ಭವಾನಿಪುರದ ಸೋಲು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಾಜಿ ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹೀನಾಯ ಸೋಲು ಮತ್ತು ಪಕ್ಷದೊಳಗಿನ ಭೀಕರ ಬಂಡಾಯದ ನಡುವೆ, ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಹತ್ವದ ಕಾನೂನು ಕ್ರಮಗಳಿಗೆ ಮುಂದಾಗಿದ್ದಾರೆ. ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್ (TMC) ಪಕ್ಷವು ಹಿಂದೆಂದೂ ಕಾಣದ ಭೀಕರ ಬಿಕ್ಕಟ್ಟನ್ನು ಎದುರಿಸುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ತಾವೇ ಸ್ಪರ್ಧಿಸಿ ಸೋತಿದ್ದ ಭವಾನಿಪುರ ಕ್ಷೇತ್ರದ ಫಲಿತಾಂಶವನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಇಂದು ಕೊಲ್ಕತ್ತಾ ಹೈಕೋರ್ಟ್ನಲ್ಲಿ ಅರ್ಜಿ ದಾಖಲಿಸಿದ್ದಾರೆ.

ಕೊಲ್ಕತ್ತಾ, ಜೂನ್ 16: ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಭವಾನಿಪುರ ಕ್ಷೇತ್ರದಲ್ಲಿ 15,105 ಮತಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದ್ದರು. ಮೇ 4ರಂದು ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಅಭೂತಪೂರ್ವ ಬಹುಮತ ಗಳಿಸಿ, ಸುವೇಂದು ಅಧಿಕಾರಿ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭವಾನಿಪುರ ಕ್ಷೇತ್ರದ ಸೋಲನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ತಮ್ಮದೇ ಭದ್ರಕೋಟೆಯಾಗಿದ್ದ ಸೀಟಿನಲ್ಲಿ ಎದುರಾದ ಈ ಸೋಲನ್ನು ಒಪ್ಪದ ಮಮತಾ ಬ್ಯಾನರ್ಜಿ, ಇಂದು ಖುದ್ದಾಗಿ ಕೊಲ್ಕತ್ತಾ ಹೈಕೋರ್ಟ್ನ ರಿಜಿಸ್ಟ್ರಿಗೆ ಭೇಟಿ ನೀಡಿ ಫಲಿತಾಂಶವನ್ನು ಪ್ರಶ್ನಿಸುವ ಅರ್ಜಿಯನ್ನು ದೃಢೀಕರಿಸಿದ್ದಾರೆ.
ಇದರ ನಡುವೆ, ಲೋಕಸಭೆಯ 20 ಸಂಸದರು ಬಂಡಾಯ ಎದ್ದಿರುವ ಬೆನ್ನಲ್ಲೇ, ಮಮತಾ ಬ್ಯಾನರ್ಜಿ ಅವರು ಪಕ್ಷದ ಯುವ ಘಟಕದ ಅಧ್ಯಕ್ಷೆ ಸಾಯೋನಿ ಘೋಷ್ ಸೇರಿದಂತೆ ಹಲವು ನಾಯಕರನ್ನು ಹುದ್ದೆಯಿಂದ ತೆಗೆದುಹಾಕುವ ಮೂಲಕ ಪಕ್ಷದ ಮೇಲಿನ ಹಿಡಿತ ಬಿಗಿಗೊಳಿಸಲು ಭಾರಿ ಸರ್ಜರಿ ನಡೆಸಿದ್ದಾರೆ.
ಇದನ್ನೂ ಓದಿ: ‘ಎನ್ಸಿಪಿಐ’ ಜೊತೆ 20 ಟಿಎಂಸಿ ಬಂಡಾಯ ಸಂಸದರ ವಿಲೀನ, ಸಂಸತ್ತಿನಲ್ಲಿ ಹೊಸ ಬಣದ ಉದಯ
ಲೋಕಸಭೆಯಲ್ಲಿ ಟಿಎಂಸಿಯ ಒಟ್ಟು 28 ಸಂಸದರ ಪೈಕಿ 20 ಸಂಸದರು ಮಮತಾ ಬ್ಯಾನರ್ಜಿ ನಾಯಕತ್ವದ ವಿರುದ್ಧ ದಂಗೆ ಎದ್ದಿದ್ದಾರೆ. ಈ ಬಂಡಾಯಗಾರರು ಸೋಮವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ತಮಗೇ “ನೈಜ ಟಿಎಂಸಿ” ಎಂದು ಮಾನ್ಯತೆ ನೀಡಬೇಕು ಹಾಗೂ ತಾವು ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ (NDA) ಒಕ್ಕೂಟವನ್ನು ಬೆಂಬಲಿಸುವುದಾಗಿ ಪತ್ರ ನೀಡಲು ಸಿದ್ಧತೆ ನಡೆಸಿದ್ದಾರೆ. ಈ ಬಂಡಾಯದ ಬಣದಲ್ಲಿ ಗುರುತಿಸಿಕೊಂಡಿದ್ದ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ತಕ್ಷಣದ ಕ್ರಮ ಕೈಗೊಂಡಿದ್ದಾರೆ.
ಟಿಎಂಸಿ ಯುವ ಘಟಕದ ಅಧ್ಯಕ್ಷೆಯಾಗಿದ್ದ ಸಂಸದೆ ಸಾಯೋನಿ ಘೋಷ್ ಅವರನ್ನು ಹುದ್ದೆಯಿಂದ ಕಿತ್ತೊಗೆಯಲಾಗಿದ್ದು, ಅವರ ಜಾಗಕ್ಕೆ ಯುವ ನಾಯಕ ಅರ್ನಾಬ್ ಬ್ಯಾನರ್ಜಿ ಅವರನ್ನು ನೇಮಿಸಲಾಗಿದೆ. ಕೊಲ್ಕತ್ತಾ ದಕ್ಷಿಣ ಕ್ಷೇತ್ರದ ಸಂಸದೆ ಮಾಲಾ ರಾಯ್ ಅವರನ್ನು ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ಥಾನದಿಂದ ತೆಗೆದುಹಾಕಿ, ನಾಡಿಯಾ ಜಿಲ್ಲೆಯ ಕಾಲಿಗಂಜ್ ಶಾಸಕಿ ಅಲಿಫಾ ಅಹ್ಮದ್ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಟಿಎಂಸಿ ಹಿರಿಯ ಸಂಸದ ಸುದೀಪ್ ಬಂಡೋಪಾಧ್ಯಾಯ ಕೂಡ ಬಂಡಾಯ ಕ್ಯಾಂಪ್ ಸೇರಿರುವುದರಿಂದ, ಅವರಿಂದ ತೆರವಾದ ಉತ್ತರ ಕೋಲ್ಕತ್ತಾ ಸಾಂಸ್ಥಿಕ ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಮೊಟ್ಟೆ ದಾಳಿ ಎದುರಿಸಿದ್ದ ಬೆಲೆಘಾಟಾ ಶಾಸಕ ಕುನಾಲ್ ಘೋಷ್ ಅವರನ್ನು ನಿಯೋಜಿಸಲಾಗಿದೆ.
ಜೂನ್ 5 ರಂದು ಮಮತಾ ಬ್ಯಾನರ್ಜಿ ಅವರು ಬಂಗಾಳದ ಎಲ್ಲಾ ಹಳೆಯ ಸಮಿತಿಗಳನ್ನು ರದ್ದುಗೊಳಿಸಿ, ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮರುನೇಮಕ ಮಾಡುವ ಮೂಲಕ ಪಕ್ಷವನ್ನು ಪುನರ್ ರಚಿಸಿದ್ದರು. ಆದರೆ, ಇಷ್ಟೆಲ್ಲಾ ಮಾಡಿದರೂ ಸಂಸದರು ದ್ರೋಹ ಬಗೆದಿರುವುದಕ್ಕೆ ಟಿಎಂಸಿ ನಿಷ್ಠಾವಂತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




