ರಾಹುಲ್ ಗಾಂಧಿಗೆ ಜಮ್ಮು ಕಾಶ್ಮೀರದ ವಿದ್ಯುತ್ ಪರಿಸ್ಥಿತಿ ಬಗ್ಗೆ ತಿಳಿದಿಲ್ಲ; ಕೇಂದ್ರ ಸಚಿವ ಕಿಶನ್ ರೆಡ್ಡಿ

18,000 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸಲು ಜಮ್ಮು ಮತ್ತು ಕಾಶ್ಮೀರ ಅಪಾರ ಸಾಮರ್ಥ್ಯ ಹೊಂದಿದೆ ಎಂದು ರಾಹುಲ್ ಗಾಂಧಿ ಮತ್ತು ಅವರ ಹಿಂದಿನ 3 ತಲೆಮಾರಿನ ಪ್ರಧಾನ ಮಂತ್ರಿಗಳು ತಿಳಿದಿದ್ದರು. ಜಮ್ಮು ಮತ್ತು ಕಾಶ್ಮೀರದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಡಿದ ವಿದ್ಯುತ್ ಕುರಿತ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಅವರ ಹೇಳಿಕೆ ಜನರನ್ನು ದಿಕ್ಕು ತಪ್ಪಿಸುತ್ತಿದೆ. ರಾಹುಲ್ ಗಾಂಧಿಗೆ ಜಮ್ಮು ಕಾಶ್ಮೀರದ ವಿದ್ಯುತ್ ಪರಿಸ್ಥಿತಿ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ.

ರಾಹುಲ್ ಗಾಂಧಿಗೆ ಜಮ್ಮು ಕಾಶ್ಮೀರದ ವಿದ್ಯುತ್ ಪರಿಸ್ಥಿತಿ ಬಗ್ಗೆ ತಿಳಿದಿಲ್ಲ; ಕೇಂದ್ರ ಸಚಿವ ಕಿಶನ್ ರೆಡ್ಡಿ
ಕಿಶನ್ ರೆಡ್ಡಿ

Updated on: Sep 11, 2024 | 4:43 PM

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ರಣಕಹಳೆ ಆರಂಭವಾಗಿದೆ. ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಜಿ. ಕಿಶನ್ ರೆಡ್ಡಿ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ವಿದ್ಯುತ್ ಕುರಿತ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿದ್ಯುತ್ ಪರಿಸ್ಥಿತಿಯ ಬಗ್ಗೆ ರಾಹುಲ್ ಗಾಂಧಿಗೆ ತಿಳಿದಿಲ್ಲ ಎಂದು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ. ವಿದ್ಯುತ್ ವಿಚಾರದಲ್ಲಿ ರಾಹುಲ್ ಗಾಂಧಿ ಜನರಲ್ಲಿ ಗೊಂದಲ ಮೂಡಿಸಿದ್ದಾರೆ ಎಂದಿದ್ದಾರೆ.

ಹಿಂದಿನ ಸರ್ಕಾರಗಳಿಗೆ 18000 MW ಜಲವಿದ್ಯುತ್ ಉತ್ಪಾದನೆಯ ಸಾಮರ್ಥ್ಯವಿದೆ ಎಂದು ತಿಳಿದಿತ್ತು. ಆದರೆ, ಅದನ್ನು ಎಂದಿಗೂ ಬಳಸಲಿಲ್ಲ ಎಂದು ಅವರು ಹೇಳಿದರು. ಸ್ವಾತಂತ್ರ್ಯದ ನಂತರ ಜಮ್ಮು ಕಾಶ್ಮೀರ ಸರ್ಕಾರ ಕೇವಲ 1,197 ಮೆಗಾವ್ಯಾಟ್ ವಿದ್ಯುತ್ ಅನ್ನು ಸೇರಿಸಿದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2025-26ರ ವೇಳೆಗೆ 3,014 ಮೆಗಾವ್ಯಾಟ್ ಸಾಮರ್ಥ್ಯವನ್ನು ಸೇರಿಸುತ್ತಿದೆ. 2023-24ರ ಆರ್ಥಿಕ ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರ ಪವರ್ ಕಾರ್ಪೊರೇಷನ್ ಲಿಮಿಟೆಡ್ ಮೂಲಕ ವಿದ್ಯುತ್ ಖರೀದಿಗೆ ಜಮ್ಮು ಕಾಶ್ಮೀರ ಸರ್ಕಾರವು ಸರಿಸುಮಾರು 9,500 ಕೋಟಿ ರೂ. ಖರ್ಚು ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ವಿದ್ಯುತ್ ಕೊರತೆಯನ್ನು 2018-19ರಲ್ಲಿ ಶೇ. 17.8ರಿಂದ 2023-24ರಲ್ಲಿ ಶೇ. 7.5ಕ್ಕೆ ಇಳಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಭಾರತದ ಮರ್ಯಾದೆ ತೆಗೆಯಲೆಂದೇ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿದ್ದಾರೆ; ಬಿಜೆಪಿ ತಿರುಗೇಟು

ರಾಹುಲ್ ಗಾಂಧಿ ಚುನಾವಣಾ ಪ್ರವಾಸಿ. ಚುನಾವಣೆಯ ಸಮಯದಲ್ಲಿ ಅವರು ಪ್ರಚಾರ ಮಾಡುತ್ತಾರೆ. ಸಂದರ್ಭ ಅಥವಾ ಸಂಗತಿಗಳಿಲ್ಲದೆ ತಮಗೆ ಅನಿಸಿದ್ದನ್ನು ಹೇಳುತ್ತಾರೆ ಮತ್ತು ನಂತರ ಹೊರಡುತ್ತಾರೆ. ಅವರ ಸ್ಥಳೀಯ ಚುನಾವಣಾ ಘಟಕವು ಅವರು ಸೃಷ್ಟಿಸುವ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಪರದಾಡುತ್ತದೆ. ಅವರು ಒಂದರ ನಂತರ ಒಂದು ಚುನಾವಣೆಯಲ್ಲಿ ಸೋಲನ್ನು ಮುಂದುವರೆಸುತ್ತಾ ಹೋದಂತೆ ಅವರ ಸುಳ್ಳುಗಳು ಕೂಡ ಹೆಚ್ಚಾಗುತ್ತವೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?:

ಜಮ್ಮು ಮತ್ತು ಕಾಶ್ಮೀರವು ದೇಶದ ಉಳಿದ ಭಾಗಗಳಿಗೆ ವಿದ್ಯುತ್ ನೀಡುತ್ತಿದೆ. ಆದರೆ ಇಲ್ಲಿನ ನಿವಾಸಿಗಳು ದೇಶದ ಇತರ ಭಾಗಗಳಿಗಿಂತ ಹೆಚ್ಚಿನ ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು. ಆ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಇದು ಸುಳ್ಳು ಎಂದು ಹೇಳಿದ್ದಾರೆ. ಜಮ್ಮು ಕಾಶ್ಮೀರದ ನೆಲದ ವಾಸ್ತವ ಬೇರೆಯೇ ಕಥೆಯನ್ನು ಹೇಳುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಮಹಿಳೆಯರು ಮನೆಯಲ್ಲಿಯೇ ಇರಬೇಕು ಎಂಬುದು ಆರ್​ಎಸ್​ಎಸ್ ನಂಬಿಕೆ; ಅಮೆರಿಕದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ಕಿಶನ್ ರೆಡ್ಡಿ ಮಾತನಾಡಿ, ಕಳೆದ ಒಂದು ದಶಕದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮೋದಿ ಸರ್ಕಾರ ಯುದ್ಧದ ಆಧಾರದ ಮೇಲೆ ಕೆಲಸ ಮಾಡುತ್ತಿದೆ. 2025-26ರ ವೇಳೆಗೆ ಸಾಮರ್ಥ್ಯವನ್ನು 3,014 ಮೆಗಾವ್ಯಾಟ್‌ಗೆ ಹೆಚ್ಚಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಇಲ್ಲಿ 4 ಮೆಗಾ ಜಲವಿದ್ಯುತ್ ಯೋಜನೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

2026ರ ವೇಳೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಾರ್ಷಿಕವಾಗಿ ಒಟ್ಟು 10,614 ಮಿಲಿಯನ್ ಯುನಿಟ್‌ಗಳಷ್ಟು ಶಕ್ತಿಯನ್ನು ಉತ್ಪಾದಿಸಲಾಗುತ್ತದೆ. ಇದಲ್ಲದೆ, 1947 ಮತ್ತು 2019ರ ನಡುವೆ ಪ್ರಸರಣ ವಲಯದಲ್ಲಿ ಕೇವಲ 8,394 ಮೆಗಾ ವ್ಯಾಟ್ ಒಟ್ಟು ರೂಪಾಂತರ ಸಾಮರ್ಥ್ಯವನ್ನು ರಚಿಸಲಾಗಿದೆ. ಮುಂದಿನ 3 ವರ್ಷಗಳಲ್ಲಿ 4,950 ಕೋಟಿ ರೂ. ಮೌಲ್ಯದ ಪ್ರಸರಣ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ಸಂಪೂರ್ಣ ಜ್ಞಾನದ ಕೊರತೆಯಿಂದ ರಾಹುಲ್ ಗಾಂಧಿ ಸುಳ್ಳು ಮತ್ತು ಅರ್ಧ ಸತ್ಯವನ್ನು ಹೇಳುತ್ತಲೇ ಇದ್ದಾರೆ. ಅಧಿಕಾರದ ಕುರಿತಾದ ಅವರ ಜ್ಞಾನವೂ ಇದೇ ರೀತಿಯ ತಿಳುವಳಿಕೆಯ ಕೊರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಶನ್ ರೆಡ್ಡಿ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us