
ಪುಣೆ, ಜೂನ್ 15: ಮಹಾರಾಷ್ಟ್ರದ (Maharashtra) ಪುಣೆ (Pune) ಜಿಲ್ಲೆಯ ಮಾವಲ್ ತಾಲೂಕಿನ ಇಂದ್ರಯಾಣಿ ನದಿಗೆ (Indrani River) ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ (Bridge) ಕುಸಿದು ಬಿದ್ದಿದ್ದು, 25 ರಿಂದ 30 ಪ್ರವಾಸಿಗರು ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ (ಜೂ.15) ಮಧ್ಯಾಹ್ನ ಘಟನೆ ನಡೆದಿದೆ.
ಮಾವಲ್ ತಾಲೂಕಿನಲ್ಲಿರುವ ಕುಂದಮಲ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಮಳೆಗಾಲದಲ್ಲಿ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಕುಂದಮಲಗೆ ತೆರಳಲು ಇಂದ್ರಯಾಣಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆ ಏಕಾಏಕಿ ಕುಸಿದ ಪರಿಣಾಮ ಸೇತುವೆ ಮೇಲಿದ್ದ 25 ರಿಂದ 30 ಜನ ನದಿಯಲ್ಲಿ ಬಿದ್ದಿದ್ದಾರೆ. ಕೆಲ ಪ್ರವಾಸಿಗರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೆಲವರನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಈ ಅಪಘಾತದಲ್ಲಿ ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬುವುದು ನಿಖರವಾಗಿ ತಿಳಿದುಬಂದಿಲ್ಲ. ಆದಾಗ್ಯೂ, ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಅವಘಡದಲ್ಲಿ 20 ರಿಂದ 25 ಜನರು ನದಿಯಲ್ಲಿ ಕೊಚ್ಚಿಹೋಗಿರುವ ಸಾಧ್ಯತೆಯಿದೆ.
ಇದನ್ನೂ ಓದಿ: ಏರ್ ಇಂಡಿಯಾದ ಬೋಯಿಂಗ್ ವಿಮಾನದಲ್ಲಿ ಸುರಕ್ಷತಾ ಕ್ರಮ ಹೆಚ್ಚಿಸಲು ಡಿಜಿಸಿಎ ಆದೇಶ
ಈ ಅಪಘಾತದ ವಿಷಯ ತಿಳಿದ ತಕ್ಷಣ ಮಾವಲ್ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಶೆಲ್ಕೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಬಳಿಕ ಟಿವಿ9 ಜೊತೆ ಮಾತನಾಡಿದ ಅವರು, ಈ ದುರಂತದಲ್ಲಿ ಇದುವರೆಗೆ 6 ಜನರು ಮೃತಪಟ್ಟಿದ್ದಾರೆ. ಎನ್ಡಿಆರ್ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಆಗಮಿಸಿವೆ. ನದಿಯಲ್ಲಿ ಕೊಚ್ಚಿ ಹೋದವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ರಕ್ಷಣಾ ಸಿಬ್ಬಂದಿ ಇಂದ್ರಯಾಣಿ ನದಿಯಿಂದ ಇಬ್ಬರ ಶವ ಹೊರತೆಗೆದಿದ್ದಾರೆ. 32ಕ್ಕೂ ಹೆಚ್ಚು ಪ್ರವಾಸಿಗರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರ ಪೈಕಿ ಆರು ಪ್ರವಾಸಿಗರ ಸ್ಥಿತಿ ಗಂಭೀರವಾಗಿದೆ. ನಾಪತ್ತೆಯಾಗಿರುವ 25-30 ಪ್ರವಾಸಿಗರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
Published On - 4:57 pm, Sun, 15 June 25