ಪಂಜಾಬ್​​ನ ಪೊಲೀಸ್ ಠಾಣೆ ಮೇಲೆ ರಾಕೆಟ್ ಗ್ರೆನೇಡ್ ದಾಳಿ; ಕೃತ್ಯದ ಹೊಣೆ ಹೊತ್ತ ಖಲಿಸ್ತಾನಿ ಉಗ್ರ ಸಂಘಟನೆ

ಪಂಜಾಬ್​ನ ಪೊಲೀಸ್ ಠಾಣೆ ಮೇಲೆ ರಾಕೆಟ್ ಲಾಂಚರ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರಿಂದ 7 ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.

ಪಂಜಾಬ್​​ನ ಪೊಲೀಸ್ ಠಾಣೆ ಮೇಲೆ ರಾಕೆಟ್ ಗ್ರೆನೇಡ್ ದಾಳಿ; ಕೃತ್ಯದ ಹೊಣೆ ಹೊತ್ತ ಖಲಿಸ್ತಾನಿ ಉಗ್ರ ಸಂಘಟನೆ
ಪಂಜಾಬ್ ಪೊಲೀಸ್ ಠಾಣೆಯಲ್ಲಿ ರಾಕೆಟ್ ದಾಳಿ
Updated By: ಸುಷ್ಮಾ ಚಕ್ರೆ

Updated on: Dec 10, 2022 | 3:23 PM

ಅಮೃತಸರ: ಪಂಜಾಬ್​ನ (Punjab) ಅಮೃತಸರ-ಭಟಿಂಡಾ ಹೆದ್ದಾರಿಯಲ್ಲಿರುವ ತರ್ನ್ ತರನ್ ಜಿಲ್ಲೆಯ ಸರ್ಹಾಲಿ ಪೊಲೀಸ್ ಠಾಣೆಯ ಮೇಲೆ ನಿನ್ನೆ ಮಧ್ಯರಾತ್ರಿ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ನಡೆಸಲಾಗಿತ್ತು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ದಾಳಿಯ ಹೊಣೆಯನ್ನು ಖಲಿಸ್ತಾನಿ ಟೆರರ್ ಗ್ರೂಪ್ ಸಿಖ್ಸ್ ಫಾರ್ ಜಸ್ಟಿಸ್ (SFJ) ಹೊತ್ತುಕೊಂಡಿದೆ. ಖಲಿಸ್ತಾನ್​​​ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಪಂಜಾಬ್​ನ ಪೊಲೀಸ್ ಠಾಣೆ ಮೇಲೆ ರಾಕೆಟ್ ಲಾಂಚರ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರಿಂದ 7 ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. 2 ಜಿಲ್ಲೆಯಲ್ಲಿ ಒಟ್ಟು 7 ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ತರ್ನ್ ತರನ್ ಪೊಲೀಸ್ ಠಾಣೆ ಮೇಲೆ ರಾಕೆಟ್ ಲಾಂಚರ್ ದಾಳಿ ಆಗಿತ್ತು. ಅಪರಿಚಿತ ದಾಳಿಕೋರರು ರಾಕೆಟ್ ಲಾಂಚರ್ ತರಹದ ಸಾಧನವನ್ನು ರಾಷ್ಟ್ರೀಯ ಹೆದ್ದಾರಿ 54ರಿಂದ ಸರ್ಹಾಲಿಯ ಪೊಲೀಸ್ ಠಾಣೆಗೆ ಹಾರಿಸಿದ್ದರು. ಈ ರಾಕೆಟ್ ದಾಳಿಯಿಂದಾಗಿ ಪೊಲೀಸ್ ಠಾಣೆಯ ಗೋಡೆಗಳು, ಬಾಗಿಲುಗಳ ಗ್ಲಾಸ್​ಗಳು ಒಡೆದು ಹೋಗಿತ್ತು. ಈ ದಾಳಿಯ ನಂತರ, ತರ್ನ್ ತರನ್​ನ ಎಸ್‌ಎಸ್‌ಪಿ ದಾಳಿ ನಡೆದ ಸ್ಥಳಕ್ಕೆ ಆಗಮಿಸಿ, ದಾಳಿಗೆ ಬಳಸಿದ ರಾಕೆಟ್ ಅನ್ನು ಪೊಲೀಸ್ ಠಾಣೆಯ ಒಳಗಿನಿಂದ ವಶಪಡಿಸಿಕೊಳ್ಳಲಾಯಿತು. ರಾಕೆಟ್ ಜೊತೆಗೆ ಪೈಪ್ ತರಹದ ವಸ್ತು ಕೂಡ ಪತ್ತೆಯಾಗಿತ್ತು.

ಇದನ್ನೂ ಓದಿ: ಪಂಜಾಬ್​​ನ ಪೊಲೀಸ್ ಠಾಣೆ ಮೇಲೆ ರಾಕೆಟ್ ದಾಳಿ; ಪಾಕಿಸ್ತಾನಿ ಉಗ್ರರ ಕೈವಾಡದ ಶಂಕೆ

ಸರ್ಹಾಲಿಯು ಕುಖ್ಯಾತ ದರೋಡೆಕೋರ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾನ ಊರಾಗಿದೆ. ಆತ ಕೆಲವು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದ ಎಂದು ಶಂಕಿಸಲಾಗಿದೆ. ಹರ್ವಿಂದರ್ ಸಿಂಗ್ ರಿಂಡಾ ಮೂತ್ರಪಿಂಡ ವೈಫಲ್ಯದಿಂದ 15 ದಿನಗಳ ಕಾಲ ಲಾಹೋರ್‌ನ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲಿ ಆತ ನಿಧನನಾಗಿದ್ದಾನೆ ಎಂದು ರಾಜ್ಯ ಪೊಲೀಸ್ ಮೂಲಗಳು ಹೇಳಿಕೊಂಡಿವೆ. ಪಾಕಿಸ್ತಾನದ ಐಎಸ್‌ಐ ಆಶ್ರಯದಲ್ಲಿ ಖಲಿಸ್ತಾನ್ ಬೆಂಬಲಿತ ಭಯೋತ್ಪಾದಕರು ಈ ದಾಳಿಯನ್ನು ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಉಗ್ರರನ್ನು ಟಾರ್ಗೆಟ್ ಮಾಡುವಂತೆ ನಾವು ಹೇಳಿದೆವು, ಅವರು ಮೋದಿಯನ್ನು ಟಾರ್ಗೆಟ್ ಮಾಡಿದರು: ಪ್ರಧಾನಿ ಮೋದಿ

ಎರಡು ದಿನಗಳ ಹಿಂದೆಯಷ್ಟೇ ಭಯೋತ್ಪಾದನಾ ದಾಳಿಯ ಬಗ್ಗೆ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ವರದಿಗಳ ಪ್ರಕಾರ, ಪಂಜಾಬ್‌ನ ಪೊಲೀಸ್ ಠಾಣೆಗಳು ಮತ್ತು ಇತರ ಸರ್ಕಾರಿ ಕಟ್ಟಡಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲು ಸೂಚಿಸಲಾಗಿತ್ತು. ಇದೀಗ ಪೊಲೀಸ್ ಠಾಣೆಗಳಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ