AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರಜಾಪ್ರಭುತ್ವದ ಗೆಲುವು’; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿರೋಧ ಪಕ್ಷಗಳ ಪ್ರತಿಕ್ರಿಯೆ

ದೇಶಾದ್ಯಂತ ಭುಗಿಲೆದ್ದಿದ್ದ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿರೋಧಿಸಿ ನಡೆದ ಭಾರೀ ಪ್ರತಿಭಟನೆಗೆ ಕೇಂದ್ರ ಸರ್ಕಾರ ತಲೆಬಾಗಿದೆ. ಇಂದು ಮಧ್ಯಾಹ್ನ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸಚಿವರಾದ ಜೆಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಸಿಜೆಪಿ ವಕ್ತಾರರ ಜೊತೆ ಮೂರನೇ ಸುತ್ತಿನ ಮಾತುಕತೆ ನಡೆಸುತ್ತಿದ್ದಾರೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ಕುರಿತು ವಿರೋಧ ಪಕ್ಷಗಳು ಹೇಳಿದ್ದೇನು? ಎಂಬುದರ ಮಾಹಿತಿ ಇಲ್ಲಿದೆ.

'ಪ್ರಜಾಪ್ರಭುತ್ವದ ಗೆಲುವು'; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿರೋಧ ಪಕ್ಷಗಳ ಪ್ರತಿಕ್ರಿಯೆ
Rahul Gandhi Priyanka Gandhi Akhilesh Yadav Arvind KejriwalImage Credit source: PTI
ಸುಷ್ಮಾ ಚಕ್ರೆ
|

Updated on:Jul 25, 2026 | 4:59 PM

Share

ನವದೆಹಲಿ, ಜುಲೈ 25: ಸಿಜೆಪಿ, ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು ಕೊನೆಗೂ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ (Dharmendra Pradhan Resign) ನೀಡಿದ್ದಾರೆ. ಈ ರಾಜೀನಾಮೆಯ ಬಗ್ಗೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷದ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ವಿರೋಧ ಪಕ್ಷಗಳ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್ ಏನೇನು ಹೇಳಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ಇನ್ನೂ 2 ಬೇಡಿಕೆ ಉಳಿದಿದೆ- ರಾಹುಲ್ ಗಾಂಧಿ:

“ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸುವ ನಿಟ್ಟಿನಲ್ಲಿ ಒಂದು ಬೃಹತ್ ಹೆಜ್ಜೆಯಾಗಿದೆ. ದೇಶಾದ್ಯಂತ ಇರುವ ವಿದ್ಯಾರ್ಥಿಗಳಿಗೆ ಅಭಿನಂದನೆಗಳು; ನಿಮ್ಮೆಲ್ಲರ ಬಗ್ಗೆ ನಮಗೆ ಹೆಮ್ಮೆಯಿದೆ. ಪ್ರಜಾಪ್ರಭುತ್ವ, ಸಂವಿಧಾನ ಮತ್ತು ತಮ್ಮ ಭವಿಷ್ಯವನ್ನು ರಕ್ಷಿಸಲು ರಸ್ತೆಗಿಳಿದು ಕಟ್ಟಿಬಿದ್ದು ನಿಂತ ಪ್ರತಿಯೊಬ್ಬ ಯುವಕನಿಗೆ, ಪ್ರತಿಯೊಬ್ಬ ವಿದ್ಯಾರ್ಥಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ 2 ಬೇಡಿಕೆಗಳು ಇನ್ನು ಉಳಿದಿವೆ. ಪ್ರಧಾನಮಂತ್ರಿಯವರು ವಿದ್ಯಾರ್ಥಿಗಳನ್ನು ಮತ್ತು ಭಾರತದ ಭವಿಷ್ಯವನ್ನು ಗೌರವಿಸಿ ಕ್ಷಮಾಪಣೆ ಕೇಳಬೇಕು, ಹಾಗೂ ವಿದ್ಯಾರ್ಥಿಗಳ ಮೇಲೆ ಹಿಂಸಾಚಾರ ನಡೆಸಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

“ಸಮಾಜದ ಇತರ ವರ್ಗಗಳಾದ—ರೈತರು, ಕಾರ್ಮಿಕರು, ಬಡವರು ಮತ್ತು ಈ ಸರ್ಕಾರದಿಂದ ತುಳಿತಕ್ಕೊಳಗಾದ ಹಾಗೂ ಹತ್ತಿಕ್ಕಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೆ—ತಮ್ಮ ಗೌರವಕ್ಕಾಗಿ ಸಂವಿಧಾನಾತ್ಮಕ ರೀತಿಯಲ್ಲಿ ಗಟ್ಟಿಯಾಗಿ ನಿಲ್ಲುವುದರಲ್ಲೇ ನಿಜವಾದ ಧೈರ್ಯವಿದೆ. ಈ ಸರ್ಕಾರವನ್ನು ಕಿತ್ತೊಗೆಯುವ ಸಮಯ ಬಂದಿದೆ. ಅಂಜಬೇಡಿ!” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕೊನೆಗೂ ಸರ್ಕಾರ ತಲೆಬಾಗಿದೆ ಎಂದ ಪ್ರಿಯಾಂಕಾ ಗಾಂಧಿ:

“ಇದು ಭಾರತದ ಯುವಜನತೆಗೆ ಸಿಕ್ಕ ಗೆಲುವು ಎಂದು ನಾನು ನಂಬುತ್ತೇನೆ, ಮತ್ತು ತಮ್ಮ ಹಕ್ಕುಗಳಿಗಾಗಿ ಹಠಕ್ಕೆ ಬಿದ್ದು ನಿಂತ ಪ್ರತಿಯೊಬ್ಬ ಯುವಕ-ಯುವತಿಯರ ಬಗ್ಗೆ ನನಗೆ ಹೆಮ್ಮೆಯಿದೆ. ಮಹಾತ್ಮ ಗಾಂಧೀಜಿಯವರು ನಮಗೆ ಕಲಿಸಿದ ಹಾದಿಯಲ್ಲೇ ಅವರು ಇದನ್ನು ಮಾಡಿದರು. ಅವರು ಇದನ್ನು ಸಂಪೂರ್ಣ ಅಹಿಂಸಾತ್ಮಕವಾಗಿಯೇ ಮಾಡಿದರು. ಅವರ ಮೇಲೆ ಪೆಲೆಟ್ ಗನ್‌ಗಳನ್ನು ಹಾರಿಸಲಾಯಿತು, ಅಶ್ರುವಾಯು ಬಳಸಲಾಯಿತು, ಲಾಠಿಗಳಿಂದ ಹೊಡೆಯಲಾಯಿತು. ಅವರಿಗೆ ಗಂಭೀರ ಗಾಯಗಳಾದವು. ಆದರೆ ಅವರು ಎಂದಿಗೂ ತಲೆಬಾಗಲಿಲ್ಲ. ಕೊನೆಗೆ ಮೋದಿ ಸರ್ಕಾರವೇ ಅವರ ಬೇಡಿಕೆಗೆ ತಲೆಬಾಗಬೇಕಾಯಿತು” ಎಂದು ಪ್ರಿಯಾಂಕಾ ಗಾಂಧಿ ಮೆಚ್ಚುಗೆ ಸೂಚಿಸಿದ್ದಾರೆ.

“ಈ ದೇಶದ ಪ್ರತಿಯೊಬ್ಬ ಆಡಳಿತಗಾರನಿಗೂ, ಈಗ ಮತ್ತು ಎಂದೆಂದಿಗೂ ಇದೊಂದು ದೊಡ್ಡ ಪಾಠ. ನೀವು ಜನರ ಇಚ್ಛೆಗೆ ಕಿವಿಗೊಡಲೇಬೇಕು. ಇದು ಪ್ರಜಾಪ್ರಭುತ್ವ, ಮತ್ತು ಜನರ ಇಚ್ಛೆಯೇ ಸರ್ವೋಚ್ಚ. ಅದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಇಂದು ನಮ್ಮ ವಿದ್ಯಾರ್ಥಿಗಳು ಮತ್ತು ಯುವಜನತೆ ಅದನ್ನು ಸಾಬೀತುಪಡಿಸಿದ್ದಾರೆ. ಭಾರತದಾದ್ಯಂತ, ತಾವು ಸರಿಯೆಂದು ನಂಬಿದ್ದಕ್ಕಾಗಿ ಅವರು ನಿಂತರು, ಮತ್ತು ಇದು ಅವರದೇ ಗೆಲುವು. ನಾನು ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕಾಂಗ್ರೆಸ್ ಪಕ್ಷದಲ್ಲಿರುವ ನಾವು ಅವರಿಗೆ ಸಾಧ್ಯವಿರುವ ಅತ್ಯಂತ ಬಲವಾದ ರೀತಿಯಲ್ಲಿ ಬೆಂಬಲ ನೀಡಲು ಶ್ರಮಿಸಿದ್ದೇವೆ. ರಾಹುಲ್ ಗಾಂಧಿ ಕಳೆದ 2-3 ವರ್ಷಗಳಿಗೂ ಹೆಚ್ಚು ಕಾಲದಿಂದ ಪೇಪರ್ ಲೀಕ್ ಮತ್ತು ಪರೀಕ್ಷಾ ಬಿಕ್ಕಟ್ಟಿನ ವಿಷಯವನ್ನು ಎತ್ತುತ್ತಲೇ ಬಂದಿದ್ದಾರೆ. ನಾನು ಅವರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ, ಏಕೆಂದರೆ ಅವರು ಈ ವಿಷಯವನ್ನು ಸತತವಾಗಿ ಧ್ವನಿಸಿ, ಕಾಂಗ್ರೆಸ್ ಪಕ್ಷ, ಎನ್‌ಎಸ್‌ಯುಐ (NSUI) ಮತ್ತು ಯೂತ್ ಕಾಂಗ್ರೆಸ್‌ನಲ್ಲಿದ್ದ ನಮ್ಮೆಲ್ಲರಿಗೂ ವಿದ್ಯಾರ್ಥಿಗಳ ಪರವಾಗಿ ನಿಲ್ಲಲು ಮಾತ್ರವಲ್ಲದೆ, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಮತ್ತು ಶಿಕ್ಷಣದಲ್ಲಿ ಅರ್ಥಪೂರ್ಣ ಸುಧಾರಣೆಗಳಿಗಾಗಿ ದೇಶಾದ್ಯಂತ ಚಳವಳಿಯನ್ನು ನಿರ್ಮಿಸಲು ಸ್ಪೂರ್ತಿಯಾಗಿದ್ದಾರೆ.” ಎಂದು ಪ್ರಿಯಾಂಕಾ ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿದ 2 ಪುಟಗಳ ರಾಜೀನಾಮೆ ಪತ್ರದಲ್ಲೇನಿದೆ?

ಪರೀಕ್ಷಾ ಅಕ್ರಮ ತಡೆಯಲು ಕಟ್ಟುನಿಟ್ಟಿನ ಕ್ರಮ ಅಗತ್ಯ- ಅಖಿಲೇಶ್ ಯಾದವ್:

“ಇದು ಹೊಸ ಪೀಳಿಗೆಗೆ ಸಿಕ್ಕ ಬೃಹತ್ ಜಯ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಸರ್ಕಾರ ಪ್ರತಿಯೊಂದರ ಕುರಿತೂ ಅತ್ಯಂತ ಗಂಭೀರವಾಗಿ ಆಲೋಚಿಸಬೇಕಾಗಿದೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಕಾಂಕ್ರೀಟ್ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.… ಇಂದಿನ ಕಾಲದಲ್ಲಿ ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು ಮತ್ತು ರಸ್ತೆಗಳ ಮೂಲಕ ಹರಡಿದ ಯುವಜನತೆಯ ಈ ಹೋರಾಟವು, ಅಸಂಖ್ಯಾತ ಮಿತ್ರಪಕ್ಷಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಪಕ್ಷವಾದ ಬಿಜೆಪಿಯನ್ನು ಅಂತಿಮವಾಗಿ ತಲೆಬಾಗುವಂತೆ ಮಾಡಿದೆ. ಇದು ಯುವಕರಿಗೆ ಸಿಕ್ಕ ದೊಡ್ಡ ಗೆಲುವು. ಆದರೆ, ಭವಿಷ್ಯದಲ್ಲಿ ಯಾವುದೇ ಪೇಪರ್ ಲೀಕ್ ಆಗದಂತೆ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ಯುವಕರಿಗೆ ಉದ್ಯೋಗ ಹಾಗೂ ಕೆಲಸದ ಅವಕಾಶಗಳನ್ನು ತೆರೆಯಬೇಕು ಎಂಬುದನ್ನು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಇದರಿಂದ ಕಲಿಯಬೇಕಾಗಿದೆ” ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.

ಪ್ರಜಾಪ್ರಭುತ್ವದ ಗೆಲುವು- ಅರವಿಂದ್ ಕೇಜ್ರಿವಾಲ್:

“ನಿಮ್ಮೆಲ್ಲರಿಗೂ ಅಭಿನಂದನೆಗಳು. ನಮ್ಮ ದೇಶದ ಯುವಜನತೆಗೆ ಅಭಿನಂದನೆಗಳು. ನಿಮ್ಮ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿರುವುದು ಅತ್ಯಂತ ಸಂತೋಷದ ವಿಷಯ. ಧರ್ಮೇಂದ್ರ ಪ್ರಧಾನ್ ಕೊನೆಗೂ ರಾಜೀನಾಮೆ ನೀಡಬೇಕಾಯಿತು. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಸಿಕ್ಕ ಬೃಹತ್ ಗೆಲುವು. ನಮ್ಮ ದೇಶದ ಜನರಿಗೆ ಪ್ರಜಾಪ್ರಭುತ್ವದ ಮೇಲಿದ್ದ ನಂಬಿಕೆಯೇ ಕುಸಿಯಲು ತೊಡಗಿತ್ತು. ಸರ್ಕಾರಗಳು ಜನರ ಧ್ವನಿಗೆ ಕಿವಿಗೊಡುವುದಿಲ್ಲ ಎಂದೇ ಅವರು ಭಾವಿಸಿದ್ದರು. ಜನರು ಸರ್ಕಾರದ ಮುಂದೆ ಕೈಮುಗಿದು ಮನವಿ ಮಾಡುತ್ತಿದ್ದರು, ಧ್ವನಿ ಎತ್ತುತ್ತಿದ್ದರು, ಆದರೂ ಸರ್ಕಾರ ಎಂದಿಗೂ ಆಲಿಸುತ್ತಿರಲಿಲ್ಲ. ಈಗ ಕೊನೆಗೂ ಸರ್ಕಾರ ಮಣಿಯಬೇಕಾಯಿತು” ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: Dharmendra Pradhan: ಸಿಜೆಪಿ ಬೇಡಿಕೆಗೆ ಮಣಿದ ಸರ್ಕಾರ; ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಹೇಳಿಕೆ:

“ಇದು ದೇಶದ ಯುವಶಕ್ತಿ ಮತ್ತು ವಿದ್ಯಾರ್ಥಿ ಚಳವಳಿಗೆ ಸಿಕ್ಕ ಮೊದಲ ಜಯ. ದೇಶದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಕೋಟಿ ಕೋಟಿ ಅಭಿನಂದನೆಗಳು. ಇದು ಮೊದಲ ಜಯ, ಮೊದಲ ಹೆಜ್ಜೆ. ಬಿಜೆಪಿ ಸರ್ಕಾರದ ಅಹಂಕಾರ ಖಂಡಿತವಾಗಿಯೂ ಮುರಿದುಬಿದ್ದಿದೆ. ಆದರೆ ಅದು ಸಂಪೂರ್ಣವಾಗಿ ಶಮನವಾಗುವವರೆಗೆ ಮತ್ತು ಶಿಕ್ಷಣ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಸುಧಾರಣೆಯಾಗುವವರೆಗೆ, ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ…” ಎಂದು ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಹೇಳಿದ್ದಾರೆ.

ಎಎಪಿ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದೇನು?:

“ಧರ್ಮೇಂದ್ರ ಪ್ರಧಾನ್ ಅವರು ಸ್ವಯಂಪ್ರೇರಿತವಾಗಿ ರಾಜೀನಾಮೆ ಸಲ್ಲಿಸಿಲ್ಲ. ದೇಶದ ಮಕ್ಕಳು, ದೇಶದ ವಿದ್ಯಾರ್ಥಿಗಳು ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆಯುವಂತೆ ಮಾಡಿದ್ದಾರೆ. ಇದು ನಿಜಕ್ಕೂ ಸ್ವಯಂಪ್ರೇರಿತ ರಾಜೀನಾಮೆಯಾಗಿದ್ದರೆ, ನೀಟ್ ಪೇಪರ್ ಲೀಕ್ ಸಂಭವಿಸಿದ ತಕ್ಷಣವೇ ನಡೆಯಬೇಕಿತ್ತು. ದೇಶಕ್ಕೆ ಈಗ ಬೃಹತ್ ಶಿಕ್ಷಣ ಕ್ರಾಂತಿಯ ಅಗತ್ಯವಿದೆ” ಎಂದು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Sat, 25 July 26

Follow Us
ಕರ್ನಾಟಕ ಬಿಜೆಪಿ ಕಚೇರಿಗೆ ಪೊಲೀಸ್ ಬಿಗಿ ಭದ್ರತೆ, ಕಾರಣವೇನು?
ಕರ್ನಾಟಕ ಬಿಜೆಪಿ ಕಚೇರಿಗೆ ಪೊಲೀಸ್ ಬಿಗಿ ಭದ್ರತೆ, ಕಾರಣವೇನು?
ಖಾಸಗಿ ಶಾಲೆಗಳು ಹಳ್ಳಿ ಶಾಲೆಗಳನ್ನು ದತ್ತು ಪಡೆಯುವಂತೆ ಸಿಎಂ ಕರೆ
ಖಾಸಗಿ ಶಾಲೆಗಳು ಹಳ್ಳಿ ಶಾಲೆಗಳನ್ನು ದತ್ತು ಪಡೆಯುವಂತೆ ಸಿಎಂ ಕರೆ
ವಸತಿ ಶಾಲೆಯ ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ ಭೇದಿ!
ವಸತಿ ಶಾಲೆಯ ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ ಭೇದಿ!
'ಪೇಪರ್ ಲೀಕ್' ಮಾಸ್ಟರ್‌ಮೈಂಡ್ ವಿಜಯೇಂದ್ರ ಗುಪ್ತಾ ಬಿಹಾರದಲ್ಲಿ ಬಂಧನ
'ಪೇಪರ್ ಲೀಕ್' ಮಾಸ್ಟರ್‌ಮೈಂಡ್ ವಿಜಯೇಂದ್ರ ಗುಪ್ತಾ ಬಿಹಾರದಲ್ಲಿ ಬಂಧನ
ದೇಶವಿರೋಧಿಗಳ ಕೈಗೊಂಬೆಯಾಗದಿರಿ:ಯುವಜನತೆಗೆ ಕರೆನೀಡಿದ ರವಿಶಂಕರ್ ಗುರೂಜಿ
ದೇಶವಿರೋಧಿಗಳ ಕೈಗೊಂಬೆಯಾಗದಿರಿ:ಯುವಜನತೆಗೆ ಕರೆನೀಡಿದ ರವಿಶಂಕರ್ ಗುರೂಜಿ
ನೀಟ್ ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಭಾಗಿಯಾಗಿರೋದು ಪತ್ತೆ
ನೀಟ್ ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಭಾಗಿಯಾಗಿರೋದು ಪತ್ತೆ
8ನೇ ಶತಮಾನದ ಅಪರೂಪದ 'ಹುಲಿ ವೀರಗಲ್ಲು' ಶಾಸನ ಪತ್ತೆ
8ನೇ ಶತಮಾನದ ಅಪರೂಪದ 'ಹುಲಿ ವೀರಗಲ್ಲು' ಶಾಸನ ಪತ್ತೆ
ಥಣಿಸಂದ್ರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಸಚಿವ ಕೃಷ್ಣಭೈರೇಗೌಡ ಚಾಲನೆ
ಥಣಿಸಂದ್ರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಸಚಿವ ಕೃಷ್ಣಭೈರೇಗೌಡ ಚಾಲನೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ 'ಸಿಜೆಪಿ' ನೀಡಿದ ಡೆಡ್‌ಲೈನ್ ಅಂತ್ಯ
ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ 'ಸಿಜೆಪಿ' ನೀಡಿದ ಡೆಡ್‌ಲೈನ್ ಅಂತ್ಯ
ಮತ್ತೊಂದು ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಮತ್ತೊಂದು ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ