿ ಗರ್ಭಿಣಿ ಎಂದು ಖಾಕಿ ಮುಂದೆ ಕತೆ ಹೇಳಿದ್ನಾ ಕಿರಾತಕ?

ತನ್ನ ತೀರ್ಪಿನಲ್ಲಿ, ಪ್ರಮುಖ ಆರೋಪಿ ಶೂಟರ್ ಮೈಕು ಅವರನ್ನು ಎಂದಿಗೂ ಬಂಧಿಸಲೇ ಇಲ್ಲ ಎಂದು ಹೈಕೋರ್ಟ್ ಗಮನಿಸಿದೆ. ಮೇಲ್ಮನವಿಯ ದೀರ್ಘಾವಧಿಯ ಬಾಕಿ ಉಳಿದಿರುವುದು ಮತ್ತು ಬದುಕುಳಿದ ಆರೋಪಿಯ ವಯಸ್ಸು ನಿರ್ಲಕ್ಷಿಸಲಾಗದ ಮಹತ್ವದ ಅಂಶಗಳಾಗಿವೆ ಎಂದು ಪೀಠ ಗಮನಿಸಿದೆ. ಹೀಗಾಗಿ, ಜೀವಾವಧಿ ಶಿಕ್ಷೆಯನ್ನು ಬದಿಗಿಟ್ಟು ಅಲಹಾಬಾದ್ ಹೈಕೋರ್ಟ್ ಧನಿರಾಮ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು ಮತ್ತು ಅವರ ಜಾಮೀನು ಬಾಂಡ್‌ಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ