ಯಮುನಾ ನದಿ ಮಾಲಿನ್ಯ ಪ್ರಕರಣ; ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ 5 ಕೋಟಿ ದಂಡ ಮರುಪಾವತಿಸಲು ಸುಪ್ರೀಂ ಕೋರ್ಟ್ ಆದೇಶ

ಶ್ರೀ ಶ್ರೀ ರವಿಶಂಕರ್ ನೇತೃತ್ವದ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಗೆ ಸುಪ್ರೀಂ ಕೋರ್ಟ್‌ನಿಂದ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. 2016ರಲ್ಲಿ ದೆಹಲಿಯ ಯಮುನಾ ನದಿಯ ಪ್ರವಾಹ ಪ್ರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಪಾವತಿಸಲಾಗಿದ್ದ 5 ಕೋಟಿ ರೂ. ದಂಡದ ಮೊತ್ತವನ್ನು ಹಿಂತಿರುಗಿಸುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶಿಸಿದೆ. ಈ ಕಾರ್ಯಕ್ರಮವು ಯಮುನಾ ನದಿಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿ ಮಾಡಿದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ನೇರ ಸಾಕ್ಷ್ಯಾಧಾರಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಯಮುನಾ ನದಿ ಮಾಲಿನ್ಯ ಪ್ರಕರಣ; ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ 5 ಕೋಟಿ ದಂಡ ಮರುಪಾವತಿಸಲು ಸುಪ್ರೀಂ ಕೋರ್ಟ್ ಆದೇಶ
Ravishankar Guruji
Image Credit source: PTI

Updated on: Aug 22, 2026 | 5:45 PM

ನವದೆಹಲಿ, ಆಗಸ್ಟ್ 22: ಶ್ರೀ ಶ್ರೀ ರವಿಶಂಕರ್ ನೇತೃತ್ವದ ‘ಆರ್ಟ್ ಆಫ್ ಲಿವಿಂಗ್’ (Art of Living) ಸಂಸ್ಥೆಗೆ ಸುಪ್ರೀಂ ಕೋರ್ಟ್‌ನಿಂದ (Supreme Court) ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. 2016ರಲ್ಲಿ ದೆಹಲಿಯ ಯಮುನಾ ನದಿಯ ಪ್ರವಾಹ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಿಂದ ಪರಿಸರಕ್ಕೆ ಹಾನಿಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪಾವತಿಸಿದ್ದ 5 ಕೋಟಿ ರೂ. ದಂಡದ ಮೊತ್ತವನ್ನು ಹಿಂತಿರುಗಿಸುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶಿಸಿದೆ.

ಯಮುನಾ ನದಿಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಈ ಸಾಂಸ್ಕೃತಿಕ ಉತ್ಸವದಿಂದ ಹಾನಿಯಾಗಿದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ನೇರ ಸಾಕ್ಷ್ಯಾಧಾರಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆದ್ದರಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಡಿಯಲ್ಲಿ ನೋಂದಾಯಿತ ಸಾರ್ವಜನಿಕ ಧರ್ಮದರ್ಶಿ ಟ್ರಸ್ಟ್ ಆಗಿರುವ ‘ವ್ಯಕ್ತಿ ವಿಕಾಸ ಕೇಂದ್ರ’ ಪಾವತಿಸಿದ್ದ ದಂಡದ ಮೊತ್ತವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರವು (DDA) ಮರಳಿ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಇದನ್ನೂ ಓದಿ: Independence day 2026: ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಆರ್ಟ್ ಆಫ್ ಲಿವಿಂಗ್​ನ ರವಿಶಂಕರ್ ಗುರೂಜಿ ಮಾತು

ಪ್ರಕರಣದ ಹಿನ್ನೆಲೆ:

2016ರ ಮಾರ್ಚ್‌ನಲ್ಲಿ ನಡೆದ ‘ವಿಶ್ವ ಸಾಂಸ್ಕೃತಿಕ ಉತ್ಸವ’ದ (World Culture Festival) ಸಿದ್ಧತೆಗಳ ಸಮಯದಲ್ಲಿ ಯಮುನಾ ನದಿ ತೀರದ ಪರಿಸರಕ್ಕೆ ಹಾನಿಯಾಗಿದೆ ಎಂದು ಉಲ್ಲೇಖಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು (NGT) 2017ರ ಡಿಸೆಂಬರ್‌ನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ 5 ಕೋಟಿ ರೂ. ದಂಡ ವಿಧಿಸಿತ್ತು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸಂಪೂರ್ಣ ದಂಡದ ಮೊತ್ತವನ್ನು ಠೇವಣಿ ಮಾಡಲು ಒಪ್ಪಿಕೊಂಡ ನಂತರವೇ 2016ರ ಮಾರ್ಚ್ 11ರಿಂದ 13ರವರೆಗೆ ಯಮುನಾ ತೀರದಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಸಲು ಎನ್‌ಜಿಟಿ ಅನುಮತಿ ನೀಡಿತ್ತು.

ಕಾರ್ಯಕ್ರಮದ ಉದ್ಘಾಟನಾ ದಿನವಾದ 2016ರ ಮಾರ್ಚ್ 11ರಂದು ಆರ್ಟ್ ಆಫ್ ಲಿವಿಂಗ್ ದಂಡ ಪಾವತಿಸಲು 4 ವಾರಗಳ ಕಾಲಾವಕಾಶ ಕೋರಿತ್ತು. ಅಂದು 25 ಲಕ್ಷ ರೂ. ಪಾವತಿಸಲು ಅವಕಾಶ ನೀಡಿದ್ದ ಎನ್‌ಜಿಟಿ, ಬಾಕಿ 4.75 ಕೋಟಿ ರೂ. ಪಾವತಿಸಲು 3 ವಾರಗಳ ಸಮಯ ನೀಡಿತ್ತು. 25 ಲಕ್ಷ ರೂ. ಪಾವತಿಸಿದ ನಂತರ, ಬಾಕಿ ಮೊತ್ತವನ್ನು ನಗದು ಪಾವತಿಯ ಬದಲಿಗೆ ‘ಬ್ಯಾಂಕ್ ಗ್ಯಾರಂಟಿ’ ಎಂದು ಪರಿಗಣಿಸಬೇಕು ಹಾಗೂ ಈ ಹಣವನ್ನು ಅದೇ ಪ್ರದೇಶದಲ್ಲಿ ಜೀವವೈವಿಧ್ಯ ಉದ್ಯಾನವನವನ್ನು ನಿರ್ಮಿಸಲು ಬಳಸಬೇಕು ಎಂದು ಆರ್ಟ್ ಆಫ್ ಲಿವಿಂಗ್ ಕೋರಿತ್ತು.

ಇದನ್ನೂ ಓದಿ: Video: ನೀಟ್ ಪರೀಕ್ಷಾ ಅಕ್ರಮ; ‘ಹಕ್ಕುಗಳಿಗಾಗಿ ಹೋರಾಡಿ, ಆದರೆ ವಿವೇಚನೆ ಕಳೆದುಕೊಳ್ಳಬೇಡಿ’ – ರವಿಶಂಕರ್ ಗುರೂಜಿ

ಅಂತಿಮವಾಗಿ ಸಂಪೂರ್ಣ ದಂಡವನ್ನು ಠೇವಣಿ ಮಾಡಿದರೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಎನ್‌ಜಿಟಿಯ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದು ಸುದೀರ್ಘ ಕಾನೂನು ಹೋರಾಟಕ್ಕೆ ಕಾರಣವಾಗಿತ್ತು.


ಸುಪ್ರೀಂ ಕೋರ್ಟ್‌ ಹೇಳಿದ್ದೇನು?:

ಯಮುನಾ ನದಿ ತೀರದ ಪ್ರವಾಹ ಪ್ರದೇಶವನ್ನು ರಕ್ಷಿಸುವ ತನ್ನ ಕರ್ತವ್ಯದಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (DDA) ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಎನ್‌ಜಿಟಿ ನೀಡಿದ್ದ ನಿರ್ದೇಶನಗಳಂತೆ ಯಮುನಾ ಪ್ರವಾಹ ಪ್ರದೇಶದ ಪುನರುಜ್ಜೀವನ ಮತ್ತು ಮರುಸ್ಥಾಪನೆ ಕಾರ್ಯವನ್ನು ಡಿಡಿಎ ಮುಂದುವರಿಸಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ. ಯಾವುದೇ ನೇರ ಸಾಕ್ಷ್ಯಗಳಿಲ್ಲದ ಕಾರಣ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿರುವ ಸುಪ್ರೀಂ ಕೋರ್ಟ್, ಆ ಪ್ರದೇಶದ ನಿರ್ವಹಣೆಯ ಜವಾಬ್ದಾರಿಯನ್ನು ಡಿಡಿಎ ಮೇಲೆಯೇ ಹೊರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us