- Kannada News Photo gallery Bengaluru: Dr Jayalakshmi Jithendra dedicated performance Suryaputra Shanideva dance drama gets immense appreciation
ಅದ್ಭುತ ಪ್ರದರ್ಶನ ನೀಡಿದ ಕಲಾಧರ ಜಯಲಕ್ಷ್ಮೀ; ಅಪಾರ ಮೆಚ್ಚುಗೆ ಗಳಿಸಿದ ಶನಿದೇವ ಗೀತನೃತ್ಯ
ಭಾರತೀಯ ಸಂಸ್ಕೃತಿಯಲ್ಲಿ ದೇವರ ಆರಾಧನೆಗೆಂದು ಇರುವ ಪಥಗಳ ಸಂಖ್ಯೆ ಅಗಣ್ಯ. ವ್ರತ, ಹೋಮ, ಧ್ಯಾನ, ಜಪ, ಮುಂತಾದವುಗಳಂತೆ ನಾಟ್ಯವೂ ಒಂದು ಪೂಜಾ ವಿಧಾನ ಅಂತಾನೇ ಹೇಳಬಹುದು. ಈ ನೃತ್ಯದ ಮೂಲಕ ಪೂಜೆಯನ್ನು ಸಲ್ಲಿಸುವಾಗ ನರ್ತಕರು ತಾವು ಮಾತ್ರ ಭಕ್ತಿಯಲ್ಲಿ ಮುಳುಗುವುದಲ್ಲದೆ ಪ್ರೇಕ್ಷಕರನ್ನೂ ಭಾವುಕರನ್ನಾಗಿಸುತ್ತಾರೆ. ಅದೇ ರೀತಿ ಪ್ರೇಕ್ಷಕ ವರ್ಗದವರನ್ನು ತಲ್ಲೀನಗೊಳಿಸುವುದರಲ್ಲಿ ಕೈಲಾಸ ಕಲಾಧರ ಸಂಸ್ಥೆಯ ವತಿಯಿಂದ ಪ್ರದರ್ಶನಗೊಂಡ "ಸೂರ್ಯಪುತ್ರ ಶನಿದೇವ" ನೃತ್ಯ ನಾಟಕವು ಸಾಕ್ಷಿಯಾಯಿತು. ತಮ್ಮ ವಿನೂತನ ಪ್ರಸ್ತುತಿಗಳಿಂದ ಮನೆ ಮಾತಾಗಿರುವ ಕೈಲಾಸ ಕಲಾಧರ ಕಲ್ಚರಲ್ ಅಂಡ್ ಚಾರಿಟೆಬಲ್ ಟ್ರಸ್ಟ್ ಇದುವರೆಗೆ ಅನೇಕ ನೃತ್ಯ ನಾಟಕಗಳನ್ನು ನಾನಾ ವೇದಿಕೆಗಳಲ್ಲಿ ಪ್ರಸ್ತುತಪಡಿಸಿದೆ. ಅಂತೆಯೇ ಏಪ್ರಿಲ್ 19 ರಂದು ಸಂಸ್ಥೆಯ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ. ಕೆ. ಜಯಲಕ್ಷ್ಮೀ ಜಿತೇಂದ್ರ ಭಾಗವತ್ ಅವರ ಸಾರಥ್ಯದಲ್ಲಿ ಶನೇಶ್ವರ ಸ್ವಾಮಿ ಕುರಿತಾದ ನೃತ್ಯ ನಾಟಕ ಪ್ರದರ್ಶಿಸಲಾಯಿತು.
Updated on: Apr 28, 2025 | 5:38 PM

ಶನೇಶ್ವರ ಸ್ವಾಮಿ ಕುರಿತಾದ ನೃತ್ಯ ನಾಟಕ ಪ್ರದರ್ಶನದಲ್ಲಿ ಬಳಸಿದ ಸಮಕಾಲೀನ ನೃತ್ಯವು ಪ್ರಸ್ತುತ ಯುವಕರನ್ನು ಆಕರ್ಷಿಸಿ ಜನಮನ ಸೂರೆಗೊಂಡಿತು. ಈ ಗೀತನೃತ್ಯ ನಾಟಕದಲ್ಲಿ ನಾಲ್ಕು ವರ್ಷದ ಮಕ್ಕಳಿಂದ ಹಿಡಿದು ಅರವತ್ತು ವರುಷದ ಎಲ್ಲಾ ವಯೋಮಿತಿಯ ಕಲಾವಿದರಿದ್ದಿದ್ದು ಮತ್ತೊಂದು ವಿಶೇಷ. ಸಂಪೂರ್ಣ ನೃತ್ಯ ರೂಪಕದ ಆಲೋಚನೆ, ಕಥಾ ವಿಸ್ತರಣೆ, ನೃತ್ಯಸಂಯೋಜನೆ ಹಾಗೂ ನಿರೂಪಣೆ ಗುರು ಡಾ. ಕೆ . ಜಯಲಕ್ಷ್ಮೀ ಜಿತೇಂದ್ರ ಅವರದ್ದಾಗಿತ್ತು. ಪ್ರದರ್ಶನದಲ್ಲಿ ಬಳಸಿದ ವಸ್ತು ಪ್ರದರ್ಶಕಗಳನ್ನು ಕೈಲಾಸ ಕಲಾಧರ ಸಂಸ್ಥೆಯವರೇ ತಯಾರಿಸಿದ್ದು ಇನ್ನೊಂದು ವಿಶೇಷವಾಗಿತ್ತು. ಎರಡೂವರೆ ಗಂಟೆಗಳ ಕಾಲ ಪ್ರದರ್ಶನಗೊಂಡ ಈ ನೃತ್ಯ ರೂಪಕವು ಒಂದು ಚಲನಚಿತ್ರದಂತೆ ಮೂಡಿಬಂದಿದ್ದು, ಕಿರಿಯರಿಂದ ಹಿರಿಯರವರೆಗೂ, ಪಂಡಿತರಿಂದ ಪಾಮರರವರೆಗೂ ಎಲ್ಲಾ ಪ್ರೇಕ್ಷಕ ವರ್ಗದವರಿಗೆ ತಲುಪಿ ಮನದಾಳದಲ್ಲಿ ನೆಲೆಸಿತು. ಸಾಮಾಜಿಕವಾಗಿ ಕರ್ಮಚಕ್ರದ ಪಾಠದಂತಿತ್ತು ಈ ಕಾರ್ಯಕ್ರಮ.

ಈ ನೃತ್ಯ ರೂಪಕವು ಪ್ರಥಮವಾಗಿ ಗಣೇಶ, ನಟರಾಜ, ಶ್ರೀ ಕೃಷ್ಣಾದಿ ದೇವತೆಗಳನ್ನು ವಂದಿಸುವುದರ ಮೂಲಕ ಆರಂಭವಾಯಿತು. ನಂತರ ಹರಿಕಥಾ ದಾಸರು ಶನೇಶ್ವರನ ಜನನದ ಕಥೆಯನ್ನು, ಮಹಾತ್ಮೆಯನ್ನು, ಶನಿ ಪ್ರಭಾವದ ವೃತ್ತಾಂತವನ್ನು ವಿವರಿಸಿ ಹೇಳುವಂತೆ ನೃತ್ಯ ರೂಪಕವನ್ನು ಹೆಣೆಯಲಾಗಿತ್ತು. ತೆರೆ ಸರಿಯುತ್ತಿದಂತೆ ಮೊದಲು ಗಣಪತಿ ವಂದನೆ, ಸಂಕಷ್ಟ ಹರ ಗಣೇಶ ಸ್ತೋತ್ರದ ನರ್ತನ ಬಲು ಸೊಗಸಾಗಿ ಆರಂಭಗೊಂಡು, ಅಷ್ಟದಿಕ್ಪಾಲಕ ವಂದನೆಯಿಂದ ಮುಂದುವರೆಯಿತು. ಬ್ರಾಹ್ಮಣನ ಕನಸಲ್ಲಿ ಆದ ಕಾಕವಾಹನ ಶನೇಶ್ವರನ ದರ್ಶನಕ್ಕೆ ನೆರೆದಿದ್ದ ಪ್ರೇಕ್ಷಕರು ಭಕ್ತಿಯಿಂದ ಕರಾಮುಗಿದದ್ದು ಸುಳ್ಳಲ್ಲ. ಶನಿಪ್ರಭಾವದ ವೇಳೆಯಲ್ಲಿ ರಾಜಕುಮಾರರ ಶಿರಗಳಿದ್ದ ಜೋಳಿಗೆಯು ಕಲ್ಲಂಗಡಿ ಹಣ್ಣುಗಳಾಗಿ ಬಂದಿದ್ದು, ಕಲಾರಸಿಕರಿಗೆ ಮತ್ತೊಂದು ಝಲಕ್ ನೀಡಿತು.

ಹರಿಕಥಾ ದಾಸರು ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣೀಭೂತರಾದ ತ್ರಿಮೂರ್ತಿಗಳೇ ಶನೇಶ್ವರನ ಜನನಕ್ಕೆ ಕಾರಣ ಎಂದು ಕಥಿಸುತ್ತಾರೆ . ಈ ಸಂದರ್ಭದಲ್ಲಿ ಮೂರು ಲೋಕಗಳನ್ನು ತೋರಿಸುವಾಗ ಮೂರು ಶೈಲಿಯ ನೃತ್ಯಗಳನ್ನು ಬಳಸಿದ್ದು ವಿಶೇಷ. ಬ್ರಹ್ಮ ಲೋಕದ ವೈಭವವನ್ನು ಕುಚಿಪುಡಿ ನೃತ್ಯದ ಮೂಲಕ ಪ್ರಸ್ತುತ ಪಡಿಸಲಾಯಿತು. ಅಂತೆಯೇ ವೈಕುಂಠದ ವೈಭವವನ್ನು ಕಥಕ್ ನೃತ್ಯದಿಂದ, ಕೈಲಾಸದಲ್ಲಿ ನಡೆಯುವ ಶಿವ-ಶಿವೆಯರ ಶೃಂಗಾರ ನರ್ತನವನ್ನು ಭರತನಾಟ್ಯದಿಂದ ಸಂಯೋಜಿಸಲಾಗಿತ್ತು. ಶಿವ ಪಾರ್ವತಿಯರ ನಡುವೆ ಇದ್ದ ನೃತ್ಯ ಸಾಮರಸ್ಯ ಪ್ರೇಕ್ಷಕರ ಕಣ್ಮನಗಳನ್ನು ಸೆಳೆಯಿತು.

ಈ ನೃತ್ಯ ಪ್ರದರ್ಶನದಲ್ಲಿ ವೇದಿಕೆಯ ಹಿಂದಿನ ಪರದೆಯ ಮೇಲೆ ಬರುತ್ತಿದ್ದ ಚಿತ್ರಣಗಳು ಪ್ರತಿಯೊಂದು ಪಾತ್ರದ ಸತ್ವಕ್ಕೆ ಪುಷ್ಟಿಯನ್ನು ನೀಡಿ ದೃಶ್ಯಗಳನ್ನು ಮನೋಹರವಾಗಿಸುತ್ತಿತ್ತು. ತದನಂತರ ಸೂರ್ಯ ಮತ್ತು ಸಂಜ್ಞಾ ದೇವಿಯರ ಪ್ರೇಮದ ನೃತ್ಯ ಎಲ್ಲರ ಮನಸ್ಸನ್ನು ಸೂರೆಗೊಳಿಸಿತು. ಅನೇಕ ನರ್ತಕರು ಇದರಲ್ಲಿ ಪಾಲ್ಗೊಂಡ ಕಾರಣ ವೇದಿಕೆಯು ತುಂಬಿ ವಿಜೃಂಭಿಸಿತು. ಶೃಂಗಾರ ಭರಿತವಾದ ಸಂಗೀತಕ್ಕೆ ಅನೇಕ ಪ್ರದರ್ಶಕಗಳನ್ನು ಬಳಸಿ ಪ್ರೇಕ್ಷಕ ವರ್ಗದವರನ್ನು ಮಾಯಾಲೋಕಕ್ಕೆ ಕೊಂಡೊಯ್ಯಿತು ಈ ನೃತ್ಯ. ನಂತರದಲ್ಲಿ ಯಮ ಹಾಗೂ ಯಮಿ - ಇವರಿಬ್ಬರ ಬಾಲ್ಯಾವಸ್ಥೆಯ ನರ್ತನ. ಅನೇಕ ಕಿರಿಯ ವಯಸ್ಸಿನ ಬಾಲಕ ಬಾಲಕಿಯರು ಬಹಳ ಸೊಗಸಾಗಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಮಾಡಿದ ನೃತ್ಯವು ಪ್ರೇಕ್ಷಕರ ಮನಸನ್ನು ಮಂತ್ರ ಮುಗ್ಧಗೊಳಿಸಿತು. ಸಂಜ್ಞಾ ದೇವಿಯು ಸೂರ್ಯನ ತಾಪವನ್ನು ತಾಳಲಾರದೆ ಚಿಂತಾಮಗ್ನಳಾಗುವ ವೇಳೆಯಲ್ಲಿ ದುಃಖದ ಸಂಗೀತಕ್ಕೆ ಸಂಯೋಜಿಸಿದ ನೃತ್ಯವು ಬಹಳ ವಿಶೇಷವಾಗಿತ್ತು. ನಂತರದಲ್ಲಿ ಮೂಡಿ ಬಂದ ಸೂರ್ಯ ಹಾಗೂ ಛಾಯಾದೇವಿಯ ಶೃಂಗಾರ ನರ್ತನದಲ್ಲಿ ಮತ್ತೊಂದು ಬಾರಿ ಕನಸಿನ ಲೋಕವು ವೇದಿಕೆಯ ಮೇಲೆ ಪ್ರಕಟಗೊಂಡಿತ್ತು.

ಸೂರ್ಯ ಹಾಗೂ ಛಾಯಾದೇವಿಯ ಸಮ್ಮಿಲನದ ನಂತರ ಸಾಕ್ಷಾತ್ ಶನೇಶ್ವರನ ಜನ್ಮ ಪ್ರಸಂಗ. ಈ ವಿಶೇಷ ಸಂದರ್ಭದಲ್ಲಿ ಸಂಯೋಜಿಸಲಾದ ಸಮಕಾಲೀನ ನೃತ್ಯವು ಶನಿ ದೇವರ ಮುಂದಿನ ಪ್ರಭಾವವನ್ನೂ, ಆತನ ಶಕ್ತಿಯನ್ನೂ ಪ್ರತಿಬಿಂಬಿಸುವಂತಿತ್ತು. ತದನಂತರ ನವಗ್ರಹಗಳನ್ನು ರಾವಣ ಬಂಧನದಲ್ಲಿ ಇರಿಸಿದಾಗ ಆಂಜನೇಯನು ತನ್ನ ಶಕ್ತಿಯಿಂದ ಅವರೆಲ್ಲರನ್ನು ಬಂಧವಿಮೋಚರನ್ನಾಗಿ ಮಾಡುವ ಪ್ರಸಂಗ. ರಾವಣನ ಅಹಂಕಾರ, ಗರ್ವವನ್ನು ತೋರಿದ ಆ ಪಾತ್ರಧಾರಿಯ ಅಭಿನಯ ಬಹುಬಲವಾಗಿತ್ತು. ಹನುಮಂತನು ತನ್ನ ಎದೆಯನ್ನು ಬಗೆದು ಶ್ರೀರಾಮ ದರ್ಶನವನ್ನು ಪ್ರೇಕ್ಷಕರಿಗೆ ಉಣಬಡಿಸಿದ ದೃಶ್ಯ ಪ್ರೇಕ್ಷರನ್ನು ಮಂತ್ರಮೂಕರನ್ನಾಗಿಸಿತು.

ನೃತ್ಯ ನಾಟಕದ ಉತ್ತರಾರ್ಧದಲ್ಲಿ ರಾಜ ವಿಕ್ರಮಾದಿತ್ಯನ ಮೇಲೆ ಶನೇಶ್ವರನು ಪ್ರಭಾವ ಬೀರಿದ ಕಥಾಪ್ರಸಂಗವನ್ನು ಪ್ರಸ್ತುತ ಪಡಿಸಿದರು. ವಿಕ್ರಮಾದಿತ್ಯನ ಆಗಮನವು ಪ್ರೇಕ್ಷಕ ವರ್ಗದ ಕಡೆಯಿಂದಲೇ ಪ್ರಾರಂಭವಾಗಿ ವೇದಿಕೆಯ ಮೇಲೆ ಬಂದಿದ್ದು ಎಲ್ಲರ ಗಮನ ಸೆಳೆಯಿತು. ಇದಾದ ನಂತರ ವಿಕ್ರಮಾದಿತ್ಯನ ಆಸ್ಥಾನದಲ್ಲಿ ಅನೇಕ ನರ್ತಕಿಯರಿಂದ ನಾಟ್ಯ ಪ್ರದರ್ಶನ. ಒಬ್ಬೊಬ್ಬ ನರ್ತಕಿಯು ಕೂಡ ತನ್ನ ಕಲಾಜ್ಞಾನದ ಬಗ್ಗೆ ಹಮ್ಮಿನಿಂದ ಬಂದು ತಾನು ಯಾರಿಗೂ ಸಾಟಿಯಿಲ್ಲವೆಂಬಂತೆ ನರ್ತನ ಮಾಡಿದರು. ಸ್ಪರ್ಧಾ ರೂಪವಾಗಿ ಒಬ್ಬೊಬ್ಬರೂ ನರ್ತಿಸುತ್ತಿರುವಾಗ ಪ್ರೇಕ್ಷಕರಿಗೂ ಕೂಡ ಉತ್ತಮ ನರ್ತಕಿಯನ್ನು ತೀರ್ಮಾನಿಸುವುದು ಕ್ಲಿಷ್ಟಕರವಾಗಿತ್ತು. ನಂತರ ಆಸ್ಥಾನ ವಿದ್ವಾಂಸರಿಂದ ಕುಶಲ ಪ್ರಶ್ನೆಗಳಾಗಿ ರಾಜ್ಯದ ಸಮೃದ್ಧಿಗೆ ಗ್ರಹಗತಿಗಳ ಆಶೀರ್ವಾದವು ಪೂರಕವಾಗಿದೆ ಎಂದು ಹೇಳಿ ನವಗ್ರಹ ಸ್ತೋತ್ರಕ್ಕೆ ನರ್ತಿಸಿದರು. ನವಗ್ರಹಗಳ ಬಗ್ಗೆ ವರ್ಣಿಸುವ ವಿದ್ವಾಂಸರ ಪಾತ್ರವನ್ನು ಹಿರಿಯ ವಯಸ್ಕರು ನಿರ್ವಹಿಸಿದ್ದು ವಿಶೇಷ.

ಈ ರೀತಿ ನೃತ್ಯ ರೂಪಕಗಳಲ್ಲಿ ನವಗ್ರಹ ಸ್ತೋತ್ರವನ್ನು ಬಳಸುವುದು ವಿರಳ. ಸ್ತೋತ್ರದ ನಂತರ ನವಗ್ರಹಗಳು ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವಂತೆಯೇ ಮುದ್ರೆಗಳನ್ನು ಹಿಡಿದು ಅದೇ ದಿಕ್ಕಿನೆಡೆಗೆ ತಿರುಗಿ ವೇದಿಕೆಯ ಮೇಲೆ ಬಂದ ದೃಶ್ಯವು ದೈವೀಕವಾಗಿತ್ತು. ಮತ್ತೊಂದು ಪ್ರೇಕ್ಷಕ ವರ್ಗದ ಕಡೆಯಿಂದ ಪ್ರಾರಂಭವಾಗಿ ಗಮನ ಸೆಳೆದ ನೃತ್ಯವೆಂದರೆ ಶನೇಶ್ವರನು ಕುದುರೆ ಸವಾರನಂತೆ ಬರುವುದು. ಆಕರ್ಷಕವಾದ ಶ್ವೇತ ಕುದುರೆ ಸವಾರನಂತೆ ಕಾಕವಾಹನನು ಬಂದು ಜನರ ಮನ ಸೆಳೆದನು. ಆ ಶ್ವೇತ ವರ್ಣದ ಕೀಲು ಕುದುರೆಯ ಸೌಂದರ್ಯವನ್ನು ವರ್ಣಿಸುವ ಜಾನಪದ ನೃತ್ಯವು ಸಭಿಕರನ್ನು ಕೈ ತಟ್ಟಿ ಕುಣಿಯುವಂತೆ ಹುರಿದುಂಬಿಸಿತು.

ಇದರ ನಡುವೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದ ಪ್ರಸಂಗವೆಂದರೆ ವಿಕ್ರಮಾದಿತ್ಯನನ್ನು ಕಳ್ಳನನ್ನಾಗಿ ಮಾಡಿದ ಇಂದ್ರಜಾಲ ಸದೃಶವಾದ ದೃಶ್ಯ. ಚಿತ್ರಪಟದಿಂದ ಹೊರಬಂದ ಹಂಸವು ರಾಣಿಯು ತೆಗೆದಿಟ್ಟಿದ್ದ ಅಮೂಲ್ಯ ಆಭರಣಗಳನ್ನು ನುಂಗಿ ಹಾಕುತ್ತದೆ. ರಂಗದ ಮೇಲೆ ಈ ರೀತಿಯ ಮಾಯಾ ಸಂದರ್ಭಗಳನ್ನು ಸೃಷ್ಟಿಸುವುದು ಕ್ಲಿಷ್ಟಕರವೇ ಸರಿ. ಆದರೂ ಅದು ಅಸಾಧ್ಯವಲ್ಲ ಎಂಬುದು ಈ ನೃತ್ಯ ರೂಪಕದಲ್ಲಿ ಸಾಬೀತಾಯಿತು. ವೇದಿಕೆಯ ಮೇಲೆ ರಾಜಹಂಸ ಒಂದು ಚಿತ್ರ ಪಟದಂತೆ ಕುಳಿತಿದ್ದು ಅದು ಅನೇಕ ರೀತಿಯಲ್ಲಿ ನರ್ತಿಸುತ್ತಾ ಬಂದು ರಾಜನನ್ನು ಅಣಕಿಸುತ್ತಾ, ಆಡಿಸುತ್ತಾ, ಛೇಡಿಸಿ ಆತನ ಎದುರೇ ಪ್ರೇಕ್ಷಕರು ನೋಡ ನೋಡುತ್ತಿದ್ದಂತೆಯೇ ಆಭರಣವನ್ನು ನುಂಗಿ ಹಾಕಿತು. ಈ ವೈಚಿತ್ರ್ಯವನ್ನು ಕಂಡ ಪ್ರೇಕ್ಷಕರೆಲ್ಲರೂ ಮಾಯಾಜಾಲವೇ ಎದುರು ಬಂದಂತೆ ನಿಬ್ಬೆರಗಾದರು. ಈ ದೃಶ್ಯದಲ್ಲಿ ಹಂಸ ಹಾಗೂ ರಾಜನ ಅಭಿನಯದ ಪ್ರೌಢಿಮೆ ಎದ್ದು ಕಾಣುತ್ತಿತ್ತು.

ರಾಜನ ಕಷ್ಟಗಳೆಲ್ಲ ದೂರವಾಗುವ ಕಾಲ ಒದಗಿ ಬಂದಾಗ ರಾಜಕುಮಾರಿ ಚಂದ್ರಸೇನೆಯು ದೇವಿಯನ್ನು ಕಾಮಾಕ್ಷೀ ಸ್ತೋತ್ರದಿಂದ ಆರಾಧಿಸುತ್ತಾಳೆ. ತೆರೆಯ ಮೇಲೆ ಹಾಗೂ ವೇದಿಕೆಯಲ್ಲಿ ಕಾಮಾಕ್ಷಿ ದೇವಿಯು ಮೂಡಿ ಬಂದಾಗ ದೇವಿಯ ಆಗಮನಕ್ಕೆ ಗಾಯತ್ರಿ ಮಂತ್ರವನ್ನು ಯೋಜಿಸಿದ್ದು ಪ್ರೇಕ್ಷಕರ ಮನ ಮುಟ್ಟಿ ಸಭೆಯನ್ನು ದೈವಿಕ ಸ್ತರಕ್ಕೆ ಕೊಂಡೊಯ್ಯಿತು. ತದನಂತರ ವಿಕ್ರಮಾದಿತ್ಯನು ದೀಪಕ ರಾಗವನ್ನು ಹಾಡುತ್ತ ನಂದಿ ಹೋದ ದೀಪಗಳನ್ನು ಪುನಃ ಪ್ರಜ್ವಲಿಸಿದ್ದು ಮತ್ತೊಂದು ರೋಮಾಂಚಕ ಪ್ರಸಂಗ.

ಪ್ರಮುಖ ಕಥಾ ಭಾಗವು ಮುಗಿದ ನಂತರ ಶನೇಶ್ವರನಿಗೆ ಎಳ್ಳಿನ ಚಿಗಳಿಯನ್ನು ನೈವೇದ್ಯಕ್ಕಿಟ್ಟು ಮಂಗಳಾರತಿಯನ್ನು ಬೆಳಗಿಸಿ ಮಂಗಳದಿಂದ ಮುಕ್ತಾಯಗೊಳಿಸಲಾಯಿತು. ವಿಕ್ರಮಾದಿತ್ಯನ ಪಾತ್ರದಲ್ಲಿ ಗುರು ಡಾ.ಜಯಲಕ್ಷ್ಮೀ ಜಿತೇಂದ್ರ, ಶನೇಶ್ವರನ ಪಾತ್ರದಲ್ಲಿ ಪ್ರದ್ಯುಮ್ನ, ಶಿವನ ಪಾತ್ರದಲ್ಲಿ ಅನಿರುದ್ಧ ಪಾರ್ವತಿಯ ಪಾತ್ರದಲ್ಲಿ ಲಾಸ್ಯ, ಸಂಜ್ಞಾ ದೇವಿಯ ಪಾತ್ರದಲ್ಲಿ ಸಹನಾ, ಛಾಯಾ ದೇವಿಯ ಪಾತ್ರದಲ್ಲಿ ಸುಹಾನಿ, ಹಂಸ ಹಾಗೂ ಹನುಮಂತನ ಪಾತ್ರಧಾರಿಯಾಗಿ ಲಿಖಿತ್ ಕೃಷ್ಣ ಕಿಕ್ಕೇರಿ ಮುಂತಾದ ಕಲಾವಿದರು ಕಲಾರಸಿಕರ ಮೆಚ್ಚುಗೆಗೆ ಪಾತ್ರರಾದರು.



















