ಮಗನ ಕೊಲ್ಲಲು ಸುಪಾರಿ ಕೊಟ್ಟಿದ್ದ ಮಹಿಳೆಯನ್ನೇ ಕೊಂದು ಹಣ ದೋಚಿದ್ದ ವ್ಯಕ್ತಿ ಅರೆಸ್ಟ್
ರಾಯ್ಪುರ್ನಲ್ಲಿ ನಡೆದ ಬೆಚ್ಚಿಬೀಳಿಸುವ ಪ್ರಕರಣದಲ್ಲಿ, ಮಗನನ್ನು ಕೊಲ್ಲಲು ಸುಪಾರಿ ಪಡೆದಿದ್ದ ಹಿಟ್ಮ್ಯಾನ್ ಅಜಯ್ ಮಿಶ್ರಾ, ಕೆಲಸ ಮಾಡದೆ ಹಣದೊಂದಿಗೆ ಪರಾರಿಯಾಗಿದ್ದ. ನಂತರ, ಹಣ ವಾಪಸ್ ಕೇಳಿದ ಮಹಿಳೆಯನ್ನೇ (ಸುಪಾರಿ ಕೊಟ್ಟ ತಾಯಿ) ಕತ್ತು ಹಿಸುಕಿ ಕೊಂದು, 10 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಐದು ವರ್ಷಗಳ ಬಳಿಕ ಅಹಮದಾಬಾದ್ನಲ್ಲಿ ಆತನನ್ನು ಬಂಧಿಸಲಾಗಿದೆ. ಈ ದರೋಡೆ ಮತ್ತು ಕೊಲೆ ಪ್ರಕರಣದ ತನಿಖೆ ಮುಂದುವರೆದಿದೆ.

ರಾಯ್ಪುರ್, ಮಾರ್ಚ್ 23: ತಾನು ಬಿಟ್ಟ ಬಾಣ ತನಗೇ ಮುಳುವಾಯ್ತು, ಸ್ವಂತ ಮಗನನ್ನು ಕೊಲ್ಲಲು ಸುಪಾರಿಕೊಟ್ಟಿದ್ದ ಮಹಿಳೆಯನ್ನೇ ಕೊಲೆ(Murder) ಮಾಡಿ ಹಣ ದೋಚಿದ್ದ ಹಿಟ್ಮ್ಯಾನ್ ಅನ್ನು ಐದು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್ಗಢದ ರಾಯ್ಪುರದಲ್ಲಿ 2021 ರಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿ ಅಜಯ್ ಮಿಶ್ರಾ ಎಂಬಾತನನ್ನು ಅಹಮದಾಬಾದ್ ಅಪರಾಧ ವಿಭಾಗವು ನರೋಡಾ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಶಕುಂತಲಾ ಯಾದವ್ ಮತ್ತು ಅವರ ಕಿರಿಯ ಮಗ ಅಮಿತ್ ಯಾದವ್, ತಮ್ಮ ಹಿರಿಯ ಮಗನನ್ನು ಕೊಲ್ಲಲು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಮಿಶ್ರಾ ಅವರನ್ನು ನೇಮಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. 4 ಲಕ್ಷ ರೂ. ಒಪ್ಪಂದ ಮಾಡಿಕೊಳ್ಳಲಾಗಿತ್ತು, ಅದರಲ್ಲಿ 1 ಲಕ್ಷ ರೂ. ಮುಂಗಡವಾಗಿ ನೀಡಲಾಗಿತ್ತು.
ಆದರೆ, ಮಿಶ್ರಾ ಮಗನನ್ನು ಕೊಲೆ ಮಾಡಲಿಲ್ಲ. ಬದಲಾಗಿ, ಅವನು ಹಣದೊಂದಿಗೆ ತನ್ನ ಹಳ್ಳಿಗೆ ಓಡಿಹೋಗಿದ್ದ. ಶಕುಂತಲಾ ಮತ್ತು ಅಮಿತ್ ಅವನನ್ನು ಪತ್ತೆಹಚ್ಚಿ ತಮ್ಮ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದಾಗ, ಅವನು ಅದನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದ.
ಮತ್ತಷ್ಟು ಓದಿ: ಪಾಳು ಮನೆಯಲ್ಲಿ ಅಪ್ರಾಪ್ತೆಯ ಭೀಕರ ಕೊಲೆ: ಭಾವಿ ಪತಿಯಿಂದಲೇ ನಡೀತು ಹತ್ಯೆ!; ಕಾರಣ ನಿಗೂಢ
ತಿಂಗಳುಗಳ ನಂತರ, ಮಿಶ್ರಾ ಹಿಂತಿರುಗಿದ್ದ ಆದರೆ ಹಣವನ್ನು ವಾಪಸ್ ಕೊಟ್ಟಿರಲಿಲ್ಲ. ಪೊಲೀಸರ ಪ್ರಕಾರ, ಮಿಶ್ರಾ ತನ್ನ ಸಹಚರ ಕೇತನ್ ತಿವಾರಿ ಜೊತೆ ರಾಯ್ಪುರದಲ್ಲಿರುವ ಶಕುಂತಲಾ ಇದ್ದ ಆಕೆಯ ಮನೆಗೆ ಹೋಗಿದ್ದ. ಆ ಮಹಿಳೆಯನ್ನೇ ಕೊಂದ.
ಮಹಿಳೆಯನ್ನು ಹಗ್ಗದಿಂದ ಕತ್ತು ಹಿಸುಕಿ ಕೊಂದು ಸುಮಾರು 10 ಲಕ್ಷ ರೂ. ನಗದು ಮತ್ತು ಸುಮಾರು 350-450 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕದ್ದ ಚಿನ್ನವನ್ನು ನಂತರ ಮಾರಾಟ ಮಾಡಿದ್ದ.
ಬಂಧನದಿಂದ ತಪ್ಪಿಸಿಕೊಳ್ಳಲು, ಮಿಶ್ರಾ ತನ್ನ ಮೊಬೈಲ್ ಫೋನ್ ಬಿಟ್ಟು, ಪ್ಯಾನ್ ಮತ್ತು ಆಧಾರ್ನಂತಹ ಗುರುತಿನ ದಾಖಲೆಗಳನ್ನು ಬಳಸುವುದನ್ನು ತಪ್ಪಿಸಿದ್ದ, 2022 ರಲ್ಲಿ ಅಹಮದಾಬಾದ್ನ ನರೋಡಾ ಪ್ರದೇಶಕ್ಕೆ ಹೋಗುವ ಮೊದಲು ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತಲೇ ಇದ್ದ, ಆದರೆ ಅದು ಯಾರ ಗಮನಕ್ಕೂ ಬಂದಿರಲಿಲ್ಲ.
ವರ್ಷಗಳ ತನಿಖೆ ಮತ್ತು ಹೊಸ ಮಾಹಿತಿಗಳ ನಂತರ, ಅಹಮದಾಬಾದ್ ಅಪರಾಧ ವಿಭಾಗವು ಆತನನ್ನು ಪತ್ತೆಹಚ್ಚಿ ಬಂಧಿಸಿದೆ, ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
