
ಕ್ಯಾಲಿಫೋರ್ನಿಯಾದಲ್ಲಿರುವ ಶೆರ್ಲೆಕರ್ ಎಂಬವರ ಕುಟುಂಬ ಮಂಗಳೂರಿನಿಂದ ಗಣಪನ ಮೂರ್ತಿ ತರಿಸಿಕೊಂಡಿದೆ. ಮಂಗಳೂರಿನ ಮಣ್ಣಗುಡ್ಡೆ ಸಮೀಪ ಕುಟುಂಬವೊಂದು ತಯಾರಿಸುವ ಗಣೇಶ ಮೂರ್ತಿಯೇ ಬೇಕೆಂದು ಕ್ಯಾಲಿಫೋರ್ನಿಯಾ ಕುಟುಂಬ ವಿಮಾನದ ಮೂಲಕ ಗಣೇಶನನ್ನು ಕರೆಸಿಕೊಂಡಿದೆ.

ಮಂಗಳೂರಿನ ಮಣ್ಣಗುಡ್ಡೆಯ ದಿ.ಮೋಹನ್ ರಾಯರು ಅರಂಭಿಸಿದ ಗಣೇಶ ಮೂರ್ತಿ ನಿರ್ಮಾಣ ಕಾರ್ಯ 95 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಈಗ ಅವರ ನಾಲ್ಕನೇ ತಲೆಮಾರಿನಿಂದ ಗಣೇಶ ವಿಗ್ರಹ ರಚನೆ ಕಾರ್ಯ ನಡೆಯುತ್ತಿದೆ. ಕುಟುಂಬದ ಸದಸ್ಯರು ವಿವಿಧ ಹುದ್ದೆಗಳಲ್ಲಿ ಕರ್ತವ್ಯದಲ್ಲಿದ್ದರೂ ಎರಡು ತಿಂಗಳು ರಜೆ ಪಡೆದು ಗಣೇಶ ಮೂರ್ತಿ ತಯಾರಿ ಮಾಡುತ್ತಾರೆ. ಕುಟುಂಬದವರೇ ಜತೆಯಾಗಿ ಮೂರ್ತಿ ತಯಾರಿ ಮಾಡುತ್ತಾರೆ.

ಈಗಾಗಲೇ ಮನೆಯಲ್ಲಿ ಬರೋಬ್ಬರಿ 260 ಗಣೇಶನ ಮೂರ್ತಿ ತಯಾರಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ವಿವಿಧೆಡೆ ನಡೆಯುವ ಗಣೇಶೋತ್ಸವಕ್ಕೆ ಮೂರ್ತಿಗಳನ್ನು ಸಾಗಾಟ ಮಾಡಲಾಗುತ್ತಿದ್ದು, ಈ ಕುಟುಂಬದವರ ಗಣೇಶ ಮೂರ್ತಿ ದೇಶ ವಿದೇಶಗಳಲ್ಲೂ ಬೇಡಿಕೆ ಇದೆ.

ಅಂದಹಾಗೆ, ಈ ಕುಟುಂಬದವರು ಪರಿಸರಸ್ನೇಹಿ ಗಣಪನನ್ನೇ ತಯಾರಿಸುತ್ತಾರೆ. ಆವೆ ಮಣ್ಣಿನಿಂದಲೇ ಮೂರ್ತಿ ತಯಾರಿಸಲಾಗುತ್ತದೆ. ಮಣ್ಣಗುಡ್ಡೆ ಸಮೀಪ ಇರುವ ಶ್ರೀಗಣೇಶ ಎಂಬ ಮನೆ ಚೌತಿ ಹಬ್ಬ ಬಂತೆಂದರೆ ಅಕ್ಷರಶಃ ಗಣೇಶಾಲಯವೇ ಆಗಿ ಪರಿವರ್ತನೆಯಾಗುತ್ತದೆ.

95 ವರ್ಷಗಳ ಹಿಂದೆ ಈ ಮನೆಯ ಹಿರಿಯರಾದ ದಿ.ಮೋಹನ್ರಾಯರು ಗಣಪತಿಯ ರಚನೆಯನ್ನು ಆರಂಭಿಸಿದ್ದರು. ಇಲ್ಲಿನ ಎಲ್ಲಾ ಗಣಪತಿಗಳನ್ನೂ ಆವೆಮಣ್ಣು ಹಾಗೂ ಬೈಹುಲ್ಲುಗಳನ್ನು ಹಾಕಿ ತಯಾರಿಸಲಾಗುತ್ತಿದೆ.

ಗಣೇಶನ ಜನ್ಮನಕ್ಷತ್ರವಾದ ಚಿತ್ರಾನಕ್ಷತ್ರದ ದಿನದಂದು ಗಣಪತಿ ತಯಾರಿಗೆ ಮುಹೂರ್ತ ಇದ್ದು, ಹುಣ್ಣಿಮೆಯ ದಿನದಂದು ವಿಗ್ರಹಕ್ಕೆ ಬಣ್ಣವನ್ನು ಕೊಡಲು ಆರಂಭಿಸಲಾಗುತ್ತದೆ. ಸುಮಾರು ಎರಡು ತಿಂಗಳ ಅವಧಿಯಲ್ಲಿ ಬರೋಬ್ಬರಿ 260 ದೊಡ್ಡ ಹಾಗೂ ಚಿಕ್ಕ ಗಣಪತಿಯ ಮೂರ್ತಿಗಳನ್ನು ತಯಾರಿಸಲಾಗಿದೆ. ದೇಶ ವಿದೇಶದಲ್ಲಿರುವ ಈ ಕುಟಂಬದ ಸದಸ್ಯರೆಲ್ಲರೂ ಒಂದು ದಿನವಾದರೂ ಈ ಗಣಪತಿ ಮೂರ್ತಿ ತಯಾರಿಕೆಗೆ ಕೈ ಜೋಡಿಸುತ್ತಾರೆ.

ಮಂಗಳೂರಿನ 16 ಪ್ರಖ್ಯಾತ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಕುಟುಂಬದವರು ಗಣಪತಿ ಮೂರ್ತಿ ಪೂರೈಕೆ ಮಾಡುತ್ತಾರೆ. ಅಮೆರಿಕಾದ ಶೆರ್ಲೆಕರ್ ಕುಟುಂಬಕ್ಕೂ ವಿಮಾನ ಮೂಲಕ ಗಣಪತಿ ಮೂರ್ತಿ ಕಳುಹಿಸಿಕೊಡಲಾಗಿದೆ. ಈ ಕುಟುಂಬದವರು, ಮೂರ್ತಿ ಕೊಳ್ಳುವವರಿಗೆ ಇಂತಿಷ್ಟು ಎಂದು ಹಣ ಎಂದು ನಿಗದಿಪಡಿಸುವುದಿಲ್ಲ. ಮೂರ್ತಿ ಕೊಳ್ಳುವವರು ನೀಡಿದ ಹಣವನ್ನು ಪಡೆದು ಸೇವೆ ಮಾಡುತ್ತಾರೆ.