ಪಹಲ್ಗಾಮ್ ದಾಳಿ ಪ್ರಕರಣ; ಲಾಹೋರ್‌ನಲ್ಲಿರುವ ಹಫೀಜ್ ಸಯೀದ್‌ಗೆ ಸಮನ್ಸ್ ನೀಡಲು ಭಾರತ ನಿರ್ಧಾರ

ಪಹಲ್ಗಾಮ್ ಭೀಕರ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಮುಖ್ಯ ಆರೋಪಿಯನ್ನಾಗಿ ಹೆಸರಿಸಲಾಗಿರುವ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಸಂಸ್ಥಾಪಕ ಹಫೀಜ್ ಸಯೀದ್‌ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ವಿಶೇಷ ನ್ಯಾಯಾಲಯವು ಸಮನ್ಸ್ ರವಾನಿಸಲಿದೆ. ವಿಚಾರಣೆಗಾಗಿ ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಹಫೀಜ್ ಸಯೀದ್‌ಗೆ ನಿರ್ದೇಶಿಸುವ ಈ ಸಮನ್ಸ್ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ತಲುಪಿಸಲಾಗುವುದು. ನ್ಯಾಯಾಲಯವು ಈಗಾಗಲೇ ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ. 2025ರ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ದಾಳಿಯ ಹಿಂದೆ ಸಯೀದ್ ಪ್ರಮುಖ ಮಾಸ್ಟರ್‌ಮೈಂಡ್ ಎಂದು ಎನ್‌ಐಎ ಆರೋಪಿಸಿದೆ.

ಪಹಲ್ಗಾಮ್ ದಾಳಿ ಪ್ರಕರಣ; ಲಾಹೋರ್‌ನಲ್ಲಿರುವ ಹಫೀಜ್ ಸಯೀದ್‌ಗೆ ಸಮನ್ಸ್ ನೀಡಲು ಭಾರತ ನಿರ್ಧಾರ
Hafiz Saeed
Image Credit source: x

Updated on: Aug 22, 2026 | 7:55 PM

ನವದೆಹಲಿ, ಆಗಸ್ಟ್ 22: 2025ರ ಪಹಲ್ಗಾಮ್ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್-ಎ-ತೊಯ್ಬಾ (LeT) ಸಂಸ್ಥಾಪಕ ಹಫೀಜ್ ಸಯೀದ್ (Hafiz Saeed) ವಿರುದ್ಧದ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ರಾಜತಾಂತ್ರಿಕ ಮಾರ್ಗಗಳ ಮೂಲಕ ಲಾಹೋರ್‌ನಲ್ಲಿರುವ ಆತನಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಲು ಮುಂದಾಗಿದೆ. ವಿಶೇಷ ಎನ್‌ಐಎ ನ್ಯಾಯಾಲಯವು ಹಫೀಜ್ ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಈ ಸಮನ್ಸ್ ರವಾನಿಸುವ ನಿರೀಕ್ಷೆಯಿದೆ.

ಭಾರತೀಯ ನ್ಯಾಯಾಲಯದ ಮುಂದೆ ಹಾಜರಾಗಲು ಹಫೀಜ್ ಸಯೀದ್‌ಗೆ ಅಧಿಕೃತವಾಗಿ ಅವಕಾಶ ನೀಡುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ. ಅಗತ್ಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೂ ಆತ ಪ್ರತಿಕ್ರಿಯಿಸದಿದ್ದರೆ, ಭಾರತದ ನೂತನ ಅಪರಾಧ ಕಾನೂನುಗಳ ಅಡಿಯಲ್ಲಿ ಆತನ ಗೈರುಹಾಜರಿಯಲ್ಲೇ ತನಿಖೆ ಹಾಗೂ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಹಫೀಜ್ ಸಯೀದ್ ಪಾಕಿಸ್ತಾನದಲ್ಲಿದ್ದು, ಭಾರತದ ಬಳಿ ಆತನ ನಿಯಂತ್ರಣ ಇಲ್ಲದಿರುವುದರಿಂದ ಈ ಬೆಳವಣಿಗೆ ಪ್ರಮುಖವಾಗಿದೆ.

ಇದನ್ನೂ ಓದಿ: ಪಹಲ್ಗಾಮ್ ದಾಳಿ ಹಿಂದೆ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಕೈವಾಡ; ಕೊನೆಗೂ ಎನ್​ಐಎಯಿಂದ ಚಾರ್ಜ್‌ಶೀಟ್ ಸಲ್ಲಿಕೆ

ಆತನ ಗೈರುಹಾಜರಿಯಲ್ಲಿ ಮುಂದಿನ ಕಾನೂನು ಕ್ರಮ ಜರುಗಿಸುವ ಮೊದಲು, ಆತನನ್ನು ನ್ಯಾಯಾಲಯದ ಮುಂದೆ ತರಲು ಭಾರತೀಯ ಪ್ರಾಧಿಕಾರಗಳು ಅಧಿಕೃತ ಯತ್ನ ನಡೆಸಿವೆ ಎಂಬುದನ್ನು ದಾಖಲಿಸಲು ಈ ರಾಜತಾಂತ್ರಿಕ ಸಮನ್ಸ್ ಜಾರಿ ಮಾಡಲಾಗುತ್ತಿದೆ.

ಹಫೀಜ್ ಸಯೀದ್ ಹಿನ್ನೆಲೆ:

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ಎನ್‌ಐಎ ಈ ವರ್ಷ ಜುಲೈನಲ್ಲಿ ಸಲ್ಲಿಸಿದ ಪೂರಕ ದೋಷಾರೋಪಣ ಪಟ್ಟಿಯಲ್ಲಿ ಹಫೀಜ್ ಸಯೀದ್ ಹೆಸರನ್ನು ಸೇರಿಸಿದೆ. ಆತನನ್ನು ವೈಯಕ್ತಿಕವಾಗಿ ಹಾಗೂ ಲಷ್ಕರ್-ಎ-ತೊಯ್ಬಾ ಮತ್ತು ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಸಂಘಟನೆಗಳ ಹಿರಿಯ ನಾಯಕನಾಗಿ ಈ ಪ್ರಕರಣದಲ್ಲಿ ಆರೋಪಿಯನ್ನಾಗಿಸಲಾಗಿದೆ. ಭಾರತದ ವಿರುದ್ಧ ಸಂಚು ರೂಪಿಸಿದ ಮತ್ತು ಯುದ್ಧ ಸಾರಿದ ಗಂಭೀರ ಆರೋಪಗಳನ್ನು ಆತನ ಮೇಲೆ ಹೊರಿಸಲಾಗಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿದ್ದುಕೊಂಡು ಭಾರತದ ಮೇಲೆ ದಾಳಿಗೆ ಉಗ್ರ ಹಫೀಜ್ ಸಯೀದ್ ಪ್ಲ್ಯಾನ್?

ದೋಷಾರೋಪಣ ಪಟ್ಟಿಯ ನಂತರ, ಜಮ್ಮುವಿನ ವಿಶೇಷ ನ್ಯಾಯಾಲಯವು ಜುಲೈನಲ್ಲಿ ಹಫೀಜ್ ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇದೀಗ ವಿದೇಶಾಂಗ ಸಚಿವಾಲಯದ ಮೂಲಕ ಸಮನ್ಸ್ ಜಾರಿಗೊಳಿಸುವ ಪ್ರಕ್ರಿಯೆಯನ್ನು ಸರ್ಕಾರ ಮುಂದುವರಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಈ ದಾಳಿ ನಡೆದಿತ್ತು. ಈ ಪ್ರಕರಣವನ್ನು ಆರಂಭದಲ್ಲಿ ಪಹಲ್ಗಾಮ್ ಪೊಲೀಸರು ದಾಖಲಿಸಿಕೊಂಡಿದ್ದರು, ನಂತರ ಕೇಂದ್ರ ಗೃಹ ಸಚಿವಾಲಯವು ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us