
ನವದೆಹಲಿ, ಆಗಸ್ಟ್ 20: ನೂರಾರು ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್, ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್(Arvind Kejriwal) ಮತ್ತು ಮಾಜಿ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾನೆ. ಜೈಲಿನಿಂದಲೇ ಬರೆದಿರುವ ಹೊಸ ಪತ್ರದಲ್ಲಿ, ಆಪ್ ಸರ್ಕಾರದ ಇತರ ಮೂರು ಪ್ರಮುಖ ಇಲಾಖೆಗಳಲ್ಲಿ ನಡೆದಿರುವ ಇನ್ನೂ 3 ಹಗರಣಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿದ್ದು, ಅವು ಲೋಡಿಂಗ್ ಹಂತದಲ್ಲಿವೆ ಎಂದು ಬೆದರಿಕೆ ಹಾಕಿದ್ದಾನೆ.
ದೆಹಲಿ ಅಬಕಾರಿ ನೀತಿ ಹಾಗೂ ದೆಹಲಿ ಜಲ ಮಂಡಳಿ (DJB) ಪ್ರಕರಣಗಳಲ್ಲಿ ತಾನು ಈ ಹಿಂದೆ ಮಾಡಿದ್ದ ಆರೋಪಗಳು ಸಾಬೀತಾಗಿವೆ, ಇದೀಗ ಮುಂದಿನ ಮೂರು ಪ್ರಮುಖ ಇಲಾಖೆಗಳ ಭ್ರಷ್ಟಾಚಾರವನ್ನು ಸಾರ್ವಜನಿಕವಾಗಿ ಬಯಲು ಮಾಡುವುದಾಗಿ ಹೇಳಿದ್ದಾನೆ.
ಆಪ್ ಅನ್ನು ಎನಿ ಟೈಮ್, ಆಲ್ವೇಸ್ ಸ್ಕ್ಯಾಮ್ ಪಾರ್ಟಿ ಎಂದು ಜರೆದಿರುವ ಆತ, ದೆಹಲಿಯಲ್ಲಿ ಆದಂತೆ ಪಂಜಾಬ್ನಲ್ಲೂ ಜನತೆ ಆಪ್ ಪಕ್ಷದ ದುರಹಂಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾನೆ. ಯುವಜನತೆ ಮತ್ತು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲು ಕೇಜ್ರಿವಾಲ್ ಪ್ರಾಕ್ಸಿಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದು, 2015-16ರ ಅವಧಿಯ ಒಡನಾಟವನ್ನು ನೆನಪಿಸಿ ಆಪ್ ನಾಯಕರನ್ನು ಪೂರ್ಣವಾಗಿ ಬಯಲು ಮಾಡುವುದಾಗಿ ಎಚ್ಚರಿಸಿದ್ದಾನೆ.
ಮತ್ತಷ್ಟು ಓದಿ: ‘ಪ್ರಜಾಪ್ರಭುತ್ವದ ಗೆಲುವು’; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿರೋಧ ಪಕ್ಷಗಳ ಪ್ರತಿಕ್ರಿಯೆ
ಪತ್ರದ ಕೊನೆಯಲ್ಲಿ ನಾನು ನಿಮ್ಮ ಕೆಟ್ಟ ಕನಸು, ನಿಮ್ಮೆಲ್ಲರನ್ನೂ ಬಯಲು ಮಾಡುತ್ತೇನೆ ಎಂದು ಸಹಿ ಹಾಕಿ ಎಚ್ಚರಿಕೆ ರವಾನಿಸಿದ್ದಾನೆ. ದೆಹಲಿ ಜಲ ಮಂಡಳಿ ಭ್ರಷ್ಟಾಚಾರ ಪ್ರಕರಣದಲ್ಲಿ ಎಸಿಬಿ (ACB) ಇತ್ತೀಚೆಗೆ ಸತ್ಯೇಂದರ್ ಜೈನ್ ಅವರನ್ನು ಬಂಧಿಸಿದ ನಂತರ ಎಎಪಿ ಮತ್ತು ಬಿಜೆಪಿ ನಡುವೆ ತೀವ್ರ ವಾಕ್ಸಮರ ನಡೆಯುತ್ತಿರುವ ಹೊತ್ತಿನಲ್ಲೇ ಈ ಪತ್ರ ಹೊರಬಂದಿದೆ.
ಸುಕೇಶ್ ಚಂದ್ರಶೇಖರ್ ಅವರ ಪತ್ರಗಳು ಮತ್ತು ಆರೋಪಗಳನ್ನು ಆಮ್ ಆದ್ಮಿ ಪಕ್ಷವು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇವೆಲ್ಲವೂ ರಾಜಕೀಯ ಪ್ರೇರಿತ ಸುಳ್ಳು ಪಿತೂರಿಗಳು ಎಂದು ಹೇಳಿದೆ. ಸುಕೇಶ್ ಹೊಸದಾಗಿ 3 ಹಗರಣಗಳು ಬಯಲಾಗಲಿವೆ ಎಂದು ಹೇಳಿಕೊಂಡಿದ್ದರೂ, ಅದಕ್ಕೆ ಸಂಬಂಧಿಸಿದ ಯಾವುದೇ ಇಲಾಖೆಯ ಹೆಸರುಗಳಾಗಲಿ ಅಥವಾ ನಿರ್ದಿಷ್ಟ ದಾಖಲೆಗಳನ್ನಾಗಲಿ ಪತ್ರದಲ್ಲಿ ಬಹಿರಂಗಪಡಿಸಿಲ್ಲ.
ಸುಕೇಶ್ ಚಂದ್ರಶೇಖರ್ 2022 ರಿಂದಲೂ ಜೈಲಿನಿಂದ ಲೆಫ್ಟಿನೆಂಟ್ ಗವರ್ನರ್ ಹಾಗೂ ಮಾಧ್ಯಮಗಳಿಗೆ ನಿರಂತರವಾಗಿ ಪತ್ರ ಬರೆಯುತ್ತಿದ್ದು, ಆಪ್ ನಾಯಕರು ತನಗೆ ರಕ್ಷಣೆ ನೀಡಲು ಹಣ ಪಡೆದಿದ್ದರು ಎಂದು ಆರೋಪಿಸುತ್ತಾ ಬಂದಿದ್ದಾನೆ.ಸುಮಾರು 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಸುಕೇಶ್ ವಿರುದ್ಧ ಜಾರಿ ನಿರ್ದೇಶನಾಲಯ (ED) ಮತ್ತು ದೆಹಲಿ ಪೊಲೀಸರ ತನಿಖೆ ಮುಂದುವರೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ