- Kannada News Photo gallery Cricket photos IPL 2025: AB De Villiers picks his 4 priority players for RCB
IPL 2025: RCB ಖರೀದಿಸಲೇಬೇಕಾದ 4 ಆಟಗಾರರನ್ನು ಹೆಸರಿಸಿದ ABD
IPL 2025 RCB: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಮೂವರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಇದೀಗ ತಂಡದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಹಾಗೂ ಯಶ್ ದಯಾಳ್ ಉಳಿದುಕೊಂಡಿದ್ದಾರೆ. ಇನ್ನು ಮೆಗಾ ಹರಾಜಿನ ಮೂಲಕ ಆರ್ಸಿಬಿ ಖರೀದಿಸಬೇಕಾದ ನಾಲ್ವರು ಬೌಲರ್ಗಳನ್ನು ಎಬಿ ಡಿವಿಲಿಯರ್ಸ್ ಹೆಸರಿಸಿದ್ದಾರೆ.
Updated on: Nov 07, 2024 | 10:31 AM

ಐಪಿಎಲ್ ಇತಿಹಾಸದಲ್ಲೇ ಕಪ್ ಗೆಲ್ಲದ ಕೆಲವೇ ಕೆಲವು ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಒಂದು. ಕಳೆದ 17 ವರ್ಷಗಳಲ್ಲಿ ಆರ್ಸಿಬಿ ಕಪ್ ಗೆಲ್ಲದಿರಲು ಮುಖ್ಯ ಕಾರಣ ಬೌಲರ್ಗಳು ಎಂದರೆ ತಪ್ಪಾಗಲಾರದು. ಏಕೆಂಧರೆ ಪ್ರತಿ ಸೀಸನ್ನಲ್ಲೂ ಆರ್ಸಿಬಿ ಬಲಿಷ್ಠ ದಾಂಡಿಗರೊಂದಿಗೆ ಕಣಕ್ಕಿಳಿಯುವ ಆರ್ಸಿಬಿ ಪಡೆಯಲ್ಲಿ ಉತ್ತಮ ಬೌಲರ್ಗಳ ಕೊರತೆ ಎದ್ದು ಕಾಣುತ್ತಿತ್ತು.

ಹೀಗಾಗಿಯೇ ಈ ಬಾರಿ ಆರ್ಸಿಬಿ ಪ್ರಮುಖ ಬೌಲರ್ಗಳ ಖರೀದಿಗೆ ಒತ್ತು ನೀಡಬೇಕೆಂದು ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಐಪಿಎಲ್ ಮೆಗಾ ಹರಾಜಿನ ಮೂಲಕ ಆರ್ಸಿಬಿ ಖರೀದಿಸಲೇಬೇಕಾದ ನಾಲ್ವರು ಬೌಲರ್ಗಳನ್ನು ಸಹ ಎಬಿಡಿ ಹೆಸರಿಸಿದ್ದಾರೆ. ಅವರೆಂದರೆ...

ಯುಜ್ವೇಂದ್ರ ಚಹಲ್: ಐಪಿಎಲ್ ಮೆಗಾ ಹರಾಜಿನ ಮೂಲಕ ಆರ್ಸಿಬಿ ಯುಜ್ವೇಂದ್ರ ಚಹಲ್ ಅವರನ್ನು ಖರೀದಿಸಲೇಬೇಕು. ಏಕೆಂದರೆ ಐಪಿಎಲ್ನಲ್ಲಿ 160 ಪಂದ್ಯಗಳಿಂದ 205 ವಿಕೆಟ್ ಕಬಳಿಸಿರುವ ಚಹಲ್ ಆಯ್ಕೆಯಿಂದ ಆರ್ಸಿಬಿ ತನ್ನ ಸ್ಪಿನ್ ವಿಭಾಗವನ್ನು ಬಲಿಷ್ಠಗೊಳಿಸಬಹುದು ಎಂದು ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

ಕಗಿಸೊ ರಬಾಡ: ಆರ್ಸಿಬಿ ತನ್ನ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಸೌತ್ ಆಫ್ರಿಕಾ ವೇಗಿ ಕಗಿಸೊ ರಬಾಡ ಅವರನ್ನು ಆಯ್ಕೆ ಮಾಡಬೇಕು. ರಬಾಡ 80 ಐಪಿಎಲ್ ಪಂದ್ಯಗಳಿಂದ 117 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಅವರ ಆಯ್ಕೆಯು ಆರ್ಸಿಬಿ ತಂಡದ ಬಲವನ್ನು ಹೆಚ್ಚಿಸಲಿದೆ ಎಂದು ಎಬಿಡಿ ತಿಳಿಸಿದ್ದಾರೆ.

ರವಿಚಂದ್ರನ್ ಅಶ್ವಿನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅನುಭವಿ ಬೌಲರ್ನ ಅವಶ್ಯಕತೆ ಕೂಡ ಇದೆ. ಇದಕ್ಕಾಗಿ ಅನುಭವಿ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಅವರನ್ನು ಖರೀದಿಸಬೇಕು. ಈ ಮೂಲಕ ಚಹಲ್-ಅಶ್ವಿನ್ ಜೋಡಿಯೊಂದಿಗೆ ಆರ್ಸಿಬಿ ಸ್ಪಿನ್ ವಿಭಾಗವನ್ನು ಬಲಪಡಿಸಿಕೊಳ್ಳಬಹುದು ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.

ಭುವನೇಶ್ವರ್ ಕುಮಾರ್: ಕಗಿಸೊ ರಬಾಡಗೆ ಜೋಡಿಯಾಗಿ ಆರ್ಸಿಬಿ ಭಾರತೀಯ ಬೌಲರ್ ಆಗಿ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಬೇಕು. ಅನುಭವಿ ವೇಗಿಯಾಗಿರುವ ಭುವಿ ಐಪಿಎಲ್ನಲ್ಲಿ ಈಗಾಗಲೇ 181 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಅವರ ಆಗಮನದಿಂದಾಗಿ ಆರ್ಸಿಬಿ ಬೌಲಿಂಗ್ ಲೈನಪ್ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

ಅಂದರೆ ಎಬಿ ಡಿವಿಲಿಯರ್ಸ್ ಪ್ರಕಾರ, ಆರ್ಸಿಬಿ ತಂಡವು ಬೌಲಿಂಗ್ ಲೈನಪ್ ಬಲಿಷ್ಠಗೊಳಿಸಬೇಕಿದ್ದರೆ ಕಗಿಸೊ ರಬಾಡ, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್ ಹಾಗೂ ರವಿಚಂದ್ರನ್ ಅಶ್ವಿನ್ ಅವರನ್ನು ಖರೀದಿಸಲೇಬೇಕು. ಈ ಮೂಲಕ ಆರ್ಸಿಬಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಿಕೊಳ್ಳಬಹುದು ಎಂದು ಎಬಿಡಿ ತಿಳಿಸಿದ್ದಾರೆ.
