ರಾಹುಲ್ ಗಾಂಧಿ ಆಧುನಿಕ ಯುಗದ ಮೀರ್ ಜಾಫರ್; ಬಿಜೆಪಿಯಿಂದ ತೀವ್ರ ವಾಗ್ದಾಳಿ
ಆಪರೇಷನ್ ಸಿಂಧೂರದಲ್ಲಿ ಭಾರತೀಯ ಸೇನೆಯ ಎಷ್ಟು ಯುದ್ಧ ವಿಮಾನಗಳು ನಾಶವಾಗಿವೆ? ಎಂದು ಬೆಂಬಿಡದೆ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಕೇಳುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ಹೀರೋ ಆಗಿದ್ದಾರೆ. ಪಾಕಿಸ್ತಾನದ ವಕ್ತಾರನಂತೆ ಭಾರತಕ್ಕೆ ಡ್ಯಾಮೇಜಿಂಗ್ ಹೇಳಿಕೆ ನೀಡುತ್ತಿರುವ ರಾಹುಲ್ ಗಾಂಧಿ ಆಧುನಿಕ ಯುಗದ ಮೀರ್ ಜಾಫರ್ ಎಂದು ಬಿಜೆಪಿ ಟೀಕಿಸಿದೆ. ಅಲ್ಲದೆ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹಾಗೂ ರಾಹುಲ್ ಗಾಂಧಿಯ ಅರ್ಧ ಮುಖದ ಫೋಟೋ ಹಂಚಿಕೊಂಡು ಬಿಜೆಪಿ ನಾಯಕರು ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ, ಮೇ 20: ಪಹಲ್ಗಾಮ್ ದಾಳಿಯ ನಂತರ, ಭಾರತವು ಆಪರೇಷನ್ ಸಿಂಧೂರ್ (Operation Sindoor) ಮೂಲಕ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿತು. ಒಂದೆಡೆ, ಈ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಸರ್ಕಾರ ದೇಶ ಮತ್ತು ವಿದೇಶಗಳಲ್ಲಿ ಅಭಿಯಾನ ನಡೆಸುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಈ ಕಾರ್ಯಾಚರಣೆಯ ಬಗ್ಗೆ ವಿವರಣೆ ಕೇಳುವುದರಲ್ಲಿ ನಿರತರಾಗಿದ್ದಾರೆ. ಆಪರೇಷನ್ ಸಿಂಧೂರದಲ್ಲಿ ಭಾರತೀಯ ಸೇನೆ ಎಷ್ಟು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂಬ ಬಗ್ಗೆ ಭಾರತದ ಜನರಿಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು ಎಂದು ಹೇಳಿದ್ದರು. ಇದಕ್ಕೆ ಉತ್ತರಿಸಲು ವಿದೇಶಾಂಗ ಸಚಿವಾಲಯ ಸಿದ್ಧವಿರಲಿಲ್ಲ. ಇದು ಗೌಪ್ಯ ಸಂಗತಿಯಾಗಿದ್ದು, ಎಲ್ಲ ಪೈಲಟ್ಗಳೂ ಸುರಕ್ಷಿತವಾಗಿ ಭಾರತದೊಳಗೆ ತಲುಪಿದ್ದಾರೆ ಎಂದು ಹೇಳಿತ್ತು. ಆದರೆ, ಪದೇಪದೆ ರಾಹುಲ್ ಗಾಂಧಿ ಇದಕ್ಕೆ ಉತ್ತರ ಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿಯನ್ನು ಹೀರೋನಂತೆ ಬಿಂಬಿಸಲಾಗುತ್ತಿದೆ.
ಇದಕ್ಕೆ ಬಿಜೆಪಿ ನಾಯಕರು ರಾಹುಲ್ ಗಾಂಧಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಪರೇಷನ್ ಸಿಂಧೂರದ ಮೂಲಕ ಸಂಘರ್ಷದ ಸಮಯದಲ್ಲಿ ಎಷ್ಟು ಪಾಕಿಸ್ತಾನಿ ಜೆಟ್ಗಳನ್ನು ಹೊಡೆದುರುಳಿಸಲಾಗಿದೆ ಅಥವಾ ನಾಶಪಡಿಸಲಾಗಿದೆ ಎಂಬುದನ್ನು ಕಂಡುಹಿಡಿಯಲು ರಾಹುಲ್ ಗಾಂಧಿ ಒಮ್ಮೆಯೂ ಪ್ರಯತ್ನಿಸಲಿಲ್ಲ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ. ಹಾಗೇ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಅರ್ಧ ಮುಖ ಮತ್ತು ರಾಹುಲ್ ಗಾಂಧಿಯ ಅರ್ಧ ಮುಖವನ್ನು ಸೇರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗೇ, ಬಿಜೆಪಿ ನಾಯಕರು ರಾಹುಲ್ ಗಾಂಧಿಯನ್ನು ಮೀರ್ ಜಾಫರ್ ಜೊತೆ ಹೋಲಿಸಿದ್ದಾರೆ.
Rahul Gandhi is the new age Mir Jafar. pic.twitter.com/Egb83XjxYL
— Amit Malviya (@amitmalviya) May 20, 2025
ರಾಹುಲ್ ಗಾಂಧಿ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿರುವುದು ಆಶ್ಚರ್ಯವೇನಿಲ್ಲ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ. ಆಪರೇಷನ್ ಸಿಂಧೂರ್ ನ ಯಶಸ್ಸಿಗೆ ಅವರು ಪ್ರಧಾನಿಯವರನ್ನು ಅಭಿನಂದಿಸಲೂ ಇಲ್ಲ. ಅದರ ಬದಲಾಗಿ, ನಾವು ಎಷ್ಟು ವಿಮಾನಗಳನ್ನು ಕಳೆದುಕೊಂಡಿದ್ದೇವೆ ಎಂದು ಅವರು ಪದೇ ಪದೇ ಕೇಳುತ್ತಿದ್ದಾರೆ. ಆದರೆ ಈ ಪ್ರಶ್ನೆಗೆ ಈಗಾಗಲೇ ಡಿಜಿಎಂಒ ಅವರ ಬ್ರೀಫಿಂಗ್ನಲ್ಲಿ ಉತ್ತರಿಸಲಾಗಿದೆ. ಈ ಸಂಘರ್ಷದ ಸಮಯದಲ್ಲಿ ಎಷ್ಟು ಪಾಕಿಸ್ತಾನಿ ಜೆಟ್ಗಳನ್ನು ಹೊಡೆದುರುಳಿಸಲಾಗಿದೆ ಅಥವಾ ನಾಶಪಡಿಸಲಾಗಿದೆ ಎಂಬುದನ್ನು ಕಂಡುಹಿಡಿಯಲು ರಾಹುಲ್ ಒಮ್ಮೆಯೂ ಪ್ರಯತ್ನಿಸಲಿಲ್ಲ ಎಂದು ಮಾಳವೀಯ ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರದ ವಿಷಯ ತಿಳಿಸಿದ್ದು ಅಪರಾಧ; ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ತರಾಟೆ
ಈ ಪೋಸ್ಟ್ ಜೊತೆಗೆ ಅಮಿತ್ ಮಾಳವೀಯ ಅವರು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಅರ್ಧ ಮುಖ ಮತ್ತು ರಾಹುಲ್ ಗಾಂಧಿಯವರ ಅರ್ಧ ಮುಖ ಕಾಣುವ ಚಿತ್ರವನ್ನು ಸಹ ಪೋಸ್ಟ್ ಮಾಡಿದ್ದಾರೆ. ಇಬ್ಬರದ್ದೂ ಒಂದೇ ಅಜೆಂಡಾ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ, ರಾಹುಲ್ ಗಾಂಧಿ ಹೊಸ ಯುಗದ ಮೀರ್ ಜಾಫರ್ ಎಂದು ಅವರು ಟೀಕಿಸಿದ್ದಾರೆ.
It is not surprising that Rahul Gandhi is speaking the language of Pakistan and its benefactors. He hasn’t congratulated the Prime Minister on the flawless #OperationSindoor, which unmistakably showcases India’s dominance. Instead, he repeatedly asks how many jets we lost—a… pic.twitter.com/BT47CNpddj
— Amit Malviya (@amitmalviya) May 20, 2025
ಪಹಲ್ಗಾಮ್ ದಾಳಿಯ ನಂತರ, ಭಾರತವು ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿತು. ರಾಹುಲ್ ಗಾಂಧಿ ಈ ಇಡೀ ಕಾರ್ಯಾಚರಣೆಯಲ್ಲಿ ಎಷ್ಟು ಭಾರತೀಯ ವಿಮಾನಗಳು ಹಾನಿಗೊಳಗಾದವು ಎಂದು ಪದೇ ಪದೇ ಕೇಳುತ್ತಿದ್ದಾರೆ. ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿದೇಶಾಂಗ ಸಚಿವ ಏಕೆ ಜೈಶಂಕರ್ ಮೌನವಾಗಿದ್ದಾರೆ ಎಂದು ಕೇಳಿದ್ದರು.
ಇದನ್ನೂ ಓದಿ: ಆಪರೇಷನ್ ಸಿಂಧೂರದ ಬಗ್ಗೆ ಮತ್ತೊಮ್ಮೆ ಜೈಶಂಕರ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ಪಾಕಿಸ್ತಾನದಲ್ಲಿ ಅದೇ ಹೆಡ್ಲೈನ್!
ಇದಕ್ಕೂ ಮೊದಲು, ಮೇ 11ರಂದು ಪತ್ರಿಕಾಗೋಷ್ಠಿಯಲ್ಲಿ ಏರ್ ಮಾರ್ಷಲ್ ಎ.ಕೆ. ಭಾರ್ತಿ, ನಾವು ಯುದ್ಧದ ಪರಿಸ್ಥಿತಿಯಲ್ಲಿದ್ದೇವೆ. ನಷ್ಟಗಳು ಅದರ ಒಂದು ಭಾಗವಾಗಿದೆ ಎಂದು ಹೇಳಿದ್ದರು. ನಾವು ನಮ್ಮ ಗುರಿಯನ್ನು ಸಾಧಿಸಿದ್ದೇವೆಯೇ? ಎಂಬುದಷ್ಟೇ ಇಲ್ಲಿ ಮುಖ್ಯ. ನಾವು ಇನ್ನೂ ಯುದ್ಧದ ಸ್ಥಿತಿಯಲ್ಲಿರುವುದರಿಂದ, ನಮಗೆ ಎಷ್ಟು ನಷ್ಟವಾಗಿದೆ ಎಂಬ ಮಾಹಿತಿಯು ಶತ್ರುಗಳ ಕೈಗೆ ಸಿಗುವುದು ಸರಿಯಲ್ಲವಾದ್ದರಿಂದ ಇದಕ್ಕೆ ಸಂಬಂಧಿಸಿದ ವಿವರಗಳ ಬಗ್ಗೆ ಈಗ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಎಲ್ಲಾ ಭಾರತೀಯ ಪೈಲಟ್ಗಳು ಸುರಕ್ಷಿತವಾಗಿ ಮರಳಿದ್ದಾರೆ ಎಂದು ಏರ್ ಮಾರ್ಷಲ್ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








