AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗ್ ಕೋರ್ಟ್ ಆದೇಶಕ್ಕೆ ಕ್ಯಾರೆ ಅನ್ನದ ಭಾರತ: ಪಾಕ್ ಪ್ರಧಾನಿ ಎದುರೇ ಸಿಂಧೂ ನದಿ ನೀರು ನಿರ್ಬಂಧ ಸಮರ್ಥನೆ

ಭಾರತ ಸಿಂಧೂ ನದಿ ನೀರು ನಿರ್ಬಂಧ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪಾಕಿಸ್ತಾನದ ಜಲತಂತ್ರವನ್ನು ಎದುರಿಸಿ, ಭಾರತ ಹೇಗ್ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿದೆ. ಶಾಂಘೈ ಶೃಂಗಸಭೆಯಲ್ಲಿ ಪಾಕ್ ಪ್ರಧಾನಿ ಮನವಿ ಮಾಡಿದರೂ, ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸುವವರೆಗೂ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಭಾರತ ಅಚಲ ನಿಲುವು ಪ್ರದರ್ಶಿಸಿದೆ. ಸಿಂಧೂ ಜಲ ಒಪ್ಪಂದದ ಪರಿಷ್ಕರಣೆಗೆ ಭಾರತ ಒತ್ತಾಯಿಸುತ್ತಿದೆ.

ಹೇಗ್ ಕೋರ್ಟ್ ಆದೇಶಕ್ಕೆ ಕ್ಯಾರೆ ಅನ್ನದ ಭಾರತ: ಪಾಕ್ ಪ್ರಧಾನಿ ಎದುರೇ ಸಿಂಧೂ ನದಿ ನೀರು ನಿರ್ಬಂಧ ಸಮರ್ಥನೆ
ಸಿಂಧೂ ನದಿ
ನಯನಾ ರಾಜೀವ್
|

Updated on: Sep 02, 2026 | 11:16 AM

Share

ಬಿಷ್ಕೆಕ್, ಸೆಪ್ಟೆಂಬರ್ 02: ಶಾಂಘೈ ಸಹಕಾರ ಸಂಸ್ಥೆಯ (SCO) ಶೃಂಗಸಭೆಯಲ್ಲಿ ಪಾಕಿಸ್ತಾನ(Pakistan)ದ ಪ್ರಧಾನಿ ಶೆಹಬಾಜ್ ಷರೀಫ್ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಬೆಂಬಲ ಗಿಟ್ಟಿಸಿಕೊಳ್ಳಲು ಸಿಂಧೂ ಜಲ ಒಪ್ಪಂದದ (IWT) ವಿಷಯವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ. ನೀರನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಬಾರದು ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಮ್ಮುಖದಲ್ಲೇ ಮನವಿ ಮಾಡಿದ್ದಾರೆ.

ಆದಾಗ್ಯೂ, ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸದ ಹೊರತು ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಮತ್ತು ಸಿಂಧೂ ನದಿ ನೀರಿನ ಮೇಲಿನ ನಿರ್ಬಂಧ ಮುಂದುವರೆಯಲಿದೆ ಎಂಬ ತನ್ನ ಕಠಿಣ ನಿಲುವಿನಲ್ಲಿ ಭಾರತ ಅಚಲವಾಗಿದೆ.

ನೀರನ್ನು ಅಸ್ತ್ರವನ್ನಾಗಿಸಬೇಡಿ: ನೀರು ಈ ಪ್ರದೇಶದ ಜೀವನಾಡಿ. ಇದು ಕೋಟ್ಯಂತರ ಜನರ ಭವಿಷ್ಯವನ್ನು ನಿರ್ಧರಿಸುತ್ತದೆ. ನೀರನ್ನು ರಾಜಕೀಯ ಒತ್ತಡ ಅಥವಾ ಬಲಾತ್ಕಾರದ ಅಸ್ತ್ರವಾಗಿ ಬಳಸಲು ಬಿಡಬಾರದು ಎಂದು ಷರೀಫ್ ಪರೋಕ್ಷವಾಗಿ ಭಾರತವನ್ನು ದೂಷಿಸಿದ್ದಾರೆ.

ಒಪ್ಪಂದ ಗೌರವಿಸಲು ಮನವಿ: 1960 ರ ಸಿಂಧೂ ಜಲ ಒಪ್ಪಂದವನ್ನು ಅಕ್ಷರಶಃ ಪಾಲಿಸಬೇಕು ಮತ್ತು ಜಲ ಹಂಚಿಕೆಯಲ್ಲಿ ಪ್ರಾದೇಶಿಕ ಸಹಕಾರ ಅತ್ಯಗತ್ಯ ಎಂದು ಜಾಗತಿಕ ನಾಯಕರ ಮುಂದೆ ಪ್ರತಿಪಾದಿಸಿದರು.

ನ್ಯಾಯಮಂಡಳಿಯ ಆದೇಶ: ನೆದರ್ಲೆಂಡ್ಸ್‌ನ ಹೇಗ್‌ನಲ್ಲಿರುವ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯವು , ಸಿಂಧೂ ಜಲ ಒಪ್ಪಂದವು ಸಂಪೂರ್ಣವಾಗಿ ಜಾರಿಯಲ್ಲಿದೆ ಮತ್ತು ಭಾರತವು ಏಕಪಕ್ಷೀಯವಾಗಿ ಒಪ್ಪಂದವನ್ನು ಅಮಾನತಿನಲ್ಲಿಡಲು ಸಾಧ್ಯವಿಲ್ಲ ಎಂದು ಹೇಳಿ ಜಮ್ಮು-ಕಾಶ್ಮೀರದ ರಾಟ್ಲೆ ಜಲವಿದ್ಯುತ್ ಯೋಜನೆಯ ಕಾಮಗಾರಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು.

ಮತ್ತಷ್ಟು ಓದಿ:

ಸಿಂಧೂ ಜಲ ಒಪ್ಪಂದದ ಕುರಿತು ಪಾಕಿಸ್ತಾನದ ಪರ ತೀರ್ಪು ನೀಡಿದ ಮಧ್ಯಸ್ಥಿಕೆ ನ್ಯಾಯಾಲಯ; ಆದೇಶ ತಿರಸ್ಕರಿಸಿದ ಭಾರತ

ಭಾರತದಿಂದ ಸಂಪೂರ್ಣ ತಿರಸ್ಕಾರ: ಭಾರತದ ವಿದೇಶಾಂಗ ಸಚಿವಾಲಯವು (MEA) ಈ ಆದೇಶವನ್ನು ಕಸದಬುಟ್ಟಿಗೆ ಎಸೆದಿದೆ. ವಿಶ್ವಬ್ಯಾಂಕ್ ನಿಯಮಬಾಹಿರವಾಗಿ ರಚಿಸಿರುವ ಈ ನ್ಯಾಯಮಂಡಳಿಗೆ ಭಾರತದ ಸಾರ್ವಭೌಮ ಯೋಜನೆಗಳ ಮೇಲೆ ಯಾವುದೇ ಅಧಿಕಾರ ವ್ಯಾಪ್ತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಪಹಲ್ಗಾಮ್ ದಾಳಿಯ ಪರಿಣಾಮ: ಏಪ್ರಿಲ್ 2025 ರಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಬಲಿಯಾದ ಬೆನ್ನಲ್ಲೇ, ಕೇಂದ್ರ ಸರ್ಕಾರದ ಭದ್ರತಾ ಸಂಪುಟ ಸಮಿತಿ (CCS) ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿ ಇರಿಸಲು ನಿರ್ಧರಿಸಿತ್ತು.

ಮೋದಿಯ ಖಡಕ್ ಸಂದೇಶ: ಶಹಬಾಜ್ ಭಾಷಣಕ್ಕೂ ಮುನ್ನವೇ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ಯಾರಿಗೂ ಆಸ್ತಿಯಾಗಲು ಸಾಧ್ಯವಿಲ್ಲ, ಉಗ್ರರಿಗೆ ಹಣ ಮತ್ತು ಆಶ್ರಯ ನೀಡುವ ದೇಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನದ ಮುಖಕ್ಕೆ ಹೊಡೆದಂತೆ ಹೇಳಿದ್ದರು.

ಪಾಕಿಸ್ತಾನದ ಜಲ ಬಿಕ್ಕಟ್ಟು: ಪಾಕಿಸ್ತಾನದ ಕೃಷಿ ಮತ್ತು ಆರ್ಥಿಕತೆಯ ಶೇಕಡಾ 80 ಕ್ಕೂ ಹೆಚ್ಚು ಭಾಗ ಸಿಂಧೂ ನದಿ ವ್ಯವಸ್ಥೆಯನ್ನೇ (ಸಿಂಧೂ, ಝೀಲಂ, ಚೆನಾಬ್) ಅವಲಂಬಿಸಿದೆ. ಭಾರತವು ದತ್ತಾಂಶ ಹಂಚಿಕೆ ಮತ್ತು ನಿಯಮಿತ ಸಭೆಗಳನ್ನು ಸ್ಥಗಿತಗೊಳಿಸಿರುವುದರಿಂದ ಪಾಕಿಸ್ತಾನದಲ್ಲಿ ತೀವ್ರ ನೀರಿನ ಅಭಾವದ ಆತಂಕ ಶುರುವಾಗಿದೆ.

ಒಪ್ಪಂದದ ಪರಿಷ್ಕರಣೆಗೆ ಭಾರತದ ಪಟ್ಟು: 1960 ರ ಪರಿಸ್ಥಿತಿಗೂ ಇಂದಿನ ಜನಸಂಖ್ಯಾ ಬೆಳವಣಿಗೆ, ಶುದ್ಧ ಇಂಧನ ಬೇಡಿಕೆ ಮತ್ತು ಹವಾಮಾನ ಬದಲಾವಣೆಗೂ ಭಾರಿ ವ್ಯತ್ಯಾಸವಿದ್ದು, ಒಪ್ಪಂದವನ್ನು ಪುನರ್ ಪರಿಶೀಲಿಸಬೇಕೆಂದು ಭಾರತ ಈ ಹಿಂದೆಯೇ ನೋಟಿಸ್ ನೀಡಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us