ಸಸ್ಯ ಕಾಶಿ ಲಾಲ್ ಬಾಗ್ನಲ್ಲಿ ನೆಲಕ್ಕುರುಳಿದ 150 ವರ್ಷದ ಹಳೆ ವೃಕ್ಷ
ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಹಲವು ದೊಡ್ಡ ಮರಗಳು ನೆಲಕ್ಕುರುಳುತ್ತಿವೆ. ಇದೀಗ ಸಸ್ಯ ಕಾಶಿ ಲಾಲ್ ಬಾಗ್ನಲ್ಲಿ 150 ವರ್ಷಗಳಷ್ಟು ಹಳೆಯ ಮರವೂ ಉರುಳಿದೆ. ಮರಗಳು ಉರುಳುತ್ತಿರುವುದರಿಂದ ಜನರಲ್ಲಿ ಆತಂಕ ಶುರುವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Updated on: May 25, 2025 | 8:53 AM

ಬೆಂಗಳೂರಿನಲ್ಲಿ ವರುಣನ ಆರ್ಭಟ ಕೊಂಚ ಕಡಿಮೆಯಾಗಿರುವ ಹೊತ್ತಲ್ಲೇ ಸಂತ್ರಸ್ತ ಪೀಡಿತ ಪ್ರದೇಶಗಳು ಚೇತರಿಕೆ ಕಾಣುತ್ತಿವೆ. ಆದರೆ ಹವಾಮಾನ ಇಲಾಖೆ ಪ್ರಕಾರ ಮಳೆ ಮತ್ತೆ ಸುರಿಯುವ ಸಾಧ್ಯತೆಯಿದೆ. ಇನ್ನು ನಗರದಲ್ಲಿ ಬೃಹತ್ ಮರಗಳು ನೆಲಕ್ಕೆ ಉರುಳುವ ಪ್ರಕರಣಗಳು ಮುಂದುವರೆದಿದ್ದು, ಒಂದೂವರೆ ಶತಮಾನ ಹಳೆಯ ಮರ ಕೂಡ ಧರಶಾಹಿ ಆಗಿದೆ.

ಬೆಂಗಳೂರಿನಲ್ಲಿ ಸದ್ದು ಮಾಡುತ್ತಿರುವ ಗಾಳಿ ಸಹಿತ ವರುಣನ ಅಬ್ಬರಕ್ಕೆ ಬೃಹತ್ ಮರಗಳು, ಮರದ ರೆಂಬೆ ಕೊಂಬೆಗಳು ಏಕಾಏಕಿ ನೆಲಸಮ ಆಗುತ್ತಿವೆ. ಹೀಗಾಗಿ ಸಾಕಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿನ್ನೆ ಸಂಜೆ ಸಹ ಸಸ್ಯ ಕಾಶಿ ಲಾಲ್ ಬಾಗ್ ನಲ್ಲಿ ಬೃಹತ್ ಮರವೊಂದು ನೆಲಕ್ಕೆ ಉರುಳಿದೆ.

ಸುಮಾರು 150 ವರ್ಷದಷ್ಟು ಹಳೆಯದಾದ ಫೈಕಸ್ ಕನ್ನಿಂಗ್ ಹ್ಯಾಮಿ ಪ್ರಭೇದದ ಮರ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಾಲ್ ಬಾಗ್ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಮರವನ್ನು ತೆರವು ಮಾಡಲಾಗಿದೆ.

ಇನ್ನು ನಗರದಲ್ಲಿ ಬಲಿಗಾಗಿ ಒಣಗಿದ ಮರ ಹಾಗೂ ಮರದ ರೆಂಬೆ ಕೊಂಬೆಗಳು ಕಾದು ನಿಂತಿವೆ. ಇತ್ತೀಚೆಗೆ ಕೋರಮಂಗಲ ಆರನೇ ಬ್ಲಾಕ್ನಲ್ಲಿ ಮರ ಬಿದ್ದು, ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿದ್ದರು.

ಮುಂದಿನ ಐದು ದಿನ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಸಾಧಾರಣ, ಭಾರೀ ಹಾಗೂ ಅತ್ಯಧಿಕ ಭಾರೀ ಮಳೆ ಆಗುವ ಲಕ್ಷಣಗಳು ಇವೆ. ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಮೇ 28 ರವರೆಗೆ ಮಳೆ ಹಗುರದಿಂದ ಸಾಧಾರಣವಾಗಿ, ಕೆಲವೆಡೆ ಭಾರೀ ಮಳೆ ಆಗುವ ನಿರೀಕ್ಷೆ ಇದೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್, ವೈಯಿಸ್ ಓವರ್, ಎಡಿಟಿಂಗ್ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.
Read More



