- Kannada News Photo gallery Cricket photos Rohit sharma in post match presentation after Australia defeated India by 21 runs to clinch the series 2 1
Rohit Sharma: ಪಂದ್ಯ ಮುಗಿದ ಬಳಿಕ ತಂಡದ ಸೋಲಿಗೆ ನಾಯಕ ರೋಹಿತ್ ಶರ್ಮಾ ನೀಡಿದ ಕಾರಣವೇನು ಗೊತ್ತೇ?
India vs Australia 3rd ODI: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ಸರಣಿ ಕಳೆದುಕೊಂಡಿತು. ಪಂದ್ಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಏನಂದ್ರು ನೋಡಿ.
Updated on:Mar 23, 2023 | 8:30 AM

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಳ್ಳುವ ಮೂಲಕ ಭಾರತ ತವರಿನಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ಬುಧವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಟೀಮ್ ಇಂಡಿಯಾ 1-2 ಅಂತರದಿಂದ ಸರಣಿ ಕಳೆದುಕೊಂಡಿದೆ.

ಅಂದಹಾಗೆ 2019ರ ಬಳಿಕ ಭಾರತ ತಂಡ ತಾಯ್ನಾಡಿನಲ್ಲಿ ಸೋತ ಮೊದಲ ಒಡಿಐ ಸರಣಿ ಇದಾಗಿದೆ. ಇದರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ನಂ.1 ಪಟ್ಟವನ್ನು ಕಳೆದುಕೊಂಡಿದೆ. 21 ರನ್ಗಳ ಜಯ ದಾಖಲಿಸಿದ ಆಸ್ಟ್ರೇಲಿಯಾ ತಂಡ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಇದು ದೊಡ್ಡ ಮೊತ್ತದ ಟಾರ್ಗೆಟ್ ಆಗಿತ್ತು ಎಂದು ನನಗೆ ಅನಿಸುತ್ತಿಲ್ಲ. ನಿಜ ಹೇಳಬೇಕೆಂದರೆ ನಾವು ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದೆವು. ಜೊತೆಯಾಟ ಎಂಬುದು ಬಹಳ ಮುಖ್ಯ. ಇಂದಿನ ಪಂದ್ಯದಲ್ಲಿ ನಾವದನ್ನು ಕಲೆಹಾಕಲು ಎಡವಿದೆವು ಎಂದು ಹೇಳಿದ್ದಾರೆ.

ಪಂದ್ಯ ಆರಂಭವಾದ ಬಳಿಕ ಒಬ್ಬ ಬ್ಯಾಟರ್ ಸರಾಗವಾಗಿ ರನ್ ಕಲೆಹಾಕುತ್ತಾ ಅಂತಿಮ ಹಂತದ ವರೆಗೆ ಪಂದ್ಯವನ್ನು ಕೊಂಡೊಯ್ಯಬೇಕು. ಆದರೆ, ನಮ್ಮ ತಂಡದಲ್ಲಿ ಇಂದು ಅದು ಸಾಧ್ಯವಾಗಲಿಲ್ಲ. ಕಳೆದ ಜನವರಿಯಿಂದ ಆಡಿದ ಒಂಬತ್ತು ಏಕದಿನ ಪಂದ್ಯಗಳಲ್ಲಿ ಅನೇಕ ಪಾಸಿಟಿವ್ ವಿಷಯಗಳನ್ನನು ಕಲಿತಿದ್ದೇವೆ - ರೋಹಿತ್ ಶರ್ಮಾ.

ನಾವು ಯಾವ ವಿಭಾಗಗಳಲ್ಲಿ ಇನ್ನಷ್ಟು ಸುಧಾರಿಸಬೇಕು ಎಂಬುದನ್ನು ಅರಿಯಬೇಕಿದೆ. ಈ ಸರಣಿಯಿಂದ ಅನೇಕ ವಿಚಾರಗಳನ್ನು ಕಲಿತಿದ್ದೇವೆ. ಕ್ರೆಡಿಟ್ ಆಸ್ಟ್ರೇಲಿಯಾ ತಂಡಕ್ಕೆ ಸಲ್ಲಬೇಕು. ಇಬ್ಬರೂ ಸ್ಪಿನ್ನರ್ಗಳು ಅತ್ಯುತ್ತಮ ಪ್ರದರ್ಶನ ತೋರಿದರು ಎಂದು ರೋಹಿತ್ ಹೇಳಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 49 ಓವರ್ಗಳಲ್ಲಿ 269 ರನ್ಗೆ ಆಲೌಟ್ ಆಯಿತು. ತಂಡದ ಪರ ಮಿಚೆಲ್ ಮಾರ್ಶ್ 47 ಎಸೆತಗಳಲ್ಲಿ 47 ರನ್ ಗಳಿಸಿದರೆ ಅಲೆಕ್ಸ್ ಕ್ಯಾರಿ 38, ಟ್ರಾವಿಸ್ ಹೆಡ್ 33 ರನ್ ಬಾರಿಸಿದರು.

ಭಾರತ ಪರ ಕುಲ್ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಿತ್ತರೆ ಮೊಹಮ್ಮದ್ ಸಿರಾಜ್ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ 49.1 ಓವರ್ಗಳಲ್ಲಿ 248 ರನ್ಗಳಿಗೆ ಆಲೌಟ್ ಆಗಿ ಸೋಲುಂಡಿತು. ವಿರಾಟ್ ಕೊಹ್ಲಿ 54 ರನ್ ಹಾಗೂ ಹಾರ್ದಿಕ್ ಪಾಂಡ್ಯ ಗಳಿಸಿದ 40 ರನ್ ತಂಡದ ಜಯಕ್ಕೆ ಸಾಲಲಿಲ್ಲ. ಆಸೀಸ್ ಪರ ಆ್ಯಡಂ ಝಂಪಾ 4 ವಿಕೆಟ್ ಪಡೆದರು. 21 ರನ್ಗಳ ಗೆಲುವಿನೊಂದಿಗೆ ಕಾಂಗರೂ ಪಡೆ ಸರಣಿ ಜಯಿಸಿತು.
Published On - 7:55 am, Thu, 23 March 23









