Swami Prasad Maurya: ಸಮಾಜವಾದಿ ಪಕ್ಷ ತೊರೆದ ಸ್ವಾಮಿ ಪ್ರಸಾದ್ ಮೌರ್ಯ, ನೈತಿಕತೆ ಆಧಾರದ ಮೇಲೆ ರಾಜೀನಾಮೆ

|

Updated on: Feb 20, 2024 | 3:02 PM

ಸ್ವಾಮಿ ಪ್ರಸಾದ್ ಮೌರ್ಯ ಸಮಾಜವಾದಿ ಪಕ್ಷದಿಂದ ಹೊರಬಂದಿದ್ದಾರೆ. ಅವರು ರಾಷ್ಟ್ರೀಯ ಶೋಷಿತ್ ಸಮಾಜ ಪಕ್ಷ ಎಂಬ ಹೊಸ ಪಕ್ಷವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ, ಮಾಜಿ ಸಮಾಜವಾದಿ ಪಕ್ಷದ ಸದಸ್ಯರನ್ನು ಆಕರ್ಷಿಸುವ ಮತ್ತು ಅಖಿಲೇಶ್ ಯಾದವ್‌ಗೆ ಸಂಭಾವ್ಯ ಸವಾಲನ್ನು ಒಡ್ಡುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

Swami Prasad Maurya: ಸಮಾಜವಾದಿ ಪಕ್ಷ ತೊರೆದ ಸ್ವಾಮಿ ಪ್ರಸಾದ್ ಮೌರ್ಯ, ನೈತಿಕತೆ ಆಧಾರದ ಮೇಲೆ ರಾಜೀನಾಮೆ
ಸ್ವಾಮಿ ಪ್ರಸಾದ್ ಮೌರ್ಯ
Follow us on

ಸಮಾಜವಾದಿ ಪಕ್ಷ(Samajwadi Party)ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ ಒಂದು ವಾರದ ನಂತರ, ಸ್ವಾಮಿ ಪ್ರಸಾದ್ ಮೌರ್ಯ(Swami Prasad Maurya) ಮಂಗಳವಾರ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ರಾಜೀನಾಮೆ ನೀಡಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್ ಅವರೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದ ಸ್ವಾಮಿ ಪ್ರಸಾದ್ ಮೌರ್ಯ ಪಕ್ಷ ತೊರೆದಿದ್ದಾರೆ. ಅವರು ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಪತ್ರವನ್ನು ಪೋಸ್ಟ್​ ಮಾಡಿದ್ದಾರೆ.

ನನಗೆ ಸ್ವಚ್ಛ ರಾಜಕಾರಣದಲ್ಲಿ ನಂಬಿಕೆ ಇದೆ, ನಾನು ಅಖಿಲೇಶ್​ ಯಾದವ್ ಅವರನ್ನು ನೋಡಿದ್ದೇನೆ, ಅವರು ಸಮಾಜವಾದಿ ಸಿದ್ಧಾಂತಕ್ಕೆ ವಿರುದ್ಧವಾಗಿದ್ದರು. ಮುಲಾಯಂ ಸಿಂಗ್ ಅವರೊಂದಿಗೆ ಕೆಲಸ ಮಾಡಿದ ಅನುಭವವೂ ನನಗೆ ಇದೆ. ಅವರು ಕಟ್ಟಾ ಸಮಾಜವಾದಿ ನಾಯಕರಾಗಿದ್ದರು ಎಂದು ಮೌರ್ಯ ಹೇಳಿದ್ದಾರೆ. ಕಳೆದ ವಾರ ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸ್ವಾಮಿ ಪ್ರಸಾದ್ ಮೌರ್ಯ ಲೋಕಸಭೆ ಚುನಾವಣೆಗೂ ಮುನ್ನ ಹೊಸ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಫೆಬ್ರವರಿ 22 ರಂದು ನವದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ರಾಷ್ಟ್ರೀಯ ಶೋಷಿತ್ ಸಮಾಜ ಪಕ್ಷ ಎಂಬ ಹೊಸ ಪಕ್ಷವನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಮೌರ್ಯ ಅವರೊಂದಿಗೆ ಸಮಾಜವಾದಿ ಪಕ್ಷದೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಹಲವಾರು ಮಾಜಿ ಶಾಸಕರು ಮತ್ತು ಮುಖಂಡರು ಮತ್ತು ಪ್ರಮುಖ ಮುಸ್ಲಿಂ ಮುಖಂಡರು ಸಹ ಗುರುವಾರ ಮೌರ್ಯ ಅವರ ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಮತ್ತಷ್ಟು ಓದಿ: ಸೀಟು ಹಂಚಿಕೆ ಕುರಿತು ಅಂತಿಮ ತೀರ್ಮಾನಕ್ಕೆ ಬರುವವರೆಗೂ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ: ಅಖಿಲೇಶ್​

ರಾಷ್ಟ್ರೀಯ ಶೋಷಿತ್ ಸಮಾಜ ಪಕ್ಷ

ರಾಷ್ಟ್ರೀಯ ಶೋಷಿತ್ ಸಮಾಜ ಪಕ್ಷವನ್ನು 2013 ರಲ್ಲಿ ಸಾಹೇಬ್ ಸಿಂಗ್ ಧಂಗರ್ ಅವರು ಅಲಿಘರ್‌ನಲ್ಲಿ ಔಪಚಾರಿಕವಾಗಿ ಸ್ಥಾಪಿಸಿದರೂ, ದಲಿತ ಮತ್ತು ಒಬಿಸಿ ನಾಯಕರ ನೇತೃತ್ವದ ಪಕ್ಷವು ಚುನಾವಣಾ ರಾಜಕೀಯದಲ್ಲಿ ಛಾಪು ಮೂಡಿಸಲು ವಿಫಲವಾಯಿತು. ಎಸ್​ಪಿಯಿಂದ ಉತ್ತರ ಪ್ರದೇಶ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಮೌರ್ಯ ಅವರು 2022 ರ ಚುನಾವಣೆಯ ಮೊದಲು ಬಿಜೆಪಿಯಿಂದ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು ಮತ್ತು ಫಾಜಿಲ್‌ನಗರದಿಂದ ವಿಧಾನಸಭಾ ಚುನಾವಣೆಯಲ್ಲಿ ವಿಫಲರಾಗಿದ್ದರು.

ಮೌರ್ಯ ಅವರು ವೈಯಕ್ತಿಕ ಲಾಭಕ್ಕಾಗಿ ಎಸ್‌ಪಿ ಸೇರಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥರು ಇತ್ತೀಚೆಗೆ ಸೂಚಿಸಿದಾಗ ಅಖಿಲೇಶ್ ಯಾದವ್ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಯಿತು. ಈ ಟೀಕೆಗೆ ಸೋಮವಾರ ಪ್ರತಿಕ್ರಿಯಿಸಿದ ಸ್ವಾಮಿ ಪ್ರಸಾದ್ ಮೌರ್ಯ, ಅವರು ರಾಜ್ಯ ಅಥವಾ ಕೇಂದ್ರದಲ್ಲಿ ಅಧಿಕಾರದಲ್ಲಿಲ್ಲ, ಅವರು ಏನನ್ನೂ ನೀಡುವ ಸ್ಥಿತಿಯಲ್ಲಿಲ್ಲ, ಅವರು ನನಗೆ ನೀಡಿದ ಎಲ್ಲವನ್ನೂ ನಾನು ಹಿಂದಿರುಗಿಸುತ್ತೇನೆ. ಸಿದ್ಧಾಂತವು ಮುಖ್ಯವಾಗಿದೆ. ನನಗೆ, ಸ್ಥಾನವಲ್ಲ, ಎಲ್ಲಾ ವರ್ಗಗಳ ಹಕ್ಕುಗಳು ಮತ್ತು ಕಲ್ಯಾಣ ನನ್ನ ಆದ್ಯತೆಯಾಗಿದೆ ಮತ್ತು ಅವರಿಗೆ ಬೆದರಿಕೆ ಬಂದಾಗ, ನಾನು ನನ್ನ ಧ್ವನಿಯನ್ನು ಎತ್ತುತ್ತೇನೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ