
ದೆಹಲಿ, ಆ.12: ದೇಶದ 14ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ರಾಮ್ನಾಥ್ ಕೋವಿಂದ್ ಅವರ ಜೀವನಾಧಾರಿತ ಆತ್ಮಕಥೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಆ.12) ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಕಾನ್ಪುರ ದೇಹತ್ನ ಸಾಧಾರಣ ಕುಟುಂಬದಿಂದ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಏರಿದ ರಾಮ್ನಾಥ್ ಕೋವಿಂದ್ ಅವರ ಜೀವನ ಯಾನವು ಭಾರತದ ಯುವಜನತೆಗೆ ದೊಡ್ಡ ಪ್ರೇರಣೆಯಾಗಿದೆ ಎಂದು ಬಣ್ಣಿಸಿದರು. ಅಲ್ಲದೆ, ಕೋವಿಂದ್ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಈ ಪುಸ್ತಕಕ್ಕೆ ಇಡಲಾಗಿರುವ ಶೀರ್ಷಿಕೆ ಅತ್ಯಂತ ಸೂಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಕೋವಿಂದ್ ಜಿ ಅವರ ಜೀವನವನ್ನು ಒಮ್ಮೆ ಗಮನಿಸಿ. ಅವರು ಕಾನ್ಪುರ ದೇಹತ್ನ ತೀರಾ ಸಾಧಾರಣ ಕುಟುಂಬದಲ್ಲಿ ಜನಿಸಿದರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರು. ಇಂತಹ ಆಘಾತಕಾರಿ ಘಟನೆಯಿಂದ ಯಾರು ಬೇಕಾದರೂ ಕುಗ್ಗಿಹೋಗಬಹುದು. ಆದರೆ, ಕೋವಿಂದ್ ಅವರು ಈ ನೋವಿನಿಂದಲೇ ಇನ್ನಷ್ಟು ಬಲಶಾಲಿಯಾಗಿ ಬೆಳೆದರು” ಎಂದು ಹೇಳಿದರು. ಈ ಹಂತದಲ್ಲಿ ಕೋವಿಂದ್ ಅವರ ತಂದೆ ಅವರ ಜೀವನವನ್ನು ರೂಪಿಸುವಲ್ಲಿ ವಹಿಸಿದ ಪಾತ್ರವನ್ನು ಪ್ರಧಾನಿ ವಿಶೇಷವಾಗಿ ನೆನಪಿಸಿಕೊಂಡರು.
ದೇಶದ ಪ್ರಥಮ ಪ್ರಜೆಯಾದ ಮೇಲೆಯೂ ರಾಮ್ನಾಥ್ ಕೋವಿಂದ್ ಅವರು ಕಾಪಾಡಿಕೊಂಡ ಸರಳತೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. “ಭಾರತದಂತಹ ಬೃಹತ್ ದೇಶದ ರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೆಯಲ್ಲಿದ್ದರೂ, ಕೋವಿಂದ್ ಜಿ ಎಂದಿಗೂ ತಮ್ಮ ಮೂಲವನ್ನು ಮರೆಯಲಿಲ್ಲ, ಅತ್ಯಂತ ವಿನಮ್ರವಾಗಿ ಉಳಿದುಕೊಂಡರು.” ಎಂದರು. ಈ ಆತ್ಮಕಥೆಯು ದೇಶದ ಯುವಸಮುದಾಯಕ್ಕೆ ಜೀವನದ ಮೌಲ್ಯಯುತ ಪಾಠಗಳನ್ನು ಹಾಗೂ ಕಠಿಣ ಪರಿಶ್ರಮಕ್ಕೆ ಸ್ಪೂರ್ತಿಯನ್ನು ನೀಡಲಿದೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: ಯುವ ಸ್ನೇಹಿತರು ದೇಶದ ಭವಿಷ್ಯ ಮಾತ್ರವಲ್ಲ, ವರ್ತಮಾನದ ಅತ್ಯಂತ ದೊಡ್ಡ ಶಕ್ತಿ: ಪ್ರಧಾನಿ ಮೋದಿ
ಅಕ್ಟೋಬರ್ 1, 1945 ರಂದು ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಪರಾಉಂಖ್ ಗ್ರಾಮದಲ್ಲಿ ಜನಿಸಿದರು. ವಾಣಿಜ್ಯ ಮತ್ತು ಕಾನೂನು ವ್ಯಾಸಂಗ ಮುಗಿಸಿ, ಸಾರ್ವಜನಿಕ ಜೀವನಕ್ಕೆ ಬರುವ ಮೊದಲು ವಕೀಲರಾಗಿ ಸೇವೆ ಸಲ್ಲಿಸಿದರು. ರಾಜ್ಯಸಭಾ ಸಂಸದರಾಗಿ, ಬಳಿಕ ಬಿಹಾರದ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದರು. 2017 ರಿಂದ 2022 ರವರೆಗೆ ಭಾರತದ 14ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ