ಲೋಕಸಭೆಯಲ್ಲಿ ವಲಸೆ ಮಸೂದೆ ಅಂಗೀಕಾರ; ಭಾರತ ಧರ್ಮಛತ್ರವಲ್ಲ ಎಂದ ಅಮಿತ್ ಶಾ

ಲೋಕಸಭೆಯು ವಲಸೆ ಮತ್ತು ವಿದೇಶಿಯರ ಮಸೂದೆಯನ್ನು ಅಂಗೀಕರಿಸಿದೆ. ಈ ವೇಳೆ ಸದನದಲ್ಲಿ ಮಾತಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ 'ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರು. ಭಾರತ ಧರ್ಮಶಾಲೆಯಲ್ಲ' ಎಂದು ಹೇಳಿದ್ದಾರೆ. ಭಾರತಕ್ಕೆ ಪ್ರವೇಶಿಸಿ ಅಶಾಂತಿ ಸೃಷ್ಟಿಸಲು ಬಯಸುವ ಕೆಲವು ಜನರಿದ್ದಾರೆ. ಅಂತಹ ವ್ಯಕ್ತಿಗಳನ್ನು ನಿಷ್ಠುರವಾಗಿ ಎದುರಿಸಲಾಗುವುದು. ದೇಶದ ಭದ್ರತೆ ಮತ್ತು ಆರ್ಥಿಕತೆಯನ್ನು ಬಲಪಡಿಸಲು, ಉತ್ಪಾದನೆ ಮತ್ತು ವ್ಯಾಪಾರವನ್ನು ಉತ್ತೇಜಿಸಲು, ಶಿಕ್ಷಣ ವ್ಯವಸ್ಥೆಗೆ ಜಾಗತಿಕ ಮನ್ನಣೆ ಪಡೆಯಲು ಮತ್ತು ವಿಶ್ವವಿದ್ಯಾಲಯಗಳು ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಲು ಸಹಾಯ ಮಾಡಲು ಈ ಮಸೂದೆ ಅಗತ್ಯವಾಗಿದೆ ಎಂದು ಅಮಿತ್ ಶಾ ಹೇಳಿದರು.

ಲೋಕಸಭೆಯಲ್ಲಿ ವಲಸೆ ಮಸೂದೆ ಅಂಗೀಕಾರ; ಭಾರತ ಧರ್ಮಛತ್ರವಲ್ಲ ಎಂದ ಅಮಿತ್ ಶಾ
Home Minister Amit Shah

Updated on: Mar 27, 2025 | 7:36 PM

ನವದೆಹಲಿ, ಮಾರ್ಚ್ 27: ಲೋಕಸಭೆಯಲ್ಲಿ ಇಂದು ವಲಸೆ ಮತ್ತು ವಿದೇಶಿರ ಮಸೂದೆಯನ್ನು ಅಂಗೀಕರಿಸಲಾಯಿತು. ಈ ವೇಳೆ 2025ರ ವಲಸೆ ಮತ್ತು ವಿದೇಶಿಯರ ಮಸೂದೆಯ ಕುರಿತು ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಲ್ಪಸಂಖ್ಯಾತ ಗುಂಪುಗಳು ಭಾರತದಲ್ಲಿ ಅತ್ಯಂತ ಸುರಕ್ಷಿತವಾಗಿವೆ. ಸರ್ಕಾರವು ಯಾವಾಗಲೂ ನಿರಾಶ್ರಿತರ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು. ಪ್ರವಾಸಿಗರಾಗಿ ಅಥವಾ ಶಿಕ್ಷಣ, ಆರೋಗ್ಯ ಮತ್ತು ವ್ಯವಹಾರಕ್ಕಾಗಿ ಭಾರತಕ್ಕೆ ಬರಲು ಬಯಸುವವರನ್ನು ಸ್ವಾಗತಿಸಲು ಸರ್ಕಾರ ಸಿದ್ಧವಾಗಿದೆ. ಆದರೆ ಬೆದರಿಕೆಯನ್ನು ಒಡ್ಡುವವರನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಿ ಹೇಳಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತಕ್ಕೆ ದುರುದ್ದೇಶಪೂರಿತ ಉದ್ದೇಶಗಳನ್ನು ಹೊಂದಿರುವ ಜನರನ್ನು ಮಾತ್ರ ತಡೆಯುತ್ತದೆ ಎಂದು ಹೇಳಿದ ಅಮಿತ್ ಶಾ, ನಮ್ಮ ದೇಶವು ಧರ್ಮಶಾಲೆಯಲ್ಲ ಎಂದು ಹೇಳಿದರು. “ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನುಂಟುಮಾಡುವವರನ್ನು ದೇಶಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ. ಯಾರಾದರೂ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ನಮ್ಮ ದೇಶಕ್ಕೆ ಬಂದರೆ, ಅವರಿಗೆ ಯಾವಾಗಲೂ ಸ್ವಾಗತವಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡಿಗೆ ಕೇಂದ್ರ ಸರ್ಕಾರ 5 ಲಕ್ಷ ಕೋಟಿ ನೀಡಿದೆ; ಸಿಎಂ ಸ್ಟಾಲಿನ್ ವಿರುದ್ಧ ಅಮಿತ್ ಶಾ ವಾಗ್ದಾಳಿ

ಪ್ರಸ್ತಾವಿತ ಮಸೂದೆಯು ದೇಶದ ಭದ್ರತೆಯನ್ನು ಬಲಪಡಿಸುತ್ತದೆ, ಆರ್ಥಿಕತೆ ಮತ್ತು ವ್ಯವಹಾರವನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಉತ್ತೇಜಿಸುತ್ತದೆ. ಈ ವಲಸೆ ಮಸೂದೆಯು ಭಾರತಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವಿದೇಶಿಯರ ಬಗ್ಗೆ ದೇಶವು ನವೀಕೃತ ಮಾಹಿತಿಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಮ್ಯಾನ್ಮಾರ್‌ನಿಂದ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳಿಂದ ಭಾರತಕ್ಕೆ ಅಕ್ರಮ ನುಸುಳುವಿಕೆಯ ವಿಷಯವನ್ನು ಪ್ರಸ್ತಾಪಿಸಿದ ಅಮಿತ್ ಶಾ, ವೈಯಕ್ತಿಕ ಲಾಭಕ್ಕಾಗಿ ಭಾರತದಲ್ಲಿ ಆಶ್ರಯ ಪಡೆಯುತ್ತಿರುವ ಅಂತಹ ಜನರು ಹೆಚ್ಚಾಗಿದ್ದು, ದೇಶವನ್ನು ಅಸುರಕ್ಷಿತವಾಗಿಸಿದೆ ಎಂದು ಒತ್ತಿ ಹೇಳಿದರು. ಭಾರತದಲ್ಲಿ ಅಶಾಂತಿ ಸೃಷ್ಟಿಸಿದರೆ ಒಳನುಸುಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.

ಇದನ್ನೂ ಓದಿ: ಹಿಂದಿ ಹೇರಿಕೆಯಿಲ್ಲ, ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲೇ ಪತ್ರ ವ್ಯವಹಾರ: ಅಮಿತ್ ಶಾ ಮಹತ್ವದ ಘೋಷಣೆ

ಈ ಮಸೂದೆಯು ದೇಶದ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು 2047ರ ವೇಳೆಗೆ ಭಾರತವು ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. “ನಮ್ಮ ದೇಶಕ್ಕೆ ಬರುವ ಪ್ರತಿಯೊಬ್ಬ ವಿದೇಶಿಯರ ಬಗ್ಗೆ ನಾವು ನವೀಕೃತ ಮಾಹಿತಿಯನ್ನು ಹೊಂದಿದ್ದೇವೆ ಎಂದು ನಾನು ದೇಶಕ್ಕೆ ಭರವಸೆ ನೀಡಲು ಬಯಸುತ್ತೇನೆ” ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ