ಶಸ್ತ್ರಾಸ್ತ್ರಗಳ ಹಿಡಿದು 22 ಗಂಟೆಗಳ ಕಾಲ ನಡೆದು ಕಾಡುಗಳ ಮೂಲಕ ಪಹಲ್ಗಾಮ್ ತಲುಪಿದ್ದ ಉಗ್ರರು
Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಕಳೆದ ವಾರ ನಡೆದ ಭಯೋತ್ಪಾದಕ ದಾಳಿಯ ಪ್ರಕರಣದಲ್ಲಿ ಹಲವು ಹೊಸ ವಿವರಗಳು ಬೆಳಕಿಗೆ ಬರುತ್ತಿವೆ. ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರು ಬೈಸರನ್ ಕಣಿವೆಗೆ ಸುಮಾರು ಒಂದು ದಿನ ನಡೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಕೊಕರ್ನಾಗ್ ಕಾಡುಗಳಿಂದ ಬೈಸರನ್ ಕಣಿವೆಗೆ 20-22 ಗಂಟೆಗಳ ಪ್ರಯಾಸಕರ ಪ್ರಯಾಣದ ನಂತರ ಈ ದಾಳಿ ನಡೆಸಲಾಯಿತು. ಪ್ರವಾಸಿಗರ ಮೇಲೆ ದಾಳಿ ಮಾಡಿದ ನಾಲ್ವರು ಭಯೋತ್ಪಾದಕರಲ್ಲಿ ಸ್ಥಳೀಯ ಆದಿಲ್ ಥೋಕರ್ ಕೂಡ ಸೇರಿದ್ದಾನೆ ಎಂದು ತಿಳಿದುಬಂದಿದೆ.

ಶ್ರೀನಗರ, ಏಪ್ರಿಲ್ 28: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್(Pahalgam)ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರವಾಸಿಗರು ಆ ಪ್ರದೇಶಕ್ಕೆ ಕುದುರೆ ಮೂಲಕ ಬಂದಿದ್ದಾರೆ. ಹಾಗಾದರೆ ಈ ಉಗ್ರರು ಹೇಗೆ ಬಂದ್ರು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಪಹಲ್ಗಾಮ್ಗೆ ಒಂದೋ ಕುದುರೆ ಮೇಲೆ ಇಲ್ಲವೇ ನಡೆದುಕೊಂಡೇ ಬರಬೇಕು. ಅಲ್ಲಿ ವಾಹನಗಳ ತೆಗೆದುಕೊಂಡು ಹೋಗುವಂಥಾ ಸಾಮಾನ್ಯ ರಸ್ತೆಗಳೇ ಇಲ್ಲ.
ಉಗ್ರರು ಎಕೆ-47 ಜತೆಗೆ ಇತರೆ ಶಸ್ತ್ರಾಸ್ತ್ರಗಳ ಜತೆ ಸುಮಾರು 20-22 ಗಂಟೆಗಳ ಕಾಲ ಕಾಡಿನ ಮೂಲಕ ನಡೆದು ಬೈಸರನ್ ಕಣಿವೆ ತಲುಪಿದ್ದರು. ಬಳಿಕ ಪುರುಷರ ಪ್ಯಾಂಟ್ ಬಿಚ್ಚಿಸಿ ಕೇವಲ ಹಿಂದೂಗಳ ಮೇಲೆ ಗುಂಡು ಹಾರಿಸಿದ್ದಾರೆ. ಹಾಗೆಯೇ ಸ್ಥಳೀಯ ಮುಸ್ಲಿಂ ವ್ಯಕ್ತಿಯೊಬ್ಬರು ಪ್ರವಾಸಿಗರನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಭದ್ರತಾ ಪಡೆಗಳು ಭಯೋತ್ಪಾದಕರ ಹುಟುಕಾಟದಲ್ಲಿ ತೊಡಗಿದ್ದಾರೆ. ಅನೇಕರನ್ನು ವಶಕ್ಕೆ ಪಡೆಯಲಾಗಿದೆ. ದೇಶಾದ್ಯಂತ ಜನರು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ದಾಳಿಯ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸುತ್ತಿದೆ. ಗೃಹ ಸಚಿವಾಲಯದ ಆದೇಶದ ನಂತರ, ಎನ್ಐಎ ಅಧಿಕೃತವಾಗಿ ತನಿಖೆಯನ್ನು ಪ್ರಾರಂಭಿಸಿದೆ.
ದಾಳಿಯ ಸಮಯದಲ್ಲಿ ಭಯೋತ್ಪಾದಕರು ಎರಡು ಮೊಬೈಲ್ ಫೋನ್ಗಳನ್ನು ಕಸಿದುಕೊಂಡಿದ್ದಾರೆ ಎಂದು ಮೂಲಗಳು ಆಜ್ತಕ್ಗೆ ತಿಳಿಸಿದೆ. ಒಂದು ಪ್ರವಾಸಿಗರಿಗೆ ಸೇರಿದ್ದು ಮತ್ತು ಇನ್ನೊಂದು ಸ್ಥಳೀಯ ನಿವಾಸಿಗೆ ಸೇರಿದ್ದು. ದಾಳಿಯಲ್ಲಿ ಒಟ್ಟು ನಾಲ್ವರು ಭಯೋತ್ಪಾದಕರು ಭಾಗಿಯಾಗಿದ್ದರು. ಅದರಲ್ಲಿ ಮೂವರು ಪಾಕಿಸ್ತಾನದವರಾಗಿದ್ದರೆ, ಒಬ್ಬ ಸ್ಥಳೀಯನಾಗಿದ್ದ. ಸ್ಥಳೀಯ ಭಯೋತ್ಪಾದಕನನ್ನು ಆದಿಲ್ ಥೋಕರ್ ಎಂದು ಗುರುತಿಸಲಾಗಿದೆ.
ಮತ್ತಷ್ಟು ಓದಿ: ಸೈಬರ್ ಹ್ಯಾಕಿಂಗ್ ಅಂತೆ!; ಪಹಲ್ಗಾಮ್ ದಾಳಿಗೂ ನಮಗೂ ಸಂಬಂಧವಿಲ್ಲವೆಂದು ವರಸೆ ಬದಲಾಯಿಸಿದ ಟಿಆರ್ಎಫ್
ಎನ್ಐಎ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಭಯೋತ್ಪಾದಕರು ಈ ಘಟನೆಯನ್ನು ನಡೆಸುತ್ತಿದ್ದಾಗ, ಸ್ಥಳೀಯರೊಬ್ಬರು ಇಡೀ ದಾಳಿಯ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಆ ಸಮಯದಲ್ಲಿ ಆತ ತನ್ನನ್ನು ತಾನು ಉಳಿಸಿಕೊಳ್ಳಲು ಮರವನ್ನು ಹತ್ತಿದ್ದ. ಈ ವೀಡಿಯೊ ತನಿಖೆಗೆ ಬಹಳ ಮಹತ್ವದ್ದಾಗಿದೆ. ಈ ವೀಡಿಯೊದ ಮೂಲಕ, ತನಿಖಾ ಸಂಸ್ಥೆಯು ದಾಳಿಯ ನಿಖರವಾದ ಸಮಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ಭಯೋತ್ಪಾದಕರನ್ನು ಗುರುತಿಸುವಲ್ಲಿಯೂ ಸಹಾಯ ಮಾಡುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:15 am, Mon, 28 April 25