ಪಾಕಿಸ್ತಾನಕ್ಕೆ ಮತ್ತೊಂದು ಶಾಕ್; ಲಡಾಖ್​​ನಲ್ಲಿ ಭಾರತದ ಮೊದಲ ರಾಕ್ ಚೆಕ್ ಡ್ಯಾಂ ನಿರ್ಮಾಣ

ಲಡಾಖ್‌ನಲ್ಲಿ ಜಲಸಂರಕ್ಷಣೆ ಮತ್ತು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಭಾರತೀಯ ಸೇನೆ ಹಾಗೂ ಸ್ಥಳೀಯ ಆಡಳಿತದ ಸಹಯೋಗದಲ್ಲಿ ಸಿಂಧೂ ನದಿಗೆ ಅಡ್ಡಲಾಗಿ ದೇಶದ ಮೊದಲ 'ರಾಕ್ ಚೆಕ್ ಡ್ಯಾಮ್' ನಿರ್ಮಿಸಲಾಗಿದೆ. ಶೀತ ಮರುಭೂಮಿ ಪ್ರದೇಶವಾದ ಲಡಾಖ್‌ನಲ್ಲಿ ನೀರು ಲಭ್ಯವಿಲ್ಲದ ಒಣ ಹವಾಮಾನದ ಅವಧಿಯಲ್ಲಿ ತೀವ್ರ ನೀರಿನ ಅಭಾವ ಉಂಟಾಗುತ್ತದೆ. ನದಿಯ ನೀರನ್ನು ಮಂದಗತಿಯಲ್ಲಿ ಹರಿಯುವಂತೆ ಮಾಡಿ, ನೀರು ಭೂಮಿಯಲ್ಲಿ ಇಂಗಲು ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಈ ಚೆಕ್ ಡ್ಯಾಮ್ ನೆರವಾಗಲಿದೆ. ಈಗಾಗಲೇ ಸಿಂಧೂ ಜಲ ಒಪ್ಪಂದ ರದ್ದಾಗಿರುವುದರಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಭಾರತದ ಈ ನಡೆಯಿಂದ ಮತ್ತಷ್ಟು ಆತಂಕವಾಗಿದೆ.

ಪಾಕಿಸ್ತಾನಕ್ಕೆ ಮತ್ತೊಂದು ಶಾಕ್; ಲಡಾಖ್​​ನಲ್ಲಿ ಭಾರತದ ಮೊದಲ ರಾಕ್ ಚೆಕ್ ಡ್ಯಾಂ ನಿರ್ಮಾಣ
Rock Dam In Ladakh
Image Credit source: x

Updated on: Sep 04, 2026 | 11:21 PM

ಲಡಾಖ್, ಸೆಪ್ಟೆಂಬರ್ 4: ಲಡಾಖ್‌ನ ಕೃಷಿ ಸಮುದಾಯಗಳಲ್ಲಿ ಎದುರಾಗಿದ್ದ ನೀರಿನ ಅಭಾವವನ್ನು ನೀಗಿಸುವ ಮತ್ತು ಗಡಿ ಪ್ರದೇಶಗಳಲ್ಲಿ ಸಿಂಧೂ ನದಿಯ ನೀರಿನ ಬಳಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತವು ಪ್ರಮುಖ ಹೆಜ್ಜೆಯಿಟ್ಟಿದೆ. ಲೇಹ್‌ನ ಉಪ್ಷಿ ಎಂಬಲ್ಲಿ ಸಿಂಧೂ ನದಿಗೆ ಅಡ್ಡಲಾಗಿ ದೇಶದ ಮೊದಲ ‘ರಾಕ್ ಚೆಕ್ ಡ್ಯಾಮ್’ ಅನ್ನು ಭಾರತ ನಿರ್ಮಿಸಿದೆ. ಇದರಿಂದ ಪಾಕಿಸ್ತಾನಕ್ಕೆ ಹರಿದುಹೋಗುವ ನದಿ ನೀರು ಇನ್ನಷ್ಟು ಕಡಿಮೆಯಾಗಲಿದೆ. ಸಂಪೂರ್ಣವಾಗಿ ನೈಸರ್ಗಿಕ ಬಂಡೆಕಲ್ಲುಗಳನ್ನು ಬಳಸಿ ಸಿಮೆಂಟ್ ಇಲ್ಲದೆ ನಿರ್ಮಿಸಲಾದ ಈ ಆಣೆಕಟ್ಟು ನದಿಯ ನೀರಿನ ಮಟ್ಟವನ್ನು ಸುಮಾರು 10 ಅಡಿಗಳಷ್ಟು ಎತ್ತರಿಸಿದೆ.

ಈ ಡ್ಯಾಂನಿಂದಾಗಿ ಬಿತ್ತನೆ ಸಮಯದಲ್ಲಿ ದೀರ್ಘಕಾಲದಿಂದ ನೀರಿನ ಅಭಾವ ಎದುರಿಸುತ್ತಿದ್ದ ರೈತರಿಗೆ ತಮ್ಮ ಜಮೀನುಗಳಿಗೆ ಸುಲಭವಾಗಿ ನೀರುಣಿಸಲು ಸಾಧ್ಯವಾಗಿದೆ. ಕಳೆದ ಹಲವು ವರ್ಷಗಳಿಂದ ನದಿಯು ಆಳವಾದ ಕಣಿವೆಗಳಲ್ಲಿ ಹರಿಯುತ್ತಿದ್ದರಿಂದ ಕೃಷಿ ಪಂಪ್‌ಗಳ ಮೂಲಕ ನೀರನ್ನು ಎತ್ತಲು ಸಾಧ್ಯವಾಗದೆ ಸ್ಥಳೀಯ ರೈತರು ಬೆಳೆ ಬೆಳೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದರು.

ಇದನ್ನೂ ಓದಿ: ಸಿಂಧೂ ಜಲ ಒಪ್ಪಂದದ ಕುರಿತು ಪಾಕಿಸ್ತಾನದ ಪರ ತೀರ್ಪು ನೀಡಿದ ಮಧ್ಯಸ್ಥಿಕೆ ನ್ಯಾಯಾಲಯ; ಆದೇಶ ತಿರಸ್ಕರಿಸಿದ ಭಾರತ

ಮಣ್ಣಿನ ಸವೆತ ಮತ್ತು ಹೂಳು ನಿಯಂತ್ರಣ:

ಸಿಂಧೂ ನದಿಯ ತೀವ್ರ ಹರಿವಿನಿಂದ ಉಂಟಾಗುವ ಮಣ್ಣಿನ ಸವೆತವನ್ನು ತಡೆಯಲು ಮತ್ತು ಹೂಳು ಮುಂದೆ ಹರಿದು ಹೋಗುವುದನ್ನು ನಿಯಂತ್ರಿಸಲು ಈ ಬಂಡೆಗಳ ತಡೆಗೋಡೆ ಪ್ರಾಥಮಿಕ ತಡೆಯಾಗಿ ಕೆಲಸ ಮಾಡುತ್ತದೆ. ಸಾಂಪ್ರದಾಯಿಕ ಬೃಹತ್ ಕಾಂಕ್ರೀಟ್ ಆಣೆಕಟ್ಟುಗಳ ಬದಲಿಗೆ, ಸ್ಥಳೀಯ ಕಲ್ಲುಗಳು ಮತ್ತು ನೈಸರ್ಗಿಕ ವಸ್ತುಗಳನ್ನು ಬಳಸಿ ಇದನ್ನು ನಿರ್ಮಿಸಲಾಗಿದೆ. ಇದು ನದಿಯ ಸ್ವಾಭಾವಿಕ ಹರಿವನ್ನು ಸಂಪೂರ್ಣವಾಗಿ ತಡೆಯುವುದಿಲ್ಲ.

ಸ್ಥಳೀಯ ಸಮುದಾಯಕ್ಕೆ ಅನುಕೂಲ:

ಹಿಮನದಿಗಳು ಕರಗುವ ಅವಧಿಯಲ್ಲಿ ಹರಿದು ವ್ಯರ್ಥವಾಗುವ ನೀರನ್ನು ಕಾಲೋಚಿತವಾಗಿ ತಡೆಹಿಡಿದು, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕೃಷಿ ಮತ್ತು ದೈನಂದಿನ ಬಳಕೆಗೆ ನೀರು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಡ್ಯಾಂನ ವಿಶೇಷತೆ:

ಈ ನೂತನ ಆಣೆಕಟ್ಟು ಸುಮಾರು 4 ಕೋಟಿ (40 ಮಿಲಿಯನ್) ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ‘ಇಗೂ ಫೇ’ ನೀರಾವರಿ ಕಾಲುವೆಯ ಮೂಲಕ ಗ್ರಾಮಗಳ ಒಣ ಭೂಮಿಗೆ ನೀರು ಪೂರೈಸುತ್ತಿದೆ. ಈ ಯೋಜನೆಯು ಸ್ಥಳೀಯ ಕೃಷಿಗೆ ನೆರವಾಗುವುದಷ್ಟೇ ಅಲ್ಲದೆ, ಪಾಕಿಸ್ತಾನಕ್ಕೂ ಬಲವಾದ ಸಂದೇಶವನ್ನು ರವಾನಿಸಿದೆ. ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ, ನದಿಯ ನೀರು ಪಾಕಿಸ್ತಾನಕ್ಕೆ ಹರಿದು ಹೋಗುವ ಮುನ್ನವೇ ಅದನ್ನು ಗಡಿ ಪ್ರದೇಶದ ತನ್ನದೇ ಸಮುದಾಯಗಳ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿರುವುದರಿಂದ ಪಾಕಿಸ್ತಾನಕ್ಕೆ ಮತ್ತಷ್ಟು ದೊಡ್ಡ ಹೊಡೆತ ಬಿದ್ದಿದೆ.

ಇದನ್ನೂ ಓದಿ: ಹೇಗ್ ಕೋರ್ಟ್ ಆದೇಶಕ್ಕೆ ಕ್ಯಾರೆ ಅನ್ನದ ಭಾರತ: ಪಾಕ್ ಪ್ರಧಾನಿ ಎದುರೇ ಸಿಂಧೂ ನದಿ ನೀರು ನಿರ್ಬಂಧ ಸಮರ್ಥನೆ

ಲಡಾಖ್ ಆಡಳಿತವು ಸಿಂಧೂ ನದಿಯಾದ್ಯಂತ ಇಂತಹ ಇನ್ನಷ್ಟು ಚೆಕ್ ಡ್ಯಾಮ್‌ಗಳನ್ನು ನಿರ್ಮಿಸಲು ಕೆಲಸ ಮಾಡುತ್ತಿದ್ದು, ಕೆಲವು ಸ್ಥಳಗಳಲ್ಲಿ ಕಾಮಗಾರಿ ಆರಂಭವಾಗಿದೆ ಹಾಗೂ ಇನ್ನೂ ಹಲವು ಯೋಜನೆಗಳು ಪ್ರಸ್ತಾಪದಲ್ಲಿವೆ. ಕೇಂದ್ರಾಡಳಿತ ಪ್ರದೇಶದಲ್ಲಿ ಜಲ ಭದ್ರತೆಯನ್ನು ಹೆಚ್ಚಿಸಲು ಮತ್ತು ನೀರಾವರಿ ಸಾಮರ್ಥ್ಯವನ್ನು ವಿಸ್ತರಿಸುವ ಉದ್ದೇಶದಿಂದ ಲಡಾಖ್ ಆಡಳಿತವು ಒಟ್ಟು 36 ಚೆಕ್ ಡ್ಯಾಮ್ ಯೋಜನೆಗಳ ಪ್ರಸ್ತಾವನೆಯನ್ನು ಕೇಂದ್ರ ಜಲ ಶಕ್ತಿ ಸಚಿವಾಲಯಕ್ಕೆ ಸಲ್ಲಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us