Operation Sindoor: ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನೆಗೆ ಆರ್ಎಸ್ಎಸ್ ಅಭಿನಂದನೆ
ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿಯ ನಂತರ ಭಾರತೀಯ ಸೇನೆಯು ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿದೆ. ಈ ನಿರ್ಣಾಯಕ ಕ್ರಮ ಕೈಗೊಂಡ ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಅಭಿನಂದನೆ ಸಲ್ಲಿಸಿದೆ. ಆರ್ಎಸ್ಎಸ್ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ಖಂಡಿಸಿದೆ. ದೇಶದ ಸ್ವಾಭಿಮಾನ ಮತ್ತು ಭದ್ರತೆಗೆ ಈ ಕ್ರಮ ಅತ್ಯವಶ್ಯಕ ಎಂದು ಆರ್ಎಸ್ಎಸ್ ಹೇಳಿದೆ.

ನಾಗ್ಪುರ, ಮೇ 09: ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ (Pahalgam Terror Attack) ಪ್ರತಿಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ್ (Operation Sindoor) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದೆ. ಇತಂಹ ದಿಟ್ಟ ಕಾರ್ಯಾಚರಣೆಯ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ ಮತ್ತು ಭಾರತೀಯ ಸೈನ್ಯಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಅಭಿನಂದನೆ ಸಲ್ಲಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಆರ್ಎಸ್ಎಸ್, “ಪಹಲ್ಗಾಮ್ನಲ್ಲಿ ನಿರಾಯುಧ ಪ್ರವಾಸಿಗರ ಮೇಲೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಹೇಡಿತನದಿಂದ ದಾಳಿ ನಡೆಸಿದರು. ಈ ದಾಳಿಯ ಪ್ರತಿಕಾರವಾಗಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಮತ್ತು ಅವರ ಬೆಂಬಲಿತರ ವಿರುದ್ಧ “ಆಪರೇಷನ್ ಸಿಂದೂರ್” ಕಾರ್ಯಾಚರಣೆ ನಡೆದಿದೆ. ಆಪರೇಷನ್ ಸಿಂದೂರ್ನಂತಹ ನಿರ್ಣಾಯಕ ಕ್ರಮವನ್ನು ಕೈಗೊಂಡ ಕೇಂದ್ರ ಸರ್ಕಾರದ ನಾಯಕತ್ವ ಮತ್ತು ನಮ್ಮ ಸಶಸ್ತ್ರ ಪಡೆಗಳನ್ನು ನಾವು ಅಭಿನಂದಿಸುತ್ತೇವೆ” ಎಂದಿದೆ.
“ಉ್ರಗರ ದಾಳಿಯಲ್ಲಿ ಮೃತಪಟ್ಟ ಹಿಂದೂ ಪ್ರವಾಸಿಗರ ಕುಟುಂಬಗಳಿಗೆ ಮತ್ತು ಇಡೀ ದೇಶಕ್ಕೆ ನ್ಯಾಯ ಒದಗಿಸಿದ ಆಪರೇಷನ್ ಸಿಂದೂರ್ ದೇಶದ ಸ್ವಾಭಿಮಾನ ಮತ್ತು ನೈತಿಕತೆಯನ್ನು ಹೆಚ್ಚಿಸಿದೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕರು, ಮತ್ತು ಇವರಿಗೆ ಬೆಂಬಲ ನೀಡುತ್ತಿರುವ ವ್ಯವಸ್ಥೆಗಳ ವಿರುದ್ಧ ತೆಗೆದುಕೊಳ್ಳುತ್ತಿರುವ ಮಿಲಿಟರಿ ಕ್ರಮವು ದೇಶದ ಭದ್ರತೆಗೆ ಅಗತ್ಯ ಮತ್ತು ಅನಿವಾರ್ಯ ಎಂದು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಮಯದಲ್ಲಿ, ಇಡೀ ದೇಶವು ಸರ್ಕಾರ ಮತ್ತು ಸಶಸ್ತ್ರ ಪಡೆಗಳೊಂದಿಗೆ ನಿಂತಿದೆ” ಎಂದು ಹೇಳಿದೆ.
“ಭಾರತದ ಗಡಿಯಲ್ಲಿರುವ ಧಾರ್ಮಿಕ ಸ್ಥಳಗಳು ಮತ್ತು ನಾಗರಿಕ ನೆಲೆಗಳ ಮೇಲೆ ಪಾಕಿಸ್ತಾನಿ ಸೇನೆ ನಡೆಸುತ್ತಿರುವ ದಾಳಿಗಳನ್ನು ನಾವು ಖಂಡಿಸುತ್ತೇವೆ. ಈ ಘೋರ, ಅಮಾನವೀಯ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ” ಎಂದು ಸಂತಾಪ ಸೂಚಿಸಿದೆ.
“ಈ ಸವಾಲಿನ ಸಮಯದಲ್ಲಿ, ಸರ್ಕಾರ ಮತ್ತು ಆಡಳಿತವು ನೀಡುತ್ತಿರುವ ಸೂಚನೆಗಳನ್ನು ಪಾಲಿಸುವಂತೆ ನಾಗರಿಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಮನವಿ ಮಾಡಿದೆ. ಇದರೊಂದಿಗೆ, ನಮ್ಮ ಪವಿತ್ರ ನಾಗರಿಕ ಕರ್ತವ್ಯವನ್ನು ನಿರ್ವಹಿಸುವಾಗ, ನಾವೆಲ್ಲರೂ ಜಾಗರೂಕರಾಗಿರಬೇಕು. ಸಾಮಾಜಿಕ ಏಕತೆ ಮತ್ತು ಸಾಮರಸ್ಯವನ್ನು ಭಂಗಗೊಳಿಸುವ ರಾಷ್ಟ್ರವಿರೋಧಿ ಶಕ್ತಿಗಳ ಯಾವುದೇ ಪಿತೂರಿ ಯಶಸ್ವಿಯಾಗಲು ಬಿಡಬಾರದು” ಎಂದು ಕರೆ ನೀಡಿದೆ.
ಇದನ್ನೂ ಓದಿ: ದೇಶಗಳು ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
“ಎಲ್ಲ ನಾಗರಿಕರು ತಮ್ಮ ದೇಶಭಕ್ತಿಯನ್ನು ಪ್ರದರ್ಶಿಸುವ ಸಮಯವಿದು. ಅಗತ್ಯವಿರುವಲ್ಲೆಲ್ಲಾ ಸೇನೆ ಮತ್ತು ಸಾರ್ವಜನಿಕ ಆಡಳಿತದೊಂದಿಗೆ ಸಹಕರಿಸಲು ಸಿದ್ಧರಾಗಿರಬೇಕು. ಮತ್ತು ರಾಷ್ಟ್ರೀಯ ಏಕತೆ ಮತ್ತು ಭದ್ರತೆಯನ್ನು ಒಗ್ಗೂಡಿಸಬೇಕು” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Fri, 9 May 25