- Kannada News Photo gallery Lunar Eclipse 2025 Photos: Moon Turns Blood Red, Longest Eclipse Lights Up Night Sky
Lunar Eclipse: ಸುದೀರ್ಘ ಅವಧಿಯ ಚಂದ್ರಗ್ರಹಣ ಗೋಚರ; ನಭೋ ಮಂಡಲದಲ್ಲಿ ಬೆಂಕಿಚೆಂಡು
Lunar Eclipse Photos: ಬೆಂಗಳೂರು, ಸೆಪ್ಟೆಂಬರ್ 8: ಭಾನುವಾರ ರಾತ್ರಿ ನಭೋಮಂಡಲದಲ್ಲಿ ಭಾನುವಾರ ರಾತ್ರಿ ಚಮತ್ಕಾರವೇ ನಡೆದುಹೋಗಿದೆ. ಸದಾ ಹಾಲಿನಂತೆ ಫಳಫಳ ಹೊಳೆಯುತ್ತಿದ್ದ ಚಂದ್ರ ಭಾನುವಾರ ಅಕ್ಷರಶಃ ಬೆಂಕಿಚೆಂಡಿನಂತೆ ಗೋಚರಿಸಿತು. ಸತತ ಮೂರು ಗಂಟೆಗಳ ಕಾಲ ಚಂದ್ರನಿಗೆ ಗ್ರಹಣ ಹಿಡಿದಿತ್ತು. ಭಾರತದಲ್ಲಿ ಅತ್ಯಂತ ಅಪರೂಪದ, ಸುದೀರ್ಘ 3 ಗಂಟೆಗೂ ಹೆಚ್ಚು ಕಾಲ ರಾಹುಗ್ರಸ್ಥ ಚಂದ್ರ ಗ್ರಹಣ ಗೋಚರಿಸಿತು. ಸೂರ್ಯ, ಭೂಮಿ ಮತ್ತು ಚಂದ್ರರು ಒಂದೇ ಸಾಲಿನಲ್ಲಿ ಬಂದಿದ್ದ ಈ ನೆರಳು ಬೆಳಕಿನಾಟ ಎಲ್ಲರನ್ನು ನಿಬ್ಬೆರಗುಗೊಳಿಸಿತು.
Updated on:Sep 08, 2025 | 7:24 AM

ರಾತ್ರಿ 9.56ಕ್ಕೆ ಗ್ರಹಣದ ಸ್ಪರ್ಶಕಾಲ ಆರಂಭವಾಗಿ ಮಧ್ಯರಾತ್ರಿ 1.26ಕ್ಕೆ ಚಂದ್ರನಿಗೆ ಗ್ರಹಣ ಮೋಕ್ಷವಾಯಿತು. ಆರಂಭದಿಂದ ಹಂತಹಂತವಾಗಿ ಚಂದ್ರನನ್ನು ಆವರಿಸಿಕೊಳ್ಳುತ್ತಾ ಭೂಮಿಯ ನೆರಳು ಸಾಗಿತ್ತು. ಸರಿಯಾಗಿ 11 ಗಂಟೆ 21 ನಿಮಿಷಕ್ಕೆ ಚಂದ್ರನನ್ನು ಅರ್ಧಭಾಗ ಆವರಿಸಿಕೊಂಡಿತು. ಆ ಬಳಿಕ ಸರಿಯಾಗಿ 11 ಗಂಟೆ 42 ನಿಮಿಷಕ್ಕೆ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಬಂದೇಬಿಟ್ಟಿತು. ರಾತ್ರಿ 11.42ರ ವೇಳೆಗೆ ಸಂಪೂರ್ಣ ಗಾಢಕೆಂಪು ಬಣ್ಣಕ್ಕೆ ಚಂದಿರ ತಿರುಗಿದನು. ಈ ಮೂಲಕ ಸಂಪೂರ್ಣ ಚಂದ್ರಗ್ರಹಣ ಗೋಚರಿಸಿತು.

ಕರ್ನಾಟಕದಲ್ಲಿ ಕೋಲಾರದಲ್ಲಿ ಮೋಡ ಅಡ್ಡಿಯಾದರೆ, ಬಹುತೇಕ ಜಿಲ್ಲೆಗಳಲ್ಲಿ ರಕ್ತಚಂದಿರನನ್ನು ಜನ ಕಣ್ತುಂಬಿಕೊಂಡರು. ಬೆಂಗಳೂರಿನ ನೆಹರೂ ತಾರಾಲಾಯದಲ್ಲಿ ಸಾರ್ವಜನಿಕರಿಗೆ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು, ವಯಸ್ಕರು ಸೇರಿದಂತೆ ನೂರಾರು ಮಂದಿ ದೂರದರ್ಶಕದಲ್ಲಿ ಚಂದಿನ ಅಗ್ನಿರೂಪವನ್ನು ಕುತೂಹಲದಿಂದ ವೀಕ್ಷಿಸಿದರು.

ರಾಯಚೂರಿನ ಉಪವಿಜ್ಞಾನ ಕೇಂದ್ರದಲ್ಲಿ 2 ಟೆಲಿಸ್ಕೋಪ್ನಿಂದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ದಾವಣಗೆರೆಯಲ್ಲಿ ಹೈಸ್ಕೂಲ್ಮೈದಾನದಲ್ಲಿ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ವ್ಯವಸ್ಥೆ ಮಾಡಿತ್ತು. ಹಾಸನ, ಶಿವಮೊಗ್ಗ ಸೇರಿ ಬೇರೆ ಬೇರೆ ಜಿಲ್ಲೆಗಳಲ್ಲೂ ಜನ ಖಗೋಳದಲ್ಲಿನ ರಕ್ತಚಂದಿರನ ವಿಸ್ಮಯ ನೋಡಿ ಪುಳಕಿತರಾದರು.

ಇನ್ನು ಕೆಲವು ರಾಜ್ಯಗಳಲ್ಲಿ ಮೋಡಗಳ ಕಣ್ಣಾಮುಚ್ಚಾಲೆ ಬಿಟ್ಟರೆ, ಭಾರತದಾದ್ಯಂತ ಬಹುತೇಕ ಕಡೆಗಳಲ್ಲಿ ರಕ್ತಚಂದಿರನ ದರ್ಶನವಾಯಿತು. ದೆಹಲಿ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಜಮ್ಮುಕಾಶ್ಮೀರ ಹೀಗೆ ಎಲ್ಲೆಡೆ ಬ್ಲಡ್ಮೂನ್ ದರ್ಶನವಾಯಿತು. ಕೋಲ್ಕತ್ತಾದಲ್ಲಿ ಶುಭಾಸ್ ಚಂದ್ರಬೋಸ್ ಪ್ರತಿಮೆ ಬಳಿ ಸೆರೆಹಿಡಿದ ಚಂದಿರನ ಚಿತ್ರ ಚಿತ್ತಾಕರ್ಷಕವಾಗಿತ್ತು.

ಖಗ್ರಾಸ ಚಂದ್ರ ಗ್ರಹಣದ ಕಾರಣ ಕರ್ನಾಟಕದ ಹಲವು ದೇಗುಲಗಳು ಬಂದ್ ಆಗಿದ್ದವು. ವಿಜಯಪುರದ ಚಿದಂಬರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಹೋಮ, ಹವನ, ಜಲಾಭಿಷೇಕ ಅರ್ಪಿಸಲಾಯಿತು. ಚಂದ್ರ ಗ್ರಹಣ ಆರಂಭವಾದ ಬಳಿಕ ಶುರುವಾದ ಪೂಜಾ ಕೈಂಕರ್ಯ, ಗ್ರಹಣ ಮುಕ್ತಾಯಯದ ವರೆಗೂ ನಡೆಯಿತು. ಬೆಂಗಳೂರಿನಲ್ಲಿಯೂ ಕೆಲವು ದೇವಾಲಯಗಳಲ್ಲಿ ವಿಶೇಷ ಪೂಜೆ, ಸ್ತೋತ್ರ ಪಠಣ ನೆರವೇರಿದವು.

ಬೆಂಗಳೂರಿನ ಗಿರಿನಗರದ ಮಹಾಗಣಪತಿ ದೇಗುಲದಲ್ಲಿ ವಿಶೇಷ ಪೂಜೆ, ಗ್ರಹಣ ಶಾಂತಿ ಕಾರ್ಯಗಳು ನೆರವೇರಿದವು. ಗ್ರಹಣ ಮುಕ್ತಾಯಯದ ವರೆಗೂ ವಿಶೇಷ ಪೂಜೆ, ಗ್ರಹಣ ಶಾಂತಿ ಕಾರ್ಯ ನೆರವೇರಿತು.
Published On - 7:23 am, Mon, 8 September 25




