
ನವದೆಹಲಿ, ಜೂನ್ 9: ಭಾರತದ ಶುಭಾಂಶು ಶುಕ್ಲಾ (Shubhanshu Shukla) ಅವರು ಹೊಸ ಸಾಹಸ ಪ್ರಯಾಣಕ್ಕೆ ಸಜ್ಜಾಗಿದ್ದಾರೆ. ನಾಳೆ ಮಂಗಳವಾರ (2025 ಜೂನ್ 10) ಅವರು ಆ್ಯಕ್ಸಿಯಮ್ ಮಿಷನ್ 4 (Axiom Mission-4) ಮೂಲಕ ಗಗನಕ್ಕೆ ಹಾರಲಿದ್ದಾರೆ. ಅಮೆರಿಕದ ಫ್ಲೋರಿಡಾದಲ್ಲಿರುವ ಕೆನೆಡಿ ಸ್ಪೇಸ್ ಸೆಂಟರ್ನಿಂದ ಸ್ಪೇಸ್ಎಕ್ಸ್ ಡ್ರಾಗನ್ ನೌಕೆ ಗಗನಕ್ಕೆ (SpaceX Crew Dragon C213) ಹಾರಲಿದೆ. ಸ್ಪೇಸ್ಎಕ್ಸ್ಗೆ ಸೇರಿದ ಫಾಲ್ಕಂ 9 ರಾಕೆಟ್ (Falcom 9) ಈ ಗಗನನೌಕೆಯನ್ನು ಆಗಸಕ್ಕೆ ಹೊತ್ತಯ್ಯಲಿದೆ. ಆ್ಯಕ್ಸಿಯಮ್ ಮಿಷನ್-4 28 ಗಂಟೆ ಕಾಲ ಆಗಸದಲ್ಲಿ ಪ್ರಯಾಣಿಸಿ ಜೂನ್ 11, ಬುಧವಾರ ರಾತ್ರಿ 10 ಗಂಟೆಗೆ (ಭಾರತೀಯ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS- International Space Station) ತಲುಪಲಿದೆ. ಈ ಗಗನನೌಕೆಯಲ್ಲಿ ಶುಭಾಂಶು ಶುಕ್ಲ ಹಾಗೂ ಇತರ ಮೂವರು ವ್ಯಕ್ತಿಗಳು ಇರಲಿದ್ದಾರೆ.
ಇಸ್ರೋ ಛೇರ್ಮನ್ ವಿ ನಾರಾಯಣನ್ ಅವರು ಆ್ಯಕ್ಸಿಯಮ್ ಸ್ಪೇಸ್ ಸಂಸ್ಥೆಗೆ ಹೋಗಿ ಎಲ್ಲಾ ವ್ಯವಸ್ಥೆಯನ್ನೂ ಪರಿಶೀಲಿಸಿ ಬಂದಿದ್ದಾರೆ. ನಾಲ್ಕು ಮಂದಿ ಇರುವ ಈ ಗಗನಯಾನ ತಂಡದ ಎಲ್ಲಾ ಸದಸ್ಯರು ಅಗತ್ಯ ತರಬೇತಿ ಪಡೆದು ಮುಗಿಸಿ, ಮೇ 25ರಿಂದ ಕ್ವಾರಂಟೈನ್ನಲ್ಲಿದ್ದಾರೆ. ಐಎಸ್ಎಸ್ ತಲುಪಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಜೊತೆ ಶುಕ್ಲಾ ಮತ್ತಿತರರು ಸಂವಾದ ನಡೆಸುವ ಕಾರ್ಯಕ್ರಮವೂ ಇರಲಿದೆ. ಈ ಸ್ಪೇಸ್ ಪ್ರಯಾಣ ಹಲವಾರು ರೀತಿಯಲ್ಲಿ ಭಾರತಕ್ಕೆ ಬಹಳ ಮಹತ್ವದ್ದಾಗಿದೆ.
ರಾಕೇಶ್ ಶರ್ಮಾ 1984ರಲ್ಲಿ ರಷ್ಯಾದ ಸೋಯುಜ್ ಟಿ-11 ಮಿಷನ್ (Soviet Soyuz T-11 mission) ಮೂಲಕ ಸ್ಯಾಲ್ಯುಟ್ 7 ಸ್ಪೇಸ್ ಸ್ಟೇಷನ್ನಲ್ಲಿ (Salyut 7 space station) 8 ದಿನ ಇದ್ದರು. ಅದು ಭಾರತಕ್ಕೆ ಹೊಸ ಇತಿಹಾಸ ಪುಟ ತೆರೆಯಲ್ಪಟ್ಟ ಅವಿಸ್ಮರಣೀಯ ಘಟನೆ. ಬಾಹ್ಯಾಕಾಶಕ್ಕೆ ಏರಿದ ಮೊದಲ ವ್ಯಕ್ತಿ ಎನಿಸಿದ್ದರು ರಾಕೇಶ್. ಆ ಸ್ಪೇಸ್ಶಿಪ್ನಲ್ಲಿ ರಾಕೇಶ್ ಶರ್ಮಾ (Rakesh Sharma) ಪೇಲೋಡ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ: ಗಮನಿಸಿ, ಆಯುಷ್ಮಾನ್ ಕಾರ್ಡ್ ಜೊತೆಗೆ ABHA ಕೂಡ ಇದ್ದರೆ ಪ್ರಯೋಜನ ಹೆಚ್ಚು; ಅದು ಹೇಗೆ, ಇಲ್ಲಿದೆ ಮಾಹಿತಿ
ಇನ್ನು, ಕಲ್ಪನಾ ಚಾವ್ಲಾ (Kalpana Chawla) ಅವರು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಮಹಿಳೆ ಎನಿಸಿದ್ದರು. 2003ರಲ್ಲಿ ಅವರು ನಾಸಾದ ಸ್ಪೇಸ್ಶಿಪ್ನಲ್ಲಿ ಹೋಗಿದ್ದರು. ಐಎಸ್ಎಸ್ನಲ್ಲಿ ಉಳಿದಿರಲಿಲ್ಲ. ಆದರೆ, ಮರಳುವಾಗ ದುರ್ಮರಣವಪ್ಪಿದ್ದರು.
ಇನ್ನು, ಸುನೀತಾ ವಿಲಿಯಮ್ಸ್ ಅವರು ಎರಡು ಬಾರಿ ಐಎಸ್ಎಸ್ಗೆ ಹೋಗಿದ್ದಾರೆ. ಇವರು ಪೂರ್ಣಪ್ರಮಾಣದ ಗಗನಯಾತ್ರಿಯಾಗಿ ಹೋಗಿದ್ದಾರೆ. ಭಾರತ ಮೂಲದವರಾದರೂ ಅಮೆರಿಕವನ್ನು ಪ್ರತಿನಿಧಿಸಿ ಇವರು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಬಂದಿದ್ದಾರೆ.
ಶುಭಾಂಶು ಶುಕ್ಲಾ ಅವರು ಕಮರ್ಷಿಯಲ್ ಸ್ಪೇಸ್ಫ್ಲೈಟ್ನಲ್ಲಿ ಪ್ರಯಾಣಿಸುವ ಮೊದಲ ಭಾರತೀಯ ವ್ಯಕ್ತಿ. ಐಎಎಸ್ಗೆ ಹೋಗುವ ಮೊದಲ ಭಾರತೀಯ ಪ್ರಜೆ. ಸ್ಪೇಸ್ಫ್ಲೈಟ್ನ ಪೈಲಟ್ ಆದ ಮೊದಲ ಭಾರತೀಯ ವ್ಯಕ್ತಿ ಎನ್ನುವ ಗರಿಮೆಯೂ ಅವರಿಗಿದೆ.
ಉತ್ತರಪ್ರದೇಶದ ಲಕ್ನೋ ಸಂಜಾತರಾದ ಶುಭಾಂಶು ಶುಕ್ಲಾ ಹುಟ್ಟಿದ್ದು 1985, ಅಕ್ಟೋಬರ್ 10ರಂದು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಓದಿದ ಅವರು ಇಂಡಿಯನ್ ಏರ್ಫೋರ್ಸ್ ಪೈಲಟ್ ಆಗಿ ಸಾಕಷ್ಟು ಅನುಭವ ಪಡೆದಿದ್ಧಾರೆ. ಸುಖೋಯ್ 30, ಜಾಗ್ವರ್, ಹಾಕ್, ಡಾರ್ನಿಯರ್ ಇತ್ಯಾದಿ ಜೆಟ್ ವಿಮಾನಗಳನ್ನು 2,000 ಗಂಟೆ ಹಾರಾಟ ಮಾಡಿದ ಅನುಭವಿ.
ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ
ಭಾರತದ ಗಗನಯಾನ ಯೋಜನೆಗೆ ಸಮರ್ಥ ವ್ಯಕ್ತಿಗಳನ್ನು ಆಯ್ಕೆ ಮಾಡುವ ಸಲುವಾಗಿ ವಾಯುಪಡೆಯ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಮತ್ತು ಇಸ್ರೋ ಜಂಟಿಯಾಗಿ ಅಭ್ಯರ್ಥಿಗಳ ಆಯ್ಕೆಗೆ ನಿಂತವು. ಗಗನಯಾತ್ರಿಗಳಾಗಲು ಅರ್ಜಿ ಹಾಕಿದ ನೂರಾರು ಮಂದಿಯಲ್ಲಿ ಶುಭಾಂಶು ಒಬ್ಬರು. ಅಂತಿಮವಾಗಿ ಗಗನಯಾನ ಯೋಜನೆಗೆ ಇವರನ್ನೂ ಸೇರಿ ನಾಲ್ವರನ್ನು ಅಂತಿಮಗೊಳಿಸಲಾಯಿತು.
ಅಮೆರಿಕದ ಆ್ಯಕ್ಸಿಯಮ್ನ ನಾಲ್ಕನೇ ಬಾಹ್ಯಾಕಾಶ ಪ್ರಯಾಣಕ್ಕೆ ಮುಖ್ಯ ಪೈಲಟ್ ಆಗಿ ಶುಭಾಂಶು ಶುಕ್ಲ ಅವರನ್ನು ಆಯ್ಕೆ ಮಾಡಲಾಯಿತು. ವಾಯುಪಡೆಯಲ್ಲಿ ಫೈಟರ್ ಜೆಟ್ಗಳನ್ನು ಚಲಾಯಿಸಿದ ಅನುಭವವು ಅವರಿಗೆ ಈ ಜವಾಬ್ದಾರಿ ಸಿಗುವಂತೆ ಮಾಡಿದೆ.
ಇದಕ್ಕೆ ಮುನ್ನ ಶುಭಾಂಶು ಶುಕ್ಲ ಅವರು ರಷ್ಯಾ, ಯೂರೋಪ್, ಅಮೆರಿಕದ ನಾಸಾ ಇತ್ಯಾದಿ ಹಲವೆಡೆ ಗಗನಯಾತ್ರೆಗೆ ಸಂಬಂಧಿಸಿದ ಎಲ್ಲಾ ರೀತಿಯ ತರಬೇತಿ ಮತ್ತು ನೈಪುಣ್ಯ ಪಡೆದು ಬಂದಿದ್ದಾರೆ.
ಇಲಾನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಕಂಪನಿಯ ಫಾಲ್ಕನ್ 9 ರಾಕೆಟ್ ಮೂಲಕ ಕ್ರ್ಯೂ ಡ್ರಾಗಾನ್ ಸಿ213 ಎನ್ನುವ ಗಗನನೌಕೆ ಹತ್ತಿ ನಾಲ್ವರು ವ್ಯಕ್ತಿಗಳು ಐಎಸ್ಎಸ್ಗೆ ಹೋಗಲಿದ್ದಾರೆ. ಇದು ಖಾಸಗಿ ಕಂಪನಿಯಾದ ಏಕ್ಸಿಯಾಮ್ ಆಯೋಜಿಸಿರುವ ಪ್ರಯಾಣ. ಆ ಕಂಪನಿಗೆ ಇದು ನಾಲ್ಕನೇ ಮಿಷನ್. 2022, 2023 ಮತ್ತು 2024ರಲ್ಲೂ ಇದೇ ಮಿಷನ್ ಕೈಗೊಂಡು ಯಶಸ್ವಿಯಾಗಿದೆ.
ನಾಲ್ಕನೇ ಮಿಷನ್ನಲ್ಲಿ ಶುಭಾಂಶು ಶುಕ್ಲ ಮುಖ್ಯ ಪೈಲಟ್ ಆಗಿರುತ್ತಾರೆ. ಪೆಗ್ಗಿ ವಿಟ್ಸನ್ ಅವರು ಕಮಾಂಡರ್ ಆಗಿರುತ್ತಾರೆ. ಹಂಗೆರಿ ಟಿಬೋರ್ ಕಾಪು ಮತ್ತು ಪೋಲ್ಯಾಂಡ್ನ ಸ್ಲಾವೋಜ್ ಉಜ್ನಾನ್ಸ್ಕಿ ವಿಸ್ನಿಯೆವಸ್ಕಿ ಅವರಿರುತ್ತಾರೆ.
ಇದನ್ನೂ ಓದಿ: ಭಾರತದ ಡ್ರೋನ್ ನಾಶಕ ಡಿ4 ಸಿಸ್ಟಂ ಖರೀದಿಗೆ ತೈವಾನ್ ಆಸಕ್ತಿ; ಚೀನಾದ ಆ ಕಡೆ ಮಗ್ಗುಲಿನಲ್ಲಿ ಭಾರತದ ಬಲ?
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಈ ತಂಡ 14 ದಿನ ಇರಲೆಂದು ನಿಗದಿ ಮಾಡಲಾಗಿದೆ. ಆದರೆ, ಇನ್ನೂ ಕೆಲ ಹೆಚ್ಚುವರಿ ದಿನಗಳಿಗೂ ಇರಲಾಗುವಂತೆ ಇವರನ್ನು ಸಜ್ಜುಗೊಳಿಸಲಾಗಿದೆ. ಅಷ್ಟು ದಿನ ಇವರೆಲ್ಲರೂ ಕೂಡ ವಿವಿಧ ರೀತಿಯ ವೈಜ್ಞಾನಿಕ ಮತ್ತು ಮಾನಸಿಕ ಪ್ರಯೋಗಗಳನ್ನು ಮಾಡುತ್ತಾರೆ.
ಶುಭಾಂಶು ಶುಕ್ಲಾ ಅವರು ಆಹಾರ ಮತ್ತು ಪೌಷ್ಟಿಕಾಂಶ ಸಂಬಂಧಿತ ಪ್ರಯೋಗಗಳನ್ನು ಮಾಡಲಿದ್ದಾರೆ. ತೀರಾ ನಗಣ್ಯ ಗುರುತ್ವಾಕರ್ಷಣ ಶಕ್ತಿ ಇರುವ ಪರಿಸರದಲ್ಲಿ ಕಾಳುಗಳನ್ನು ಮೊಳಕೆ ಬರಿಸುವುದು ಇತ್ಯಾದಿ ಪ್ರಯೋಗಗಳು ಇದರಲ್ಲಿ ಒಳಗೊಂಡಿರುತ್ತವೆ.
ಇಸ್ರೋ ಸಂಸ್ಥೆಯಿಂದ ಏಳು ಪ್ರಯೋಗಗಳಿದ್ದರೆ, ನಾಸಾ ಜೊತೆಗೂಡಿ ಐದು ಜಂಟಿ ಪ್ರಯೋಗಗಳು ಇದರಲ್ಲಿ ನಡೆಯಲಿವೆ.
ಶುಭಾಂಶು ಶುಕ್ಲಾ ಅವರು ಐಎಸ್ಎಸ್ಗೆ ಹೋಗಿ ಬರುತ್ತಿರುವುದು ಭಾರತಕ್ಕೆ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ. 2027ರಲ್ಲಿ ಭಾರತವು ಗಗನಯಾನ ಯೋಜನೆ ಹಮ್ಮಿಕೊಂಡಿದೆ. ಶುಭಾಂಶು ಅವರು ಈಗ ಏಕ್ಸಿಯಾಂ ಮಿಷನ್ನಲ್ಲಿ ಪೈಲಟ್ ಆಗಿ ಅನುಭವ ಪಡೆದು ಬಂದರೆ ಭಾರತದ ಗಗನಯಾನ ಯೋಜನೆಗೆ ಒಂದು ದೊಡ್ಡ ಬಲ ಸಿಕ್ಕಂತಾಗುತ್ತದೆ. ಗಗನಯಾನದ ವೇಳೆ ಎದುರಾಗುವ ಪ್ರತ್ಯಕ್ಷ ಸಮಸ್ಯೆಗಳಿಗೆ ಸಜ್ಜಾಗಲು ಅನುಕೂಲವಾಗುತ್ತದೆ. ಅಂದಹಾಗೆ, ಆ್ಯಕ್ಸಿಯಮ್ ಜೊತೆ ಈ ಮಿಷನ್ಗೆ ಇಸ್ರೋ ಕೂಡ ಭಾಗಿಯಾಗಿದೆ. ಇಸ್ರೋಗೆ ಈ ಮಿಷನ್ನಿಂದ ಆಗುವ ಒಟ್ಟು ವೆಚ್ಚ 550 ಕೋಟಿ ರೂ. ಆದರೆ, ಇದು 2027ರ ಗಗನಯಾನ ಮಿಷನ್ಗೆ ಒಂದು ಉತ್ತಮ ಪೂರ್ವಭಾವಿ ಟ್ರಯಲ್ ಎನಿಸಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:47 pm, Mon, 9 June 25