- Kannada News Photo gallery Cricket photos BCCI To Appoint Different White and Red-Ball Coaches If India Lose BGT
ಟೀಮ್ ಇಂಡಿಯಾ ಕೋಚ್ ಬದಲಾವಣೆ ಸೂಚನೆ ನೀಡಿದ ಬಿಸಿಸಿಐ: ವರದಿ
ನ್ಯೂಝಿಲೆಂಡ್ ವಿರುದ್ಧದ 3-0 ಅಂತರದ ಹೀನಾಯ ಸೋಲಿನಿಂದ ಮುಜುಗರಕ್ಕೆ ಒಳಗಾಗಿರುವ ಬಿಸಿಸಿಐ ಕೆಲ ದಿನಗಳ ಹಿಂದೆಯಷ್ಟೇ ಕೋಚ್ ಗೌತಮ್ ಗಂಭೀರ್ ಅವರನ್ನು ಪರಿಶೀಲನಾ ಸಭೆಗೆ ಆಹ್ವಾನಿಸಿತ್ತು. ಈ ಸಭೆಯಲ್ಲಿ ಗಂಭೀರ್ ಅವರಿಗೆ ಕ್ಲಾಸ್ ತೆಗೆದುಕೊಂಡಿರುವ ಬಿಸಿಸಿಐ ಅಧಿಕಾರಿಗಳು, ಮುಂಬರುವ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ಮೂಡಿಬರಬೇಕೆಂದು ಖಡಕ್ ಸೂಚನೆ ನೀಡಿದೆ.
Updated on:Nov 09, 2024 | 2:35 PM

ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದ ಬೆನ್ನಲ್ಲೇ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಅದರಲ್ಲೂ ಗೌತಮ್ ಗಂಭೀರ್ ಅವರ ಕಾರ್ಯ ವೈಖರಿ ಬಗ್ಗೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಹೀಗಾಗಿಯೇ ಮುಂಬರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಗಂಭೀರ್ ಪಾಲಿಗೆ ಅಗ್ನಿ ಪರೀಕ್ಷೆ. ಈ ಪರೀಕ್ಷೆಯಲ್ಲಿ ಟೀಮ್ ಇಂಡಿಯಾ ವಿಫಲವಾದರೆ ಗಂಭೀರ್ ತಲೆದಂಡವಾಗುವುದು ಖಚಿತ ಎನ್ನಲಾಗುತ್ತಿದೆ.

ಕೆಲ ವರದಿಗಳ ಮಾಹಿತಿ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತರೆ, ಭಾರತ ತಂಡದ ಕೋಚ್ ಬದಲಾಗುವುದು ಖಚಿತ. ಅಲ್ಲದೆ ಟೆಸ್ಟ್ ಹಾಗೂ ಏಕದಿನ/ಟಿ20 ತಂಡಗಳಿಗೆ ಪತ್ಯೇಕ ತರಬೇತುದಾರರನ್ನು ನೇಮಿಸಿಕೊಳ್ಳಲು ಬಿಸಿಸಿಐ ಚಿಂತಿಸಿದೆ.

ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸೋತರೆ ಗೌತಮ್ ಗಂಭೀರ್ ಅವರನ್ನು ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಮುಂಬರುವ ಚಾಂಪಿಯನ್ಸ್ ಟ್ರೋಫಿವರೆಗೆ ಅವರನ್ನು ಏಕದಿನ ತಂಡದ ಕೋಚ್ ಆಗಿ ಮುಂದುವರೆಸಬಹುದು.

ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿದರೆ ಗೌತಮ್ ಗಂಭೀರ್ ಅವರಿಗೆ ಗೇಟ್ ಪಾಸ್ ಸಿಗಬಹುದು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಗಂಭೀರ್ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಉಭಯ ತಂಡಗಳು 5 ಪಂದ್ಯಗಳನ್ನಾಡಲಿದ್ದು, ಇದರಲ್ಲಿ ಟೀಮ್ ಇಂಡಿಯಾ 4-0 ಅಂತರದಿಂದ ಗೆದ್ದರೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಬಹುದು. ಒಂದು ವೇಳೆ ಭಾರತ ತಂಡವು ಫೈನಲ್ಗೇರಲು ವಿಫಲರಾದರೆ, ಗೌತಮ್ ಗಂಭೀರ್ ಅವರ ಕಾರ್ಯ ವೈಖರಿ ಬಗ್ಗೆ ಮತ್ತೆ ಪ್ರಶ್ನೆಗಳೇಳುವುದು ಖಚಿತ. ಹೀಗಾಗಿಯೇ ಭಾರತ ಟೆಸ್ಟ್ ತಂಡದ ಕೋಚ್ ಸ್ಥಾನ ಉಳಿಸಿಕೊಳ್ಳಲು ಗೌತಮ್ ಗಂಭೀರ್ಗೆ ಆಸ್ಟ್ರೇಲಿಯಾದಲ್ಲಿ ಅಮೋಘ ಗೆಲುವು ಅನಿವಾರ್ಯ.
Published On - 1:24 pm, Sat, 9 November 24
