ಮಹಾಕುಂಭದ ಬಗ್ಗೆ ಸಮಾಜವಾದಿ ಪಕ್ಷ ಸುಳ್ಳು ಸುದ್ದಿ ಹರಡುತ್ತಿದೆ; ಸಿಎಂ ಯೋಗಿ ಆದಿತ್ಯನಾಥ್ ಆರೋಪ

|

Updated on: Feb 04, 2025 | 5:18 PM

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ವಿರುದ್ಧ ಮಾತನಾಡಲು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಕೈಜೋಡಿಸಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸಂಸತ್ ಅಧಿವೇಶನದಲ್ಲಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಎಸ್​ಪಿ ಸಂಸದರು ಬಿಜೆಪಿ ಸರ್ಕಾರ ಮಹಾಕುಂಭದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದವರನ್ನು ನದಿಗೆ ಎಸೆದಿದೆ ಎಂದು ಆರೋಪಿಸಿತ್ತು.

ಮಹಾಕುಂಭದ ಬಗ್ಗೆ ಸಮಾಜವಾದಿ ಪಕ್ಷ ಸುಳ್ಳು ಸುದ್ದಿ ಹರಡುತ್ತಿದೆ; ಸಿಎಂ ಯೋಗಿ ಆದಿತ್ಯನಾಥ್ ಆರೋಪ
Yogi Adityanath
Follow us on

ಲಕ್ನೋ: ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾಕುಂಭದ ಬಗ್ಗೆ ಸಮಾಜವಾದಿ ಪಕ್ಷ ಸುಳ್ಳುಗಳನ್ನು ಹರಡುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಸನಾತನ ಕಾರ್ಯಕ್ರಮದ ವಿರುದ್ಧ ಮಾತನಾಡಲು ಕಾಂಗ್ರೆಸ್ ಮತ್ತು ಎಸ್‌ಪಿ ಕೈಜೋಡಿಸಿವೆ ಎಂದು ಟೀಕಿಸಿದ್ದಾರೆ.

ಇದಕ್ಕೂ ಮುನ್ನ, ಮಹಾಕುಂಭದ ಕಾಲ್ತುಳಿತದ ಘಟನೆಯ ಬಗ್ಗೆ ಉತ್ತರ ಪ್ರದೇಶ ಸರ್ಕಾರದ ಮೇಲೆ ಅಖಿಲೇಶ್ ಯಾದವ್ ತಮ್ಮ ವಾಗ್ದಾಳಿ ನಡೆಸಿದ್ದರು. ಉತ್ತರ ಪ್ರದೇಶ ಸರ್ಕಾರವೇ ಈ ದುರಂತ ಘಟನೆ ನಡೆಯಲು ಅವಕಾಶ ಮಾಡಿಕೊಟ್ಟಿತು ಎಂದು ಹೇಳಿದ್ದರು. ಹಾಗೇ, ಉತ್ತರ ಪ್ರದೇಶ ಸರ್ಕಾರ ಕಾಲ್ತುಳಿತದಲ್ಲಿನ ಸಾವಿನ ಸಂಖ್ಯೆಯನ್ನು ಮರೆಮಾಚುತ್ತಿದೆ. ಈ ಪ್ರಕರಣದ ತನಿಖೆಯನ್ನು ಸೇನೆಗೆ ವಹಿಸಬೇಕೆಂದು ಒತ್ತಾಯಿಸಿದ್ದರು.

ಇದನ್ನೂ ಓದಿ: ಮಹಾಕುಂಭದ ಕಾಲ್ತುಳಿತದಲ್ಲಿ ಸತ್ತವರ ಶವವನ್ನು ನದಿಗೆ ಎಸೆಯಲಾಗಿದೆ; ಜಯಾ ಬಚ್ಚನ್ ಆರೋಪ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅಖಿಲೇಶ್ ಯಾದವ್, ಈ ವರ್ಷ ಜನವರಿ 29ರಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭದ ಸ್ಥಳದಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಜನರ ನಿಜವಾದ ಸಂಖ್ಯೆಯ ವಿವರಗಳನ್ನು ಕೇಂದ್ರ ಸರ್ಕಾರ ಏಕೆ ನೀಡುತ್ತಿಲ್ಲ? ಎಂಬ ಪ್ರಶ್ನೆಯನ್ನು ಎತ್ತಿದ್ದರು.

ಇದಲ್ಲದೆ, ಉತ್ತರ ಪ್ರದೇಶದ ಸರ್ಕಾರಕ್ಕೆ ಈ ಘಟನೆಯ ಸಮಯ ತಿಳಿದಿತ್ತು. ಈ ಘಟನೆ ಬೆಳಿಗ್ಗೆ 1 ಗಂಟೆಗೆ ನಡೆದಿದ್ದರೆ, ಬೆಳಿಗ್ಗೆ 11 ಗಂಟೆಯವರೆಗೆ ಆಂಬ್ಯುಲೆನ್ಸ್‌ಗಳು ಬರುತ್ತಿದ್ದರೆ ಸತ್ತವರ ಸಂಖ್ಯೆಯನ್ನು ನೀವೇ ಊಹಿಸಿ. ಹಲವಾರು ಭಕ್ತರು ಪವಿತ್ರ ಸ್ನಾನ ಮಾಡಲು ಸಹ ಸಾಧ್ಯವಾಗಲಿಲ್ಲ, ಅವರು ಹಿಂತಿರುಗಬೇಕಾಯಿತು. ಸಿಎಂ ಯೋಗಿ ಆದಿತ್ಯನಾಥ್ ಅವರು 100 ಕೋಟಿ ಜನರಿಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಅಷ್ಟು ಮೂಲಸೌಕರ್ಯ ಒದಗಿಸಿದ್ದರೆ ಈ ರೀತಿ ಏಕಾಗುತ್ತಿತ್ತು? ಎಂದು ಅಖಿಲೇಶ್ ಯಾದವ್ ಕೇಳಿದ್ದರು.

ಇದನ್ನೂ ಓದಿ: ಪ್ರಯಾಗರಾಜ್‌ನ ಮಹಾಕುಂಭದಲ್ಲಿ ಭೂತಾನ್‌ನ ರಾಜ, ಸಿಎಂ ಯೋಗಿ ಆದಿತ್ಯನಾಥ್ ಆರತಿ

ಇಂದು ಲೋಕಸಭೆಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್, ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಂಭವಿಸಿದ ಸಾವುನೋವುಗಳ ಬಗ್ಗೆ ಪಾರದರ್ಶಕತೆ ತರಬೇಕೆಂದು ಒತ್ತಾಯಿಸಿದರು, ಸಾವುಗಳು, ಗಾಯಗೊಂಡವರ ಚಿಕಿತ್ಸೆ ಮತ್ತು ಕಾರ್ಯಕ್ರಮಕ್ಕೆ ಮಾಡಲಾದ ವ್ಯವಸ್ಥೆಗಳ ಬಗ್ಗೆ ನಿಖರವಾದ ಅಂಕಿಅಂಶಗಳನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ