ಕೆಂಪು ಕೋಟೆ ಬಳಿ ಬಾಂಬ್ ಸ್ಪೋಟಿಸುವುದು ಪ್ಲ್ಯಾನ್ ಆಗಿರಲಿಲ್ಲ, ಜೈನ ದೇವಾಲಯದ ಮೇಲಿತ್ತು ಉಗ್ರನ ಕಣ್ಣು
ಕೆಂಪುಕೋಟೆ ಸ್ಫೋಟದ ಚಾರ್ಜ್ಶೀಟ್ನಲ್ಲಿ ಎನ್ಐಎ ಆಘಾತಕಾರಿ ಸತ್ಯ ಬಹಿರಂಗಪಡಿಸಿದೆ. ಉಗ್ರನ ನಿಜವಾದ ಗುರಿ ಕೆಂಪುಕೋಟೆಯಾಗಿರದೆ, ಐತಿಹಾಸಿಕ ಜೈನ ಲಾಲ ಮಂದಿರವಾಗಿತ್ತು. ಭಾರಿ ಟ್ರಾಫಿಕ್ ಮತ್ತು ಭದ್ರತೆಯಿಂದಾಗಿ ಅವನು ತನ್ನ ಯೋಜನೆಯನ್ನು ಬದಲಾಯಿಸಿ ಕೆಂಪುಕೋಟೆ ಬಳಿ ಸ್ಫೋಟಿಸಿದ್ದ. ಆರೋಪಿ ಮೂತ್ರದಿಂದ ಯೂರಿಯಾ ನೈಟ್ರೇಟ್ ಬಾಂಬ್ ತಯಾರಿಸಿದ್ದ. ಕೋಮು ಸಂಘರ್ಷ ಸೃಷ್ಟಿಸುವುದೇ ಇದರ ಉದ್ದೇಶವಾಗಿತ್ತು.

ನವದೆಹಲಿ, ಸೆಪ್ಟೆಂಬರ್ 10: ಕಳೆದ ವರ್ಷ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭೀಕರ ಕಾರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಆಘಾತಕಾರಿ ಸತ್ಯಗಳು ಬಯಲಾಗಿವೆ. ಬಾಂಬರ್ ಉಮರ್ ಉನ್ ನಬಿಯ ಮೊದಲ ಗುರಿ ಕೆಂಪುಕೋಟೆಯಾಗಿರಲಿಲ್ಲ, ಬದಲಾಗಿ ಐತಿಹಾಸಿಕ ಜೈನ ದೇವಾಲಯವಾದ ‘ಲಾಲ್ ಮಂದಿರ’ವಾಗಿತ್ತು. ಆದರೆ ಸಂಜೆ ವೇಳೆ ದೆಹಲಿಯ ರಸ್ತೆಗಳಲ್ಲಿದ್ದ ಭಾರಿ ಟ್ರಾಫಿಕ್ ಹಾಗೂ ಪೊಲೀಸರ ಬಂದೋಬಸ್ತ್ನಿಂದಾಗಿ ಆತ ಕೊನೆಯ ಕ್ಷಣದಲ್ಲಿ ರೂಟ್ ಬದಲಿಸಿ ಕೆಂಪುಕೋಟೆ ಬಳಿ ಸ್ಫೋಟಿಸಿದ್ದ ಎಂದು ಎನ್ಐಎ ಬಹಿರಂಗಪಡಿಸಿದೆ.
ದೇವಾಲಯದ ಮೇಲೆಯೇ ಮೊದಲ ಕಣ್ಣು: ನವೆಂಬರ್ 10, 2025ರಂದು ಸಂಜೆ 6.37ಕ್ಕೆ ಸುನ್ಹೇರಿ ಮಸೀದಿ ಪಾರ್ಕಿಂಗ್ನಿಂದ ಹೊರಟಿದ್ದ ನಬಿ, ಸ್ಫೋಟಕ ತುಂಬಿದ ಐ20 ಕಾರನ್ನು ಲಾಲ್ ಮಂದಿರದ ಬಳಿಯೇ ನಿಲ್ಲಿಸಲು ಯತ್ನಿಸಿದ್ದ. ಆದರೆ ವಾಹನ ದಟ್ಟಣೆ ಹಾಗೂ ಪೊಲೀಸ್ ಕಾವಲು ಹೆಚ್ಚಿದ್ದ ಕಾರಣ ಅಲ್ಲಿ ಕಾರು ನಿಲ್ಲಿಸಲು ಸಾಧ್ಯವಾಗದೆ, ಯು-ಟರ್ನ್ ತೆಗೆದುಕೊಂಡು ಕೆಂಪುಕೋಟೆಯತ್ತ ಸಾಗಿ ಸಂಜೆ 6.50ಕ್ಕೆ ಬಾಂಬ್ ಸಿಡಿಸಿದ್ದ.
ಮೂತ್ರದಿಂದ ಯೂರಿಯಾ ನೈಟ್ರೇಟ್ ಬಾಂಬ್: ಬಾಂಬರ್ ಬಳಿಯಿದ್ದ ಪೆನ್ಡ್ರೈವ್ಗಳಲ್ಲಿ ‘ಮೂತ್ರದಿಂದ ಯೂರಿಯಾವನ್ನು ಹೊರತೆಗೆದು ಯೂರಿಯಾ ನೈಟ್ರೇಟ್ ಸ್ಫೋಟಕ ತಯಾರಿಸುವ’ ವಿಧಾನದ ಪಿಡಿಎಫ್ ಕಡತಗಳು ಸಿಕ್ಕಿವೆ. ಹರಿಯಾಣದ ನೂಹ್ನಲ್ಲಿ ಬಾಡಿಗೆ ಕೋಣೆಯಲ್ಲಿದ್ದಾಗ ಆತ ಮೂತ್ರ ಸಂಗ್ರಹಿಸಿಟ್ಟಿದ್ದ ಪ್ಲಾಸ್ಟಿಕ್ ಚೀಲಗಳಿಂದ ದುರ್ವಾಸನೆ ಬರುತ್ತಿದ್ದ ಬಗ್ಗೆ ಪ್ರತ್ಯಕ್ಷದರ್ಶಿಗಳು ಎನ್ಐಎಗೆ ಸಾಕ್ಷಿ ನೀಡಿದ್ದಾರೆ.
ನಬಿ 2023 ರಿಂದ 2025ರ ನಡುವೆ ಬರೋಬ್ಬರಿ 12 ಬಾರಿ ಕೆಂಪುಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ. ಡಿಜಿಟಲ್ ಪುರಾವೆ ಸಿಗದಂತೆ ಈ ವೇಳೆ ಆತ ಹಾಗೂ ಸಹಚರರು ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡುತ್ತಿದ್ದರು.
ಮತ್ತಷ್ಟು ಓದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್: ದಾವಣಗೆರೆಯಲ್ಲಿ ಪೊಲೀಸರ ಕೈಗೆ ಸಿಕ್ಕ ಶಂಕಿತ ಉಗ್ರನಿಂದ ಸ್ಫೋಟಕ ಮಾಹಿತಿ
ವೈದ್ಯಕೀಯ ಹಿನ್ನೆಲೆಯ ದುರ್ಬಳಕೆ: ಆರೋಪಿ ಡಾ. ಉಮರ್ ಉನ್ ನಬಿ ವೃತ್ತಿಯಲ್ಲಿ ವೈದ್ಯನಾಗಿದ್ದರಿಂದ ರಾಸಾಯನಿಕ ಸೂತ್ರಗಳು ಮತ್ತು ಪ್ರಯೋಗಾಲಯದ ವಿಧಾನಗಳ ಬಗ್ಗೆ ಆತನಿಗೆ ಸಂಪೂರ್ಣ ಜ್ಞಾನವಿತ್ತು. ಮುಕ್ತ ಮಾರುಕಟ್ಟೆಯಲ್ಲಿ ರಾಸಾಯನಿಕ ಅಥವಾ ರಸಗೊಬ್ಬರ ಖರೀದಿಸಿದರೆ ಭದ್ರತಾ ಸಂಸ್ಥೆಗಳ ಕಣ್ಣಿಗೆ ಬೀಳಬಹುದು ಎಂಬ ಕಾರಣಕ್ಕೆ, ತಂತ್ರಜ್ಞಾನ ಬಳಸಿ ಮನೆಯೊಳಗೇ ಮೂತ್ರದಿಂದ ಯೂರಿಯಾ ಸಂಸ್ಕರಿಸಿ ಕಚ್ಚಾ ಬಾಂಬ್ (IED) ತಯಾರಿಸಿದ್ದ.
ಧಾರ್ಮಿಕ ಸಾಮರಸ್ಯ ಕದಡುವ ಸಂಚು: ದೆಹಲಿಯ ಚಾಂದಿನಿ ಚೌಕ್ ಪ್ರದೇಶದಲ್ಲಿರುವ ‘ಶ್ರೀ ದಿಗಂಬರ ಜೈನ್ ಲಾಲ್ ಮಂದಿರ’ ಅತ್ಯಂತ ಪುರಾತನ ಮತ್ತು ಜನದಟ್ಟಣೆಯುಳ್ಳ ಧಾರ್ಮಿಕ ಸ್ಥಳವಾಗಿದೆ. ಇಲ್ಲಿ ಸ್ಫೋಟ ನಡೆಸುವ ಮೂಲಕ ದೇಶದಲ್ಲಿ ಕೋಮು ಸಂಘರ್ಷ ಸೃಷ್ಟಿಸುವುದು ಹಾಗೂ ಗರಿಷ್ಠ ಸಾವು-ನೋವು ಉಂಟುಮಾಡುವುದು ಉಗ್ರರ ಮೂಲ ಉದ್ದೇಶವಾಗಿತ್ತು.
ನಕಲಿ ದಾಖಲೆ ಮತ್ತು ನಗದು ಬಳಕೆ: ದಾಳಿಗೂ ಮುನ್ನ ನೂಹ್ನಲ್ಲಿ ಹೊಸ ಬಟ್ಟೆಗಳನ್ನು ಖರೀದಿಸುವಾಗ ಮತ್ತು ರೂಮ್ ಬಾಡಿಗೆ ಪಡೆಯುವಾಗ ನಕಲಿ ಗುರುತಿನ ಚೀಟಿಗಳು ಹಾಗೂ ಕೇವಲ ನಗದನ್ನೇ ಬಳಸಲಾಗಿತ್ತು. ಯಾವುದೇ ಆನ್ಲೈನ್ ಯುಪಿಐ ವಹಿವಾಟು ನಡೆಸದೆ ಜಾಡು ಮುಚ್ಚಿಡಲು ಸಂಚುಕೋರರು ವ್ಯವಸ್ಥಿತ ಸಂಚು ರೂಪಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




