ಎಥನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಇಂಜಿನ್​ಗೆ ಹಾನಿಯಾಗದು; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ ಮಾಡುವ ಸರ್ಕಾರದ ನೀತಿಯ ಕುರಿತು ಎದ್ದಿರುವ ವಿವಾದವು ಕೇವಲ ತಪ್ಪು ವ್ಯಾಖ್ಯಾನಗಳಿಂದ ಕೂಡಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಇ20 ಇಂಧನವು ಇಂಜಿನ್‌ಗಳನ್ನು ಹಾಳುಮಾಡುತ್ತದೆ ಮತ್ತು ಕೀಟಗಳನ್ನು ಆಕರ್ಷಿಸುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳು ಸತ್ಯಕ್ಕೆ ದೂರವಾದುದು ಎಂದು ಅವರು ಹೇಳಿದ್ದಾರೆ. ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಲು, ಇಂಗಾಲದ ಹೊರಸೂಸುವಿಕೆಯನ್ನು ಕುಗ್ಗಿಸಲು ಮತ್ತು ದೇಶೀಯ ಕೃಷಿ ಆರ್ಥಿಕತೆಗೆ ಬೆಂಬಲ ನೀಡಲು ಸರ್ಕಾರ ಎಥನಾಲ್ ಮಿಶ್ರಣವನ್ನು ಉತ್ತೇಜಿಸುತ್ತಿದೆ.

ಎಥನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಇಂಜಿನ್​ಗೆ ಹಾನಿಯಾಗದು; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ
Hardeep Singh Puri
Image Credit source: PTI

Updated on: Jul 07, 2026 | 10:05 PM

ನವದೆಹಲಿ, ಜುಲೈ 7: ಎಥನಾಲ್ (Ethanol) ಮಿಶ್ರಿತ ಪೆಟ್ರೋಲ್ (E20) ವಾಹನಗಳ ಇಂಜಿನ್‌ಗಳಿಗೆ ಹಾನಿ ಉಂಟುಮಾಡುತ್ತದೆ ಎಂಬ ಇತ್ತೀಚಿನ ವಿವಾದವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಳ್ಳಿಹಾಕಿದ್ದಾರೆ. ಈ ಆತಂಕಗಳು ಕೇವಲ “ತಪ್ಪು ವರದಿ ಮತ್ತು ತಪ್ಪು ವ್ಯಾಖ್ಯಾನ”ಗಳಿಂದ ಸೃಷ್ಟಿಯಾಗಿದೆಯೇ ಹೊರತು ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. E20 ಪೆಟ್ರೋಲ್ ಇಂಜಿನ್ ಅನ್ನು ಹಾಳುಮಾಡುತ್ತದೆ, ಕೀಟಗಳನ್ನು ಆಕರ್ಷಿಸುತ್ತದೆ ಮತ್ತು ಮೈಲೇಜ್ ಕಡಿಮೆ ಮಾಡುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.

ಇ20 ಪೆಟ್ರೋಲ್ ಬಳಕೆಗೆ ಬಂದು ಈಗಾಗಲೇ 1 ವರ್ಷಕ್ಕೂ ಹೆಚ್ಚು ಕಾಲ ಕಳೆದಿದೆ. ಹೀಗಿರುವಾಗ ಈಗ ಏಕೆ ಈ ವಿವಾದವನ್ನು ಎಬ್ಬಿಸಲಾಗುತ್ತಿದೆ? ಎಂದು ಹರ್ದೀಪ್ ಸಿಂಗ್ ಪುರಿ ಪ್ರಶ್ನಿಸಿದ್ದಾರೆ. “ಪ್ರಸ್ತುತ ದೇಶದ ರಸ್ತೆಗಳಲ್ಲಿ 20 ಕೋಟಿ ದ್ವಿಚಕ್ರ ವಾಹನಗಳು ಮತ್ತು 20 ಲಕ್ಷ 4 ಚಕ್ರಗಳ ವಾಹನಗಳು ಇದೇ ಇ20 ಇಂಧನವನ್ನು ಬಳಸುತ್ತಿವೆ. ವಾಹನ ತಯಾರಕರು ಮತ್ತು ವಾಹನಗಳ ಸರ್ವಿಸ್ ಮಾಡುವ ಸಿಬ್ಬಂದಿ ಎಲ್ಲರೂ ಇದರಿಂದ ಯಾವುದೇ ತೊಂದರೆಯಾಗುತ್ತಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ದಿಢೀರನೆ ಈ ಅಪಪ್ರಚಾರ ಏಕೆ?” ಎಂದು ಅವರು ಕೇಳಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ?

ಅಲ್ಲದೆ, ಕಳೆದ ಮೂರೂವರೆ ವರ್ಷಗಳಿಂದ ಭಾರತದಲ್ಲಿ ಇ15 (E15) ಇಂಧನವನ್ನು ಯಾವುದೇ ಪ್ರಮುಖ ಸಮಸ್ಯೆಗಳಿಲ್ಲದೆ ಬಳಸಲಾಗುತ್ತಿದೆ ಎಂಬುದನ್ನು ಅವರು ನೆನಪಿಸಿದ್ದಾರೆ.

ಇ25 ಬಗ್ಗೆ ಇನ್ನೂ ಯಾವುದೇ ನಿರ್ಧಾರವಿಲ್ಲ:

ಭಾರತ ಸರ್ಕಾರವು ಇ25 ಇಂಧನ (25% ಎಥನಾಲ್ ಮಿಶ್ರಣ) ಜಾರಿಗೆ ತರಲು ಮುಂದಾಗಿದೆ ಎಂಬ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಸಚಿವ ಹರ್ದೀಪ್ ಸಿಂಗ್ ಪುರಿ, ಅಂತಹ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾವು ಇ25 ಇಂಧನದ ಕುರಿತು ಕೇವಲ ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಈ ಪರೀಕ್ಷೆಗಳು ಮುಗಿಯಲು ಸಮಯ ಹಿಡಿಯುತ್ತದೆ. ವರದಿ ಬಂದ ನಂತರ ನಾವು ಅದನ್ನು ಮೌಲ್ಯಮಾಪನ ಮಾಡುತ್ತೇವೆ. ನಂತರ ವಾಹನ ತಯಾರಕರು ಮತ್ತು ಸಂಬಂಧಪಟ್ಟ ಪಾಲುದಾರರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿ: ಕಮರ್ಷಿಯಲ್ ಅಡುಗೆ ಅನಿಲವಾಗಿ ಎಥನಾಲ್ ಬಳಕೆ? ಎಲ್​ಪಿಜಿ ಅವಲಂಬನೆ ತಗ್ಗಿಸಲು ಸರ್ಕಾರದಿಂದ ಹೊಸ ಮಾರ್ಗೋಪಾಯ

ಏನಿದು ಎಥನಾಲ್ ವಿವಾದ?:

ಟ್ವಿಟರ್, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಎಥನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ ಮತ್ತು ಇಂಜಿನ್ ಬಾಳಿಕೆ ಕಡಿಮೆಯಾಗುತ್ತಿದೆ ಎಂದು ಪೋಸ್ಟ್ ಮಾಡಲಾರಂಭಿಸಿದ ಬಳಿಕ ಈ ವಿವಾದ ಶುರುವಾಗಿತ್ತು. ಆದರೆ, ಕೇಂದ್ರ ಸರ್ಕಾರ ಈ ವಾದವನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಇ20 ಇಂಧನಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾದ ಹೊಸ ವಾಹನಗಳಿಗೆ ಇದರಿಂದ ಯಾವುದೇ ಅಪಾಯವಿಲ್ಲ ಎಂದು ಕಾರು ಮತ್ತು ಬೈಕ್ ತಯಾರಿಕಾ ಕಂಪನಿಗಳು ಈಗಾಗಲೇ ಸ್ಪಷ್ಟಪಡಿಸಿವೆ.


ಕಚ್ಚಾ ತೈಲದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ವಾಯು ಮಾಲಿನ್ಯ ತಡೆಗಟ್ಟಲು ಮತ್ತು ಕಬ್ಬು ಹಾಗೂ ಮೆಕ್ಕೆಜೋಳ ಬೆಳೆಯುವ ರೈತರಿಗೆ ಬೆಂಬಲ ನೀಡಲು ಸರ್ಕಾರ ಎಥನಾಲ್ ಮಿಶ್ರಣವನ್ನು ಉತ್ತೇಜಿಸುತ್ತಿದೆ. ಏಪ್ರಿಲ್ 1, 2026ರಿಂದ ಜಾರಿಗೆ ಬಂದಿರುವ ನಿಯಮದಂತೆ, ದೇಶಾದ್ಯಂತ ಕನಿಷ್ಠ 95 ರಿಸರ್ಚ್ ಆಕ್ಟೇನ್ ಸಂಖ್ಯೆ (RON) ಹೊಂದಿರುವ ಮತ್ತು ಶೇ. 20ರಷ್ಟು ಎಥನಾಲ್ ಮಿಶ್ರಿತ (E20) ಪೆಟ್ರೋಲ್ ಅನ್ನು ಕಡ್ಡಾಯಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us