ಉತ್ತರಾಖಂಡದಲ್ಲಿ ಮತ್ತೆ ಭಾರೀ ಮೇಘಸ್ಫೋಟ: ಹತ್ತಾರು ಜನ ನಾಪತ್ತೆ, ನೂರಾರು ಮನೆಗಳಿಗೆ ಹಾನಿ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಥರಾಲಿಯಲ್ಲಿ ಶುಕ್ರವಾರ ರಾತ್ರಿ ಭೀಕರ ಮೇಘಸ್ಫೋಟ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಿಂದ ಒಬ್ಬ ಯುವತಿ ಮೃತಪಟ್ಟಿದ್ದು, ಹಲವಾರು ಜನ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ರಸ್ತೆಗಳಿಗೆ ಹಾನಿಯಾಗಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದೆ. ನೂರಾರು ಮನೆಗಳು ಹಾಗೂ ವಾಹನಗಳು ಹಾನಿಗೊಳಗಾಗಿವೆ.

ಉತ್ತರಾಖಂಡದಲ್ಲಿ ಮತ್ತೆ ಭಾರೀ ಮೇಘಸ್ಫೋಟ: ಹತ್ತಾರು ಜನ ನಾಪತ್ತೆ, ನೂರಾರು ಮನೆಗಳಿಗೆ ಹಾನಿ
ಉತ್ತರಾಖಂಡದಲ್ಲಿ ಮತ್ತೆ ಭಾರೀ ಮೇಘಸ್ಫೋಟ
Image Credit source: Uttarakhand Police

Updated on: Aug 23, 2025 | 10:46 AM

ಡೆಹ್ರಾಡೂನ್, ಆಗಸ್ಟ್ 23: ಕೆಲವು ದಿನಗಳ ಹಿಂದಷ್ಟೇ ಭೀಕರ ಮೇಘಸ್ಫೋಟ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಉತ್ತರಾಖಂಡದಲ್ಲಿ (Uttarakhand) ಶುಕ್ರವಾರ ರಾತ್ರಿ ಮತ್ತೆ ಭಯಾನಕ ಮೇಘಸ್ಫೋಟ (Cloudburst) ಸಂಭವಿಸಿದೆ. ಚಮೋಲಿ ಜಿಲ್ಲೆಯ ಥರಾಲಿಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಭಾರಿ ವಿನಾಶ ಸಂಭವಿಸಿದೆ. ಒಬ್ಬ ಯುವತಿ ಪ್ರವಾಹದಲ್ಲಿ ಕೊಚ್ಚಿಹೋಗಿ ಸಾವಿಗೀಡಾಗಿದ್ದು, ಹತ್ತಾರು ಜನ ಕಣ್ಮರೆಯಾಗಿದ್ದಾರೆ. ಎಸ್‌ಡಿಆರ್‌ಎಫ್ ತಂಡವು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದೆ. ಥರಾಲಿ ಹಾಗೂ ಹತ್ತಿರದ ಹಳ್ಳಿಗಳಲ್ಲಿಯೂ ಅನಾಹುತ ಸಂಭವಿಸಿದೆ.

ಉತ್ತರಾಖಂಡದಲ್ಲಿ ಶುಕ್ರವಾರ ಭಾರಿ ಮಳೆಯಾಗಿತ್ತು. ನಂತರ, ಸರಿಸುಮಾರು ಮಧ್ಯರಾತ್ರಿಯ ವೇಳೆಗೆ ಮೇಘಸ್ಫೋಟ ಸಂಭವಿಸಿ ಪ್ರವಾಹ ಪರಿಸ್ಥಿತಿ ಉಂಟಾಯಿತು. ರಾಡಿಬಾಗ್ ಮತ್ತು ಚೆಪ್ಡಾನ್‌ನಲ್ಲಿ ಅನೇಕ ವಾಹನಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ. ಅನೇಕ ಅಂಗಡಿಗಳು ಹಾನಿಗೊಳಗಾಗಿವೆ. ಮಧ್ಯರಾತ್ರಿಯಲ್ಲಿ ಏಕಾಏಕಿ ಭಾರಿ ಪ್ರವಾಹ ಹಾಗೂ ಭೀಕರ ಸದ್ದು ಕೇಳಿ ಬೆಚ್ಚಿಬಿದ್ದ ಜನರು ಮನೆಗಳಿಂದ ಹೊರಬಂದಿದ್ದಾರೆ.

ಪ್ರವಾಹದ ಭೀಕರತೆ ಸಾರುವ ವಿಡಿಯೋ


ಘಟನೆಯ ಬಗ್ಗೆ ಚಮೋಲಿ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ‘ಶುಕ್ರವಾರ ರಾತ್ರಿ ಥಾಣಾ ಥರಾಲಿ ಪ್ರದೇಶದಲ್ಲಿ ಭಾರೀ ಮಳೆಯಾಗಿ ಜನಜೀವನದ ಮೇಲೆ ಪರಿಣಾಮ ಬೀರಿತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಥಾಣಾ ಥರಾಲಿ ಪೊಲೀಸರು ರಾತ್ರಿಯೇ ಕ್ಷಿಪ್ರವಾಗಿ ಜಾಗರೂಕರಾಗಿ ಸ್ಥಳೀಯ ಜನರನ್ನು ಎಚ್ಚರಿಸಿ ಅವರನ್ನು ಅವರ ಮನೆಗಳಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದರು’ ಎಂದು ಉಲ್ಲೇಖಿಸಿದ್ದಾರೆ.

ಉತ್ತರಾಖಂಡ ಪೊಲೀಸ್ ಮಾಹಿತಿ


ಮೇಘ ಸ್ಫೋಟದಿಂದಾಗಿ ಜನರಲ್ಲಿ ಭೀತಿ ಉಂಟಾಗಿದೆ. ಕಟ್ಟಡಗಳ ಮತ್ತು ಇತರ ಅವಶೇಷಗಳಿಂದಾಗಿ ರಸ್ತೆಗಳು ಮುಚ್ಚಿಹೋಗಿವೆ. ಥರಾಲಿ-ಗ್ವಾಲ್ಡಮ್ ರಸ್ತೆ ಮತ್ತು ಥರಾಲಿ-ಸಾಗ್ವಾರಾ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಮಿಂಗ್ಡೇರಾ ಬಳಿಯ ರಸ್ತೆಯಿಂದ ಅವಶೇಷಗಳನ್ನು ತೆಗೆದುಹಾಕಲಾಗುತ್ತಿದೆ. ಗಡಿ ರಸ್ತೆಗಳ ಸಂಘಟನೆ (BRO) ಸಮರೋಪಾದಿಯಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದೆ.

ಇದನ್ನೂ ಓದಿ: ಉತ್ತರಕಾಶಿಯಲ್ಲಿ ಮೇಘಸ್ಫೋಟ; ಕ್ಷಣಾರ್ಧದಲ್ಲಿ ರೌದ್ರಾವತಾರ ತಾಳಿ ಹರಿದುಬಂತು ಭಾರೀ ಪ್ರವಾಹ

2 ವಾರಗಳ ಹಿಂದಷ್ಟೇ ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿ ಭಾರಿ ಪ್ರವಾಹ ಉಂಟಾಗಿತ್ತು. ಘಟನೆಯಲ್ಲಿ ನಾಲ್ಕು ಮಂದಿ ಮೃತಪಟ್ಟು ನೂರಾರು ಮಂದಿ ನಾಪತ್ತೆಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us