
ನವದೆಹಲಿ, ಜುಲೈ 11: ತನ್ನದೇ ಸ್ವಂತ ಟೆನಿಸ್ ಅಕಾಡೆಮಿಯನ್ನು (Tennis Academy) ನಡೆಸುತ್ತಿದ್ದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (Radhika Yadav) ತನ್ನ ತಂದೆಯೊಂದಲೇ ಭೀಕರವಾಗಿ ಕೊಲೆಯಾಗಿದ್ದಾರೆ. ಗುರುಗ್ರಾಮದಲ್ಲಿರುವ ತಮ್ಮ ಮೂರು ಅಂತಸ್ತಿನ ಮನೆಯ ಅಡುಗೆಮನೆಯಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಅಡುಗೆ ಮಾಡುತ್ತಿದ್ದಾಗ ರಾಧಿಕಾ ಅವರ ಹಿಂಭಾಗಕ್ಕೆ 3 ಬಾರಿ ಗುಂಡು ಹಾರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಆಕೆಯ ಪ್ರಮುಖ ಅಂಗಗಳಿಗೆ ಗಾಯಗಳಾಗಿ ಅವರು ತಕ್ಷಣವೇ ಸಾವನ್ನಪ್ಪಿದ್ದಾರೆ.
ಕೊಲೆ ಆರೋಪಿ ಹಾಗೂ ಮೃತ ಯುವತಿಯ ತಂದೆ ದೀಪಕ್ ಯಾದವ್ ಅವರನ್ನು ಬಂಧಿಸಲಾಗಿದೆ. ಅವರ ಬಳಿಯಿದ್ದ ಲೈಸೆನ್ಸ್ ಪಡೆದ ರಿವಾಲ್ವರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯ ಪ್ರಾಥಮಿಕ ತನಿಖೆಯಲ್ಲಿ ರಾಧಿಕಾ ಯಾದವ್ ಅವರ 51 ವರ್ಷದ ತಂದೆ ತಮ್ಮ ಮಗಳು ಸ್ವಂತ ಟೆನಿಸ್ ಅಕಾಡೆಮಿ ನಡೆಸುತ್ತಿದ್ದುದಕ್ಕೆ ಅಸಮಾಧಾನಗೊಂಡಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಉಗ್ರರ ಸಂಘಟನೆ ಇರುವುದು ನಿಜ; ಮೊದಲ ಬಾರಿ ಒಪ್ಪಿಕೊಂಡ ಮಾಜಿ ಪಾಕ್ ಸಚಿವ ಬಿಲಾವಲ್ ಭುಟ್ಟೋ
ಪೊಲೀಸರ ಪ್ರಕಾರ, ದೀಪಕ್ ಯಾದವ್ ಅವರ ಊರಾದ ವಜೀರಾಬಾದ್ನಲ್ಲಿ ಗ್ರಾಮಸ್ಥರು ಮತ್ತು ಗೆಳೆಯರಿಂದ ಬಂದ ನಿಂದನೆಗಳಿಂದ ಕೋಪಗೊಂಡಿದ್ದರು. ಅವರ ಗೆಳೆಯರು, ಸಂಬಂಧಿಕರು ದೀಪಕ್ ತಮ್ಮ ಮಗಳ ಟೆನಿಸ್ ಅಕಾಡೆಮಿಯಿಂದ ಪಡೆಯುವ ಆದಾಯದಿಂದ ಬದುಕುತ್ತಿದ್ದಕ್ಕಾಗಿ ಅಪಹಾಸ್ಯ ಮಾಡಿದ್ದರು. ಇದರಿಂದ ದೀಪಕ್ ಯಾದವ್ ಮಗಳ ಮೇಲೆ ಕೋಪಗೊಂಡಿದ್ದರು. ಮಗಳಿಗೆ ಟೆನಿಸ್ ಅಕಾಡೆಮಿ ಮುಚ್ಚುವಂತೆ ಅನೇಕ ಬಾರಿ ಹೇಳಿದ್ದರು. ಆದರೆ, ಆಕೆ ಒಪ್ಪಿರಲಿಲ್ಲ. ಇದೇ ವಿಷಯದ ಜಗಳದಿಂದ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರ ಪ್ರಕಾರ, ತಂದೆ ತನ್ನ ಮಗಳ ವೃತ್ತಿಜೀವನ ಮತ್ತು ಗಳಿಕೆಯ ಬಗ್ಗೆ ಸಾಮಾಜಿಕ ಟೀಕೆಗಳಿಂದಾಗಿ ಕಳೆದ 15 ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ತಂದೆ ಮತ್ತು ಮಗಳ ನಡುವಿನ ಇತ್ತೀಚಿನ ವಾಗ್ವಾದವು ರಾಧಿಕಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಿಂದ ಹುಟ್ಟಿಕೊಂಡಿರಬಹುದು ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಮದ್ಯ ಕುಡಿಸಿ, ಪ್ರಿಯಕರನ ಸಹಾಯದಿಂದ ಗಂಡನ ರುಂಡ ಕತ್ತರಿಸಿದ ಮಹಿಳೆ
ರಾಧಿಕಾ ಯಾದವ್ ಯಾರು?:
ರಾಧಿಕಾ ಒಬ್ಬ ಪ್ರತಿಭಾನ್ವಿತ ಮತ್ತು ಭರವಸೆಯ ಟೆನಿಸ್ ಕ್ರೀಡಾಪಟು. ಸ್ಕಾಟಿಷ್ ಹೈ ಇಂಟರ್ನ್ಯಾಷನಲ್ ಶಾಲೆಯ ಪದವೀಧರೆ. ಆಕೆ 2018ರಲ್ಲಿ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಶಾಲೆಯಲ್ಲಿ ಓದುವಾಗಲೇ ಆಕೆ ಟೆನಿಸ್ಗೆ ಕಾಲಿಟ್ಟರು. ರಾಧಿಕಾ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್) ನಲ್ಲಿ ಡಬಲ್ಸ್ ಟೆನಿಸ್ ಆಟಗಾರ್ತಿಯಾಗಿ 113ನೇ ಸ್ಥಾನ ಪಡೆದಿದ್ದರು. ಐಟಿಎಫ್ ಡಬಲ್ಸ್ನಲ್ಲಿ ಅವರು ಅಗ್ರ 200ರೊಳಗೆ ಸ್ಥಾನ ಪಡೆದಿದ್ದರು. ಆಕೆ ಇತ್ತೀಚೆಗೆ ಭುಜದ ಗಾಯದಿಂದ ಬಳಲುತ್ತಿದ್ದರು ಮತ್ತು ಚಿಕಿತ್ಸೆಗೂ ಒಳಗಾಗಿದ್ದರು. ಆದರೂ ಅಕಾಡೆಮಿಯನ್ನು ನಡೆಸುವುದನ್ನು ನಿಲ್ಲಿಸಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ