Ishan Kishan: ಹೊಟ್ಟೆಕಿಚ್ಚಿನಿಂದ ಟೀಮ್ ಇಂಡಿಯಾ ತೊರೆದ್ರಾ ಇಶಾನ್ ಕಿಶನ್?
Ishan Kishan: ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾವನ್ನು ತೊರೆದಿದ್ದ ಇಶಾನ್ ಕಿಶನ್ ಆ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಜಿತೇಶ್ ಶರ್ಮಾ ಅವರ ಆಯ್ಕೆ ಎನ್ನಲಾಗುತ್ತಿದೆ. ಏಕೆಂದರೆ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಇಶಾನ್ ಕಿಶನ್ ಬದಲು ಜಿತೇಶ್ ಶರ್ಮಾಗೆ ಚಾನ್ಸ್ ಲಭಿಸಿತ್ತು.
Updated on: Feb 08, 2024 | 12:24 PM

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಭಾರತ ತಂಡವನ್ನು ತೊರೆದಿದ್ದರು. ಈ ವೇಳೆ ಮಾನಸಿಕ ಒತ್ತಡದ ಕಾರಣ ಇಶಾನ್ ಭಾರತ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಸುದ್ದಿಯಾಗಿತ್ತು.

ಆದರೀಗ ಇಶಾನ್ ಕಿಶನ್ ಅರ್ಧದಲ್ಲೇ ಟೀಮ್ ಇಂಡಿಯಾವನ್ನು ತೊರೆಯಲು ಮತ್ತೋರ್ವ ಆಟಗಾರನ ಆಯ್ಕೆ ಕಾರಣ ಎಂದು ರೇವ್ಸ್ಟೋಟ್ಸ್ ವರದಿ ಮಾಡಿದೆ. ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಜಿತೇಶ್ ಶರ್ಮಾ ಅವರಿಗೆ ಚಾನ್ಸ್ ನೀಡುವುದಕ್ಕೆ ಇಶಾನ್ ಕಿಶನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಕಾರಣದಿಂದಾಗಿ ಅವರು ಅರ್ಧದಲ್ಲೇ ಟೀಮ್ ಇಂಡಿಯಾದಿಂದ ತೊರೆದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜಿತೇಶ್ ಶರ್ಮಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದ ಕಾರಣ ಅವರನ್ನು ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಕಣಕ್ಕಿಳಿಸಲಾಗಿತ್ತು. ಇದರಿಂದ ಇಶಾನ್ ಕಿಶನ್ ಅವಕಾಶ ವಂಚಿತರಾಗಿದ್ದರು. ಈ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಜೊತೆ ಇಶಾನ್ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಿರುವುದು. ಅಂದರೆ ಇತ್ತ ಟೆಸ್ಟ್ನಲ್ಲೂ ವಿಕೆಟ್ ಕೀಪರ್ ಆಗಿ ಆಯ್ಕೆಯಾಗುವುದು ಅನುಮಾನ ಎಂದು ಗೊತ್ತಾಗುತ್ತಿದ್ದಂತೆ ಇಶಾನ್ ಕಿಶನ್ ಟೀಮ್ ಇಂಡಿಯಾವನ್ನು ತೊರೆದು ಭಾರತಕ್ಕೆ ಮರಳಿದ್ದಾರೆ ಎಂದು ರೇವ್ಸ್ಪೋರ್ಟ್ಸ್ ತಿಳಿಸಿದೆ.

ಇದಾದ ಬಳಿಕ ಇಶಾನ್ ಕಿಶನ್ ಟೀಮ್ ಇಂಡಿಯಾಗೆ ಆಯ್ಕೆಗೆ ತಮ್ಮ ಲಭ್ಯತೆಯನ್ನು ಘೋಷಿಸಿಲ್ಲ. ಇದೇ ಕಾರಣದಿಂದಾಗಿ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಕೆಎಸ್ ಭರತ್ ಆಯ್ಕೆಯಾಗಿದ್ದರು. ಅಲ್ಲದೆ 2ನೇ ವಿಕೆಟ್ ಕೀಪರ್ ಆಗಿ ಯುವ ಆಟಗಾರ ಧ್ರುವ್ ಜುರೇಲ್ಗೆ ಸ್ಥಾನ ನೀಡಲಾಗಿತ್ತು.

ಇದಾಗ್ಯೂ ಇಶಾನ್ ಕಿಶನ್ ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ಪರವಾಗಿ ಕಣಕ್ಕಿಳಿದಿಲ್ಲ. ಇದೀಗ ಯುವ ವಿಕೆಟ್ ಕೀಪರ್ನ ನಡೆಯ ಬಗ್ಗೆ ಚರ್ಚೆಗಳು ಶುರುವಾಗಿದ್ದು, ಜಿತೇಶ್ ಶರ್ಮಾಗೆ ತಂಡದಲ್ಲಿ ಸ್ಥಾನ ನೀಡಿದಕ್ಕೆ ಇಶಾನ್ ಕಿಶನ್ ಹೊಟ್ಟೆಕಿಚ್ಚು ಪಟ್ಟ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.




