- Kannada News Photo gallery Cricket photos Sarfaraz Khan had to be admitted to a hospital in Ranchi due to a sudden illness Cricket News in Kannada
Sarfaraz Khan: ಭಾರತದ ಸ್ಫೋಟಕ ಬ್ಯಾಟರ್ ಸರ್ಫರಾಜ್ ಖಾನ್ ಆಸ್ಪತ್ರೆಗೆ ದಾಖಲು
Vijay Hazare Trophy: ಭಾರತದ ಕ್ರಿಕೆಟಿಗ, ಸ್ಫೋಟಕ ಬ್ಯಾಟರ್ ಸರ್ಫರಾಜ್ ಖಾನ್ ಹಠಾತ್ ಅನಾರೋಗ್ಯದಿಂದಾಗಿ ರಾಂಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಸಾಗುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಸರ್ಫರಾಜ್ ಆಡುತ್ತಿದ್ದಾರೆ.
Updated on:Nov 14, 2022 | 10:02 AM

ಭಾರತದ ಕ್ರಿಕೆಟಿಗ, ಸ್ಫೋಟಕ ಬ್ಯಾಟರ್ ಸರ್ಫರಾಜ್ ಖಾನ್ ಹಠಾತ್ ಅನಾರೋಗ್ಯದಿಂದಾಗಿ ರಾಂಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಸದ್ಯ ಸಾಗುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಆಡುತ್ತಿರುವ ಸರ್ಫರಾಜ್ ಆಸ್ಪತ್ರೆಯಲ್ಲಿದ್ದ ಕಾರಣ ಭಾನುವಾರ ಸರ್ವಿಸಸ್ ವಿರುದ್ಧದ ಪಂದ್ಯದಲ್ಲೂ ಕಣಕ್ಕಿಳಿಯಲಿಲ್ಲ.

ಕ್ರಿಕ್ಬಜ್ ಮಾಡಿರುವ ವರದಿಯ ಪ್ರಕಾರ, 25 ವರ್ಷದ ಬ್ಯಾಟರ್ ಸರ್ಫರಾಜ್ ಶನಿವಾರ ರಾತ್ರಿಯಿಡೀ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದರಿಂದ ಭಾನುವಾರ ಸರ್ವಿಸಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಮುಂಬೈ ತಂಡ ಸೋಲು ಕಂಡಿತು.

ಸರ್ಫರಾಜ್ ಆರೋಗ್ಯದ ಬಗ್ಗೆ ತಂದೆ ನೌಶಾದ್ ಖಾನ್ ಮಾಹಿತಿ ನೀಡಿದ್ದು, ನನ್ನ ಮಗ ಕೆಲ ಸಮಯದಿಂದ ಕಿಡ್ನಿ ಸ್ಟೋನ್ನಿಂದ ಬಳಲುತ್ತಿದ್ದಾನೆ. ಈಗ ಜೋರಾಗಿ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಅವರು ಈಗ ಚೆನ್ನಾಗಿದ್ದಾರೆ ಎಂದು ನೌಶಾದ್ ಖಾನ್ ಹೇಳಿದ್ದಾರೆ.

ಸದ್ಯ ರಾಂಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸರ್ಫರಾಜ್ ಗುಣಮುಖರಾಗುತ್ತಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಆದರೆ ನವೆಂಬರ್ 17 ರಂದು ನಡೆಯಲಿರುವ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಇವರು ಆಡುವ ನಿರೀಕ್ಷೆಯಿದೆ. ಇತ್ತೀಚೆಗಷ್ಟೆ ಕೋಲ್ಕತ್ತಾದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ನಲ್ಲಿ ಸರ್ಫರಾಜ್ 36 ರನ್ ಗಳಿಸಿ ಮ್ಯಾಚ್ವಿನ್ನಿಂಗ್ ಪ್ರದರ್ಶನ ನೀಡಿದ್ದರು.

ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆಡಿದ ಸಾಕಷ್ಟು ಅನುಭವ ಹೊಂದಿರುವ ಸರ್ಫರಾಜ್ ಖಾನ್ 29 ಪಂದ್ಯಗಳಿಂದ 2928 ರನ್ ಕಲೆಹಾಕಿದ್ದಾರೆ. ಇವರ ಗರಿಷ್ಠ ಸ್ಕೋರ್ ಅಜೇಯ 301 ರನ್ ಆಗಿದೆ. 81.33 ಸರಾಸರಿ ಹೊಂದಿದ್ದು, 10 ಶತಕ ಹಾಗೂ 8 ಅರ್ಧಶತಕ ಸಿಡಿಸಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಅಜಿಂಕ್ಯಾ ರಹಾನೆ ಮುನ್ನಡೆಸುತ್ತಿದ್ದಾರೆ. ಗ್ರೂಪ್ ಇ ಯಲ್ಲಿ ಸ್ಥಾನ ಪಡೆದಿರುವ ಮುಂಬೈ ಆಡಿದ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಒಂದರಲ್ಲಿ ಸೋಲು ಕಂಡು 4 ಅಂಕದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಮುಂಬೈಗೆ ಮುಂದಿನ ಪಂದ್ಯ ಕೂಡ ಕಠಿಣವಾಗಿದೆ. ಅನುಭವಿ ಆಟಗಾರರಾದ ಶ್ರೇಯಸ್ ಅಯ್ಯರ್ ಹಾಗೂ ಶಿವಂ ದುಬೆ ಉಳಿದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ ಭಾರತ ತಂಡ ಸೇರಿಕೊಂಡಿದ್ದಾರೆ. ದುಬೆ ಇಂಜುರಿಯಿಂದ ಬಳಲುತ್ತಿದ್ದಾರೆ.

ಕರ್ನಾಟಕ ತಂಡ ಗ್ರೂಪ್ ಬಿಯಲ್ಲಿ ಸ್ಥಾನ ಪಡೆದಿದ್ದು ಭರ್ಜರಿ ಪ್ರದರ್ಶನ ತೋರುತ್ತಿದೆ. ಈಗಾಗಲೇ ಆಡಿದ ಎರಡು ಪಂದ್ಯಗಳಲ್ಲಿ ಎರಡರಲ್ಲೂ ಗೆಲುವು ಸಾಧಿಸಿ 8 ಅಂಕದೊಂದಿಗೆ ರನ್ರೇಟ್ ಆಧಾರದ ಮೇಲೆ ಎರಡನೇ ಸ್ಥಾನದಲ್ಲಿದೆ. ರಾಜ್ಯ ತಂಡ ತನ್ನ ಮುಂದಿನ ಪಂದ್ಯವನ್ನು ನವೆಂಬರ್ 15 ರಂದು ಜಾರ್ಖಂಡ್ ವಿರುದ್ಧ ಆಡಲಿದೆ.
Published On - 10:02 am, Mon, 14 November 22



















