AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಕ್ಷೀಣಿಸಿದ ಮುಂಗಾರು; ಜೂನ್ 4ರಿಂದ 18ರವರೆಗೆ ಶೇ. 42ಕ್ಕೆ ಏರಿದ ಮಳೆ ಕೊರತೆ ಪ್ರಮಾಣ!

ಈ ತಿಂಗಳ ಆರಂಭದಲ್ಲೇ ಭಾರತಕ್ಕೆ ಮುಂಗಾರು ಪ್ರವೇಶವಾಗಿದೆ. ಇಷ್ಟು ಹೊತ್ತಿಗಾಗಲೇ ಮಳೆಯ ಆರ್ಭಟ ಜೋರಾಗಬೇಕಿತ್ತು. ಆದರೆ, ಕೆಲವು ದಿನಗಳಿಂದ ಮಳೆಯ ಪ್ರಮಾಣ ಕ್ಷೀಣಿಸಿದ್ದು, ಇದು ಕೃಷಿ ಚಟುವಟಿಕೆ ಆರಂಭಿಸಿರುವ ರೈತರಿಗೆ ದೊಡ್ಡ ತಲೆನೋವಾಗಿದೆ. ಭಾರತದ ನೈಋತ್ಯ ಮುಂಗಾರು ಮಾರುತಗಳು ಸುದೀರ್ಘ ಮಂದಗತಿಯನ್ನು ಎದುರಿಸುತ್ತಿದ್ದು, ಭಾರತೀಯ ಹವಾಮಾನ ಇಲಾಖೆಯ (IMD) ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಜೂನ್ 4ರಿಂದ ಜೂನ್ 18ರ ನಡುವಿನ ಅವಧಿಯಲ್ಲಿ ದೇಶಾದ್ಯಂತ ಒಟ್ಟಾರೆ ಮಳೆ ಕೊರತೆಯು ಶೇ. 42ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ದೇಶದಲ್ಲಿ ವಾಡಿಕೆಯಂತೆ 72.2 ಮಿಮೀ ಮಳೆಯಾಗಬೇಕಿತ್ತಾದರೂ, ಕೇವಲ 42.1 ಮಿಮೀ ಮಳೆಯಷ್ಟೇ ದಾಖಲಾಗಿದೆ.

ಭಾರತದಲ್ಲಿ ಕ್ಷೀಣಿಸಿದ ಮುಂಗಾರು; ಜೂನ್ 4ರಿಂದ 18ರವರೆಗೆ ಶೇ. 42ಕ್ಕೆ ಏರಿದ ಮಳೆ ಕೊರತೆ ಪ್ರಮಾಣ!
Kochi Rain Image Credit source: PTI
ಸುಷ್ಮಾ ಚಕ್ರೆ
|

Updated on: Jun 18, 2026 | 4:41 PM

Share

ನವದೆಹಲಿ, ಜೂನ್ 18: ಭಾರತದಲ್ಲಿ ಮುಂಗಾರು ಮಳೆಯ (Monsoon 2026) ಕೊರತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ದೇಶದ ಕೃಷಿ ವಲಯ ಹಾಗೂ ಜಲಮೂಲಗಳಿಗೆ ಭಾರಿ ಆತಂಕ ಎದುರಾಗಿದೆ. ದೇಶಾದ್ಯಂತ ಮುಂಗಾರು ಮಾರುತಗಳ ಆರ್ಭಟ ಕ್ಷೀಣಿಸಿದ್ದು, ಮಳೆಯ ಕೊರತೆಯ ಪ್ರಮಾಣವು ಆಘಾತಕಾರಿ ರೀತಿಯಲ್ಲಿ ಶೇ. 42ಕ್ಕೆ ತಲುಪಿದೆ. ಜೂನ್ ತಿಂಗಳು ಮುಗಿಯುತ್ತ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಜಲಾಶಯಗಳು ಬತ್ತುತ್ತಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಂಡಿವೆ. ಮುಂದಿನ ದಿನಗಳಲ್ಲಿ ಈ ಕೊರತೆಯನ್ನು ಸರಿದೂಗಿಸುವುದು ಅತ್ಯಂತ ಸವಾಲಿನ ಕೆಲಸ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲೇ ದೇಶವನ್ನು ಪ್ರವೇಶಿಸುವ ಮುಂಗಾರು ಮಾರುತಗಳು ಇಷ್ಟು ಹೊತ್ತಿಗಾಗಲೇ ಇಡೀ ದೇಶವನ್ನು ಆವರಿಸಬೇಕಿತ್ತು. ಆದರೆ, ಈ ಬಾರಿ ಆರಂಭಿಕ ಮುನ್ನಡೆಯ ನಂತರ ಮುಂಗಾರು ಮಾರುತಗಳ ಚಲನೆ ಮಂದಗತಿಯಾಗಿದೆ. ಹವಾಮಾನ ಇಲಾಖೆಯ (IMD) ತಾಜಾ ಅಂಕಿ-ಅಂಶಗಳ ಪ್ರಕಾರ, ದೇಶದ ಬಹುತೇಕ ರಾಜ್ಯಗಳಲ್ಲಿ ವಾಡಿಕೆಗಿಂತ ಭಾರಿ ಕಡಿಮೆ ಮಳೆಯಾಗಿದ್ದು, ಒಟ್ಟಾರೆ ಮಳೆ ಕೊರತೆಯ ಗ್ರಾಫ್ ಶೇ. 42ರಷ್ಟು ದಾಖಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಶೇ 21 ರಷ್ಟು ಮುಂಗಾರು ಮಳೆ ಕೊರತೆ: ಪ್ರಮುಖ ಡ್ಯಾಂಗಳಲ್ಲಿ ತಳ ಸೇರಿದ ನೀರು

ಜೂನ್ ತಿಂಗಳು ದೇಶದ ಮುಂಗಾರು ಹಂಗಾಮಿನ ಬಿತ್ತನೆಗೆ ಅತ್ಯಂತ ಪ್ರಮುಖವಾದ ಸಮಯವಾಗಿದೆ. ಲಕ್ಷಾಂತರ ಎಕರೆ ಕೃಷಿ ಭೂಮಿ ಮಳೆಯಿಲ್ಲದೆ ಒಣಗುತ್ತಿದ್ದು, ರೈತರು ಬಿತ್ತನೆ ಕಾರ್ಯವನ್ನು ಮುಂದೂಡುತ್ತಿದ್ದಾರೆ. ದೇಶದ ಪ್ರಮುಖ ನದಿಗಳು, ಕೆರೆಗಳು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಇದು ಕೇವಲ ಕೃಷಿಗೆ ಮಾತ್ರವಲ್ಲದೆ ಕುಡಿಯುವ ನೀರಿಗೂ ತತ್ವಾರ ಸೃಷ್ಟಿಸುವ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ವಿಶ್ಲೇಷಕರ ಪ್ರಕಾರ, ಜೂನ್ ತಿಂಗಳಿನಲ್ಲಿ ಉಂಟಾಗಿರುವ ಈ ಭಾರಿ ಪ್ರಮಾಣದ (ಶೇ. 42) ಮಳೆ ಕೊರತೆಯನ್ನು ಮುಂಬರುವ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಸರಿದೂಗಿಸುವುದು ಅತ್ಯಂತ ಕಠಿಣವಾಗಿದೆ. ಯಾಕೆಂದರೆ, ಮುಂಗಾರು ಮಾರುತಗಳನ್ನು ಬಲಪಡಿಸುವ ಜಾಗತಿಕ ಹವಾಮಾನ ವಿದ್ಯಮಾನಗಳು ಸದ್ಯಕ್ಕೆ ಪೂರಕವಾಗಿ ಕಾಣಿಸುತ್ತಿಲ್ಲ. ಒಂದು ವೇಳೆ ಜುಲೈ ತಿಂಗಳಿನಲ್ಲೂ ಇದೇ ಪರಿಸ್ಥಿತಿ ಮುಂದುವರಿದರೆ ದೇಶವು ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಇದು ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Karnataka Weather Forecast: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗಾಳಿ, ಮಳೆಯಬ್ಬರ!

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸೇರಿದಂತೆ ದಕ್ಷಿಣ ಹಾಗೂ ಮಧ್ಯ ಭಾರತದ ರಾಜ್ಯಗಳಲ್ಲಿ ಮುಂಗಾರು ಮಳೆಯ ಕೊರತೆ ತೀವ್ರವಾಗಿದೆ. ಕರಾವಳಿ ಭಾಗಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದರೂ, ಒಳನಾಡಿನ ಜಿಲ್ಲೆಗಳಲ್ಲಿ ಧಗೆ ಮುಂದುವರಿದಿದೆ. ಹವಾಮಾನ ಇಲಾಖೆಯು ಮುಂಬರುವ ದಿನಗಳಲ್ಲಿ ವಾಯುಭಾರ ಕುಸಿತ ಉಂಟಾಗಿ ಮಾರುತಗಳು ಚುರುಕಾಗಬಹುದು ಎಂಬ ನಿರೀಕ್ಷೆಯಲ್ಲಿದೆಯಾದರೂ, ಸದ್ಯದ ಪರಿಸ್ಥಿತಿ ಮಾತ್ರ ರೈತರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಮಳೆಯ ಅಭಾವದ ತೀವ್ರತೆಯು ಈಗಾಗಲೇ ಕೃಷಿ ಮತ್ತು ಜಲಮೂಲಗಳ ಮೇಲೆ ಬೀಳಲಾರಂಭಿಸಿದೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆ ಕೊರತೆ ದಾಖಲಾಗಿದ್ದು, ಮುಂಬೈ ನಗರವು ಕಳೆದ ಒಂದು ದಶಕದಲ್ಲೇ ಅತ್ಯಂತ ಒಣಹವೆಯ ಜೂನ್ ತಿಂಗಳನ್ನು ಎದುರಿಸುತ್ತಿದೆ. ಇದರಿಂದಾಗಿ ಅಧಿಕಾರಿಗಳು ನೀರು ಸರಬರಾಜಿನಲ್ಲಿ ಕಡಿತ ಅಥವಾ ನಿರ್ಬಂಧಗಳನ್ನು ಹೇರಲು ಉದ್ಯುಕ್ತರಾಗಿದ್ದಾರೆ. ವಿದರ್ಭ ಮತ್ತು ಮಧ್ಯಪ್ರದೇಶ ಸೇರಿದಂತೆ ಮಧ್ಯ ಭಾರತದ ಇತರ ಭಾಗಗಳು ಕೂಡ ಮುಂಗಾರು ಮರುಜೀವ ಪಡೆಯುವುದಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿವೆ. ಜೂನ್ ತಿಂಗಳ ದ್ವಿತೀಯಾರ್ಧ ಈಗಾಗಲೇ ಆರಂಭವಾಗಿರುವುದರಿಂದ, ಇಲ್ಲಿಯವರೆಗೆ ಉಂಟಾಗಿರುವ ಭಾರಿ ಮಳೆ ಕೊರತೆಯನ್ನು ನೀಗಿಸಲು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಕಡೆಯಿಂದ ಮುಂಗಾರು ಮಾರುತಗಳು ಭಾರಿ ವೇಗದಲ್ಲಿ ಚುರುಕಾಗಬೇಕಿದೆ. ಆದರೆ, ಸದ್ಯದ ಉಪಗ್ರಹ ಚಿತ್ರಗಳನ್ನು ನೋಡಿದರೆ ಅಂತಹ ದೊಡ್ಡ ಮಟ್ಟದ ಚೇತರಿಕೆಯ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಮುಂದಿನ ಒಂದು ವಾರದೊಳಗೆ ಸಮುದ್ರದಲ್ಲಿ ಬಲವಾದ ವಾಯುಭಾರ ಕುಸಿತದ ವಾತಾವರಣ ನಿರ್ಮಾಣವಾಗಿ, ತೇವಾಂಶದ ಚಲನೆ ತೀವ್ರಗೊಳ್ಳದಿದ್ದರೆ, ಈ ಮಳೆ ಕೊರತೆಯು ಜೂನ್ ಅಂತ್ಯದವರೆಗೂ ಮುಂದುವರಿಯಲಿದೆ. ಇದರಿಂದ ಈ ವರ್ಷದ ಮಳೆಯ ಪ್ರಮಾಣದ ಮೇಲೆ ಭಾರೀ ಹೊಡೆತ ಬೀಳಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us