- Kannada News Photo gallery Cricket photos Hardik Pandya in big trouble after joining Mumbai Indians likely to miss IND vs SA series
IND vs SA Series: ಮುಂಬೈ ಇಂಡಿಯನ್ಸ್ ಸೇರಿದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ ದೊಡ್ಡ ಆಘಾತ: ಏನದು?
Hardik Pandya Injury: ಭಾರತದ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಅವರು ಪಾದದ ಅಸ್ಥಿರಜ್ಜು ನೋವಿನಿಂದ ಬಳಲುತ್ತಿದ್ದಾರೆ. ಅವರಿನ್ನೂ ಗುಣಮುಖರಾಗದ ಕಾರಣ ಕನಿಷ್ಠ ಒಂದು ತಿಂಗಳ ಕಾಲ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಪಾಂಡ್ಯ ಗಾಯಗೊಂಡಿದ್ದರು.
Updated on: Nov 30, 2023 | 9:10 AM

ಕಳೆದ ಕೆಲವು ದಿನಗಳಿಂದ ಭರ್ಜರಿ ಸುದ್ದಿಯಲ್ಲಿರುವ ಟೀಮ್ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಇದೀಗ ದೊಡ್ಡ ಆಘಾತ ಉಂಟಾಗಿದೆ. ಗುಜರಾತ್ ಟೈಟಾನ್ಸ್ ಪ್ರಾಂಚೈಸಿ ತೊರೆದು ಮುಂಬೈ ಇಂಡಿಯನ್ಸ್ ಸೇರಿದ ಬೆನ್ನಲ್ಲೇ ಪಾಂಡ್ಯಗೆ ಹಿನ್ನಡೆ ಆಗಿದೆ.

ಭಾರತದ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಅವರು ಪಾದದ ಅಸ್ಥಿರಜ್ಜು ನೋವಿನಿಂದ ಬಳಲುತ್ತಿದ್ದಾರೆ. ಅವರಿನ್ನೂ ಗುಣಮುಖರಾಗದ ಕಾರಣ ಕನಿಷ್ಠ ಒಂದು ತಿಂಗಳ ಕಾಲ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಪಾಂಡ್ಯ ಗಾಯಗೊಂಡಿದ್ದರು.

ಗಾಯಕ್ಕೆ ತುತ್ತಾದ ನಂತರ ಪಾಂಡ್ಯ ಅವರು ವಿಶ್ವಕಪ್ನಿಂದ ಹೊರಗುಳಿದಿದ್ದರು. ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೂ ಆಯ್ಕೆ ಆಗಿರಲಿಲ್ಲ. ಇದೀಗ ಹಾರ್ದಿಕ್ ಕನಿಷ್ಠ ನಾಲ್ಕು ವಾರಗಳ ಕಾಲ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಅಂದರೆ ಅವರು ಡಿಸೆಂಬರ್ನಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಸರಣಿಯನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ.

ಇಂದು (ಗುರುವಾರ) ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಬಿಸಿಸಿಐ ಎಲ್ಲಾ ಮೂರು ಸ್ವರೂಪಗಳಿಗೆ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ ಅಲಭ್ಯರಾಗಿರುವ ಕಾರಣ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕಾರಿಗಳು ರೋಹಿತ್ ಶರ್ಮಾ ಅವರನ್ನು ಟಿ20 ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸುತ್ತಿದೆ.

ಕಳೆದ ವರ್ಷ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಸೋತ ನಂತರ ರೋಹಿತ್ ಟಿ20 ಸ್ವರೂಪದ ನಾಯಕತ್ವವನ್ನು ತೊರೆದಿದ್ದರು. ಬಿಸಿಸಿಐ ಕಾರ್ಯದರ್ಶಿ ಮತ್ತು ಆಯ್ಕೆ ಸಮಿತಿಯ ಸಂಯೋಜಕ ಜಯ್ ಶಾ ಅವರು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ T20 ಮಾದರಿಯಲ್ಲಿ ಆಡಲು ಬಯಸುವುದಿಲ್ಲ ಎಂದು ರೋಹಿತ್ ಈ ಹಿಂದೆ ಹೇಳಿದ್ದರು. ಆದರೆ ಇತ್ತೀಚಿನ ಏಕದಿನ ವಿಶ್ವಕಪ್ನಲ್ಲಿ ಅವರು ನಾಯಕತ್ವ ವಹಿಸಿದ ರೀತಿ ಕಂಡು, ಬಿಸಿಸಿಐ ಅವರು T20 ವಿಶ್ವಕಪ್ವರೆಗೆ ಈ ಸ್ವರೂಪದಲ್ಲಿ ಆಡಲು ಅವಕಾಶ ನೀಡುವ ಬಗ್ಗೆ ಭಾವಿಸುತ್ತದೆ. ಮುಂದಿನ ವರ್ಷ ಜೂನ್-ಜುಲೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲೀ ನಾಯಕತ್ವವನ್ನು ನಿರ್ವಹಿಸಬೇಕು ಎಂದು ಬಿಸಿಸಿಐ ರೋಹಿತ್ ಬಳಿ ಕೇಳಲಿದೆ.

ರೋಹಿತ್ ಒಪ್ಪದಿದ್ದರೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ನಾಯಕರಾಗಲಿದ್ದಾರೆ. ಸೂರ್ಯ ಸದ್ಯ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 2-1 ಮುನ್ನಡೆ ಪಡೆದುಕೊಂಡಿದೆ.




