ಕೇರಳ: ಕುಸಾಟ್ ಟೆಕ್ ಫೆಸ್ಟ್ ವೇಳೆ ಕಾಲ್ತುಳಿತ; 4 ವಿದ್ಯಾರ್ಥಿಗಳು ಸಾವು

|

Updated on: Nov 25, 2023 | 10:08 PM

Cusat Tech Fest: ಕೇರಳದ ಕೊಚ್ಚಿನ್ ಯುನಿವರ್ಸಿಟಿ ಸಯನ್ಸ್ ಆಂಡ್ ಟೆಕ್ನಾಲಜಿ ಕಾಲೇಜು ಕ್ಯಾಂಪಸ್​​​ನಲ್ಲಿ ನಡೆದ ಟೆಕ್ ಫೆಸ್ಟ್ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಅನೇಕ ಜನರಿಗೆ ಗಾಯಗಳಾಗಿವೆ. ಸಭಾಂಗಣದಲ್ಲಿ ನಿಖಿತಾ ಗಾಂಧಿಯವರ  ಗಾನಮೇಳದ ವೇಳೆ ಈ ದುರಂತ ಸಂಭವಿಸಿದೆ.

ಕೇರಳ: ಕುಸಾಟ್ ಟೆಕ್ ಫೆಸ್ಟ್ ವೇಳೆ ಕಾಲ್ತುಳಿತ; 4 ವಿದ್ಯಾರ್ಥಿಗಳು ಸಾವು
ಕುಸಾಟ್
Follow us on

ಕೊಚ್ಚಿ ನವೆಂಬರ್ 25: ಕೇರಳದ (Kerala) ಕಳಮಶ್ಶೇರಿ ಕುಸಾಟ್ ಕ್ಯಾಂಪಸ್‌ನಲ್ಲಿ (Cochin University of Science and Technology) ನಡೆದ ಟೆಕ್ ಫೆಸ್ಟ್ (Cusat Tech Fest) ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ (Stampede) ನಾಲ್ವರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಅನೇಕ ಜನರು ಗಾಯಗೊಂಡರು. ಸಭಾಂಗಣದಲ್ಲಿ ನಿಖಿತಾ ಗಾಂಧಿಯವರ  ಗಾನಮೇಳದ ವೇಳೆ ಕಾಲ್ತುಳಿತ ಸಂಭವಿಸಿದೆ. ಮಳೆ ಶುರುವಾದಾಗ ನಂತರ ಹಲವರು ಸಭಾಂಗಣದತ್ತ ಓಡಿ ಬಂದದ್ದೇ ಅವಘಡಕ್ಕೆ ಕಾರಣ ಎಂದು ಮಲಯಾಳ ಮನೋರಮಾ ವರದಿ ಮಾಡಿದೆ.

ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 15 ಮಂದಿಗೆ ಪ್ರಜ್ಞೆ ಕಳೆದುಕೊಂಡಿದ್ದಾರೆ. 40ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ನಾಲ್ವರು ವಿದ್ಯಾರ್ಥಿಗಳ ಮೃತದೇಹಗಳನ್ನು ಕಳಮಶ್ಳೇರಿ ಮೆಡಿಕಲ್ ಕಾಲೇಜಿನಲ್ಲಿ ಇರಿಸಲಾಗಿದೆ.


ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಕ್ಯಾಂಪಸ್‌ನ ಬಯಲು ಸಭಾಂಗಣದಲ್ಲಿ ಈ ದುರಂತ ಸಂಭವಿಸಿದೆ. ಮಳೆ ಆರಂಭವಾಗುತ್ತಿದ್ದಂತೆ ಹೊರಗಿನವರೂ ಸೇರಿದಂತೆ ಹಲವರು ಸಭಾಂಗಣಕ್ಕೆ ನುಗ್ಗಿದರು. ಈ ನಡುವೆ ಅವಸರದಲ್ಲಿ ಮೆಟ್ಟಿಲುಗಳಿಂದ ಕೆಳಗೆ ಬಿದ್ದ ವಿದ್ಯಾರ್ಥಿಗಳ ಮೇಲೆ ಇತರರು ತುಳಿದು ಓಡಿದ್ದಾರೆ. ಇಂದು ಟೆಕ್ ಫೆಸ್ಟ್ ನ ಸಮಾರೋಪ ದಿನವಾಗಿದೆ.

ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ಕೇರಳ ಸರ್ಕಾರ ಮನವಿ; ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಟೆಕ್ ಫೆಸ್ಟ್ ‘ದಿಷ್ನಾ’ ಅಂಗವಾಗಿ ಗಾಯಕಿ ನಿಖಿತಾ ಗಾಂಧಿಯವರ ಗಾನಮೇಳ ಕಾರ್ಯಕ್ರಮ ನಡೆಯುತ್ತಿರುವಾಗ ಸಭಾಂಗಣದಲ್ಲಿ ಹಲವು ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳು ಹಾಗೂ ಇತರರು ಕುಣಿದು  ಕಾರ್ಯಕ್ರಮವನ್ನು ಸವಿಯುತ್ತಿರುವಾಗಲೇ ಮಳೆ ಬಂದಿದ್ದು, ಹೊರಗಡೆ ಇದ್ದವರೂ ಒಳಗಡೆ ಓಡಿ ಬಂದಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.


ಕ್ಯಾಂಪಸ್‌ನಲ್ಲಿರುವ ಇತರ ವಿದ್ಯಾರ್ಥಿಗಳನ್ನು ಪೊಲೀಸರ ನೇತೃತ್ವದಲ್ಲಿ ಸ್ಥಳಾಂತರಿಸಲಾಗುತ್ತಿದೆ. ಸಚಿವರಾದ ಪಿ.ರಾಜೀವ್ ಮತ್ತು ಆರ್.ಬಿಂದು ಘಟನಾ ಸ್ಥಳಕ್ಕೆ ಹೊರಟಿರುವುದಾಗಿ ಕೈರಳಿ ಸುದ್ದಿವಾಹಿನಿ ವರದಿ ಮಾಡಿದೆ.

ಮೃತರ ಗುರುತು ಇನ್ನಷ್ಟೇ ತಿಳಿದುಬರಬೇಕಿದೆ.  ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಟರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಕಳಮಶ್ಶೇರಿ ವೈದ್ಯಕೀಯ ಕಾಲೇಜಿಗೆ 46 ಜನರನ್ನು ದಾಖಲಿಸಲಾಗಿದೆ, ಅವರಲ್ಲಿ 15 ಮಂದಿ ವಾರ್ಡ್‌ನಲ್ಲಿ ನಿಗಾದಲ್ಲಿದ್ದಾರೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಎರ್ನಾಕುಲಂ ಜಿಲ್ಲಾಧಿಕಾರಿ ಎನ್‌ಎಸ್‌ಕೆ ಉಮೇಶ್ ತಿಳಿಸಿದ್ದಾರೆ.

ಏತನ್ಮಧ್ಯೆ, ಕನಿಷ್ಠ 18 ಮಂದಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ತಲೆಗೆ ಪೆಟ್ಟು ಬಿದ್ದಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 8:21 pm, Sat, 25 November 23