ಮುಖಕ್ಕೆ ಮಸಿ ಬಳಿಯುತ್ತೇವೆ, ಕಲ್ಲು ಎಸೆಯುತ್ತೇವೆ; ಸಾವರ್ಕರ್ ಕುರಿತ ಹೇಳಿಕೆಗೆ ರಾಹುಲ್ ಗಾಂಧಿಗೆ ಶಿವಸೇನೆ ನಾಯಕ ಬೆದರಿಕೆ
ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಬಾಲಾ ದರಾದೆ ಅವರ ಹೇಳಿಕೆಯನ್ನು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಟೀಕಿಸಿದ್ದಾರೆ. ಅವರು ವಿ.ಡಿ ಸಾವರ್ಕರ್ ಅವರ ಬಗ್ಗೆ ರಾಹುಲ್ ಗಾಂಧಿಯ ನೀಡಿದ ಹೇಳಿಕೆಗಳು ಸಾರ್ವಜನಿಕವಾಗಿ ಲಭ್ಯವಿರುವ ಐತಿಹಾಸಿಕ ದಾಖಲೆಗಳನ್ನು ಆಧರಿಸಿವೆ ಎಂದು ಹೇಳಿದ್ದಾರೆ.

ನವದೆಹಲಿ, ಮೇ 28: ಹಿಂದುತ್ವ ಸಿದ್ಧಾಂತವಾದಿ ವಿ.ಡಿ ಸಾವರ್ಕರ್ ಅವರ ಬಗ್ಗೆ ಈ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನಾಸಿಕ್ಗೆ ಭೇಟಿ ನೀಡಿದರೆ ಅವರ ಮುಖಕ್ಕೆ ಕಪ್ಪು ಮಸಿ ಬಳಿಯುತ್ತೇನೆ, ಕಲ್ಲು ಎಸೆಯುತ್ತೇನೆ ಎಂದು ಶಿವಸೇನೆ (ಯುಬಿಟಿ) ನಾಯಕ ಬಾಲಾ ದರಾದೆ ಮಂಗಳವಾರ ಹೇಳಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಬೆದರಿಕೆಯ ನಂತರ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಕಾಂಗ್ರೆಸ್ನ ಮಿತ್ರಪಕ್ಷದ ಸದಸ್ಯರೊಬ್ಬರು ನೀಡಿರುವ ಹೇಳಿಕೆಗಳನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ “ತೀವ್ರ ದುರದೃಷ್ಟಕರ” ಎಂದು ಟೀಕಿಸಿದ್ದಾರೆ.
ನಾಸಿಕ್ ನಗರದಲ್ಲಿ ನಡೆದ ಸಾವರ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಸೇನೆ (ಯುಬಿಟಿ) ಉಪ ನಗರ ಮುಖ್ಯಸ್ಥ ದರಾಡೆ, ಯಾರೇ ಆಗಲಿ ಸಾವರ್ಕರ್ ಅವರಿಗೆ ಮಾಡಿದ ಯಾವುದೇ ಅವಮಾನವನ್ನು ಸಹಿಸುವುದಿಲ್ಲ. ರಾಹುಲ್ ಗಾಂಧಿ ನಾಸಿಕ್ಗೆ ಬರಲು ಧೈರ್ಯ ಮಾಡಿದರೆ ಅವರ ಮುಖಕ್ಕೆ ಕಪ್ಪು ಬಣ್ಣ ಬಳಿಯಲಾಗುವುದು ಅಥವಾ ಕಲ್ಲು ಎಸೆಯಲಾಗುವುದು ಎಂದು ಹೇಳಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿ ಆಧುನಿಕ ಯುಗದ ಮೀರ್ ಜಾಫರ್; ಬಿಜೆಪಿಯಿಂದ ತೀವ್ರ ವಾಗ್ದಾಳಿ
ನಾವು ಸಾವರ್ಕರ್ ಅವರ ಭೂಮಿಯಾದ ನಾಸಿಕ್ನಲ್ಲಿ ವಾಸಿಸುತ್ತಿದ್ದೇವೆ. ರಾಹುಲ್ ಗಾಂಧಿ ನಾಸಿಕ್ಗೆ ಬರಲು ಧೈರ್ಯ ಮಾಡಿದರೆ, ನಾವು ಅವರ ಮುಖಕ್ಕೆ ಕಪ್ಪು ಬಣ್ಣ ಬಳಿಯುತ್ತೇವೆ. ಇಲ್ಲದಿದ್ದರೆ ಕಲ್ಲು ಎಸೆಯುತ್ತೇವೆ. ನಾವು ಎಂವಿಎಯ ಭಾಗವಾಗಿದ್ದರೂ ನಾವು ಅದರ ಬಗ್ಗೆ ಯೋಚಿಸುವುದಿಲ್ಲ. ಸೇನಾ ಕಾರ್ಯಕರ್ತರು ಏನೆಂದು ತೋರಿಸುತ್ತೇವೆ ಎಂದು ದರಾಡೆ ಹೇಳಿದ್ದಾರೆ.
ಕಾಂಗ್ರೆಸ್ ಆಕ್ರೋಶ:
ಈ ಹೇಳಿಕೆಯು ಕಾಂಗ್ರೆಸ್ ನಾಯಕರಿಂದ ಟೀಕೆಗೆ ಗುರಿಯಾಯಿತು. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಈ ಹೇಳಿಕೆಗಳನ್ನು “ತೀವ್ರ ದುರದೃಷ್ಟಕರ” ಎಂದು ಕರೆದಿದ್ದಾರೆ. ಸಾವರ್ಕರ್ ಬಗ್ಗೆ ಗಾಂಧಿಯವರ ಅಭಿಪ್ರಾಯಗಳು ಸಾರ್ವಜನಿಕವಾಗಿ ಲಭ್ಯವಿರುವ ಐತಿಹಾಸಿಕ ದಾಖಲೆಗಳಲ್ಲಿವೆ ಎಂದು ಅವರು ಒತ್ತಿ ಹೇಳಿದರು. “ಐತಿಹಾಸಿಕ ಟೀಕೆ ಮತ್ತು ಪ್ರಚೋದನೆಯ ನಡುವೆ ವ್ಯತ್ಯಾಸವಿದೆ. ಅಂತಹ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ . ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರು ಅಂತಹ ಹೇಳಿಕೆಗಳಿಗೆ ಸೂಕ್ತ ಉತ್ತರಗಳನ್ನು ನೀಡಲು ಸಮರ್ಥರಾಗಿದ್ದಾರೆ” ಎಂದು ಸಪ್ಕಲ್ ಹೇಳಿದ್ದಾರೆ.
ಇದನ್ನೂ ಓದಿ: ಕ್ಯಾಮೆರಾಗಳ ಮುಂದೆ ಮಾತ್ರ ಏಕೆ ನಿಮ್ಮ ರಕ್ತ ಕುದಿಯುತ್ತದೆ?; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಈ ಹಿಂದೆ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿ ವೀರ ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸುವ ಮೂಲಕ ಸ್ವಾತಂತ್ರ್ಯ ಚಳವಳಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆಗಳು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:07 pm, Wed, 28 May 25








