ಭಾರತದಲ್ಲಿ ಕೊವಿಡ್​ 19 ಲಸಿಕೆ ಮೂರನೇ ಡೋಸ್​ ಅಗತ್ಯವಿದೆಯಾ?-ಏಮ್ಸ್​ ನಿರ್ದೇಶಕರ ಉತ್ತರ ಹೀಗಿದೆ

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್​, ಭಾರತದಲ್ಲಿ ಮೂರನೇ ಡೋಸ್​ ಕೊರೊನಾ ಲಸಿಕೆ ಅಗತ್ಯ ಇದೆಯಾ ಎಂಬ ಬಗ್ಗೆ ಮಾತನಾಡಿದ್ದಾರೆ.

ಭಾರತದಲ್ಲಿ ಕೊವಿಡ್​ 19 ಲಸಿಕೆ ಮೂರನೇ ಡೋಸ್​ ಅಗತ್ಯವಿದೆಯಾ?-ಏಮ್ಸ್​ ನಿರ್ದೇಶಕರ ಉತ್ತರ ಹೀಗಿದೆ
ಡಾ.ರಣದೀಪ್​ ಗುಲೇರಿಯಾ (ಸಂಗ್ರಹ ಚಿತ್ರ)
Updated By: Lakshmi Hegde

Updated on: Nov 24, 2021 | 3:47 PM

ಇಲ್ಲಿಯವರೆಗೆ ಭಾರತದಲ್ಲಿ ಕೊರೊನಾ ಸೋಂಕಿನ ವಿರುದ್ಧ ಮೂರನೇ ಡೋಸ್​ ಅಂದರೆ (ಬೂಸ್ಟರ್​ ಡೋಸ್​) ಲಸಿಕೆ ಬೇಕಾಗಿಲ್ಲ ಎಂದು ದೆಹಲಿ ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ (ಏಮ್ಸ್​)ನ ನಿರ್ದೇಶಕ ರಣದೀಪ್​ ಗುಲೇರಿಯಾ ಹೇಳಿದ್ದಾರೆ. ಇದೀಗ ದೇಶಾದ್ಯಂಭಾತ ನಡೆಯುತ್ತಿರುವ ಕೊರೊನಾ ಲಸಿಕೆ ಅಭಿಯಾನವನ್ನು ಶ್ಲಾಘಿಸಿದ ಅವರು, ಭಾರತ ಕೊವಿಡ್​ 19 ಲಸಿಕೆ ಉತ್ಪಾದನೆಯಲ್ಲಿ ಮೈಲಿಗಲ್ಲು ಸ್ಥಾಪಿಸಿದೆ. ಲಸಿಕೆ ಡೋಸ್​ಗಳನ್ನು ಆಮದು ಮಾಡಿಕೊಳ್ಳುವುದರಿಂದ ಹಿಡಿದು, ಇತರ ದೇಶಗಳಿಗೆ ರಫ್ತು ಮಾಡಿ, ಸಹಾಯ ಮಾಡುವಲ್ಲಿ ತುಂಬ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ. ಸದ್ಯದವರೆಗೆ ಮೂರನೇ ಡೋಸ್ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Going Viral ಎಂಬ ಪುಸ್ತಕ ಉದ್ಘಾಟನೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಕೊವಿಡ್​ 19 ಪ್ರಕರಣಗಳಲ್ಲಿ ಈಗೇನೂ ಏರಿಕೆಯಾಗುತ್ತಿಲ್ಲ. ಹೀಗಾಗಿ ದೇಶದಲ್ಲಿ ಜನರಿಗೆ ಮತ್ತೆ ಬೂಸ್ಟರ್ ಡೋಸ್​ ನೀಡುವ ಪರಿಸ್ಥಿತಿಯಿಲ್ಲ ಎಂದಿದ್ದಾರೆ. ಮೊದಲ ದೇಶೀಯ ಕೊವಿಡ್​ 19 ಲಸಿಕೆ ಕೊವ್ಯಾಕ್ಸಿನ್​​ ಅಭಿವೃದ್ಧಿ ಪಡಿಸಿದ ವಿಜ್ಞಾನಿಗಳ ಅನುಭವಗಳನ್ನೊಳಗೊಂಡ  ಗೋಯಿಂಗ್​ ವೈರಲ್​ ಎಂಬ ಶೀರ್ಷಿಕೆಯ ಈ ಪುಸ್ತಕವನ್ನು ಪ್ರೊ.ಬಲರಾಮ್ ಭಾರ್ಗವ್​ ಬರೆದಿದ್ದಾರೆ.

ಭಾರತಕ್ಕೆ ಎಚ್​1ಎನ್​​1 ಸೋಂಕು ಕಾಲಿಟ್ಟಾಗ ವಿದೇಶಗಳಿಂದ ಲಸಿಕೆಯನ್ನು ಆಮದು ಮಾಡಿಕೊಳ್ಳಲಾಯಿತು. ಅಂದು ಲಸಿಕೆ ಆಮದು ಮಾಡಿಕೊಳ್ಳುತ್ತಿರುವ ಕಾಲದಿಂದ, ಈಗ ವ್ಯಾಕ್ಸಿನ್​ ಉತ್ಪಾದನೆ ಮಾಡುವಷ್ಟು ಮುಂದುವರಿದಿದ್ದೇವೆ. ಸಾಗಿ ಬಂದ ಹಾದಿ ದೊಡ್ಡದಿದೆ. ಈಗ ನಮ್ಮಲ್ಲಿ ತಯಾರಾದ ಕೊರೊನಾ ಲಸಿಕೆ ಬೇರೆ ದೇಶಗಳಿಗೆ ರಫ್ತಾಗುವುದು ತುಂಬ ಸಂತೋಷದ ವಿಚಾರ ಎಂದು ಹೇಳಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್​, ಭಾರತದಲ್ಲಿ ಮೂರನೇ ಡೋಸ್​ ಕೊರೊನಾ ಲಸಿಕೆ ಅಗತ್ಯ ಇದೆಯಾ ಎಂಬ ಬಗ್ಗೆ ಮಾತನಾಡಿ ವೈಜ್ಞಾನಿಕ ಸಂಶೋಧನೆ ನಡೆಯುತ್ತಿದೆ. ಅದರ ವರದಿಯ ಆಧಾರಮೇಲೆ ಬೂಸ್ಟರ್​ ಡೋಸ್ ಕೊಡಬೇಕಾ ಬೇಡವಾ ಎಂಬುದು ನಿರ್ಧರಿತವಾಗುತ್ತದೆ ಎಂದು ಹೇಳಿದ್ದಾರೆ.  ದೇಶದಲ್ಲಿ ಕೊರೊನಾ ವೈರಸ್​ ಇನ್ನೂ ಕಡಿಮೆಯಾಗಿಲ್ಲ. ಬರುಬರುತ್ತ ಇದು ಸ್ಥಳೀಯ ಮಟ್ಟಕ್ಕೆ ವ್ಯಾಪಿಸಬಹುದು. ಹಾಗಾಗಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನೂ ಮರೆಯುವಂತಿಲ್ಲ ಎಂದು ಪೌಲ್​ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Aadhaar Authentication: ಆಧಾರ್​ ಸಾರ್ವತ್ರಿಕ ದೃಢೀಕರಣಕ್ಕೆ ಸ್ಮಾರ್ಟ್​ಫೋನ್ ಬಳಕೆ ಬಗ್ಗೆ ಸುಳಿವು

Published On - 3:45 pm, Wed, 24 November 21