AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿದ 2 ಪುಟಗಳ ರಾಜೀನಾಮೆ ಪತ್ರದಲ್ಲೇನಿದೆ?

ನೀಟ್ (NEET-UG) 2026ರ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಿಜೆಪಿ ನೇತೃತ್ವದಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇಂದು (ಜುಲೈ 25) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ವೇಳೆ ಅವರು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ತಮ್ಮ ರಾಜೀನಾಮೆ ಪತ್ರವನ್ನು ಹಂಚಿಕೊಂಡಿದ್ದಾರೆ. 2 ಪುಟಗಳಿರುವ ಈ ರಾಜೀನಾಮೆ ಪತ್ರದಲ್ಲಿ ಹಲವು ವಿಚಾರಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ವಿದ್ಯಾರ್ಥಿಗಳ ಹಿತರಕ್ಷಣೆ ಮತ್ತು ದೇಶದ ಏಕತೆಯನ್ನು ಕಾಯ್ದುಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ರಾಜೀನಾಮೆ ಪತ್ರದ ಪೂರ್ತಿ ವಿವರ ಇಲ್ಲಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿದ 2 ಪುಟಗಳ ರಾಜೀನಾಮೆ ಪತ್ರದಲ್ಲೇನಿದೆ?
Dharmendra PradhanImage Credit source: PTI
ಸುಷ್ಮಾ ಚಕ್ರೆ
|

Updated on: Jul 25, 2026 | 4:02 PM

Share

ನವದೆಹಲಿ, ಜುಲೈ 25: ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿ (NEET UG Paper Leak) ತಿಂಗಳುಗಳೇ ಕಳೆದಿವೆ. ಮರುಪರೀಕ್ಷೆಯೂ ನಡೆದು ಫಲಿತಾಂಶ ಪ್ರಕಟವಾಗಿದೆ. ಆದರೆ, ಈ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಕೇಂದ್ರ ಸರ್ಕಾರ ನೈತಿಕ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಕೊನೆಗೂ ಈ ಪ್ರತಿಭಟನೆಗೆ ಮಣಿದ ಸರ್ಕಾರ ಪ್ರತಿಭಟನಾಕಾರರ ಬೇಡಿಕೆಗಳ ಈಡೇರಿಕೆಗೆ ಒಪ್ಪಿಕೊಂಡಿದೆ. ಇಂದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ (Dharmendra Pradhan Resign) ನೀಡಿದ್ದಾರೆ. ಈ ಮೂಲಕ ಸಿಜೆಪಿಯ ಬೇಡಿಕೆಗಳೆಲ್ಲವೂ ಈಡೇರಿದಂತಾಗಿದೆ. 2 ಪುಟಗಳ ರಾಜೀನಾಮೆ ಪತ್ರವನ್ನು ಪ್ರಧಾನಮಂತ್ರಿಗಳಿಗೆ ಸಲ್ಲಿಸಿರುವ ಧರ್ಮೇಂದ್ರ ಪ್ರಧಾನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಸಂಗತಿಗಳ ಬಗ್ಗೆ ಪೂರ್ತಿ ವಿವರ ಇಲ್ಲಿದೆ.

ರಾಜೀನಾಮೆ ಪತ್ರದಲ್ಲೇನಿದೆ?:

“ನನ್ನ ಯುವ ಸ್ನೇಹಿತರೇ, 4 ದಶಕಗಳಿಗೂ ಹೆಚ್ಚು ಸಮಯದಿಂದ ನಾನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸುಧಾರಣೆಯ ಕಾರ್ಯಕ್ಕಾಗಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಬಲವಾದ, ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಯು ಒಂದು ಸದೃಢ ರಾಷ್ಟ್ರದ ಅಡಿಪಾಯವಾಗಿದೆ ಎಂದು ನಾನು ಯಾವಾಗಲೂ ನಂಬಿದ್ದೇನೆ. ದೇಶದ ಯುವ ಪೀಳಿಗೆಯ ಆಶೋತ್ತರಗಳು, ಭಾವನೆಗಳು ಮತ್ತು ನಿರೀಕ್ಷೆಗಳನ್ನು ನಾನು ಗೌರವಿಸುತ್ತೇನೆ. ಯುವಕರ ಕನಸುಗಳನ್ನು ನನಸು ಮಾಡುವುದು ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ತಮ್ಮ ಸರ್ಕಾರದ ನೈತಿಕ ಬದ್ಧತೆಯಾಗಿದೆ” ಎಂದು ರಾಜೀನಾಮೆ ಪತ್ರದಲ್ಲಿ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಕೃತಜ್ಞತೆ:

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶ ಸೇವೆ ಮಾಡಲು ತಮಗೆ ಅವಕಾಶ ನೀಡಿದ್ದಕ್ಕಾಗಿ ಧರ್ಮೇಂದ್ರ ಪ್ರಧಾನ್ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ” ಪ್ರಧಾನಮಂತ್ರಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ರಾಷ್ಟ್ರ ಸೇವೆ ಮಾಡಲು ಅವಕಾಶ ನೀಡಿದಕ್ಕಾಗಿ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆದರೆ, ಮೇ 3, 2026ರಂದು ನಡೆದ ನೀಟ್-ಯುಜಿ (NEET-UG) ಪರೀಕ್ಷೆಗೆ ಸಂಬಂಧಿಸಿದಂತೆ ಅಕ್ರಮಗಳು ಬೆಳಕಿಗೆ ಬಂದವು. ಆ ವಿಷಯವನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸಿದ ಭಾರತ ಸರ್ಕಾರವು ತನಿಖೆಯನ್ನು ಸಿಬಿಐಗೆ (CBI) ಹಸ್ತಾಂತರಿಸಿತು, ಪರೀಕ್ಷೆಯನ್ನು ರದ್ದುಗೊಳಿಸಿತು ಮತ್ತು ಮರುಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿತು. ಇದರೊಂದಿಗೆ, ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಯಿತು” ಎಂದು ಹಳೆಯ ಘಟನೆಯನ್ನು ನೆನಪಿಸಿದ್ದಾರೆ.

ಇದನ್ನೂ ಓದಿ: Dharmendra Pradhan: ಸಿಜೆಪಿ ಬೇಡಿಕೆಗೆ ಮಣಿದ ಸರ್ಕಾರ; ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

“ಈ ಅವಧಿಯುದ್ದಕ್ಕೂ, 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಗಮವಾಗಿ ಪರೀಕ್ಷೆಯನ್ನು ನಡೆಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ನಾವು ಇಡೀ ಸರ್ಕಾರದ ಸಮಗ್ರ ಸರ್ಕಾರಿ ಚೌಕಟ್ಟಿನ ಮೂಲಕ ಕೆಲಸ ಮಾಡಿದ್ದೇವೆ. ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರಗಳು ಅದರಲ್ಲೂ ವಿಶೇಷವಾಗಿ ಜಿಲ್ಲಾಡಳಿತಗಳು ಪ್ರಮುಖ ಪಾತ್ರ ವಹಿಸಿವೆ. ವಿದ್ಯಾರ್ಥಿಗಳು ಮತ್ತು ಪೋಷಕರ ಸಹಕಾರದಿಂದ ಜೂನ್ 21ರಂದು ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಮೊದಲ ದಿನದಿಂದಲೂ, ನಾನು ಈ ವಿಷಯದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ ಮತ್ತು ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಎಂದಿಗೂ ಬೆನ್ನು ಹಾಕಿ ಹೋಗಿಲ್ಲ. ಪರೀಕ್ಷಾ ಮಾಫಿಯಾದಿಂದಾಗಿ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯವು ಹಾಳಾಗಬಾರದು ಮತ್ತು ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗಬಾರದು ಎಂಬುದು ನನ್ನ ಸಂಕಲ್ಪವಾಗಿತ್ತು” ಎಂದಿದ್ದಾರೆ.

“ಜುಲೈ 16ರಂದು ಪ್ರಕಟವಾದ ನೀಟ್-ಯುಜಿ ಫಲಿತಾಂಶಗಳು ತೃಪ್ತಿಕರವಾಗಿದ್ದು, ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದ್ದಾರೆ. ಆದರೆ, ಈ ಸಮಯದಲ್ಲಿಯೂ ಸಹ, ಜವಾಬ್ದಾರಿಯುತ ಸ್ಥಾನಗಳಲ್ಲಿರುವ ವ್ಯಕ್ತಿಗಳು ಅಡೆತಡೆಗಳನ್ನು ಸೃಷ್ಟಿಸಲು ಮತ್ತು ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸಲು ಯತ್ನಿಸಿದ್ದು ನನಗೆ ತೀವ್ರ ನೋವನ್ನುಂಟುಮಾಡಿದೆ. ನಮ್ಮ ಪ್ರಜಾಪ್ರಭುತ್ವದ ಶಕ್ತಿಯ ಮೇಲೆ ನಾನು ಯಾವಾಗಲೂ ಅಚಲವಾದ ನಂಬಿಕೆಯನ್ನು ಹೊಂದಿದ್ದೇನೆ. ಯುವಜನತೆಯ ಆಶೋತ್ತರಗಳು, ಕನಸುಗಳು ಹಾಗೂ ನಿರೀಕ್ಷೆಗಳನ್ನು ಗೌರವಿಸಿದ್ದೇನೆ. ಅವರು ಭಾರತದ ಭವಿಷ್ಯ ಮಾತ್ರವಲ್ಲ; ಹೊಸ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಮಾರ್ಗದರ್ಶಕರು, ನಿರ್ಮಾತೃಗಳು ಮತ್ತು ಶಿಲ್ಪಿಗಳು” ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ನೋವಿನ ದಿನಗಳವು:

“ಕಳೆದ 10 ದಿನಗಳಿಂದ ನಡೆಯುತ್ತಿರುವ ಘಟನೆಗಳಿಂದ ನನಗೆ ತೀವ್ರ ನೋವಾಗಿದೆ. ಇದು ನನಗೆ ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ. ಭಾರತದ ಯುವಶಕ್ತಿಯೇ ಈ ರಾಷ್ಟ್ರದ ನಿಜವಾದ ಶಕ್ತಿ. ದೇಶದ ಯುವಜನತೆಯನ್ನು ಗೊಂದಲದ ಬಲೆಯಲ್ಲಿ ಸಿಲುಕಿಸಲು ಬಿಡದಿರುವುದು ನನ್ನ ಸಂಕಲ್ಪವಾಗಿದೆ. ಜಂತರ್ ಮಂತರ್‌ನಲ್ಲಿ ಹಾಗೂ ದೇಶಾದ್ಯಂತ ಇರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೇಶವಿರೋಧಿ ಶಕ್ತಿಗಳು ಇದರ ಲಾಭ ಪಡೆಯುವುದನ್ನು ತಡೆಯುವ, ರಾಷ್ಟ್ರೀಯ ಏಕತೆಯನ್ನು ಕಾಯ್ದುಕೊಳ್ಳುವ, ಯಾವುದೇ ಭಾರತೀಯ ವಿದ್ಯಾರ್ಥಿಯ ಭವಿಷ್ಯವು ಕಾನೂನು ಸಂಕೀರ್ಣತೆಗಳಲ್ಲಿ ಸಿಲುಕಿಕೊಳ್ಳದಂತೆ ನೋಡಿಕೊಳ್ಳುವ ಮತ್ತು ನಮ್ಮ ಮಕ್ಕಳು ತಮ್ಮ ಸಮಯವನ್ನು ಅಧ್ಯಯನಕ್ಕೆ ಮೀಸಲಿಟ್ಟು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳುವುದರ ಮೇಲೆ ಗಮನ ಹರಿಸಲು ಅವಕಾಶ ನೀಡುವ ಉದ್ದೇಶದಿಂದ ನಾನು ಪ್ರಧಾನಮಂತ್ರಿಯವರಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿದ್ಯಾರ್ಥಿಗಳ ಹಿತಕ್ಕಿಂತ ರಾಜಕೀಯವೇ ಮುಖ್ಯ, ನೀಟ್ ವಿವಾದಕ್ಕೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿರುಗೇಟು

“ಆತ್ಮೀಯ ಪ್ರಧಾನಮಂತ್ರಿಯವರಿಗೆ ಅವರ ಮಾರ್ಗದರ್ಶನ, ನಂಬಿಕೆ ಮತ್ತು ನಿರಂತರ ಬೆಂಬಲಕ್ಕಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ನನ್ನ ಸಂಪುಟ ಸಹೋದ್ಯೋಗಿಗಳಿಗೆ, ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಾಗೂ ಯಾರೊಂದಿಗೆ ಕೆಲಸ ಮಾಡುವ ಭಾಗ್ಯ ನನಗೆ ಸಿಕ್ಕಿತೋ ಆ ಎಲ್ಲಾ ವ್ಯಕ್ತಿಗಳಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ. ರಾಷ್ಟ್ರ ಸೇವೆಯೇ ನನ್ನ ಜೀವನದ ಅತ್ಯುನ್ನತ ಆದ್ಯತೆಯಾಗಿದೆ. ಈ ಕಾರ್ಯಕ್ಕೆ ನಾನು ಯಾವಾಗಲೂ ಮುಡಿಪಾಗಿರುತ್ತೇನೆ. ಭಗವಾನ್ ಜಗನ್ನಾಥನ ಆಶೀರ್ವಾದದೊಂದಿಗೆ, ಭವಿಷ್ಯದಲ್ಲೂ ಭಾರತಾಂಬೆಯ, ಒಡಿಶಾದ ಜನರ ಮತ್ತು ದೇಶದ ಯುವಜನತೆಯ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಿರುವ ಎಲ್ಲಾ ರೀತಿಯಲ್ಲೂ ನನ್ನನ್ನು ಅರ್ಪಿಸಿಕೊಳ್ಳುವುದನ್ನು ಮುಂದುವರಿಸುತ್ತೇನೆ” ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕರ್ನಾಟಕ ಬಿಜೆಪಿ ಕಚೇರಿಗೆ ಪೊಲೀಸ್ ಬಿಗಿ ಭದ್ರತೆ, ಕಾರಣವೇನು?
ಕರ್ನಾಟಕ ಬಿಜೆಪಿ ಕಚೇರಿಗೆ ಪೊಲೀಸ್ ಬಿಗಿ ಭದ್ರತೆ, ಕಾರಣವೇನು?
ಖಾಸಗಿ ಶಾಲೆಗಳು ಹಳ್ಳಿ ಶಾಲೆಗಳನ್ನು ದತ್ತು ಪಡೆಯುವಂತೆ ಸಿಎಂ ಕರೆ
ಖಾಸಗಿ ಶಾಲೆಗಳು ಹಳ್ಳಿ ಶಾಲೆಗಳನ್ನು ದತ್ತು ಪಡೆಯುವಂತೆ ಸಿಎಂ ಕರೆ
ವಸತಿ ಶಾಲೆಯ ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ ಭೇದಿ!
ವಸತಿ ಶಾಲೆಯ ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಂತಿ ಭೇದಿ!
ದೇಶವಿರೋಧಿಗಳ ಕೈಗೊಂಬೆಯಾಗದಿರಿ:ಯುವಜನತೆಗೆ ಕರೆನೀಡಿದ ರವಿಶಂಕರ್ ಗುರೂಜಿ
ದೇಶವಿರೋಧಿಗಳ ಕೈಗೊಂಬೆಯಾಗದಿರಿ:ಯುವಜನತೆಗೆ ಕರೆನೀಡಿದ ರವಿಶಂಕರ್ ಗುರೂಜಿ
ನೀಟ್ ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಭಾಗಿಯಾಗಿರೋದು ಪತ್ತೆ
ನೀಟ್ ಪ್ರತಿಭಟನೆಯಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಭಾಗಿಯಾಗಿರೋದು ಪತ್ತೆ
8ನೇ ಶತಮಾನದ ಅಪರೂಪದ 'ಹುಲಿ ವೀರಗಲ್ಲು' ಶಾಸನ ಪತ್ತೆ
8ನೇ ಶತಮಾನದ ಅಪರೂಪದ 'ಹುಲಿ ವೀರಗಲ್ಲು' ಶಾಸನ ಪತ್ತೆ
ಥಣಿಸಂದ್ರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಸಚಿವ ಕೃಷ್ಣಭೈರೇಗೌಡ ಚಾಲನೆ
ಥಣಿಸಂದ್ರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಸಚಿವ ಕೃಷ್ಣಭೈರೇಗೌಡ ಚಾಲನೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ 'ಸಿಜೆಪಿ' ನೀಡಿದ ಡೆಡ್‌ಲೈನ್ ಅಂತ್ಯ
ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ 'ಸಿಜೆಪಿ' ನೀಡಿದ ಡೆಡ್‌ಲೈನ್ ಅಂತ್ಯ
ಮತ್ತೊಂದು ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಮತ್ತೊಂದು ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಈ ದಿನ ಯಾರಿಗೆ ಸಾಲಬಾಧೆಯಿಂದ ಮುಕ್ತಿ, ಯಾರಿಗೆ ಆರ್ಥಿಕ ಲಾಭ?
ಈ ದಿನ ಯಾರಿಗೆ ಸಾಲಬಾಧೆಯಿಂದ ಮುಕ್ತಿ, ಯಾರಿಗೆ ಆರ್ಥಿಕ ಲಾಭ?