ಕಾಂಗ್ರೆಸ್ ಕಚೇರಿ, ಸೋನಿಯಾ ಗಾಂಧಿ ಮನೆಯ ಬಾಡಿಗೆ ಇನ್ನೂ ಪಾವತಿಯಾಗಿಲ್ಲ; ಆರ್​ಟಿಐನಲ್ಲಿ ಬಹಿರಂಗ

ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿಯು ಬಾಡಿಗೆ ಹಣವನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಹಾಗಾದರೆ, ಕಾಂಗ್ರೆಸ್ ನಾಯಕರು ಹಾಗೂ ಕಾಂಗ್ರೆಸ್ ಪ್ರಧಾನ ಕಚೇರಿಯ ಬಾಡಿಗೆಯ ಎಷ್ಟು ಹಣ ಬಾಕಿ ಇದೆ ಎಂಬುದರ ವಿವರ ಇಲ್ಲಿದೆ.

ಕಾಂಗ್ರೆಸ್ ಕಚೇರಿ, ಸೋನಿಯಾ ಗಾಂಧಿ ಮನೆಯ ಬಾಡಿಗೆ ಇನ್ನೂ ಪಾವತಿಯಾಗಿಲ್ಲ; ಆರ್​ಟಿಐನಲ್ಲಿ ಬಹಿರಂಗ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
Edited By:

Updated on: Feb 10, 2022 | 6:45 PM

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ದೆಹಲಿಯ ಜನಪಥ್ 10ರ ತಮ್ಮ ಸರ್ಕಾರಿ ನಿವಾಸದ ಬಾಡಿಗೆ ಬಾಕಿ ಹಣವನ್ನು ಪಾವತಿಸಿಲ್ಲ ಎಂದು ಕೇಂದ್ರದ ನಗರಾಭಿವೃದ್ದಿ ಇಲಾಖೆಯು ಆರ್‌ಟಿಐ ಪ್ರಶ್ನೆಗೆ ಉತ್ತರ ನೀಡಿದೆ. ಅದೇ ರೀತಿ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿಯು ಬಾಡಿಗೆ ಹಣವನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಹಾಗಾದರೆ, ಕಾಂಗ್ರೆಸ್ (Congress) ನಾಯಕರು ಹಾಗೂ ಕಾಂಗ್ರೆಸ್ ಪ್ರಧಾನ ಕಚೇರಿಯ ಬಾಡಿಗೆಯ ಎಷ್ಟು ಹಣ ಬಾಕಿ ಇದೆ ಎಂಬುದರ ವಿವರ ಇಲ್ಲಿದೆ ನೋಡಿ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸ ಸೇರಿದಂತೆ ಕಾಂಗ್ರೆಸ್ ನಾಯಕರು ವಾಸ ಇರುವ ಹಲವು ಮನೆಗಳ ಬಾಡಿಗೆ ಪಾವತಿಸಿಲ್ಲ. ಆರ್‌ಟಿಐ ಕಾರ್ಯಕರ್ತ ಸುಜಿತ್ ಪಟೇಲ್ ಸಲ್ಲಿಸಿದ ಆರ್‌ಟಿಐಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಹಲವಾರು ಮನೆಗಳ ಬಾಡಿಗೆ ಬಾಕಿ ಉಳಿದಿದೆ ಎಂದು ತಿಳಿದುಬಂದಿದೆ.

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಆರ್‌ಟಿಐ ಅರ್ಜಿಗೆ ನೀಡಿರುವ ಉತ್ತರದಲ್ಲಿ ದೆೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಛೇರಿಯ ವಿರುದ್ಧ 12,69,902 ರೂ. ಬಾಡಿಗೆ ಬಾಕಿ ಉಳಿದಿದೆ ಎಂದು ಹೇಳಿದೆ. ಕೊನೆಯ ಬಾರಿ 2012ರ ಡಿಸೆಂಬರ್‌ನಲ್ಲಿ ಬಾಡಿಗೆ ಪಾವತಿಸಲಾಗಿತ್ತು. ಅದೇ ರೀತಿ, 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸಕ್ಕೆ 4,610 ರೂ. ಬಾಡಿಗೆ ಬಾಕಿ ಇದೆ. ಕೊನೆಯ ಬಾಡಿಗೆಯನ್ನು ಸೆಪ್ಟೆಂಬರ್ 2020ರಲ್ಲಿ ಪಾವತಿಸಲಾಗಿದೆ.

ಸೋನಿಯಾ ಗಾಂಧಿಯವರ ಆಪ್ತ ಕಾರ್ಯದರ್ಶಿ ವಿನ್ಸೆಂಟ್ ಜಾರ್ಜ್ ಅವರು ವಾಸ ಇರುವ ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಬಂಗಲೆ ಸಂಖ್ಯೆ C-ll/109 5,07,911 ರೂಪಾಯಿ ಬಾಡಿಗೆ ಬಾಕಿಯನ್ನು ಉಳಿಸಿಕೊಂಡಿದೆ. ಇದಕ್ಕೆ ಕೊನೆಯ ಬಾರಿ ಆಗಸ್ಟ್ 2013ರಲ್ಲಿ ಬಾಡಿಗೆ ಪಾವತಿಸಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಿಗೆ ವಾಸ್ತವ್ಯಕ್ಕೆ ಅವಕಾಶ ನೀಡುವ ವಸತಿ ನಿಯಮಗಳ ಪ್ರಕಾರ ಪ್ರತಿಯೊಂದು ಪಕ್ಷಕ್ಕೂ ಸ್ವಂತ ಕಚೇರಿ ನಿರ್ಮಿಸಲು ಮೂರು ವರ್ಷಗಳ ಕಾಲಾವಕಾಶ ನೀಡಲಾಗಿದ್ದು, ನಂತರ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕಾಗುತ್ತದೆ.

2010ರ ಜೂನ್‌ನಲ್ಲಿ 9-ಎ ರೋಸ್ ಅವೆನ್ಯೂದಲ್ಲಿ ಪಕ್ಷದ ಕಚೇರಿ ನಿರ್ಮಿಸಲು ಕಾಂಗ್ರೆಸ್‌ಗೆ ಭೂಮಿ ಮಂಜೂರು ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷವು 2013ರ ವೇಳೆಗೆ ಅಕ್ಬರ್ ರಸ್ತೆಯ ಕಚೇರಿ ಮತ್ತು ಒಂದೆರಡು ಬಂಗಲೆಗಳನ್ನು ಖಾಲಿ ಮಾಡಬೇಕಾಗಿತ್ತು, ಆದರೆ, ಹಳೆಯ ಪಕ್ಷವು ಇಲ್ಲಿಯವರೆಗೆ ಹಲವಾರು ವಿಸ್ತರಣೆಗಳನ್ನು ತೆಗೆದುಕೊಂಡಿದೆ.

ಜುಲೈ 2020ರಲ್ಲಿ ಸರ್ಕಾರವು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಿದ್ದ ಲೋಧಿ ರಸ್ತೆಯ ನಿವಾಸವನ್ನು ಒಂದು ತಿಂಗಳ ಅವಧಿಯಲ್ಲಿ ಖಾಲಿ ಮಾಡುವಂತೆ ನೋಟಿಸ್ ಕಳುಹಿಸಿತ್ತು. ಸೋನಿಯಾ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿಯ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಹಗರಣಗಳನ್ನು ಮಾಡಲು ಸಾಧ್ಯವಿಲ್ಲದ ಕಾರಣ ಬಾಡಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಸೋತ ನಂತರ ಸೋನಿಯಾ ಗಾಂಧಿ ಅವರು ತಮ್ಮ ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗಲಿಲ್ಲ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ, ಅವರು ಈಗ ಹಗರಣಗಳನ್ನು ಮಾಡಲು ಸಾಧ್ಯವಿಲ್ಲ. ಆದರೆ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾನು ಅವರಿಗೆ ಮಾನವೀಯವಾಗಿ ಸಹಾಯ ಮಾಡಲು ಬಯಸುತ್ತೇನೆ. ನಾನು SoniaGandhiReliefFund ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. 10 ರೂಪಾಯಿ ಕಳುಹಿಸಿದ್ದೇನೆ. ಆಕೆಯ ಖಾತೆ, ಆಕೆಗೆ ಸಹಾಯ ಮಾಡುವಂತೆ ನಾನು ಎಲ್ಲರನ್ನೂ ವಿನಂತಿಸುತ್ತೇನೆ ಎಂದು ಅವರು ಟ್ವೀಟ್‌ನಲ್ಲಿ ಹೇಳುವ ಮೂಲಕ ವ್ಯಂಗ್ಯ ಮಾಡಿದ್ದಾರೆ. ತೇಜಿಂದರ್ ಪಾಲ್‌ ಬಗ್ಗಾ ಅವರು ಕಾಂಗ್ರೆಸ್ ಹಂಗಾಮಿ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಿದ ಹಣದ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:Video: ಕಾಂಗ್ರೆಸ್ ಸಂಸ್ಥಾಪನಾ ದಿನ ಇಂದು; ಧ್ವಜಾರೋಹಣ ವೇಳೆ ಕೆಳಗೆ ಬಿದ್ದ ಬಾವುಟ, ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಸೋನಿಯಾ ಗಾಂಧಿ

ಕಾಂಗ್ರೆಸ್​ನಿಂದ ಪ್ರಣಾಳಿಕೆ ಬಿಡುಗಡೆ; ಎಸ್​ಸಿ/ಎಸ್​ಟಿ ವಿದ್ಯಾರ್ಥಿಗಳಿಗೆ ಪದವಿವರೆಗೆ ಉಚಿತ ಶಿಕ್ಷಣ, ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ

Loading...
Unable to load recommendations.
Follow Us