
ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಆದರೆ ಹಬ್ಬದ ಸಡಗರದ ನಡುವೆ ಪರಿಸರಕ್ಕೆ ಮಾರಕವಾಗುವ ಪಿಒಪಿ ವಿಗ್ರಹಗಳ ಅಬ್ಬರವೇ ಹೆಚ್ಚಾಗಿರುತ್ತದೆ. ನಿಷೇಧವಿದ್ದರೂ ಕದ್ದುಮುಚ್ಚಿ ಮಾರಾಟ ಮಾಡಲಾಗುತ್ತದೆ. ಹಾಗಾಗಿ ಮನೆಯಲ್ಲಿಯೇ ಮಣ್ಣಿನ ಗಣಪತಿ ತಯಾರಿಸುವ ಕಾರ್ಯಗಾರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಧಾರವಾಡದಲ್ಲಿ ಕೆಲ ಸಂಸ್ಥೆಗಳು ವಿಶೇಷ ಹೆಜ್ಜೆ ಇಟ್ಟಿವೆ.

ಬೆಂಗಳೂರಿನ ಆಪ್ತಿ ಫೈನ್ ಆರ್ಟ್ಸ್ ಹಾಗೂ ಧಾರವಾಡದ ಜೋಸಿ ಟ್ಯುಟೋರಿಯಲ್ ಸಂಸ್ಥೆಗಳು ಜಂಟಿಯಾಗಿ ಸಾರ್ವಜನಿಕರಿಗೆ ಮನೆಯಲ್ಲೇ ಪರಿಸರ ಸ್ನೇಹಿ ಮಣ್ಣಿನ ಗಣಪತಿ ತಯಾರಿಸುವ ಉಚಿತ ಕಾರ್ಯಾಗಾರವನ್ನು ಧಾರವಾಡದ ಮಾಳಮಡ್ಡಿಯಲ್ಲಿ ಆಯೋಜಿಸಿವೆ. ತಮ್ಮ ಕೈಗಳಿಂದಲೇ ಭಕ್ತಿಪೂರ್ವಕವಾಗಿ ಗಣೇಶನನ್ನು ರೂಪಿಸುವ ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾರ್ಯಾಗಾರದಲ್ಲಿ ಪಾಲ್ಗೊಂಡವರಿಗೆ ಮೊದಲು ನಾಲ್ಕು ಬಗೆಯ ಆಕರ್ಷಕ ಗಣೇಶ ಮೂರ್ತಿಗಳ ಮಾದರಿಗಳನ್ನು ತೋರಿಸಲಾಗುತ್ತದೆ. ಜನರಿಗೆ ತಮಗೆ ಇಷ್ಟವಾದ ರೂಪವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದ್ದು, ಅದಕ್ಕೆ ತಕ್ಕಂತೆ ಮೊದಲೇ ಹದಗೊಳಿಸಿ ಸಿದ್ಧವಾಗಿಟ್ಟಿರುವ ನೈಸರ್ಗಿಕ ಜೇಡಿಮಣ್ಣನ್ನು ವಿತರಿಸಿ ತಯಾರಿಕೆಯ ಮೊದಲ ಹಂತಕ್ಕೆ ಚಾಲನೆ ನೀಡಲಾಗುತ್ತದೆ.

ತರಬೇತಿ ನೀಡುವ ನುರಿತ ಕಲಾವಿದರು ಮಣ್ಣಿನಿಂದ ಗಣಪತಿಯ ಪೀಠ, ಹೊಟ್ಟೆ, ಮುಖ, ಸೊಂಡಿಲು, ಕಿವಿ ಹಾಗೂ ಆಯುಧಗಳನ್ನು ಅತ್ಯಂತ ಸರಳವಾಗಿ ಹೇಗೆ ರೂಪಿಸಬೇಕು ಎಂಬುದನ್ನು ಹಂತ ಹಂತವಾಗಿ ಪ್ರಾಯೋಗಿಕವಾಗಿ ಕಲಿಸಿಕೊಡುತ್ತಾರೆ. ಯಾವುದೇ ಜಟಿಲತೆಯಿಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸುಲಭವಾಗಿ ಮೂರ್ತಿ ಕಡೆಯುವ ವಿಧಾನವನ್ನು ಇಲ್ಲಿ ತಿದ್ದಿ ತೀಡಲಾಗುತ್ತದೆ.

ಕೈಗಳಿಂದ ಸುಂದರವಾಗಿ ಮೈದಳೆದ ಗಣಪತಿಯ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡಿದ ಬಳಿಕ, ಅವು ಬಿರುಕು ಬಿಡದಂತೆ ನೆರಳಿನಲ್ಲಿ ನಿಧಾನವಾಗಿ ಒಣಗಿಸಲಾಗುತ್ತದೆ. ನೈಸರ್ಗಿಕ ಮಣ್ಣಿನಿಂದ ರೂಪುಗೊಂಡ ಈ ವಿಗ್ರಹಗಳು ಸಂಪೂರ್ಣವಾಗಿ ಗಟ್ಟಿಯಾಗುವವರೆಗೆ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಕಾಪಾಡಿಕೊಳ್ಳುವ ಸೂಕ್ಷ್ಮ ವಿಧಾನವನ್ನು ಇಲ್ಲಿ ತಿಳಿಸಿಕೊಡಲಾಗುತ್ತದೆ.

ಈ ಕಾರ್ಯಾಗಾರದಲ್ಲಿ ತಯಾರಾಗುವ ವಿಗ್ರಹಗಳಿಗೆ ಯಾವುದೇ ಹಾನಿಕಾರಕ ರಾಸಾಯನಿಕ ಬಣ್ಣಗಳನ್ನು ಬಳಿಯುವುದಿಲ್ಲ. ನೈಸರ್ಗಿಕ ಮಣ್ಣಿನ ನೈಜ ಸೌಂದರ್ಯವೇ ವಿಗ್ರಹಕ್ಕೆ ದೈವಿಕ ಕಳೆಯನ್ನು ತುಂಬುತ್ತದೆ.

ತಮ್ಮ ಕೈಯಾರೆ ಮಣ್ಣಿನಿಂದ ಮಾಡಿದ ಮುದ್ದಾದ ಗಣೇಶನನ್ನು ಭಕ್ತಿಯಿಂದ ಪೂಜಿಸಿ, ಮನೆಯಲ್ಲೇ ಸುಲಭವಾಗಿ ವಿಸರ್ಜಿಸುವ ಮೂಲಕ ಪರಿಸರ ಕಾಳಜಿಯ ಸಂದೇಶವನ್ನು ಸಾರಲು ಈ ಕಾರ್ಯಾಗಾರ ಸಾಕ್ಷಿಯಾಗಿದೆ.