AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ ತೃತೀಯದಂದು ಎಲ್​ಐಸಿ ಮಾರಾಟಕ್ಕಿಟ್ಟು ಹೊಸ ವ್ಯಾಪಾರ ಶುರು ಮಾಡಿದ ಮೋದಿ: ರಣದೀಪ್ ಸುರ್ಜೆವಾಲಾ ವಾಗ್ದಾಳಿ

ಸಂಸ್ಥೆಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಈಗಿನ ಪ್ರಧಾನಿ ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಕ್ಷಯ ತೃತೀಯದಂದು ಎಲ್​ಐಸಿ ಮಾರಾಟಕ್ಕಿಟ್ಟು ಹೊಸ ವ್ಯಾಪಾರ ಶುರು ಮಾಡಿದ ಮೋದಿ: ರಣದೀಪ್ ಸುರ್ಜೆವಾಲಾ ವಾಗ್ದಾಳಿ
ರಣದೀಪ್ ಸುರ್ಜೇವಾಲ
TV9 Web
| Edited By: |

Updated on:May 03, 2022 | 2:57 PM

Share

ದೆಹಲಿ: ಅಕ್ಷಯ ತೃತೀಯವನ್ನು ಹೊಸ ವ್ಯಾಪಾರ ಆರಂಭಿಸುವ ಪವಿತ್ರ ದಿವಸ ಎಂದು ದೇಶದ ಜನರು ಭಾವಿಸುತ್ತಾರೆ. ಆದರೆ ನಮ್ಮ ಪ್ರಧಾನಿ ಈ ಪವಿತ್ರ ದಿನದಂದು ಭಾರತೀಯ ಜೀವ ವಿಮಾ ನಿಗಮವನ್ನು (Life Insurance Corporation – LIC) ಮಾರಾಟಕ್ಕೆ ಇರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹಾಗೂ ಕಾಂಗ್ರೆಸ್ ಹೈಕಮಾಂಡ್​ನ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೆವಾಲ ವಿಷಾದಿಸಿದರು. 1956ರಲ್ಲಿ ಅಂದಿನ ಪ್ರಧಾನಿ ಜವಾಹರ್​ಲಾಲ್ ನೆಹರು ಆರಂಭಿಸಿದ್ದ ಎಲ್​ಐಸಿ ಸಂಸ್ಥೆಯಲ್ಲಿ ಸುಮಾರು 30 ಕೋಟಿ ಪಾಲಿಸಿದಾರರಿದ್ದಾರೆ. ಇಂಥ ಸಂಸ್ಥೆಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಈಗಿನ ಪ್ರಧಾನಿ ಮುಂದಾಗಿದ್ದಾರೆ. ಎಲ್​ಐಸಿಯ ಐಪಿಒ ನಾಳೆಯಿಂದ (ಮೇ 4) ಬಿಡುಗಡೆಯಾಗುತ್ತಿದೆ. ಐಪಿಒ ಮೌಲ್ಯ ಕಡಿಮೆ ಮಾಡಲು ಏನು ಕಾರಣ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸರ್ಕಾರಿ ಕೆಲಸಗಳನ್ನು ಮಾರಾಟಕ್ಕೆ ಇರಿಸಲಾಗಿದೆ. ಇದಕ್ಕೆ ಕರ್ನಾಟಕದ ಪಿಎಸ್​ಐ ಅಕ್ರಮ ಅತ್ಯುತ್ತಮ ಉದಾಹರಣೆಯಾಗಿದೆ. ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಲ್ಲಿನ ಗೃಹ ಸಚಿವರು ಈವರೆಗೆ ರಾಜೀನಾಮೆ ನೀಡದೆ, ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಬೊಮ್ಮಾಯಿ ಸರ್ಕಾರವು ಶೇ 40ರ ಕಮಿಷನ್ ಸರ್ಕಾರ ಎಂದು ಆರೋಪ ಮಾಡಿದರು. ಕರ್ನಾಟಕದ ಎಲ್ಲಾ ಇಲಾಖೆಗಳಲ್ಲೂ ಕಮಿಷನ್ ವ್ಯವಹಾರ ನಡೆಯುತ್ತಿದೆ. ಭ್ರಷ್ಟಾಚಾರ ನಿರತ ಬೊಮ್ಮಾಯಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನೇಪಾಳದ ನೈಟ್ ಪಾರ್ಟಿಯಲ್ಲಿ ರಾಹುಲ್ ಪಾಲ್ಗೊಂಡಿದ್ದ ವಿಡಿಯೊ ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ನರೇಂದ್ರಮೋದಿ ಥರ ಅಲ್ಲ. ಮೋದಿ ಅವರು ಯಾರೂ ಕರೆಯದಿದ್ದರೂ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಹುಟ್ಟುಹಬ್ಬಕ್ಕೆ ಹೋಗಿದ್ದರು. ಅಂದು ಪಾಕಿಸ್ತಾನಕ್ಕೆ ಹೋಗಿ ಕೇಕ್ ಕಟ್ ಮಾಡಿ ಬಂದಿದ್ದರು. ಆದರೆ ನೇಪಾಳ ಹಾಗಲ್ಲ. ಅದು ಭಾರತದ ಮಿತ್ರ ರಾಷ್ಟ್ರ. ತಮ್ಮ ಪತ್ರಕರ್ತ ಮಿತ್ರೊಬ್ಬರ ಮನೆಯ ಮದುವೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು. ಮದುವೆ ಸಮಾರಂಭದಲ್ಲಿ ಭಾಗಿಯಾವುದು ತಪ್ಪೇ? ಅಪರಾಧವೇ ಎಂದು ರಾಹುಲ್ ಅವರನ್ನು ಟ್ರೋಲ್ ಮಾಡುತ್ತಿರುವವರನ್ನು ಪ್ರಶ್ನಿಸಿದರು.

ಕುಟುಂಬ ಮತ್ತು ಸ್ನೇಹಿತರನ್ನು ಹೊಂದುವುದು, ಮತ್ತು ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಗೆ ಸಂಬಂಧಿಸಿದ ವಿಷಯ. ಈ ದೇಶದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಇನ್ನೂ ಅಪರಾಧವಾಗಿಲ್ಲ. ಬಹುಶಃ ಇಂದಿನ ನಂತರ ಬಿಜೆಪಿಯು ಮದುವೆಗೆ ಹಾಜರಾಗುವುದು ಕಾನೂನುಬಾಹಿರ ಮತ್ತು ಸ್ನೇಹಿತರನ್ನು ಹೊಂದುವುದು ಅಪರಾಧ ಎಂದು ನಿರ್ಧರಿಸಬಹುದು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: LIC IPO: ಎಲ್​ಐಸಿ ಐಪಿಒ ಗ್ರೇ ಮಾರ್ಕೆಟ್​ನಲ್ಲಿ ಎಂಥ ಬೇಡಿಕೆ ಪಡೆದಿದೆ? ಏನಿದು ಗ್ರೇ ಮಾರ್ಕೆಟ್ ಗೊತ್ತಿದೆಯಾ?

ಇದನ್ನೂ ಓದಿRahul Gandhi Video: ನೇಪಾಳದ ಪಬ್​ನಲ್ಲಿ ರಾಹುಲ್ ಗಾಂಧಿ ಪಾರ್ಟಿ ಮಾಡುತ್ತಿರುವ ವಿಡಿಯೋ ವೈರಲ್

Published On - 2:56 pm, Tue, 3 May 22