ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

ಮಣಿಪುರದ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಟ್ರೋಂಗ್ಲಾಬಿ ಗ್ರಾಮದಲ್ಲಿ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, ಇಬ್ಬರು ಮಕ್ಕಳು (5 ವರ್ಷ, 6 ತಿಂಗಳು) ಸಾವನ್ನಪ್ಪಿದ್ದಾರೆ. ತಾಯಿ ಗಾಯಗೊಂಡಿದ್ದಾರೆ. ಕುಕಿ ಉಗ್ರಗಾಮಿಗಳಿಂದ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. 2023ರಿಂದ ಕುಕಿ-ಮೈಥಿ ಸಮುದಾಯಗಳ ನಡುವೆ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಮುಂದುವರಿದ ಭಾಗವಾಗಿ ಈ ಘಟನೆ ಸಂಭವಿಸಿದೆ. ಈ ಅಮಾನವೀಯ ಕೃತ್ಯದ ಬಗ್ಗೆ ಆತಂಕ ವ್ಯಕ್ತವಾಗಿದೆ.

ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು
ಮಣಿಪುರ
Image Credit source: PTI

Updated on: Apr 07, 2026 | 8:12 AM

ಇಂಫಾಲ, ಏಪ್ರಿಲ್ 07: ಕಳೆದ ನಾಲ್ಕು ವರ್ಷಗಳಿಂದ ಮಣಿಪುರ(Manipur)ದಲ್ಲಿ ಒಂದಲ್ಲಾ ಒಂದು ಅಹಿತಕರ ಘಟನೆಗಳು ನಡೆಯುತ್ತಿವೆ. ಇದೀಗ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. 2023ರಲ್ಲಿ ಕುಕಿ ಹಾಗೂ ಮೈಥಿ ಸಮುದಾಯದ ನಡುವೆ ಹುಟ್ಟಿಕೊಂಡ ದ್ವೇಷದ ಜ್ವಾಲೆಯು ಇಡೀ ಮಣಿಪುರವನ್ನೇ ಸುಟ್ಟಿತ್ತು. ಸಾಕಷ್ಟು ಬಾರಿ ಘರ್ಷಣೆಗಳು ನಡೆದು ನೂರಾರು ಮಂದಿ ಸಾವನ್ನಪ್ಪಿದ್ದರು. ಈಗಲೂ ಬೂದಿ ಮುಚ್ಚಿದ ಕೆಂಡದಂತೆಯೇ ಪರಿಸ್ಥಿತಿ ಇದೆ.

ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ದೊಡ್ಡ ದುರಂತವೊಂದು ಸಂಭವಿಸಿದೆ. ಬಾಂಬ್ ದಾಳಿಯಲ್ಲಿ ಇಬ್ಬರು ಚಿಕ್ಕ ಮಕ್ಕಳು ಸಾವನ್ನಪ್ಪಿದ್ದು, ಅವರ ತಾಯಿ ಗಾಯಗೊಂಡಿದ್ದಾರೆ. ಮೊಯಿರಾಂಗ್ ಟ್ರೋಂಗ್ಲಾಬಿ ಗ್ರಾಮದಲ್ಲಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತ ಕುಕಿ ಉಗ್ರಗಾಮಿಗಳು ಹಾರಿಸಿದ ಬಾಂಬ್ ನಾಗರಿಕರ ಮನೆಯೊಂದರ ಮೇಲೆ ಬಿದ್ದಿತ್ತು, ಆ ಸಮಯದಲ್ಲಿ ಕುಟುಂಬದ ಸದಸ್ಯರು ನಿದ್ರೆಯಲ್ಲಿದ್ದರು. ಈ ಸ್ಫೋಟದಲ್ಲಿ ಐದು ವರ್ಷದ ಬಾಲಕ ಮತ್ತು ಆರು ತಿಂಗಳ ಬಾಲಕಿ ತಮ್ಮ ಮಲಗುವ ಕೋಣೆಯೊಳಗೆ ಸಾವನ್ನಪ್ಪಿದ್ದಾರೆ. ಆ ಸಮಯದಲ್ಲಿ ಕೋಣೆಯಲ್ಲಿದ್ದ ಅವರ ತಾಯಿ ಕೂಡ ದಾಳಿಯಲ್ಲಿ ಗಾಯಗೊಂಡರು.

ಮತ್ತಷ್ಟು ಓದಿ: ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುಮ್ನಮ್ ಖೇಮ್ಚಂದ್ ಸಿಂಗ್ ಆಯ್ಕೆ

ಚುರಚಂದ್‌ಪುರದ ಬೆಟ್ಟ ಪ್ರದೇಶಗಳ ಬಳಿ ಇರುವ ತಗ್ಗು ಪ್ರದೇಶವಾದ ಮೊಯಿರಾಂಗ್ ಟ್ರೋಂಗ್ಲಾಬಿ, 2023 ಮತ್ತು 2024 ರಲ್ಲಿಪದೇ ಪದೇ ಗುಂಡಿನ ಚಕಮಕಿ ನಡೆದಿವೆ. ಇತ್ತೀಚಿನ ದಾಳಿಯು ಈ ಪ್ರದೇಶದಲ್ಲಿ ನಿರಂತರ ಹಿಂಸಾಚಾರದ ಬಗ್ಗೆ ಕಳವಳವನ್ನು ಹೆಚ್ಚಿಸಿದೆ.

ಈ ಹೇಯ ಕೃತ್ಯವು ಭಯೋತ್ಪಾದನಾ ಕೃತ್ಯಕ್ಕಿಂತ ಕಡಿಮೆಯಿಲ್ಲ. ಇಂತಹ ಅಮಾನವೀಯ ಕೃತ್ಯಗಳಿಗೆ ನಮ್ಮ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಬಿಜೆಪಿ ಶಾಸಕಿ ಶಾಂತಿ ಸಿಂಗ್ ಹೇಳಿದ್ದಾರೆ. 2023 ರಲ್ಲಿ ಮಣಿಪುರದಲ್ಲಿ ಉಲ್ಬಣಗೊಂಡ ಹಿಂಸಾಚಾರದ ಬಳಿಕ ಮೈಥಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿತ್ತು. ಭೂ ಹಕ್ಕುಗಳು, ರಾಜಕೀಯ ಪ್ರಾತಿನಿಧ್ಯ ಮತ್ತು ಬುಡಕಟ್ಟು ಸ್ಥಾನಮಾನದ ವಿವಾದಗಳಿಂದ ಉಂಟಾದ ಘರ್ಷಣೆಗಳು, ಸಾವುಗಳು, ಸ್ಥಳಾಂತರ ಮತ್ತು ಆಸ್ತಿ ನಾಶಕ್ಕೆ ಕಾರಣವಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us