- Kannada News Photo gallery A businessman who grows Taiwan pink guavas and earns millions in Kolar, Kannada News
ಕೃಷಿ ಆಸಕ್ತಿ ತಂದ ಆದಾಯ! ತೈವಾನ್ ಪಿಂಕ್ ಸೀಬೆ ಬೆಳೆದು ಲಕ್ಷಾಂತರ ಆದಾಯ ಗಳಿಸುತ್ತಿರೋ ಉದ್ಯಮಿ
ಅವರದ್ದು ಕೃಷಿ ಹಿನ್ನೆಲೆ ಇರುವ ಕುಟುಂಬ ಆದರೂ ಉದ್ಯಮಿಯಾಗಿ ಹೆಸರು ಮಾಡಿರುವ ಅವರಿಗೆ ಕೃಷಿ ಮೇಲೆ ಎಲ್ಲಿಲ್ಲದ ಆಸಕ್ತಿ. ಹಾಗಾಗಿಯೇ ಅವರು ಸ್ನೇಹಿತರೊಬ್ಬರ ಸಲಹೆ ಮೇರೆಗೆ ಸೀಬೆ ಬೆಳೆಯನ್ನು ಬೆಳೆದಿದ್ದಾರೆ, ಆದಾಯಕ್ಕೊಂದು ಆದಾಯ ಎನ್ನುವಂತೆ ಸೀಬೆ ಬೆಳೆ ಕೂಡ ಅವರ ಕೈ ಹಿಡಿದು ಲಕ್ಷ ಲಕ್ಷ ಆದಾಯ ತಂದು ಕೊಡುತ್ತಿದೆ.
Updated on: Sep 22, 2024 | 3:47 PM

ಹಲವು ದಶಕಗಳಿಂದ ಕೋಲಾರ ಜಿಲ್ಲೆಯ ರೈತರು ಟೊಮ್ಯಾಟೋ ಸೇರಿದಂತೆ ತರಕಾರಿ ಬೆಳೆಗಳನ್ನು ಕಷ್ಟಪಟ್ಟು ಬೆಳೆದು ಸರಿಯಾದ ಬೆಲೆ ಸಿಗದೆ ಅದೃಷ್ಟ ಇದ್ದವರಿಗೆ ಬೆಲೆ ಎನ್ನುವ ಪರಿಸ್ಥಿತಿ ಈಗಲೂ ಮುಂದುವರೆದಿದೆ. ಆದರೂ ಉದ್ಯಮಿಯಾಗಿರುವ ಕೋಲಾರ ತಾಲ್ಲೂಕಿನ ಕೊಂಡರಾಜನಹಳ್ಳಿ ಗ್ರಾಮದ ಮರೀಗೌಡ ಅವರು ತಮ್ಮ ಕೃಷಿ ಆಸಕ್ತಿಗಾಗಿ ತಮ್ಮ ಕುಟುಂಬದೊಂದಿಗೆ ಸೇರಿ ಒಂದಷ್ಟು ಕೆಲಸಗಾರರನ್ನು ಇಟ್ಟುಕೊಂಡು ಕೃಷಿ ಮಾಡುತ್ತಾರೆ.

ಕಳೆದ ಕೆಲವು ತಿಂಗಳುಗಳ ಹಿಂದೆ ಮರೀಗೌಡ ಅವರು ತೋಟಗಾರಿಕಾ ಇಲಾಖೆ ಅಧಿಕಾರಿಯಾದ್ದ ತಮ್ಮ ಸ್ನೇಹಿತ ಶಿವಕುಮಾರ್ ಅವರ ಸಲಹೆಯಂತೆ ಹೊಸದೊಂದು ಬೆಳೆ ಬೆಳೆದು ಉತ್ತಮ ಲಾಭ ಮಾಡಬೇಕೆಂದು ನಿರ್ಧರಿಸಿ, ತಮ್ಮ ಸ್ನೇಹಿತನ ಸಲಹೆಯಂತೆ ಥೈವಾನ್ ಲೈಟ್ ಪಿಂಕ್ ಎಂಬ ತಳಿಯ ಸೀಬೆ ಗಿಡಗಳನ್ನು ಛತ್ತೀಸ್ಘಡ ದಿಂದ ಒಂದು ಸೀಬೆ ಸಸಿಗೆ ನೂರು ರೂಪಾಯಿ ಕೊಟ್ಟು ತಂದು ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಸುಮಾರು 2000 ಸೀಬೆ ಸಸಿಗಳನ್ನು ನಾಟಿ ಮಾಡಿದ್ದಾರೆ.

ಎರಡು ವರ್ಷಗಳ ಕಾಲ ಆರೈಕೆ ಮಾಡಿದ ನಂತರ ಕಳೆದ ನಾಲ್ಕು ತಿಂಗಳಿಂದ ಸೀಬೆ ಉತ್ತಮ ಫಸಲು ಕೊಡಲು ಆರಂಭಿಸಿದೆ, ಇವರ ನಿರೀಕ್ಷೆಗೂ ಮೀರಿದ ಬೆಳೆ ಬಂದಿದ್ದು, ಉತ್ತಮ ಆದಾಯ ತಂದು ಕೊಡುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ ತಿಂಗಳಿಗೆ ಸರಾಸರಿ ಒಂದು ಲಕ್ಷ ರೂಪಾಯಿಯಷ್ಟು ಆದಾಯ ಬರುತ್ತಿದೆ. ಸದ್ಯ ಖರೀದಿದಾರರು ತಮ್ಮ ತೋಟದಲ್ಲಿ ಕೆ.ಜಿ. ಸೀಬೆ ಹಣ್ಣಿಗೆ 60 ರೂಪಾಯಿ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಹಾಗಾಗಿ ಒಳ್ಳೆಯ ಆದಾಯ ತಂದುಕೊಡುತ್ತಿದಯಂತೆ. ಜೊತೆಗೆ ಈ ಸೀಬೆ ಹದಿನೈದು ವರ್ಷ ಫಸಲು ಕೊಡುವುದರಿಂದ ತಾವು ಹಾಕಿದ ಬಂಡವಾಳಕ್ಕಿಂತ ಹತ್ತುಪಟ್ಟು ಆದಾಯ ಕೊಡುತ್ತದೆ ಎಂದು ಮರೀಗೌಡರು ಹೇಳುತ್ತಿದ್ದಾರೆ.

ಇನ್ನು ಕೊಂಡರಾಜನಹಳ್ಳಿ ಗ್ರಾಮದ ಮರೀಗೌಡ ಅವರಿಗೆ ಹೋಟೆಲ್, ರಿಯಲ್ ಎಸ್ಟೇಟ್, ಸೇರಿದಂತೆ ಬೇರೆ ಬೇರೆ ಉದ್ಯಮಗಳಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರ ಜೊತೆಗೆ ಅವರು ತಮಗಿರುವ ಕೃಷಿ ಆಸಕ್ತಿಯಿಂದಾಗಿ ತಮ್ಮ ಮನೆಯ ಬಳಿ ಇರುವ ನಾಲ್ಕು ಎಕರೆ ಪ್ರದೇಶದಲ್ಲಿ ಥೈವಾನ್ ಲೈಟ್ ಪಿಂಕ್ ತಳಿಯ ಸೀಬೆಯನ್ನು ಬೆಳೆದಿದ್ದಾರೆ. ಸದ್ಯ ಎರಡು ವರ್ಷಗಳ ಕಾಲ ಸೀಬೆ ಗಿಡಗಳನ್ನು ನಿರ್ವಹಣೆ ಮಾಡಿದ ನಂತರ ಈಗ ಫಸಲು ಬರಲಾರಂಭಿಸಿದೆ.

ಇನ್ನು ಸಾಲಿನಿಂದ ಸಾಲಿ ಹತ್ತು ಅಡಿ ಹಾಗೂ ಗಿಡದಿಂದ ಗಿಡಕ್ಕೆ ಆರು ಅಡಿ ಅಂತರದಲ್ಲಿ ಸಸಿಯನ್ನು ನೆಡಲಾಗಿದೆ. ನಂತರ ನಾಲ್ಕು ಎಕರೆ ಸರಾಸರಿ 2000 ಸಸಿಗಳನ್ನು ತಂದು ನೆಡಲಾಗಿದೆ, ಸೀಬೆ ಸಸಿ ಬೆಳೆಯುತ್ತಿದ್ದಂತೆ, ಸೀಬೆ ಸಸಿಗಳ ಸಾಲಿನ ಮಧ್ಯದಲ್ಲಿ, ಟೊಮ್ಯಾಟೋ, ಎಲೆಕೋಸು, ಆಲೂಗಡ್ಡೆ, ಸೇರಿದಂತೆ ವಿವಿದ ಬೆಳೆಗಳನ್ನು ಕೂಡಾ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಈ ಮೂಲಕ ಸೀಬೆಯಿಂದ ನಿತ್ಯ ನಿರಂತರ ಆದಾಯ ತರುತ್ತಿದೆ. ಅದರ ಜೊತೆಗೆ ಮೂರು ತಿಂಗಳ ಅವದಿಯಲ್ಲಿ ಒಳ್ಳೆಯ ಆದಾಯ ತರುವ ವಿವಿದ ಟೊಮ್ಯಾಟೋ ಸೇರಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯ ಬರುತ್ತಿದೆ. ಈ ಮೂಲಕ ರೈತರು ಒಂದೇ ರೀತಿಯ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸುವ ಬದಲು ಈ ರೀತಿಯ ಉತ್ತಮ ಆದಾಯ ತರುವ ಬೆಳೆಗಳನ್ನು ಬೆಳೆಯಬೇಕು ಅನ್ನೋದು ಮರೀಗೌಡ ಕುಟುಂಬಸ್ಥರು ಹೇಳುತ್ತಿದ್ದಾರೆ.

ಒಟ್ಟಾರೆ ಕೃಷಿ ಎನ್ನುವುದು ಕೆಲವರಿಗೆ ಆದಾಯ ಕೊಡುವ ಕಸುಬಾದರೆ, ಮತ್ತೆ ಕೆಲವರಿಗೆ ಆರೋಗ್ಯ ಕೊಡುವ ಕಸುಬು. ಹಾಗಾಗಿ ಮರೀಗೌಡ ಕುಟುಂಬ ಕೃಷಿಯನ್ನು ಆದಾಯಕ್ಕಲ್ಲದಿದ್ದರೂ ಆರೋಗ್ಯಕ್ಕಾಗಿ ತಮ್ಮ ಆಸಕ್ತಿಗಾಗಿ ನಿಷ್ಠೆಯಿಂದ ಮಾಡಿದರೂ ಆದಾಯ ಮಾತ್ರ ಅವರ ಕೈಬಿಟ್ಟಿಲ್ಲ. ಹಾಗಾಗಿ ಆಸಕ್ತಿಯಿಂದ ಮಾಡಿದರೆ ಮುಟ್ಟಿದ್ದೆಲ್ಲಾ ಲಾಭ ಎನ್ನುವುದಕ್ಕೆ ಮರೀಗೌಡರೇ ಉದಾಹರಣೆ.



















